ವಿಮರ್ಶೆ: ಪತ್ರಿಕೆಗಳು ಕಂಡಂತೆ 'ಉಳಿದವರು ಕಂಡಂತೆ'
ಈ ವರ್ಷದ ಬಹು ಚರ್ಚಿತ, ನಿರೀಕ್ಷಿತ ಚಿತ್ರ 'ಉಳಿದವರು ಕಂಡಂತೆ'. ಈ ಚಿತ್ರ ಹೇಗಿರುತ್ತದೆ? ತಮ್ಮ ಚೊಚ್ಚಲ ನಿರ್ದೇಶನದಲ್ಲೇ ರಕ್ಷಿತ್ ಶೆಟ್ಟಿ ಏನೆಲ್ಲಾ ಕಮಾಲ್ ಮಾಡಿರುತ್ತಾರೆ ಎಂಬ ಕುತೂಹಲ ಇದ್ದೇ ಇತ್ತು. ಆದರೆ ಚಿತ್ರ ನೋಡಿದ ಮೇಲೆ ಬಹುತೇಕರ ನಿರೀಕ್ಷೆಗಳು ಹುಸಿಯಾಗಿವೆ.
ಪತ್ರಿಕೆಗಳಲ್ಲಿ ಈ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆಗೆ ಮುನ್ನ ರಕ್ಷಿತ್ ಶೆಟ್ಟಿ ಮಾತನಾಡುತ್ತಾ, ಒಮ್ಮೆ ನೋಡಿದರೆ ಒಂಥರಾ, ಇನ್ನೊಮ್ಮೆ ಇನ್ನೊಂದು ತರಹ ಅನುಭವ ನಿಮ್ಮದಾಗುತ್ತದೆ ಎಂದಿದ್ದರು. [ಗೊಂದಲ, ಸಸ್ಪೆನ್ಸ್, ನಿರಂತರ]
ಚಿತ್ರ ಇದೀಗ ಬಿಡುಗಡೆಯಾಗಿದೆ. ಎಲ್ಲರ ಅಭಿಪ್ರಾಯಗಳು ಬಹುತೇಕ ಒಂದೇ ತೆರನಾಗಿದೆ. ಅಂದರೆ ಇವರು ಇನ್ನೊಮ್ಮೆ ಚಿತ್ರವನ್ನು ನೋಡಿದರೆ ಅಭಿಪ್ರಾಯ ಬದಲಾಗುತ್ತದೋ ಏನೋ ಗೊತ್ತಿಲ್ಲ. ಬನ್ನಿ ಯಾವ್ಯಾವ ಪತ್ರಿಕೆಗಳಲ್ಲಿ ಏನು ವಿಮರ್ಶೆ ಬಂದಿದೆ ಎಂಬುದನ್ನು ನೋಡೋಣ.
ಕರಾವಳಿ ಪರಿಸರದ ಥರಾವರಿ ಕತೆ - ಜೋಗಿ
ಪತ್ರಕರ್ತೆ ತುಂಬ ಇಂಗ್ಲಿಷ್ ಮಾತಾಡುತ್ತಾಳೆ. ಕುಂದಾಪುರ ಕನ್ನಡವೂ ಮಂಗಳೂರು ಕನ್ನಡವೂ ಅಲ್ಲಲ್ಲಿ ಅಸ್ಪಷ್ಟ. ಮುಂದೇನಾಗುತ್ತದೆ ಎಂಬ ಕುತೂಹಲ, ತರ್ಕಹೀನ ಹೊಡೆದಾಟ, ಐಟಂ ಸಾಂಗು ಮತ್ತು ಹೀರೋಯಿಸಮ್ಮು ಬೇಕು ಅನ್ನುವರಿಗೆ ಇಲ್ಲಿ ನಿರಾಶೆ ಕಾದಿದೆ. ಒಂದು ಸಿನಿಮಾ ನಮ್ಮನ್ನು ನೋಡಿದ ನಂತರವೂ ಗುಂಗಿನಲ್ಲಿಡಬೇಕು, ಒಂದು ಪರಿಸರಕ್ಕೆ ನಿಷ್ಟವಾಗಿರಬೇಕು ಮತ್ತು ನಮ್ಮ ಅನುಭವದ ಒಂದು ಭಾಗವಾಗಬೇಕು ಎಂದು ಆಸೆಪಡುವವರು ಇದನ್ನು ಪ್ರೀತಿಯಿಂದ ನೋಡಬಹುದು (ಉದಯವಾಣಿ).
ಪ್ರಾಮಾಣಿಕ, ವಿಫಲ ಪ್ರಯೋಗ - ರಘುನಾಥ ಚ.ಹ.
ಧೂಮಪಾನ - ಮದ್ಯಪಾನದ ಸನ್ನಿವೇಶಗಳು ಚಿತ್ರದ ಬಹುತೇಕ ದೃಶ್ಯಗಳಲ್ಲಿವೆ. ಕಥೆಗೆ ಇದು ಅಗತ್ಯ ಎನ್ನಬಹುದಾದರೂ, ಇದರ ಪರಿಣಾಮದ ಬಗ್ಗೆ ಸಿನಿಮಾ ಕುರಿತು ಮಹತ್ವಾಕಾಂಕ್ಷೆಯುಳ್ಳ ತರುಣರು ಯೋಚಿಸಬೇಕಾಗಿದೆ. ಒಂದು ಕಲಾಕೃತಿಯಾಗಿ ಕಾಡದ 'ಉಳಿದವರು ಕಂಡಂತೆ' ಚಿತ್ರವನ್ನುಕಡು ಸಿನಿಮಾಮೋಹಿಗಳ ಪ್ರಾಮಾಣಿಕ, ವಿಫಲ ಪ್ರಯೋಗ ಎಂದು ಗುರ್ತಿಸಬಹುದು (ಪ್ರಜಾವಾಣಿ).
ಉಳಿದವರು 'ಎಳೆ'ದಂತೆ - ಶರಣು ಹುಲ್ಲೂರು
ಕರಾವಳಿಯ ಸಾಂಸ್ಕೃತಿಯನ್ನು ಕಥಾ ಹಂದರದಲ್ಲಿ ಬೆರಸಿರುವ ನಿರ್ದೇಶಕರು, ಹುಲಿವೇಷದ ಖುಷಿಯನ್ನು ಕರುನಾಡಿಗೆ ಹಂಚಿದ್ದಾರೆ. ಅಲ್ಲದೇ ಹೊಸ ಭರವಸೆಯನ್ನೂ ಮೂಡಿಸಿದ್ದಾರೆ. ಮೇಕಿಂಗ್ ಭರದಲ್ಲಿ ಕತೆಯನ್ನು ಎಳೆದದ್ದರಿಂದ ಇದನ್ನು ಉಳಿದವರು 'ಎಳೆ'ದಂತೆ ಅನ್ನಬಹುದು (ವಿಜಯ ಕರ್ನಾಟಕ).
ಅಳಿದುಳಿದವರು ಕಂಡಂತೆ - ರಾಜಶೇಖರಮೂರ್ತಿ
ಕರಮ್ ಚಾವ್ಲಾ 'ಕಂಡಂತೆ' ದೃಶ್ಯಸೆರೆ ವೈಖರಿ, ಅಜನೀಶ್ ಲೋಕನಾಥ್ ಸಂಗೀತಸಿರಿ ಉಳಿದವರು ಪ್ಲಸ್ ಪಾಯಿಂಟ್. ಕಡಲ ತೀರದ ಸೊಬಗನ್ನು ಕರಮ್ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದರೆ, 'ಕಣ್ಣಾಮುಚ್ಚೆ', 'ಘಾಟಿಯ ಇಳಿದು', 'ಪೇಪರ್ ಪೇಪರ್' ಇನ್ನೊಂದೆರಡು ಹಾಡುಗಳಲ್ಲಿ, ಇದಕ್ಕೂ ಮಿಗಿಲಾಗಿ ಹಿನ್ನೆಲೆ ಸಂಗೀತದಲ್ಲಿ ಅಜನೀಶ್ ಅನಂತತೆ ಪ್ರದರ್ಶಿಸಿದ್ದಾರೆ. ಕೊನೆ ಕಿಕ್; ಮೂರಲ್ಲ, ಎರಡು ಕೊಲೆ. ಒಂದು ನಿಗೂಢ ನಾಪತ್ತೆಯ '...ಕಂಡಂತೆ'ಯಲ್ಲಿ ಅಂತ್ಯದಲ್ಲಿ ಯಾರೂ ಸಾಯುವುದಿಲ್ಲ; ಪ್ರೇಕ್ಷಕನ ಹೊರತು...! (ವಿಜಯವಾಣಿ).
ಥಿಯೇಟರ್ ನಲ್ಲಿ ಉಳಿದವರಿಗೆ ಅಪಾಯ - ಹರ್ಷವರ್ಧನ್
ಟ್ರೈಲರ್ ನಂಬಿ ಸಿನೆಮಾ ನೋಡಬಾರದು ಎನ್ನುವುದಕ್ಕೆ ಈ ಮಹಾ 'ಬೋರ್'ಗರೆಯುವ ಸಿನೆಮಾ ಸಾಕ್ಷಿ! ಎಕ್ಸ್ಟ್ರಾ ಕಾಸಿದ್ದರೆ ಮಾತ್ರ ಈ ಸಿನೆಮಾ ನೋಡಬಹುದು, ಇಲ್ಲವಾದಲ್ಲಿ ಸುಮ್ಮನೆ ಮನೆಯಲ್ಲಿ ಉಳಿದುಕೊಂಡು ಬಿಡಿ! (ಕನ್ನಡಪ್ರಭ ಡಾಟ್ ಕಾಂ).


Click it and Unblock the Notifications











