Don't Miss!
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಂಷೇರಾ ಸಿನಿಮಾ ವಿಮರ್ಶೆ: ಕಳಪೆ ಚಿತ್ರಕತೆಯಲ್ಲಿ ರಣ್ಬೀರ್ ಮಿಂಚು
ರೊಮ್ಯಾಂಟಿಕ್ ಸಿನಿಮಾಗಳಲ್ಲಿ, ಪ್ರಯೋಗಾತ್ಮಕ ಸಿನಿಮಾಗಳಲ್ಲಿ, ನಿಜಕ್ಕೆ ಹತ್ತಿರವಾದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ರಣ್ಬೀರ್ ಕಪೂರ್ ತಮ್ಮ ಇಮೇಜನ್ನು ಬದಲಿಸಿಕೊಳ್ಳಲು ಮುಂದಾಗಿದ್ದು, ಭಿನ್ನ ಪಾತ್ರದಲ್ಲಿ ನಟಿಸಿರುವ 'ಶಂಷೇರಾ' ಸಿನಿಮಾ ಇಂದು ಬಿಡುಗಡೆ ಆಗಿದೆ.
ರಣ್ಬೀರ್ ಕಪೂರ್ ಜೊತೆಗೆ ಸಂಜಯ್ ದತ್, ರಣ್ಬೀರ್ ಕಪೂರ್, ವಾಣಿ ಕಪೂರ್, ರೋನಿತ್ ರಾಯ್ ಸೇರಿದಂತೆ ಹಲವರು ನಟಿಸಿರುವ 'ಶಂಷೇರಾ' ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಬಾಲಿವುಡ್ ಪ್ರಿಯರಿಗೆ ಇತ್ತು.
'ಶಂಷೇರಾ' ಸಿನಿಮಾ ನಿರೀಕ್ಷಿತ ಮುಟ್ಟಿಲ್ಲವೆಂದೇ ಹಲವು ಸಿನಿಮಾ ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಂದು ಸಿನಿಮಾದಲ್ಲಿ ಯಾವುದೂ ಸರಿಯಿಲ್ಲ ಎನ್ನುವಂತೆಯೇನೂ ಇಲ್ಲ. ಹಲವು ಒಳ್ಳೆಯ ಅಂಶಗಳು ಸಿನಿಮಾದಲ್ಲಿವೆ, ಆದರೆ ಕೆಲವು ಕೆಟ್ಟ ಅಂಶಗಳು ಸಿನಿಮಾವನ್ನು 'ಉತ್ತಮ'ದಿಂದ ಕೆಳಕ್ಕೆ ತಳ್ಳಿ ಸಾಧಾರಣಗೊಳಿಸಿವೆ.
ಸಿನಿಮಾದ ಕತೆ ಸ್ಥಿತವಾಗಿರುವುದು 1800 ರಲ್ಲಿ. ಖಮರೇನ್ ಸಮುದಾಯದ ಯೋಧರು ಬಳಿಕ ಲೂಟಿಕೋರರಾಗಿದ್ದಾರೆ. ಮೇಲ್ಜಾತಿ ಎಂದು ಪರಿಗಣಿತವಾದ ಶ್ರೀಮಂತರನ್ನು ದೋಚುವುದು ಅವರ ಕಾರ್ಯ. ಅವರಿಂದ ಅನುಭವಿಸಿದ ಜಾತಿ ತಾರತಮ್ಯಕ್ಕೆ ಪ್ರತೀಕಾರವಾಗಿ ಅವರನ್ನು ದೋಚುತ್ತಿದ್ದಾರೆ ಈ ಯೋಧರು. ಈ ಬುಡಕಟ್ಟು ತಂಡದ ನಾಯಕನೇ ಶಂಷೇರಾ (ರಣ್ಬೀರ್ ಕಪೂರ್).
ತಮ್ಮ ಬುಡಕಟ್ಟು ಜನಾಂಗದ ಗೌರವ ಹೆಚ್ಚಿಸಲು, ಸ್ವಾತಂತ್ರ್ಯ ಖಾತ್ರಿಗೊಳಿಸಲು ಬ್ರಿಟೀಷರ ಭಾರತೀಯ ಅಧಿಕಾರಿ ಶುದ್ಧ ಸಿಂಗ್ (ಸಂಜಯ್ ದತ್) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕುತ್ತಾನೆ ಶಂಷೇರಾ, ಆದರೆ ಶುದ್ಧ ಸಿಂಗ್ ಶಂಷೇರಾನನ್ನು ಮೋಸ ಗೊಳಿಸಿ ದೊಡ್ಡ ಅರಣ್ಯವೊಂದರಲ್ಲಿ ಬುಡಕಟ್ಟು ಸಮುದಾಯದವರನ್ನು ಬಂಧನದಲ್ಲಿಡುತ್ತಾನೆ. ಶಂಷೇರಾ ತನ್ನ ಜನರನ್ನು ಬಿಡಿಸಿಕೊಳ್ಳಲು ಹೋರಾಡುತ್ತಾನೆ ಆದರೆ ಶುದ್ಧನ ಕುತಂತ್ರದಿಂದ ಪತ್ನಿಯಿಂದಲೇ ಅವಮಾನಿತನಾಗಿ ಕೊನೆಗೆ ಕೊಲ್ಲಲ್ಪಡುತ್ತಾನೆ.
ಆ ನಂತರ ಅವನ ಪತ್ನಿಗೆ ಮಗುವಾಗುತ್ತದೆ ಆ ಪಾತ್ರದಲ್ಲಿಯೂ ರಣ್ಬೀರ್ ಕಪೂರ್ ನಟಿಸಿದ್ದಾರೆ. ಸಣ್ಣ ಮಟ್ಟಿನ ಕಳ್ಳನಾದ ಅವನು, ತನ್ನ ತಂದೆಯನ್ನು ಕೊಂದ ಆ ಬ್ರಿಟೀಷರ ತಂಡದ ಸದಸ್ಯನಾಗಬೇಕು ಎಂದು ಬಯಸುತ್ತಾನೆ. ಆದರೆ ವಿಧಿಯು ಬೇರೆಯದ್ದನ್ನೇ ಬಗೆದಿರುತ್ತದೆ. ತನ್ನ ತಂದೆ ಪ್ರಾರಂಭ ಮಾಡಿದ ಕಾರ್ಯವನ್ನು ಮುಂದುವರೆಸುವ ಜವಾಬ್ದಾರಿ ಅವನ ಮೇಲೆ ಹೇರಲಾಗುತ್ತದೆ. ಅದನ್ನು ಪೂರ್ಣಗೊಳಿಸುತ್ತಾನೊ ಇಲ್ಲವೋ ಎಂಬುದೇ ಸಿನಿಮಾದ ಕತೆ.
ಹಲವು ಉಪಕತೆಗಳನ್ನು ಒಳಗೊಂಡ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಜಾತಿ ವಿರುದ್ಧ ಹೋರಾಟವಿದೆ, ಬ್ರಿಟೀಷರ ವಿರುದ್ಧ ಹೋರಾಟವಿದೆ, ಒಂದು ಕ್ರಾಂತಿಕಾರಿ ಪ್ರೇಮಕತೆಯಿದೆ. ಅದರೆ ಕಳಪೆ ಬರವಣಿಗೆಯಿಂದಾಗಿ ಇವೆಲ್ಲವೂ ಪ್ರೇಕ್ಷಕನ ಮೇಲೆ ಪ್ರಭಾವ ಮೂಡಿಸಲು ವಿಫಲವಾಗುತ್ತವೆ. ಒಳ್ಳೆಯ ಉದ್ದೇಶದಿಂದ ಮಾಡಿರುವ ಕತೆಯನ್ನು ಚಿತ್ರಕತೆ ಸಾಧಾರಣಗೊಳಿಸಿದೆ.
ಸಿನಿಮಾದ ಮುಖ್ಯ ಪಾತ್ರವಾಗಿರುವ ಶಂಷೇರಾ ಅನ್ನು ಪ್ರೇಕ್ಷಕರ ಜೊತೆಗೆ ಕನೆಕ್ಟ್ ಮಾಡುವಲ್ಲಿ ನಿರ್ದೇಶಕ ಎಡವಿದ್ದಾರೆ. ಶಂಷೇರಾ ಸಾಮಾನ್ಯ ನಾಯಕನಾಗಿಯೇ ಉಳಿದು ಬಿಡುತ್ತಾನೆ. ಸಿನಿಮಾದ ಬೆನ್ನೆಲುಬಾಗಬೇಕಿದ್ದ ಶಂಷೇರಾ ದೊಡ್ಡ ಮಟ್ಟದ ಪ್ರಭಾವವನ್ನು ಬೀರಲು ವಿಫಲನಾಗುತ್ತಾನೆ. ಇದಕ್ಕೆ ಬರವಣಿಗೆಯಲ್ಲಿನ ಕೊರತೆಯೇ ಕಾರಣ. ಇನ್ನಷ್ಟು ಹೀರೋಯಿಸಂ ಮೌಲ್ಯಗಳನ್ನು ಶಂಷೇರಾಗೆ ನೀಡಬೇಕಿತ್ತು ಎನಿಸದೇ ಇರದು ಪ್ರೇಕ್ಷಕನಿಗೆ.
ದೃಶ್ಯಗಳನ್ನು ಜೋಡಿಸುತ್ತಾ ಹೋಗಿದ್ದಾರೆ ನಿರ್ದೇಶಕ
ನಿರ್ದೇಶಕ ಕರಣ್ ಮಲ್ಹೋತ್ರಾ ಒಂದರ ಹಿಂದೊಂದು ದೃಶ್ಯಗಳನ್ನು ಜೋಡಿಸುತ್ತಾ ಹೋಗಿದ್ದಾರೆ. ಆದರೆ ಆ ದೃಶ್ಯಗಳು ಸ್ಪುರಿಸುವ ಭಾವದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹಾಗಾಗಿ ಮಿಶ್ರ ಭಾವಗಳು ಪ್ರೇಕ್ಷಕನನ್ನು ಆವರಿಸಿಕೊಳ್ಳುತ್ತವೆ, ಒಮ್ಮೊಮ್ಮೆಯಂತೂ ತೆರೆಯ ಮೇಲೆ ಸುಂದರವಾಗಿ ಕಾಣುತ್ತಿರುವ ದೃಶ್ಯಗಳು ಪ್ರೇಕ್ಷಕನಲ್ಲಿ ಯಾವ ಭಾವ ಉಗಮಕ್ಕೂ ಕಾರಣವಾಗದೆ ಸುಮ್ಮನೆ ಹಾದು ಹೋಗಿಬಿಡುತ್ತವೆ. ಕೆಲವು ದೃಶ್ಯಗಳಂತೂ ನಂಬಲನರ್ಹ ಎಂದೂ ಎನಿಸುತ್ತವೆ. ಸಂಭಾಷಣೆ ಸಹ ಬಹಳ ನೀರಸ ಎನಿಸುತ್ತದೆ. ಅಲ್ಲಲ್ಲಿ ಮಾತ್ರ ಸಂಭಾಷಣೆಗಳು ಮಿಂಚುತ್ತವೆ.
ಶ್ರಮ ಹಾಕಿ ನಟಿಸಿರುವ ರಣ್ಬೀರ್ ಕಪೂರ್
ರಣ್ಬೀರ್ ಕಪೂರ್ ಇದೇ ಮೊದಲ ಬಾರಿಗೆ 'ಲಾರ್ಜರ್ ದ್ಯಾನ್ ಲೈಫ್' ರೀತಿಯ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ತಮ್ಮ ಎಲ್ಲವನ್ನೂ ರಣ್ಬೀರ್ ಕಪೂರ್ ಅರ್ಪಿಸಿದ್ದಾರೆ. ಸಪ್ಪೆಯಾದ ದೃಶ್ಯಗಳಲ್ಲಿ ಸಹ ತಮ್ಮ ಸಂಪೂರ್ಣ ಶ್ರಮ ಹಾಕಿ ನಟಿಸಿದ್ದಾರೆ ರಣ್ಬೀರ್ ಕಪೂರ್. ಸಿನಿಮಾ ಮುಗಿದ ಬಳಿಕವೂ ರಣ್ಬೀರ್ ಕಪೂರ್ರ ಪ್ರಾಮಾಣಿಕ ಶ್ರಮ ನೆನಪಿರುತ್ತದೆ. ರೊಮ್ಯಾಂಟಿಕ್, ಗಂಭೀರ ಮಾತ್ರವಲ್ಲ ತಾವು ಎಲ್ಲ ರೀತಿಯ ಪಾತ್ರಗಳಿಗೂ ಸಲ್ಲಬಲ್ಲ ನಟ ಎಂಬುದನ್ನು ರಣ್ಬೀರ್ ಈ ಸಿನಿಮಾ ಮೂಲಕ ಸಾರಿ ಹೇಳಿದ್ದಾರೆ.
ಸಂಜಯ್ ದತ್ ನಟನೆಯೂ ಚೆನ್ನಾಗಿದೆ
ಸಂಜಯ್ ದತ್ ನಟನೆಯೂ ಬೊಂಬಾಟಾಗಿದೆ. ಅದ್ಭುತ ವಿಲನ್ ಆಗಿರುವ ಜೊತೆಗೆ ಕಾಮಿಕ್ ರಿಲೀಫ್ ಸಹ ಆಗಿದ್ದಾರೆ ಸಂಜಯ್. ರಣ್ಬೀರ್ ಜೊತೆಗಿನ ಅವರ ದೃಶ್ಯಗಳು ನೋಡಲು ಚೆನ್ನಾಗಿವೆ. ವಾಣಿ ಕಪೂರ್ ನೃತ್ಯದಲ್ಲಿ, ಹಾಡುಗಳಲ್ಲಿ ಚೆನ್ನಾಗಿ ಕಾಣುತ್ತಾರೆ ಆದರೆ ಅವರಿಗೆ ನಟಿಸಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಸೌರಭ್ ಶುಕ್ಲ ಹಾಗೂ ರೋನಿತ್ ರಾಯ್ ಕೊಟ್ಟ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.
ಸಿನಿಮಾದ ಸಂಗೀತ ಬಹಳ ಚೆನ್ನಾಗಿದೆ
ಸಿನಿಮಾದಲ್ಲಿನ ಆಕ್ಷನ್ ದೃಶ್ಯಗಳು ಚೆನ್ನಾಗಿವೆ. ಸಿನಿಮಾದಲ್ಲಿ ಕಾಣುವ ಮರಳುಗಾಡು, ಖಾಲಿ ಮೈದಾನ, ಇಕ್ಕಟ್ಟಿನ ಪ್ರದೇಶಗಳು, ದಟ್ಟ ಅರಣ್ಯ ಎಲ್ಲವನ್ನೂ ಸುಂದರವಾಗಿ ಸೆರೆಹಿಡಿದಿದ್ದಾರೆ ಅನಯ್ ಗೋಸ್ವಾಮಿ. ಶಿವಕುಮಾರ್ ಸಂಕಲನ ಸಹ ಚೆನ್ನಾಗಿದೆ. ರಣ್ಬೀರ್ ನಟನೆಯ ಬಳಿಕ ಸಿನಿಮಾದ ಉತ್ತಮ ಅಂಶವೆಂದರೆ ಸಂಗೀತ. ಸಿನಿಮಾದ ಸಂಗೀತ ಕಿವಿಗೆ ಇಂಪೆನಿಸುತ್ತದೆ. ಕೆಲವು ಹಾಡುಗಳಂತೂ ಅದ್ಭುತವಾಗಿವೆ.