ಕಥೆಯೊಂದು ಶುರುವಾಗಿದೆ ವಿಮರ್ಶಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಯ್ತಾ?
ಕಳೆದ ಒಂದು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಮ್ಮ 'ಕಥೆಯೊಂದು ಶುರುವಾಗಿದೆ' ಅಂತ ತಮ್ಮ ಕಥೆಯನ್ನು ಹೇಳುತ್ತಾ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಕುತೂಹಲ ಮೂಡಿಸುತ್ತಿದ್ದ ಚಿತ್ರತಂಡ 'ಕಥೆಯೊಂದು ಶುರುವಾಗಿದೆ'.
ಸೆನ್ನಾ ಹೆಗ್ಡೆ ನಿರ್ದೇಶನದ ದಿಗಂತ್ ಹಾಗೂ ಪೂಜಾ ದೇವರಿಯಾ ನಾಯಕಿಯಾಗಿ ಅಭಿನಯ ಮಾಡಿರುವ 'ಕಥೆಯೊಂದು ಶುರುವಾಗಿದೆ'. ಚಿತ್ರ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಮರ್ಷಿಯಲ್ ಸಿನಿಮಾ ಅಲ್ಲವಾದರೂ ಮನಮುಟ್ಟುವ ಸಿನಿಮಾ ಲೀಸ್ಟ್ ನಲ್ಲಿ 'ಕಥೆಯೊಂದು ಶುರುವಾಗಿದೆ' ಚಿತ್ರ ನಿಲ್ಲುತ್ತೆ ಎನ್ನುವುದು ಅನೇಕರ ಮಾತು.
ನಿನ್ನೆಯಷ್ಟೇ ರಾಜ್ಯಾದಂತ್ಯ ಬಿಡುಗಡೆ ಆಗಿರುವ ಹೊಸ ರೀತಿಯ ಪ್ರಯತ್ನದಲ್ಲಿ ತೆರೆ ಮೇಲೆ ಬಂದಿರುವ ಕಥೆಯೊಂದು ಶುರುವಾಗಿದೆ ಸಿನಿಮಾ ನೋಡಿದ ವಿಮರ್ಶಕರು ಚಿತ್ರಕ್ಕೆ ಕೊಟ್ಟ ಮಾರ್ಕ್ಸ್ ಎಷ್ಟು? ಸಿನಿಮಾ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ
ಸುಂದರ ಪ್ರೇಮಕಥೆಗಳ ಗುಚ್ಛ: ವಿಜಯ ಕರ್ನಾಟಕ
ಚಿತ್ರದ ಹೆಸರು ಬುಕ್ಕೀಶ್ ಎನಿಸಿದರೂ ಸಿನಿಮಾಗೆ ಪಕ್ಕಾ ಸೂಟ್ ಆಗುತ್ತದೆ. ನಷ್ಟದಲ್ಲಿ ನಡೆಯುತ್ತಿರುವ ರೆಸಾರ್ಟ್ವೊಂದರ ಮಾಲೀಕ ತರುಣ್ (ದಿಗಂತ್), ಆ ರೆಸಾರ್ಟ್ನಲ್ಲಿ ಕೆಲಸವೇ ಇಲ್ಲದ ಪೆಡ್ರೋ (ಅಶ್ವಿನ್) ಮತ್ತು ಸ್ವರ್ಣ (ಶ್ರೇಯಾ), ಆ ರೆಸಾರ್ಟ್ಗೆ ಗೆಸ್ಟ್ ಆಗಿ ಬರುವ ತಾನ್ಯಾ (ಪೂಜಾ).. ಇವರೆಲ್ಲರ ಬದುಕು ಇನ್ನೇನು ಕೊನೆ ನಿಲ್ದಾಣದಲ್ಲಿದೆ ಎನ್ನುವಾಗಲೂ ರೊಮ್ಯಾಂಟಿಕ್ ಆಗಿ ಬದುಕುತ್ತಿರುವ ವಯೋವೃದ್ಧ ದಂಪತಿ (ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್) ನಡುವೆ ನಡೆಯುವ ನಾಲ್ಕು ದಿನದ ಘಟನೆಗಗಳನ್ನೇ ಸೊಗಸಾಗಿ ಸಿನಿಮಾ ಮಾಡಿದ್ದಾರೆ ನಿರ್ದೇಶಕರು.
ಮೌನದಲ್ಲೇ ಮಾತು ಕಥೆಯಾಗಿದೆ-ಕನ್ನಡ ಪ್ರಭ
ಸಮುದ್ರ ದಂಡೆಯಲ್ಲಿರುವ ಪರಿಸರದಲ್ಲಿ ಆರು ಮಂದಿ ಇದ್ದಾರೆ. ಒಬ್ಬೊಬ್ಬರದೂ ಬೇರೆ ಬೇರೆ ಕಥೆ. ಕಥೆ ಹೇಳುತ್ತಲೇ ಒಬ್ಬರನ್ನು ಮತ್ತೊಬ್ಬರ ಕಥೆಯೊಳಗೆ ಸೇರಿಸುತ್ತಾ ಸ್ವಲ್ಪ ಹೊತ್ತಿಗೆ ದೂರ ಸರಿಸುತ್ತಾ ಬದುಕಿನ ಹುಟುಕಾಟದಲ್ಲಿರುವಂತೆ ಕಾಣಿಸುತ್ತಾರೆ ನಿರ್ದೇಶಕ. ನೋವನ್ನೂ ನಗುತ್ತಲೇ ಸ್ವೀಕರಿಸಿ ಬಾಳುವ ಕ್ಯೂಟ್ ಆದ ಒಂದು ಹಿರಿ ಜೀವ. ಆ ಜೀವಕ್ಕೆ ನೆಮ್ಮದಿ ಬಯಸುವ ಅವರ ಪತ್ನಿ. ಪ್ರೀತಿ ಹಂಬಲಿಸುವ ತರುಣ. ಅವನಿಗಾಗಿಯೇ ಬರುವ ತರುಣಿ. ಪ್ರೀತಿಸುವ ಹುಡುಗಿಗಾಗಿ ದುಬೈಗೆ ಹೋಗುವ ಕನಸು ಕಾಣುವ ಹಳ್ಳಿ ಹುಡುಗ, ದುಬೈಯವನನ್ನು ಮದುವೆಯಾಗಿ ಜೀವನದಲ್ಲಿ ಸೆಟ್ಲ್ ಆಗುವ ಹಂಬಲದಲ್ಲಿರುವ ಹುಡುಗಿ ಇವರೆಲ್ಲರೂ ಒಂದು ಬೇರೆಯೇ ಜಗತ್ತಿಗೆ ಕರೆದುಕೊಂಡು ಹೋಗುತ್ತಾರೆ. ಅದು ಈ ಸಿನಿಮಾದ ಹೆಗ್ಗಳಿಕೆ ಮತ್ತು ಶಕ್ತಿ.
ನಮ್ಮ ನಡುವಿನ ಕಥೆಯಿದು- ಉದಯವಾಣಿ
ಇಬ್ಬರೂ ಸಮುದ್ರ ದಡದಲ್ಲಿ ಮಲಗಿರುತ್ತಾರೆ. ಮೇಲೆ ಆಕಾಶದಲ್ಲಿ ಅತ್ತಿಂದತ್ತ ಒಂದು ಶೂಟಿಂಗ್ ಸ್ಟಾರ್ ಹಾದು ಹೋಗುತ್ತದೆ. ಅದನ್ನು ನೋಡುತ್ತಾ ಏನಾದರೂ ಆಸೆಪಟ್ಟರೆ, ಅದು ನಿಜವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಅದೇ ನಂಬಿಕೆಯಿಂದ ಅವನು ತನಗೊಂದು ಹೊಸ ಜೀವನ ಬೇಕೆಂದು ಬೇಡಿಕೊಳ್ಳುತ್ತಾನೆ. ಅವಳು ತನಗೆ ಹಳೆಯ ಜೀವನ ಬೇಕು ಅಂದುಕೊಳ್ಳುತ್ತಾಳೆ. ಅವರಿಬ್ಬರ ಆಸೆ ಈಡೇರುತ್ತದಾ? "ಕಥೆಯೊಂದು ಶುರುವಾಗಿದೆ' ಮೂರು ಜೋಡಿಗಳ ಜೀವನದಲ್ಲಿನ ಮೂರು ದಿನಗಳ ಕಥೆಯಷ್ಟೇ. ಇಲ್ಲಿ ಮೂರೂ ಜೋಡಿಗಳು ಮೂರು ಬೇರೆ ವಯೋಮಾನದವರು. ಮೂರು ತಲೆಮಾರಿನವರಿಗೂ ಅವರವರದೇ ಕಷ್ಟ-ಸುಖಗಳು, ಗೊಂದಲಗಳು, ಸಮಸ್ಯೆಗಳು, ಹತಾಶೆಗಳು, ಆತಂಕಗಳು ಇತ್ಯಾದಿ ಇತ್ಯಾದಿ ಇರುತ್ತದೆ. ಈ ಘಟದಲ್ಲಿ ಈ ಮೂರೂ ಜೋಡಿಗಳ ಲೈಫ್ನಲ್ಲೊಂದೊಂದು ಹೊಸ ಕಥೆ ಶುರುವಾಗುವ ಮೂಲಕ ಚಿತ್ರ ಮುಗಿಯುತ್ತದೆ.
ಕಥೆಯೊಂದು ಸಾಗುವುದು ಸಾವಧಾನವಾಗಿ: ಪ್ರಜಾವಾಣಿ
ಪ್ರೀತಿಯೆಂಬುದು ಒಂದು ಭಾವ. ಅದು ವ್ಯಕ್ತವಾಗುವ ಬಗೆಗಳು ಹತ್ತಾರು. ವ್ಯಕ್ತವಾಗುವುದು ಒಂದೇ ಬಗೆಯಲ್ಲಾಗಿದ್ದರೂ ನೋಡುವ ವ್ಯಕ್ತಿಗೆ ಹಲವು ರೀತಿಗಳಲ್ಲಿ ಅದು ಕಾಣಿಸುತ್ತದೆಯೋ?! ಹೀಗೆ, ಪ್ರೀತಿಯ ಬಗ್ಗೆ ಹಲವೆಂಟು ಪ್ರಶ್ನೆಗಳನ್ನು ಮೂಡಿಸುತ್ತ ಸಾಗುವ ಚಿತ್ರ ‘ಕಥೆಯೊಂದು ಶುರುವಾಗಿದೆ'.ದಿಗಂತ್ ಮಂಚಾಲೆ (ತರುಣ್), ಪೂಜಾ (ತಾನ್ಯಾ) ಇಲ್ಲಿನ ಮುಖ್ಯ ಪಾತ್ರಗಳು. ಅವರ ಜೊತೆಯಲ್ಲಿ ಇನ್ನೂ ನಾಲ್ಕು ಪಾತ್ರಗಳು ಚಿತ್ರದುದ್ದಕ್ಕೂ ಬರುತ್ತವೆ. ಈ ಪಾತ್ರಗಳು ಹಾಸ್ಯ ಮಾಡುತ್ತ, ಕೀಟಲೆ ಮಾಡುತ್ತ ಹೇಳುವುದು ಕೂಡ ‘ಪ್ರೀತಿ'ಯನ್ನೇ. ತರುಣ್ ಒಂದು ಚಿಕ್ಕ ಊರಿನಲ್ಲಿ ತನ್ನದೊಂದು ರೆಸಾರ್ಟ್ ನಡೆಸಿಕೊಂಡು ಹೋಗುತ್ತಿರುವ ಯುವಕ. ಸ್ವರ್ಣಾ (ಶ್ರೇಯಾ ಅಂಚನ್) ಮತ್ತು ಪೆಡ್ರೋ (ಅಶ್ವಿನ್ ರಾವ್ ಪಲ್ಲಕ್ಕಿ) ಅವನ ರೆಸಾರ್ಟ್ನಲ್ಲಿ ಕೆಲಸ ಮಾಡುವವರು. ಮಕ್ಕಳಿಲ್ಲದ ಮೂರ್ತಿ (ಬಾಬು ಹಿರಣ್ಣಯ್ಯ) ಮತ್ತು ರಾಧಾ (ಅರುಣಾ ಬಾಲರಾಜ್) ದಂಪತಿಗೆ ತರುಣ್ ದೊಡ್ಡ ಆಸರೆ ಇದ್ದಂತೆ. ಇದು ಸಿನಿಮಾ ಆರಂಭದಲ್ಲಿ ಸಿಗುವ ಚಿತ್ರಣ


Click it and Unblock the Notifications











