ನಾ ನೋಡಿದ 'ಕುರುಕ್ಷೇತ್ರ' : ದೃಶ್ಯ ವೈಭವದ ಪರಾಕಾಷ್ಟೆ
ಕನ್ನಡಕದ ಮೇಲೊಂದು ತ್ರೀಡಿ ಕನ್ನಡಕ, ಅಜ್ಜ, ಅಜ್ಜಿ, ಅಪ್ಪ, ಅಮ್ಮ ಕುಟುಂಬ ಸಮೇತ ಚಿತ್ರಮಂದಿರಕ್ಕೆ ದಾಂಗುಡಿಯಿಟ್ಟ ಪ್ರೇಕ್ಷಕ. ಮಹಾಭಾರತದಲ್ಲಿ ಬರುವ ಕ್ಲೈಮ್ಯಾಕ್ಸ್ 'ಕುರುಕ್ಷೇತ್ರ' ಸನ್ನಿವೇಶದಲ್ಲಿ ಬರುವ ಕಥೆ, ಪಾತ್ರಧಾರಿಗಳ ಬಗ್ಗೆ ಮಕ್ಕಳಿಗೆ ತಿಳಿದಿರಬೇಕು ಎನ್ನುವ ಕಾರಣವೂ ಸೇರಿದಂತೆ ತುಂಬಿ ಕುಳಿತ ಚಿತ್ರಮಂದಿರ.
ರಾಷ್ಟ್ರಗೀತೆಗೆ ಎದ್ದುನಿಂತ ನಂತರ, ಸಿಗರೇಟ್ ಆರೋಗ್ಯಕ್ಕೆ ಹಾನಿಕರ ಎನ್ನುವ ಸಂದೇಶದೊಂದಿಗೆ ಸಿನಿಮಾ ಆರಂಭ. ಟೈಟಲ್ ಕಾರ್ಡ್ ನಂತರ, ಮೊದಲ ಎಂಟ್ರಿಯೇ ಸುಯೋಧನ ಪಾತ್ರಧಾರಿ. ಅಕ್ಷರಶಃ ದ್ವಾಪರ ಯುಗದ ಸುಯೋಧನ ಹೀಗೇ ಇರಬಹುದು ಎನ್ನುವಂತೆ ಆತನ ದೇಹದಾರ್ಢ್ಯ, ರಾಜಗಾಂಭೀರ್ಯ, ಅದನ್ನೂ ಮೀರಿಸುವಂತಿದ್ದ ಹಸ್ತಿನಾಪುರದ ಒಡ್ಡೋಲಗ.
ಅಲ್ಲಿಂದ ಒಂದೊಂದೇ ಪಾತ್ರವನ್ನು ಪರಿಚಯಿಸುತ್ತಾ, ಕಣ್ಮನೆ ಸೆಳೆಯುವ ಸೆಟ್ ನೊಂದಿಗೆ ಸಾಗುವ ಸಿನಿಮಾಗೆ ಕರ್ಣನ ಎಂಟ್ರಿ. ಕೌರವ ಕುಲವನ್ನು ನಿರ್ನಾಮ ಮಾಡಬೇಕೆಂದು ಶಪಥಗೈಯುತ್ತಾ ಶಕುನಿಯ ಹಸ್ತಿನಾಪುರಕ್ಕೆ ಕಾಲಿಡುವ ಮೂಲಕ, ಚಿತ್ರ ಇನ್ನೊಂದು ಮಜಲಿಗೆ ಸಾಗುತ್ತದೆ.
ಚಿತ್ರದ ಕಥೆ, ಕ್ಲೈಮ್ಯಾಕ್ಸ್ ಹೀಗೇ ಇರುತ್ತೆ ಎನ್ನುವುದು ಗೊತ್ತಿರುವ ವಿಚಾರವಾಗಿರುದರಿಂದ, ಆ ಸನ್ನಿವೇಶ ಹೇಗೆ ಮೂಡಿ ಬರುತ್ತದೆ, ಪಾತ್ರಧಾರಿ ಹೇಗೆ ತನ್ನ ಪಾತ್ರವನ್ನು ನಿಭಾಯಿಸಿದ್ದಾನೆ ಎನ್ನುವ ಕುತೂಹಲದೊಂದಿಗೆ, ಪಗಡೆಯಾಡದ ದೃಶ್ಯ, ದ್ರೌಪದಿ ವಸ್ತ್ರಾಪಹರಣ, ಕೃಷ್ಣನ ಎಂಟ್ರಿಯೊಂದಿಗೆ ಮಧ್ಯಂತರದ ಹೊತ್ತಿಗೆ ಸಿನಿಮಾ ಬಂದು ನಿಲ್ಲುತ್ತದೆ.
ಪೌರಾಣಿಕ ಸಿನಿಮಾಗಳೆಂದರೆ ಅದು ರಾಜ್ ಕುಮಾರ್ ಅವರ ಸಿನಿಮಾ
ಅಲ್ಲಿಂದ, ಪಾಂಚಾಲಿಯ ಶಪಥ, ಅಭಿಮನ್ಯುವಿನ ಎಂಟ್ರಿ ಮತ್ತು ಬಹುತೇಕ ಯುದ್ದದ ಸಿನಿಮಾಗಳು, ಯುದ್ದ ಗೆಲ್ಲಲು ಮಾಡಬೇಕಾದ ತಂತ್ರ, ಕುತಂತ್ರದ ಸನ್ನಿವೇಶಗಳು, ಗದಾಯುದ್ದದೊಂದಿಗೆ 183 ನಿಮಿಷದ ದೃಶ್ಯಕಾವ್ಯಕ್ಕೆ ಪೂರ್ಣವಿರಾಮ ಬೀಳುತ್ತದೆ. ಕನ್ನಡದಲ್ಲಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳೆಂದರೆ ಅದು ರಾಜ್ ಕುಮಾರ್ ಅವರ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರ ಚಿತ್ರದ ಪ್ರಭಾವ ಇನ್ನೂ ಇದೆ.
ಹಳೆಯ ಪೌರಾಣಿಕೆ ಸಿನಿಮಾಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ
ಹಳೆಯ ಪೌರಾಣಿಕೆ ಸಿನಿಮಾಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದೆ ಕುರುಕ್ಷೇತ್ರ, ಅದಕ್ಕಾಗಿ ನಿರ್ಮಾಪಕರಿಗೆ, ನಿರ್ದೇಶಕರಿಗೆ, ಇಡೀ ಚಿತ್ರತಂಡಕ್ಕೆ ಬೆನ್ನು ತಟ್ಟಲೇ ಬೇಕು. ಪೌರಾಣಿಕ ಚಿತ್ರಗಳನ್ನು ತೆರೆಯ ಮೇಲೆ ತರುವುದು ಸಾಧಾರಣದ ಕೆಲಸವಲ್ಲ ಎನ್ನುವುದು ಕುರುಕ್ಷೇತ್ರದ ಚಿತ್ರದ ಪ್ರತೀ ಫ್ರೇಮ್ ನಲ್ಲೂ ಕಾಣಬಹುದಾಗಿದೆ. ಒಂದೊಂದು ಸೆಟ್ ನಿರ್ಮಿಸುವಲ್ಲಿ ಕಲಾ ನಿರ್ದೇಶಕರ ಪರಿಶ್ರಮ ಎದ್ದು ಕಾಣುತ್ತದೆ. ಅದಕ್ಕೆ ಸರಿಯಾಗಿ ಕಲಾವಿದರ ವಸ್ತ್ರ ವಿನ್ಯಾಸ ಕೂಡಾ..
ಅಭಿಮನ್ಯು - ಉತ್ತರೆಯ ಪ್ರಣಯಸಲ್ಲಾಪ
ಸುಯೋಧನ - ಭಾನುಮತಿ, ಅಭಿಮನ್ಯು - ಉತ್ತರೆಯ ಪ್ರಣಯಸಲ್ಲಾಪದ ಹಾಡಿನ ಸೆಟ್ ಅಂತೂ ಸ್ವರ್ಗ ಲೋಕವನ್ನೇ ಧರೆಗಿಳಿಸಿದಂತಿದೆ. ಮೂರು ಗಂಟೆಗಳ ಸುದೀರ್ಘ ಕಥನವನ್ನು ತೆರೆಯ ಮೇಲೆ ನಿರೂಪಿಸುವಲ್ಲಿ ನಿರ್ದೇಶಕರು ಅಲ್ಲಲ್ಲಿ ಎಡವಿದ್ದರೂ, ಒಟ್ಟಾರೆಯಾಗಿ ಗೆದ್ದಿದ್ದಾರೆ.
ಚಿತ್ರ ನೋಡಿ ಸಂತೃಪ್ತಿಯಿಂದ ಹೊರಬರುವ ಪ್ರೇಕ್ಷಕ
ಚಿತ್ರ ನೋಡಿ ಸಂತೃಪ್ತಿಯಿಂದ ಹೊರಬರುವ ಪ್ರೇಕ್ಷಕನಿಗೆ, ಈ ಪಾತ್ರವನ್ನು, ಆ ಸನ್ನಿವೇಶವನ್ನು ಇನ್ನೂ ಚೆನ್ನಾಗಿ ತೆಗೆಯಬಹುದಿತ್ತು ಎಂದು ಕಾಡುವುದು ಸಹಜ, ಅದು ಕೆಜಿಎಫ್ ಚಿತ್ರ ನೋಡಿದ ನಂತರವೂ ಪ್ರೇಕ್ಷಕರಿಗೆ ಕಾಡಿತ್ತು. ಕೆಜಿಎಫ್ ಚಿತ್ರ ಕನ್ನಡದ ಮಾರುಕಟ್ಟೆಯನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋದ ಸಿನಿಮಾ, ಕುರುಕ್ಷೇತ್ರ ಕೂಡಾ ಅದೇ ರೀತಿ ಹೈಪ್ ಸೃಷ್ಟಿಸಿದ ಚಿತ್ರ.
ಅರ್ಜುನ ಪಾತ್ರಧಾರಿ ಅದ್ಯಾಕೋ ಮಂಕು
ಇಷ್ಟು ದೊಡ್ಡ ಪ್ರಯತ್ನದಲ್ಲಿ ಅಲ್ಲಲ್ಲಿ ತಪ್ಪುಗಳು ಆಗುವುದು ಸಹಜ. ಅದರಲ್ಲಿ ಕೆಲವೊಂದು, ಭೀಮನ ಪಾತ್ರಧಾರಿಯ ದೇಹವೇನೂ ಆಜಾನುಬಾಹು, ಆದರೆ ಘರ್ಜನೆ ಕಮ್ಮಿ. ಅರ್ಜುನ ಪಾತ್ರಧಾರಿ ಅದ್ಯಾಕೋ ಮಂಕು. ಅಭಿಮನ್ಯು ಮತ್ತು ಉತ್ತರೆಯ ಪ್ರಣಯದ ಹಾಡಿನಲ್ಲಿ ಸಾಲ್ಸಾ ನೃತ್ಯವನ್ನು ಹೋಲುವ ಸ್ಟೆಪ್ ಅನ್ನು ನೃತ್ಯ ನಿರ್ದೇಶಕರು ಯಾಕೆ ಬಳಸಿಕೊಂಡರೋ?
ಶ್ರೀಕೃಷ್ಣ ಹಸ್ತಿನಾಪುರಕ್ಕೆ ಸಂಧಾನಕ್ಕೆ ಬರುವ ಸನ್ನಿವೇಶ
ಪಾಂಡವರ ಪರವಾಗಿ ಶ್ರೀಕೃಷ್ಣ ಹಸ್ತಿನಾಪುರಕ್ಕೆ ಸಂಧಾನಕ್ಕೆ ಬರುವ ಸನ್ನಿವೇಶ, ಪಗಡೆಯಾಟ, ದ್ರೌಪದಿ ವಸ್ತ್ರಾಪಹರಣ ಸನ್ನಿವೇಶಗಳನ್ನು ಇನ್ನೂ ಮನಮುಟ್ಟುವಂತೆ ತೆಗೆಯಬಹುದಿತ್ತು. ಗ್ರಾಫಿಕ್ ಕೆಲಸಗಳು ಇನ್ನಷ್ಟು ಕುಸುರಿತನವನ್ನು ಪಡೆಯಬೇಕಿತ್ತು ಎನ್ನುವುದಕ್ಕೆ ಯುದ್ದದ ದೃಶ್ಯಗಳು ಸಾಕ್ಷಿ. ಭೀಷ್ಮ ಮತ್ತು ಅಭಿಮನ್ಯುವಿನ ನಡುವೆ ಸಂಭಾಷಣೆಗೆ ಪ್ರೇಕ್ಷಕ ರಾಜಕೀಯ ಟಚ್ ಕೊಟ್ಟು ಶಿಳ್ಳೆ ಹೊಡೆಯುತ್ತಿದ್ದದ್ದು, ಮಂಡ್ಯ ಲೋಕಸಭಾ ಚುನಾವಣೆಯ ಕಾವು ಇನ್ನೂ ಮುಗಿದಂತೆ ಕಾಣುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿಯಂತಿತ್ತು.
ಕ್ಯಾಮರಾ ಕೆಲಸ, ಹಿನ್ನಲೆ ಸಂಗೀತ ಅದ್ಭುತ
ಚಿತ್ರದ ಇತರ ಪಾತ್ರಧಾರಿಗಳು ತಮ್ಮ ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರದ ಬಹುತೇಕ ಎಲ್ಲಾ ಹಾಡುಗಳು ಇಂಪಾಗಿವೆ. ಕ್ಯಾಮರಾ ಕೆಲಸ, ಹಿನ್ನಲೆ ಸಂಗೀತ ಅದ್ಭುತವಾಗಿದೆ. ಸಂಭಾಷಣೆ ಪೌರಾಣಿಕ ಚಿತ್ರಕ್ಕೆ ಪೂರಕವಾಗಿದೆ. ಸಂಕಲನಕಾರರು ಕೆಲವೊಂದು ದೃಶ್ಯಕ್ಕೆ ಕತ್ತರಿ ಹಾಕಬಹುದಿತ್ತು.
ಕಾಡುವ ಪಾತ್ರವೆಂದರೆ, ಶಕುನಿ, ಕರ್ಣ ಮತ್ತು ಸುಯೋಧನ
ಕೊನೆಯದಾಗಿ, ಚಿತ್ರದಲ್ಲಿ ಕೆಲವೊಂದು ಲೋಪಗಳನ್ನು ಬಿಟ್ಟರೆ, ಎಲ್ಲರೂ ತಮ್ಮ ಕೆಲಸಗಳನ್ನು ಚೊಕ್ಕವಾಗಿ ಮಾಡಿ ಮುಗಿಸಿದ್ದಾರೆ. ಆದರೆ, ಚಿತ್ರಮಂದಿರದಿಂದ ಹೊರಬಂದ ಮೇಲೂ ಕಾಡುವ ಪಾತ್ರವೆಂದರೆ, ಶಕುನಿ, ಕರ್ಣ ಮತ್ತು ಸುಯೋಧನ. ನಮ್ಮವರ 'ಕುರುಕ್ಷೇತ್ರ' ಸಿನಿಮಾದ ಪ್ರಯತ್ನಕ್ಕೆ ನಾವೆಲ್ಲಾ ಬೆನ್ನುತಟ್ಟಲೇ ಬೇಕು. ಚಿತ್ರ ಇನ್ನೂ ನೋಡಿಲ್ಲವೆಂದರೆ, ಕುಟುಂಬ ಸಮೇತ ಚಿತ್ರವನ್ನೊಮ್ಮೆ ನೋಡಿ. It is worth watching..


Click it and Unblock the Notifications











