ವಿಮರ್ಶೆ: ದುಡ್ಡೇ ದೊಡ್ಡಪ್ಪ, 'ಬಕಾಸುರ' ಅದರ ಅಪ್ಪ.!
Recommended Video

ಹಿಂದು ಪುರಾಣದ ಪ್ರಕಾರ, 'ಬಕಾಸುರ' ಒಬ್ಬ ರಾಕ್ಷಸ. ಒಂದು ಬಂಡಿ ಆಹಾರ ಸೇವಿಸುವ ಅಸುರ. ಆದ್ರೆ, ಸಿನಿಮಾದಲ್ಲಿನ 'ಬಕಾಸುರ' ಹಾಗಲ್ಲ. ದುಡ್ಡಿಗಾಗಿ ಬಾಯಿ ಬಿಡುವ ವಕೀಲ. ಲಕ್ಷ ಲಕ್ಷ ಹಣ ಕೊಟ್ಟರೆ 'ರಾಕ್ಷಸ'ರನ್ನೇ ಶಿಕ್ಷೆಯಿಂದ ಪಾರು ಮಾಡುವಷ್ಟು ಚಾಣಾಕ್ಷ. 'ದುಡ್ಡೇ ದೊಡ್ಡಪ್ಪ' ಎನ್ನುವ ಈಗಿನ ಕಾಲದಲ್ಲಿ ಸಂಬಂಧಗಳ ಮಹತ್ವ ಸಾರುವ ಚಿತ್ರ 'ಬಕಾಸುರ'.
ಚಿತ್ರ: ಬಕಾಸುರ
ನಿರ್ಮಾಣ: ರೋಹಿತ್ ಮತ್ತು ತಂಡ
ನಿರ್ದೇಶಕ: ನವನೀತ್
ಸಂಗೀತ ನಿರ್ದೇಶನ: ಅವಿನಾಶ್.ಬಿ
ತಾರಾಗಣ: ರೋಹಿತ್, ರವಿಚಂದ್ರನ್, ಕಾವ್ಯ ಗೌಡ, ಸಿತಾರ, ಶಶಿಕುಮಾರ್, ಸಾಧು ಕೋಕಿಲ, ಸಿಹಿ ಕಹಿ ಚಂದ್ರು ಮತ್ತು ಇತರರು
ಬಿಡುಗಡೆ: ಏಪ್ರಿಲ್ 27, 2018
'ಬಕಾಸುರ'ನ ಸುತ್ತ
ನಾಯಕ ಆರ್ಯ (ರೋಹಿತ್) ವಕೀಲ. ಸಂಬಂಧಗಳಿಗಿಂತ ಈತನಿಗೆ ದುಡ್ಡೇ ಮುಖ್ಯ. ಹಣಕ್ಕಾಗಿ ಬುದ್ಧಿ ಖರ್ಚು ಮಾಡುವ ಚಾಲಾಕಿ. ದುಡ್ಡಿನ ಆಸೆಗಾಗಿ ಆರ್ಯ ಕೈಹಾಕುವ ಕೇಸ್ ಗಳು, ಅದರಿಂದ ನಡೆಯುವ ಅವಾಂತರಗಳೇ ಚಿತ್ರದ ಹೂರಣ.
ಕಲ್ಪನೆ-ಆಲೋಚನೆ
'ದುಡ್ಡೇ ಎಲ್ಲ' ಅಂತ ನಂಬಿರುವ ಆರ್ಯ ಮನಃಪರಿವರ್ತನೆ ಮಾಡಲು ಮುಂದಾಗುವುದು ಚಕ್ರವರ್ತಿ (ರವಿಚಂದ್ರನ್). ಅಸಲಿಗೆ, ಈ ಚಕ್ರವರ್ತಿ ಯಾರು.? ಚಕ್ರವರ್ತಿಗೂ ಆರ್ಯನಿಗೂ ಇರುವ ಸಂಬಂಧ ಏನು.? ಎಂಬುದೇ ಚಿತ್ರದ ಸಸ್ಪೆನ್ಸ್. ಈ ಸಸ್ಪೆನ್ಸ್ ಜೊತೆಗೆ ಒಂದು 'ಕಾಲ್ಪನಿಕ' ಕಥೆಯೂ ಚಿತ್ರದಲ್ಲಿದೆ. ಅದನ್ನ ನೀವು ತೆರೆ ಮೇಲೆ ನೋಡಿ...
ರವಿಚಂದ್ರನ್-ರೋಹಿತ್ ನಟನೆ ಹೇಗಿದೆ.?
ಉದ್ಯಮಿ ಚಕ್ರವರ್ತಿ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯ ನೈಜವಾಗಿದೆ. ಕ್ರಿಮಿನಲ್ ಲಾಯರ್ ಪಾತ್ರ ನಿರ್ವಹಿಸಿರುವ ರೋಹಿತ್ ನಟನೆ ಚೆನ್ನಾಗಿದೆ. ಮ್ಯಾನೇಜರ್ ಪಾತ್ರದಲ್ಲಿ ಸಾಧು ಕೋಕಿಲ ಎಂದಿನಂತೆ ಆಕ್ಟ್ ಮಾಡಿದ್ದಾರೆ.
ಗಮನ ಸೆಳೆಯುವ ಕಾವ್ಯ ಗೌಡ
ರೋಹಿತ್ ಗೆಳತಿ ಪಾತ್ರದಲ್ಲಿ ಕಾವ್ಯ ಗೌಡ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಸಿತಾರ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ. ಶಶಿ ಕುಮಾರ್ ಹೀಗೆ ಬಂದು ಹಾಗೆ ಹೋಗುತ್ತಾರೆ. ಸುಚೇಂದ್ರ ಪ್ರಸಾದ್ ಕನ್ನಡ ಪ್ರೇಮ ಮೆಚ್ಚುವಂಥದ್ದು.
ಸೀರಿಯಸ್ ಸಿನಿಮಾ
ಬಹುತೇಕ ಸೀರಿಯಸ್ ಆಗಿ ಸಾಗುವ 'ಬಕಾಸುರ' ಚಿತ್ರದಲ್ಲಿ ಕಾಮಿಡಿ, ರೋಮ್ಯಾನ್ಸ್, ಸೆಂಟಿಮೆಂಟ್ ಗೆ ಹೆಚ್ಚು ಅವಕಾಶ ಇಲ್ಲ. ಚಿತ್ರದಲ್ಲಿ ಸಾಧು ಕೋಕಿಲ ಇದ್ದರೂ ನಗು ತರಿಸುವುದಿಲ್ಲ. ಎರಡು ಹಾಡುಗಳಿದ್ದರೂ, ಅನವಶ್ಯಕವಾಗಿ ತುರುಕಿಲ್ಲ. ಅವಿನಾಶ್.ಬಿ ಸಂಗೀತ ಸಂಯೋಜಿಸಿದ ಹಾಡುಗಳು ಪರ್ವಾಗಿಲ್ಲ. ಚಿತ್ರಕಥೆ ಹಾಗೂ ಕೆಲ ಸನ್ನಿವೇಶಗಳು ಪರಿಣಾಮಕಾರಿ ಆಗಿಲ್ಲ.
ಫೈನಲ್ ಸ್ಟೇಟ್ ಮೆಂಟ್
'ದುಡ್ಡಿನ ಹಿಂದೆ ನಾವು ಹೋಗುವುದಲ್ಲ, ಅದೇ ನಮ್ಮ ಹಿಂದೆ ಬರಬೇಕು' ಎಂಬ ಸಂದೇಶ ಸಾರುವ ಚಿತ್ರ 'ಬಕಾಸುರ'. ಲವ್ ಸ್ಟೋರಿ ಚಿತ್ರಗಳನ್ನೇ ನೋಡಿ ನೋಡಿ ಬೋರ್ ಆಗಿರುವವರು, ಒಮ್ಮೆ 'ಬಕಾಸುರ' ಚಿತ್ರವನ್ನ ನೋಡಬಹುದು.


Click it and Unblock the Notifications











