ವಿಮರ್ಶೆ: ಬೇಗಂ ಓಕೆ, 'ಜಾನ್' ನಲ್ಲಿ ಧಮ್ ಇಲ್ಲ
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶ್ರೀಜಿತ್ ಮುಖರ್ಜಿ ಆಕ್ಷನ್ ಕಟ್ ಹೇಳಿರುವ, ನಟಿ ವಿದ್ಯಾಬಾಲನ್ ಮುಖ್ಯಭೂಮಿಕೆಯಲ್ಲಿನ 'ಬೇಗಂ ಜಾನ್' ಚಿತ್ರ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ. 'ಮೈ ಬಾಡಿ, ಮೈ ಹೌಸ್, ಮೈ ಕಂಟ್ರಿ, ಮೈ ರೂಲ್ಸ್' ಎಂಬ ಬರಹಗಳಿರುವ ಪೋಸ್ಟರ್ ಮತ್ತು ಟ್ರೈಲರ್ ನೋಡಿ ಚಿತ್ರದ ಬಗ್ಗೆ ಕೆರಳಿದ್ದ ಕುತೂಹಲಕ್ಕೆ ಇಂದು ಬ್ರೇಕ್ ಬಿದ್ದಿದೆ.
ವಿದ್ಯಾಬಾಲನ್ ಅಭಿನಯದ 'ಬೇಗಂ ಜಾನ್' ದೇಶ ವಿಭಜನೆ ಬಳಿಕ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದ ಮಹಿಳೆಯರು, ರಾಣಿಯರಂತೆ ಹೋರಾಟ ಮಾಡಿರುವ ಸತ್ಯಘಟನೆ ಆಧಾರಿತ ಸಿನಿಮಾ. ಈ ಚಿತ್ರದ ವಿಮರ್ಶೆಯನ್ನು ಮುಂದೆ ಓದಿ..
ಚಿತ್ರ : 'ಬೇಗಂ ಜಾನ್
ಕಥೆ-ಚಿತ್ರಕಥೆ: ಶ್ರೀಜಿತ್ ಮುಖರ್ಜಿ, ಕೌಸರ್ ಮುನಿರ್
ನಿರ್ದೇಶನ: ಶ್ರೀಜಿತ್ ಮುಖರ್ಜಿ
ನಿರ್ಮಾಣ : ಮುಕೇಶ್ ಭಟ್, ವಿಶೇಶ್ ಭಟ್
ಸಂಗೀತ : ಅನು ಮಾಲಿಕ್, ಖಯ್ಯಂ
ಛಾಯಾಗ್ರಹಣ: ಗೋಪು ಭಗತ್
ತಾರಾಗಣ : ವಿದ್ಯಾಬಾಲನ್, ನಾಸಿರುದ್ದೀನ್ ಶಾ, ಗೌಹರ್ ಖಾನ್, ಇಳಾ ಅರುಣ್, ರಜಿತ್ ಕಪೂರ್, ಚುಂಕಿ ಪಾಂಡೆ, ಪೂನಂ ಸಿಂಗ್ ರಾಜ್ ಪುತ್, ಪಲ್ಲವಿ ಶಾರ್ದ ಮತ್ತು ಇತರರು
ಬಿಡುಗಡೆ : ಏಪ್ರಿಲ್ 14, 2017
ಚಿತ್ರಕಥೆ
ಸ್ವತಂತ್ರ ಮುನ್ನಾದಿನದಂದು, ಬಾರ್ಡರ್ ಕಮಿಷನ್ ನ ಅಧ್ಯಕ್ಷ ಸರ್ ಸಿರಿಲ್ ರಾಡ್ಕ್ಲಿಫ್ ದೇಶವನ್ನು ಭಾರತ ಮತ್ತು ಪಾಕಿಸ್ತಾನವಾಗಿ ವಿಭಜನೆ ಮಾಡಲು ನಿರ್ಧರಿಸುತ್ತಾರೆ. ಇದರ ಪರಿಣಾಮ ಬೀರುವುದು ಗಡಿ ರೇಖೆ ಮಧ್ಯದಲ್ಲಿ ಇರುವ ಬೇಗಂ ಜಾನ್(ವಿದ್ಯಾಬಾಲನ್) ವೇಶ್ಯಾಗೃಹದ ಮೇಲೆ. ಬೇಗಂ ಜಾನ್ ಮನೆಯ ಅರ್ಧಭಾಗ ಭಾರತದಲ್ಲಿದ್ದರೆ, ಉಳಿದ ಅರ್ಧಭಾಗ ಪಾಕಿಸ್ತಾನದ ಗಡಿಯೊಳಗೆ ಉಳಿಯುತ್ತದೆ. ಈ ಮನೆಯನ್ನು ಪೂರ್ಣವಾಗಿ ಉಳಿಸುಕೊಳ್ಳಲು ಬೇಗಂ ಜಾನ್ ಮತ್ತು ಇತರೆ ಮಹಿಳೆಯರು ನಡೆಸುವ ಹೋರಾಟವೇ 'ಬೇಗಂ ಜಾನ್' ಸಿನಿಮಾ.
ಶ್ರೀಜಿತ್ ಮುಖರ್ಜಿ ನಿರ್ದೇಶನ
ನಿರ್ದೇಶಕ ಶ್ರೀಜಿತ್ ಮುಖರ್ಜಿ ದೇಶ ವಿಭಜನೆ ಸಂದರ್ಭದಲ್ಲಿ ಸಿರಿಲ್ ರಾಡ್ಕ್ಲಿಫ್ ನಿರ್ಧಾರದಿಂದ 11 ಮಹಿಳೆಯರು ಜೀವಿಸುತ್ತಿರುವ ವೇಶ್ಯಾಗೃಹದ ಮೇಲೆ ಬೀರುವ ಪರಿಣಾಮದ ಬಗ್ಗೆ ಮೇಲೆ ಹೆಚ್ಚು ಗಮನಹರಿಸಿದ್ದಾರೆ. ಸಿನಿಮಾ ಚಿತ್ರಕಥೆ ರಚಿಸಿರುವ ನಿರ್ದೇಶಕರ ಧೈರ್ಯ ಮೆಚ್ಚುವಂತದ್ದು ಮತ್ತು ಶ್ಲಾಘನೀಯ. ಆದರೆ ಚಿತ್ರದಲ್ಲಿ ವಿದ್ಯಾ ಬಾಲನ್ ಹೊರತುಪಡಿಸಿ ಇತರೆ ಪಾತ್ರದಾರಿಗಳ ಹಿನ್ನೆಲೆಯನ್ನು ಹೇಳದೆ ಪ್ರೇಕ್ಷಕರಲ್ಲಿ ಪ್ರಶ್ನೆ ಹುಟ್ಟಿಸಿದ್ದಾರೆ ನಿರ್ದೇಶಕ. ಅಲ್ಲದೇ ನಿರೂಪಣೆ ಹೆಚ್ಚು ಭಾವತೀವ್ರತೆಗೆ ಎಡೆಮಾಡಿಕೊಟ್ಟಿದೆ.
ವಿದ್ಯಾಬಾಲನ್ ಅಭಿನಯ
ವಿದ್ಯಾಬಾಲನ್ ಸಿನಿಮಾದಲ್ಲಿ ಬೇಗಂ ಜಾನ್ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ. ಯಾವುದೇ ಸಮಸ್ಯೆಗಳಿಗೆ ಹೆದರದೇ ದಿಟ್ಟ ಧೈರ್ಯವಂತೆಯಾಗಿ ಅಭಿನಯಿಸಿರುವ ವಿದ್ಯಾಬಾಲನ್ ಪಾತ್ರ ಪ್ರೇಕ್ಷಕರ ಮನದಲ್ಲಿ ಉಳಿಯುತ್ತದೆ. ಅಲ್ಲದೇ ಸಂಭಾಷಣೆ ಮತ್ತು ಕೆಲವೊಂದು ಡೈಲಾಗ್ ಗಳು ಅತ್ಯದ್ಭುತವಾಗಿವೆ.
ಉಳಿದವರ ಪಾತ್ರ
ಚಿತ್ರದಲ್ಲಿ ವಿದ್ಯಾಬಾಲನ್ ಗೆ ಪಲ್ಲವಿ ಶಾರ್ದ ಅಕಾ ಗುಲಾಬೊ ಸಾಥ್ ಕೊಟ್ಟಿದ್ದು, ತೆರೆಮೇಲೆ ಹೆಚ್ಚು ಮಿಂಚಿದ್ದಾರೆ. ಉಳಿದಂತೆ ಇಳಾ ಅರುಣ್, ರಜಿತ್ ಕಪೂರ್, ಚುಂಕಿ ಪಾಂಡೆ, ಪೂನಂ ಸಿಂಗ್ ರಾಜ್ ಪುತ್ ಮತ್ತು ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದು, ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ.
ತಾಂತ್ರಿಕವಾಗಿ ಚಿತ್ರ
'ಬೇಗಂ ಜಾನ್' ಚಿತ್ರ ಸಾಹಿತ್ಯ ಸಂಭಾಷಣೆಗಿಂತ ಹೆಚ್ಚಾಗಿ ಸನ್ನಿವೇಶಗಳ ಆಧಾರಿತವಾಗಿದೆ. ಆದ್ದರಿಂದ ಛಾಯಾಗ್ರಾಹಕ ಗೋಪು ಭಗತ್ ಕ್ಯಾಮೆರಾ ವರ್ಕ್ ನಲ್ಲಿ ಹೆಚ್ಚು ಸೃಜನಶೀಲತೆ ಇಲ್ಲದೆಯು ಉತ್ತಮವಾಗಿ ಮೂಡಿಬಂದಿತೆ ಎಂಬಂತೆ ಬಾಸವಾಗುತ್ತದೆ. ಚಿತ್ರದ ಮೊದಲಾರ್ಧ ಮಂದಗತಿಯಲ್ಲಿ ಸಾಗಿದರು, ಸೆಕೆಂಡ್ ಆಫ್ ನಲ್ಲಿ ಪ್ರೇಕ್ಷಕರು ಕಣ್ಣು ಮಿಟುಕಿಸದಂತೆ ನೋಡಿಸಿಕೊಳ್ಳುವ ಸನ್ನಿವೇಶಗಳಿಂದ ಕೂಡಿದೆ. ಮೊನಿಶಾ ಬಾಲ್ಡವ ಮತ್ತು ವಿವೇಕ್ ಮಿಶ್ರಾ ಸಂಕಲನ ಉತ್ತಮವಾಗಿದೆ.
ಸಂಗೀತ
ಅನು ಮಾಲಿಕ್ ಮತ್ತು ಖಯ್ಯಂ ಸಂಗೀತ 'ಬೇಗಂ ಜಾನ್' ಚಿತ್ರಕ್ಕೆ ಪೂರಕವಾಗಿದ್ದು, ಸಿನಿಮಾ ಯಶಸ್ಸಿಗೆ ಇನ್ನೊಂದು ಕಾರಣ ಮ್ಯೂಸಿಕ್ ಎನ್ನುವಷ್ಟು ಸೊಗಸಾಗಿದೆ. ಚಿತ್ರದಲ್ಲಿರುವ 'Aazaadiyan' ಮತ್ತು 'Holi Khelein' ಹಾಡುಗಳು ಚಿತ್ರಮಂದಿರದಿಂದ ಹೊರಗೆ ಬಂದರು ಗುನುಗುತ್ತವೆ.
ಫೈನಲ್ ಸ್ಟೇಟ್ ಮೆಂಟ್
'ಬೇಗಂ ಜಾನ್' ಗಂಭೀರ ಕಥಾವಸ್ತುವಿನ ಸಿನಿಮಾ. ಸಮಾಜದಲ್ಲಿ ಬದುಕಲು ಅನುಸರಿಸಬೇಕಾದ ಮಾನದಂಡಗಳನ್ನು ಚಿಂತನೆಗೆ ಒಡ್ಡುತ್ತದೆ. ಹಾಗೆ ಜೀವನದ ಮೇಲೆ ಆಶಾಭಾವನೆಯನ್ನು ಮೂಡಿಸಿ ಸಮಾಧಾನಕರವಾಗಿಸುತ್ತದೆ. ಕಣ್ಣುಕುಕ್ಕುವ ವಿದ್ಯಾಬಾಲನ್ ಅಭಿನಯ ಮತ್ತು ಅವರ ಬೋಲ್ಡ್ ಸಂಭಾಷಣೆ ನೋಡಲು 'ಬೇಗಂ ಜಾನ್' ಚಿತ್ರವನ್ನು ಈ ವೀಕೆಂಡ್ ನಲ್ಲಿ ವೀಕ್ಷಿಸಬಹುದು.


Click it and Unblock the Notifications










