ಸ್ಲಂ ನಿವಾಸಿಗಳ ಮೇಲೆ ಚಿತ್ರತಂಡದ ದಬ್ಬಾಳಿಕೆ, ದೂರು ದಾಖಲು
ಚಿತ್ರೀಕರಣ ಮಾಡುವ ನೆಪದಲ್ಲಿ ಸ್ಲಂ ನಿವಾಸಿಗಳ ಮೇಲೆ ಚಿತ್ರತಂಡವೊಂದು ದಬ್ಬಾಳಿಕೆ ನಡೆಸಿದೆ ಎಂದು ದೂರು ನೀಡಲಾಗಿದೆ.
ಚೆನ್ನೈನ ರಾಣಿ ಅನ್ನಾ ನಗರ್ ಸ್ಲಂ ನಿವಾಸಿಗಳು ಹೀಗೊಂದು ದೂರು ನೀಡಿದ್ದು, ತಮಿಳುನಾಡು ಸ್ಲಂ ಕ್ಲಿಯರೆನ್ಸ್ ಸಮಿತಿಗೆ ದೂರು ಸಹ ನೀಡಿದೆ.
ರಾಣಿ ಅನ್ನಾ ನಗರ್ ಏರಿಯಾದಲ್ಲಿ ಹಲವು ಸಿನಿಮಾಗಳು ಚಿತ್ರೀಕರಣಗೊಂಡಿವೆ. ಇದೇ ಸ್ಲಂನಲ್ಲಿ ಚಿತ್ರೀಕರಣಕ್ಕೆಂದು ಚಿತ್ರತಂಡವೊಂದು ಕೆಲ ದಿನಗಳ ಹಿಂದೆ ಬಂದಿತ್ತು. ಚಿತ್ರೀಕರಣದ ನೆಪದಲ್ಲಿ ಸ್ಥಳೀಯರು ಓಡಾಡದಂತೆ ನಿರ್ಬಂಧ ವಿಧಿಸಲಾಗಿತ್ತು. ಚಿತ್ರೀಕರಣಕ್ಕೆ ಅನುಮತಿ ಇದೆಯೇ ಎಂದು ಪ್ರಶ್ನಿಸಿದಾಗ ರೌಡಿಗಳನ್ನು ಕರೆದುಕೊಂಡು ಬಂದು ದಬ್ಬಾಳಿಕೆ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

''ಜುಲೈ 25ರಂದು ಚಿತ್ರತಂಡವು ಚಿತ್ರೀಕರಣ ಮಾಡುತ್ತಿತ್ತು. ಚಿತ್ರೀಕರಣದ ವೇಳೆ ಸ್ಥಳೀಯರಿಗೆ ಓಡಾಟ ನಿಷೇಧಿಸಲಾಗಿತ್ತು. ಚಿತ್ರೀಕರಣದಿಂದ ಸ್ಥಳೀಯರ ದಿನನಿತ್ಯದ ವ್ಯವಹಾರಗಳಿಗೆ ಸಹ ತೊಂದರೆಯಾಗುತ್ತಿತ್ತು. ನಿಮಗೆ ಚಿತ್ರೀಕರಣ ಮಾಡಲು ಅನುಮತಿ ಇದೆಯೇ ಎಂದು ಪ್ರಶ್ನೆ ಮಾಡಿದಾಗ ರಾಜಕೀಯ ಪಕ್ಷದೊಟ್ಟಿಗೆ ಸಂಬಂಧವಿದ್ದ ಸ್ಥಳೀಯ ರೌಡಿಯನ್ನು ಅವನೊಂದಿಗೆ ಇನ್ನೊಂದು ಹದಿನೈದು ಮಂದಿಯನ್ನು ಕರೆಸಿ ನಮ್ಮನ್ನು ಹೆದರಿಸಲಾಯಿತು'' ಎಂದು ರಾಣಿ ಅನ್ನಾ ನಗರ್ ಏರಿಯಾದ ನಿವಾಸಿಗಳ ಸಂಘದ ಅಧ್ಯಕ್ಷ ಕಾಶೀನಾಥನ್ ಹೇಳಿದ್ದಾರೆ.
''ಸ್ಲಂಗೆ ಬರುವ ಎಲ್ಲ ದಾರಿಗಳನ್ನು ಬಂದ್ ಮಾಡಲಾಗಿತ್ತು. ಏರಿಯಾದ ಜನಗಳು ಒಳಗೆ ಬರುವುದು, ಹೊರಗೆ ಹೋಗುವುದನ್ನು ತಡೆ ಹಿಡಿಯಲಾಗಿತ್ತು. ಜೊತೆಗೆ ನೀರಿನ ಟ್ಯಾಂಕರ್ ಅನ್ನು ಸಹ ಒಳಗೆ ಹೋಗಲು ಬಿಡಲಿಲ್ಲ'' ಎಂದಿದ್ದಾರೆ ಕಾಶಿನಾಥನ್.
ವಾಸಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಸ್ಥಳೀಯ ಸಂಸ್ಥೆಯಿಂದ ಸೂಕ್ತ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಚಿತ್ರತಂಡ ಯಾವುದೇ ಅನುಮತಿ ಪಡೆದಿಲ್ಲ ಎಂದು ಕಾಶಿನಾಥ್ ಆರೋಪ ಮಾಡಿದ್ದಾರೆ. ಹೀಗೆ ರೌಡಿಗಳ ಬೆಂಬಲ ಪಡೆದು ಚಿತ್ರೀಕರಣ ಮಾಡುತ್ತಿರುವುದು ಇದು ಮೊದಲಲ್ಲ ಎಂದು ಕಾಶಿನಾಥನ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾಶೀನಾಥನ್ ಹಾಗೂ ಸ್ಥಳೀಯ ನಿವಾಸಿಗಳ ಸಂಘದ ಇತರ ಕೆಲವು ಸದಸ್ಯರು ಸೇರಿ ಚೆನ್ನೈನ ಕೆಕೆ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Click it and Unblock the Notifications











