ಮೃತ ಪತಿಯ ಬಗ್ಗೆ ಸುಳ್ಳು ಸುದ್ದಿ ಹರಡದಿರಿ: ನಟಿ ಮೀನಾ ಮನವಿ
ದಕ್ಷಿಣ ಭಾರತದ ಖ್ಯಾತ ನಟಿ ಮೀನಾರ ಪತಿ ವಿದ್ಯಾಸಾಗರ್ ಜೂನ್ 28 ರಂದು ನಿಧನ ಹೊಂದಿದ್ದಾರೆ. ಅವರಿಗೆ 50 ರ ಆಸುಪಾಸಿನ ವಯಸ್ಸು.
ವಿದ್ಯಾಸಾಗರ್ರ ಅಕಾಲಿಕ ಮೃತ್ಯುವಿನ ಬಗ್ಗೆ ಹಲವು ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಕೊನೆಗೆ ತಮಿಳುನಾಡಿನ ಆರೋಗ್ಯ ಸಚಿವರೇ ಖುದ್ದಾಗಿ ವಿದ್ಯಾಸಾಗರ್ ಸಾವಿನ ಕಾರಣ ಬಹಿರಂಗಪಡಿಸಿದರು.
ಇದೀಗ ನಟಿ ಮೀನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರವೊಂದನ್ನು ಹಂಚಿಕೊಂಡಿದ್ದು ಪತಿಯ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡದಿರಿ ಎಂದು ಮನವಿ ಮಾಡಿದ್ದಾರೆ ಹಾಗೂ ಸಂಕಷ್ಟದ ಸಮಯದಲ್ಲಿ ತಮಗೆ ಸಹಾಯ ಮಾಡಿದ ಹಿರಿಯರಿಗೆ, ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸಾವಿನ ಬಗ್ಗೆ ಸುಳ್ಳು ಸುದ್ದಿ ಬೇಡ: ಮೀನಾ ಮನವಿ
''ನನ್ನ ಪ್ರೀತಿಯ ಪತಿ ವಿದ್ಯಾಸಾಗರ್ ಅಗಲಿಕೆಯಿಂದ ನಾನು ತೀವ್ರ ದುಃಖಿತಳಾಗಿದ್ದೇನೆ. ಈ ಸಮಯದಲ್ಲಿ ಮಾಧ್ಯಮಗಳು ನಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ'' ಎಂದಿರುವ ಮೀನಾ, ''ಈ ಘಟನೆಯ ಕುರಿತು ಯಾವುದೇ ಸುಳ್ಳು ಸುದ್ದಿಗಳನ್ನು ಮುಂದಿನ ದಿನಗಳಲ್ಲಿ ಪ್ರಸಾರ ಮಾಡುವ ಕಾರ್ಯ ಮಾಡಬೇಡಿ'' ಎಂದು ಮನವಿ ಮಾಡಿದ್ದಾರೆ.

ಧನ್ಯವಾದ ಅರ್ಪಿಸಿದ ಮೀನಾ
''ಇಂಥಹಾ ಸಂಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತ ಕುಟುಂಬದ ಮಿತ್ರರು, ಸಹೋದ್ಯೋಗಿಗಳು ಹಾಗೂ ಹಿರಿಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕೊನೆಯ ವರೆಗೂ ಪ್ರಯತ್ನ ನಿಲ್ಲಿಸದ ವೈದ್ಯಕೀಯ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನಮ್ಮ ಸಿಎಂ ಸ್ಟಾಲಿನ್ ಅವರಿಗೆ, ಆರೋಗ್ಯ ಸಚಿವ ಸುಬ್ರಹ್ಮಣಿಯನ್, ಐಎಎಸ್ ಅಧಿಕಾರಿ ರಾಧಾಕೃಷ್ಣನ್, ನಮ್ಮ ಕುಟುಂಬಸ್ಥರು, ಗೆಳೆಯರು, ಮಾಧ್ಯಮದವರು ಹಾಗೂ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಾನು ಆಭಾರಿ'' ಎಂದಿದ್ದಾರೆ ಮೀನಾ.

95 ದಿನ ಐಸಿಯುವಿನಲ್ಲಿದ್ದ ವಿದ್ಯಾಸಾಗರ್
ಮೀನಾರ ಪತಿ ವಿದ್ಯಾಸಾಗರ್ ಬಹು ಸಮಯದಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ 95 ದಿನಗಳಿಂದಲೂ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾಸಾಗರ್, ಶ್ವಾಸಕೋಶ ಹಾಗೂ ಹೃದಯ ಕಸಿಗಾಗಿ ಕಾಯುತ್ತಲೇ ಪ್ರಾಣ ಬಿಟ್ಟರು. ಅವರಿಗೆ ಶ್ವಾಸಕೋಶ ಹಾಗೂ ಹೃದಯ ಕಸಿಯ ಅಗತ್ಯವಿತ್ತು ಆದರೆ ಅವರಿಗೆ ಹೊಂದಿಕೆಯಾಗುವ ಅಂಗಾಗ ದಾನಿ ಸಿಗಲಿಲ್ಲವಾದ್ದರಿಂದ ಸುದೀರ್ಘ ಸಮಯ ಕಾದು ಕೊನೆಗೆ ಜೂನ್ 28 ರಂದು ನಿಧನ ಹೊಂದಿದರು.

ವಿದ್ಯಾಸಾಗರ್ ಸಾವಿನ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿದವು
ವಿದ್ಯಾಸಾಗರ್ ಸಾವಿನ ಬಗ್ಗೆ ಕೆಲವು ಸುಳ್ಳು ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ವಿದ್ಯಾಸಾಗರ್ ಕೋವಿಡ್ ಕಾರಣದಿಂದ ನಿಧನ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ತೆಲುಗಿನ ನಟಿ, ನಿರ್ಮಾಪಕಿ ಲಕ್ಷ್ಮಿ ಮಂಚು ಸಹ ವಿದ್ಯಾಸಾಗರ್ ಕೋವಿಡ್ ಕಾರಣಕ್ಕೆ ತೀರಿಕೊಂಡಿದ್ದಾರೆ ಎಂದು ಪೋಸ್ಟ್ ಹಾಕಿದ್ದರು. ಕೊನೆಗೆ ತಮಿಳುನಾಡಿನ ಆರೋಗ್ಯ ಸಚಿವರು ವಿದ್ಯಾಸಾಗರ್ ನಿಧನಕ್ಕೆ ಕಾರಣ ತಿಳಿಸಿದರು. ಖುಷ್ಬು ಸಹ ವಿದ್ಯಾಸಾಗರ್ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿಕೊಂಡರು.


Click it and Unblock the Notifications











