'ಅಖಂಡ' ಸಿನಿಮಾ ನೋಡುತ್ತಲೇ ಪ್ರಾಣ ಬಿಟ್ಟ ಸಿನಿಮಾ ವಿತರಕ!
ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಆದರೆ ಸಿನಿಮಾ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿಲ್ಲ. ಆದರೆ ಬಾಲಯ್ಯ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ.
'ಅಖಂಡ' ಸಿನಿಮಾ ಹಿಟ್ ಎಂದು ಈಗಾಗಲೇ ಅಭಿಮಾನಿಗಳು ಘೋಷಿಸಿದ್ದು ಚಿತ್ರಮಂದಿರಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಬಾಲಯ್ಯ ಅಭಿಮಾನಿಯೂ ಆಗಿದ್ದ ಜನಪ್ರಿಯ ಸಿನಿಮಾ ಪ್ರದರ್ಶಕ, ವಿತರಕರೊಬ್ಬರು 'ಅಖಂಡ' ಸಿನಿಮಾ ವೀಕ್ಷಿಸುವಾಗಲೇ ನಿಧನ ಹೊಂದಿದ್ದಾರೆ.
ಈಸ್ಟ್ ಗೋಧಾವರಿ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಜಸ್ತಿ ರಾಮಕೃಷ್ಣ ಸತ್ಯಮಾಲಾ ಚಿತ್ರಮಂದಿರದಲ್ಲಿ 'ಅಖಂಡ' ಸಿನಿಮಾ ವೀಕ್ಷಿಸುವ ಸಂದರ್ಭದಲ್ಲಿ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನ ಹೊಂದಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಯಾಗಿದ್ದ ರಾಮಕೃಷ್ಣ, ಜನಪ್ರಿಯ ಸಿನಿಮಾ ವಿತರಕರೂ ಆಗಿದ್ದರು. ರಾಜಮಂಡ್ರಿಯಲ್ಲಿ ನಮವರಮ್ ವಿಎಸ್ ಮಹಲ್ ಚಿತ್ರಮಂದಿರ ಕಟ್ಟಿದ್ದ ರಾಮಕೃಷ್ಣ ಬಳಿಕ ಸಿನಿಮಾ ವಿತರಣೆಯಲ್ಲೂ ತೊಡಗಿಕೊಂಡರು. ಬಳಿಕ ಈಸ್ಟ್ ಗೋದಾವರಿ ವಲಯ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷರಾದರು. ಇವರು ಜೆಕೆ ರೆಸ್ಟೋರೆಂಟ್ ಗ್ರೂಪ್ನ ಮಾಲೀಕರು ಸಹ ಆಗಿದ್ದಾರೆ. ರಾಮಕೃಷ್ಣ, ಪತ್ನಿ ಸಿರೀಶಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

'ಅಖಂಡ' ಸಿನಿಮಾದಲ್ಲಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿದ್ದು ಸಿನಿಮಾದಲ್ಲಿ 'ಮಾಸ್' ಅಂಶಗಳು ವಿಪರೀತ ಪ್ರಮಾಣದಲ್ಲಿದೆ. ಅಸಾಧ್ಯ ಎಂಬುದನ್ನೆಲ್ಲ ಸಿನಿಮಾದಲ್ಲಿ ಬಾಲಕೃಷ್ಣ ಮಾಡುತ್ತಾರೆ! ತೊಡೆಗೆ ತೆಂಗಿನಕಾಯಿ ಒಡೆದುಕೊಳ್ಳುವುದು, ನ್ಯೂಟನ್ ಲಾ ಅನ್ನು ಸುಳ್ಳಾಗಿಸುವ ಫೈಟ್ಗಳು, ಗನ್ನಲ್ಲಿ ತಲೆಗೆ ಆರು ಗುಂಡು ಹೊಡೆಸಿಕೊಂಡರು ಫೈಟ್ ಮಾಡುವ ವಿಲನ್! ಇಂಥಹಾ 'ಆಶ್ಚರ್ಯಕರ' ದೃಶ್ಯಗಳು ಸಿನಿಮಾದಲ್ಲಿ ಸಾಕಷ್ಟಿವೆ.
'ಅಖಂಡ' ಸಿನಿಮಾವನ್ನು ಬೊಯಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿ ನಟ ಶ್ರೀಕಾಂತ್ ನಟಿಸಿದ್ದಾರೆ. ಜಗಪತಿ ಬಾಬು ಸಹ ಇದ್ದಾರೆ. ಪ್ರಜ್ಞಾ ಜೈಸ್ವಾಲ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ಅವಿನಾಶ್, ಪೂರ್ಣ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮಿರಿಯಾಲ ರವೀಂದ್ರ ರೆಡ್ಡಿ, ಸಂಗೀತ ನೀಡಿರುವುದು ಎಸ್ ತಮನ್.


Click it and Unblock the Notifications











