ಪ್ರತಿಷ್ಠಿತ ಮಾ ಚುನಾವಣೆಗೆ ದಿನಾಂಕ ಘೋಷಣೆ: ಗೆಲ್ಲುತ್ತಾರಾ ಪ್ರಕಾಶ್ ರೈ?
ತೆಲುಗು ಸಿನಿಮಾರಂಗಕ್ಕೆ ಸಂಬಂಧಿಸಿದ 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆ ಬಹಳ ಗಮನ ಸೆಳೆದಿದೆ. ಪ್ರಕಾಶ್ ರೈ, ಮಂಚು ವಿಷ್ಣು ಸೇರಿದಂತೆ ಸ್ಟಾರ್ ನಟರುಗಳೇ ಅಖಾಡದಲ್ಲಿರುವ ಕಾರಣ ಚುನಾವಣೆ ಬಹುವಾಗಿ ಕಳೆ ಕಟ್ಟಿದೆ.
ಮಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದಾಗಿ ಪ್ರಕಾಶ್ ರೈ ಘೋಷಿಸಿದ ದಿನದಿಂದಲೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಕೋಲಾಹಲವೆದ್ದಿದ್ದು ಮಾ ಚುನಾವಣೆ ಬಗ್ಗೆ ಒಬ್ಬೊಬ್ಬರು ಒಂದೊಂದಾಗಿ ಮಾತನಾಡುತ್ತಲೇ ಇದ್ದಾರೆ. ದಿನಕ್ಕೊಬ್ಬರು ಹೊಸ ಅಭ್ಯರ್ಥಿಯ ಹೆಸರುಗಳು ಸಹ ಕೇಳಿಬರುತ್ತಿವೆ.
ಪ್ರಕಾಶ್ ರೈಗೆ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಬೆಂಬಲ ದೊರೆತಿದ್ದು ಗೆಲ್ಲುವ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಆದರೆ ಎದುರಾಳಿಯಾದ ಮಂಚು ವಿಷ್ಣು ಸಹ ಸಾಮಾನ್ಯ ಅಭ್ಯರ್ಥಿಯಲ್ಲ ಅವರ ತಂದೆ ಮೋಹನ್ಬಾಬು ಉದ್ಯಮದ ಹಿರಿಯ ನಟ, ನಿರ್ಮಾಪಕ ಆಗಿದ್ದು, ಮಂಚು ವಿಷ್ಣುಗೆ ನಂದಮೂರಿ ಕುಟುಂಬದ ಬೆಂಬಲ ದೊರಕುವ ಸಾಧ್ಯತೆ ದಟ್ಟವಾಗಿದೆ.

ಎರಡು ಜನರಲ್ ಬಾಡಿ ಮೀಟಿಂಗ್ ಮಾಡಿದ್ದೇವೆ: ನರೇಶ್
ಹೀಗಿರುವಾಗ ಮಾ ಚುನಾವಣೆ ದಿನಾಂಕವನ್ನು ಪ್ರಸ್ತುತ ಮಾ ಅಧ್ಯಕ್ಷ ನರೇಶ್ ಘೋಷಿಸಿದ್ದಾರೆ. ಈ ಬಗ್ಗೆ ವಿಡಿಯೋ ಪ್ರಕಟಿಸಿರುವ ನರೇಶ್, ''ಎರಡು ಜನರಲ್ ಬಾಡಿ ಮೀಟಿಂಗ್ ನಡೆಸಿ ಆಡಳಿತ ಮಂಡಳಿ ಸದಸ್ಯರುಗಳು, ಶಿಸ್ತು ಸಮಿತಿ ಸದಸ್ಯರುಗಳು ಸೇರಿ ಚರ್ಚಿಸಿ ದಿನಾಂಕವನ್ನು ಆಯ್ಕೆ ಮಾಡಿದ್ದೇವೆ. ತೆಲುಗು ಚಿತ್ರರಂಗಕ್ಕೆ ತಿಂಗಳ ರಜೆಯ ದಿನವಾದ ಎರಡನೇಯ ಭಾನುವಾರದಂದೇ ಚುನಾವಣೆ ನಡೆಯಬೇಕು ಎಂಬ ಗುರಿಯೊಂದಿಗೆ ದಿನಾಂಕ ಆಯ್ಕೆ ಮಾಡಿದ್ದೇವೆ'' ಎಂದಿದ್ದಾರೆ.

ಅಕ್ಟೋಬರ್ ತಿಂಗಳ ಎರಡನೇ ಭಾನುವಾರ ಚುನಾವಣೆ
ಸೆಪ್ಟೆಂಬರ್ ತಿಂಗಳಿನಲ್ಲಿಯೇ ಚುನಾವಣೆ ನಡೆಸಬೇಕು ಎಂದು ಹಲವರು ಕೇಳಿಕೊಂಡರು. ನಮಗೂ ಚುನಾವಣೆಯನ್ನು ಬೇಗ ಮುಗಿಸಬೇಕೆಂಬ ಇರಾದೆ ಇತ್ತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೋವಿಡ್ ನಿಯಮಗಳು ಜಾರಿಯಲ್ಲಿರುವ ಸಾಧ್ಯತೆ ಇರುವ ಕಾರಣ ಹಾಗೂ ಗಣೇಶ ಹಬ್ಬ ಸಹ ಇರುವ ಕಾರಣ ಸೆಪ್ಟೆಂಬರ್ ತಿಂಗಳ ಎರಡನೇ ಭಾನುವಾರ ಚುನಾವಣೆಗೆ ಸೂಕ್ತವಾಗುವುದಿಲ್ಲವೆಂದು ನಿಶ್ಚಯಿಸಿ, ಅಕ್ಟೋಬರ್ ತಿಂಗಳ ಎರಡನೇ ಭಾನುವಾರದಂದು ಚುನಾವಣೆ ನಡೆಸಲು ಉದ್ದೇಶಿಸಿದ್ದೇವೆ'' ಎಂದಿದ್ದಾರೆ ನರೇಶ್.

ಕೋವಿಡ್ ನಿಯಮಗಳಿಗೆ ಬದ್ಧವಾಗಿ ಚುನಾವಣೆ
''ಅಕ್ಟೋಬರ್ 10 ರಂದು ಚುನಾವಣೆಯನ್ನು ಸ್ನೇಹಮಯವಾಗಿ, ಕೋವಿಡ್ ನಿಯಮಗಳನ್ನು ಪಾಲಿಸುತ್ತಾ, ಪಾರದರ್ಶಕವಾಗಿ ನಡೆಸುವುದು ನಮ್ಮ ಉದ್ದೇಶವಾಗಿದೆ. ಅಕ್ಟೋಬರ್ 10ರಂದು ಚುನಾವಣೆ ನಡೆಸುವ ಬಗ್ಗೆ ಸದಸ್ಯರುಗಳಿಗೆ ಮಾಹಿತಿ ರವಾನಿಸಲಾಗುವುದು. ಚುನಾವಣೆ ಪ್ರಕ್ರಿಯೆ ಯಾವ ದಿನದಿಂದ ಪ್ರಾರಂಭ ಮಾಡಬೇಕು. ನಿಯಮಗಳೇನು ಎಂಬಿತ್ಯಾದಿ ವಿವರಗಳನ್ನು ಶೀಘ್ರವಾಗಿ ಹಂಚಿಕೊಳ್ಳುತ್ತೇವೆ'' ಎಂದು ನರೇಶ್ ಹೇಳಿದ್ದಾರೆ.

ನಾನ್ ಲೋಕಲ್ ಎಂದವರಿಗೆ ಪ್ರಕಾಶ್ ರೈ ತಿರುಗೇಟು
ಸದ್ಯಕ್ಕೆ ಪ್ರಕಾಶ್ ರಾಜ್, ಮಂಚು ವಿಷ್ಣು, ಜೀವಿತಾ ರಾಜಶೇಖರ್ ಹಾಗೂ ನಟಿ ಹೇಮಾ ಹೆಸರು ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದೆ. ಈ ನಡುವೆ ಪ್ರಕಾಶ್ ರೈ ತೆಲುಗು ರಾಜ್ಯಗಳಿಗೆ ಸೇರಿದವರಲ್ಲ ಸ್ಥಳೀಯರಲ್ಲದವರಿಗೆ ಅಧಿಕಾರ ನೀಡುವುದು ಬೇಡ ಎಂದು ಕರಾಟೆ ಕಲ್ಯಾಣಿ, ಚಿಟ್ಟಿಬಾಬು, ಮಾಧವಿ ತಲಾ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರೈ, ''ನನ್ನ ಸಹಾಯಕರಿಗೆ ತೆಲಂಗಾಣದಲ್ಲಿ ಮನೆ ತೆಗೆದುಕೊಂಡಾಗ ಯಾರೂ ಪ್ರಶ್ನೆ ಮಾಡಿಲ್ಲ, ಎರಡು ಗ್ರಾಮ ದತ್ತು ಪಡೆದಾಗ ಯಾರು ನಾನ್ ಲೋಕಲ್ ಎಂದು ಕೇಳಲಿಲ್ಲ. ನಂದಿ ಪ್ರಶಸ್ತಿ ಪಡೆದಾಗ ಯಾರು ಪ್ರಶ್ನಿಸಿಲ್ಲ. ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಎಲ್ಲಿ ಹೋಗಿದ್ದರು. ಈಗ ಎಲ್ಲಿಂದ ಬಂತು ನಾನ್ ಲೋಕಲ್ ಮಾತು, ಇದು ಬಹಳ ಸಂಕುಚಿತ ಮನೋಭಾವ ತೋರಿಸುತ್ತದೆ ಇದ್ದಕ್ಕಿದ್ದಂತೆ ಲೋಕಲ್, ನಾನ್ ಲೋಕಲ್ ಎಂಬ ಭೇದ ಎಲ್ಲಿಂದ ಬಂತು, ನಾವು ಯಾವ ದೇಶದಲ್ಲಿದ್ದೇವೆ ಅರ್ಥವಾಗುತ್ತಿಲ್ಲ. ಇಲ್ಲಿ ಯಾರು ನಾನ್ ಲೋಕಲ್ ಅಲ್ಲ, ಕಲಾವಿದರು ಯೂನಿವರ್ಸಲ್'' ಎಂದು ತಿರುಗೇಟು ನೀಡಿದ್ದಾರೆ.


Click it and Unblock the Notifications











