ನಟಿಯ ಮೇಲೆ ಅತ್ಯಾಚಾರ: ಮುಂಬೈನಲ್ಲಿ ಯುವಕನ ಬಂಧನ
ಮದುವೆಯಾಗುವುದಾಗಿ ನಂಬಿಸಿ ತೆಲುಗು ನಟಿಯೊಟ್ಟಿಗೆ ಲೈಂಗಿಕ ಸಂಬಂಧ ಬೆಳೆಸಿದ್ದ ಮುಂಬೈನ ಯುವಕನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಯುವ ನಟಿಯೊಬ್ಬರು, ದೈಹಿಕ ತರಬೇತುದಾರನಾಗಿರುವ ಆದಿತ್ಯ ಅಜಯ್ ಕಪೂರ್ ಅನ್ನು ಮುಂಬೈನಲ್ಲಿ ಭೇಟಿಯಾಗಿದ್ದರು. ಇಬ್ಬರಿಗೂ ಪರಿಚಯ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ನಟಿಯನ್ನು ವಿವಾಹವಾಗುವುದಾಗಿ ನಂಬಿಸಿದ್ದ ಆದಿತ್ಯ ಅಜಯ್ ಕಪೂರ್, ನಟಿಯೊಟ್ಟಿಗೆ ಮುಂಬೈ, ಗೋವಾ ಸೇರಿದಂತೆ ಹಲವು ಕಡೆ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ.
ನಟಿಯು, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದಾಗ ಆದಿತ್ಯ ಒಲ್ಲೆ ಎಂದಿದ್ದು, ತನ್ನೊಟ್ಟಿಗೆ ದೈಹಿಕ ಸಂಪರ್ಕ ಮುಂದುವರೆಸುವಂತೆ ನಟಿಯನ್ನು ಪೀಡಿಸಿದ್ದಾನೆ. ನಟಿಯು ಪ್ರತಿಭಟಿಸಿದಾಗ ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಹಾಗೂ ನಟಿಯ ಪೋಷಕರಿಗೂ ಬೆದರಿಕೆ ಸಂದೇಶಗಳನ್ನು ಕಳಿಸಿದ್ದಾನೆ. ಕೊಲ್ಲುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ.

ಆದಿತ್ಯನ ಹಿಂಸೆಯಿಂದ ಬೇಸತ್ತ ನಟಿಯು ಮುಂಬೈನ ಜೋಶಿ ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ದೂರನ್ನು ಕಫ್ ಪರೇಡ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು ಕಫ್ ಪರೇಡ್ ಠಾಣೆಯ ಪೊಲೀಸರು ಆರೋಪಿ ಆದಿತ್ಯನನ್ನು ವಶಕ್ಕೆ ಪಡೆದಿದ್ದಾರೆ.
ಆದಿತ್ಯ ಮೇಲೆ ಅತ್ಯಾಚಾರ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ದೂರು ನೀಡಿರುವ ಸಂತ್ರಸ್ತ ನಟಿಯು ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವುದಾಗಿ ದೂರಿನಲ್ಲಿ ಹೇಳಿದ್ದಾರೆ.


Click it and Unblock the Notifications











