ಆಂಧ್ರ- ತೆಲಂಗಾಣದಲ್ಲಿ ಪುಷ್ಪ, ರಾಮ್, ಭೀಮ್ ಗಣೇಶ ಮೂರ್ತಿಗಳ ಕಾರುಬಾರು!
ಎಲ್ಲೆಲ್ಲೂ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಭಕ್ತರು ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಘ್ನ ನಿವಾರಕನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಈ ಬಾರಿ ಅಪ್ಪು ಗಣೇಶ ಸೇರಿದಂತೆ ಸೂಪರ್ ಹಿಟ್ ಸಿನಿಮಾ ಥೀಮ್ ಗಣೇಶ ಮೂರ್ತಿಗಳು ಎಲ್ಲರ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಗಣೇಶನ ಜೊತೆಗಿರುವ ಪುನೀತ್ ರಾಜ್ಕುಮಾರ್ ಗಣೇಶನಿಗೆ ಬೇಡಿಕೆ ಹೆಚ್ಚಿದ್ದರೆ ಅತ್ತ ಆಂಧ್ರ, ತೆಲಂಗಾಣದಲ್ಲಿ 'RRR' ಹಾಗೂ 'ಪುಷ್ಪ' ಥೀಮ್ ಗಣೇಶನ ದರ್ಬಾರ್ ಜೋರಾಗಿದೆ.
'RRR' ಹಾಗೂ 'ಪುಷ್ಪ' ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡಿದ್ದವು. ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ 300 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಉತ್ತರ ಭಾರತದಲ್ಲೂ ಸ್ಟೈಲಿಶ್ ಸ್ಟಾರ್ಗೆ ಕ್ರೇಜ್ ಸೃಷ್ಟಿಸಿದೆ. ರಕ್ತಚಂದನ ಸ್ಮಗ್ಲರ್ ಪುಷ್ಪರಾಜ್ ಪಾತ್ರದಲ್ಲಿ ಬನ್ನಿ ಜಾದೂ ಮಾಡಿದ್ದರು. ಇನ್ನು ರಾಜಮೌಳಿ ನಿರ್ದೇಶನದ 'RRR' ಸಿನಿಮಾ 1000 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಸೂಪರ್ ಹಿಟ್ ಲಿಸ್ಟ್ ಸೇರಿದೆ. ರಾಮ್ಚರಣ್ ತೇಜಾ ಹಾಗೂ ಜ್ಯೂ. ಎನ್ಟಿಆರ್ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳಲ್ಲಿ ಧೂಳೆಬ್ಬಿಸಿದ್ದರು.
ಈ ಎರಡೂ ಸಿನಿಮಾಗಳ ಪ್ರತಿ ಸೀನ್, ಪ್ರತಿ ಪಾತ್ರ, ಪ್ರತಿ ಸ್ಟಿಲ್ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಿದೆ. ಈ ಸಿನಿಮಾಗಳ ಥೀಮ್ನಲ್ಲಿ ಅಭಿಮಾನಿಗಳು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ.
'RRR' ಹಾಗೂ 'ಪುಷ್ಪ' ಥೀಮ್ ಗಣೇಶ ಮೂರ್ತಿಗಳ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತೆಲುಗು ರಾಜ್ಯಗಳಲ್ಲಿ ಗಣೇಶ ಹಬ್ಬದ ಭರಾಟೆ ಜೋರಾಗಿರುತ್ತದೆ. 11 ದಿನಗಳ ಕಾಲ ಗಣೇಶನನ್ನು ಪೂಜಿಸಿ ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ.

ತಗ್ಗೊದೇ ಇಲ್ಲ ಎನ್ನುತ್ತಿರುವ ಗಣೇಶ
'ಪುಷ್ಪ' ಚಿತ್ರದಲ್ಲಿ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್ ಸ್ಟೈಲ್, ಮ್ಯಾನರಿಸಂ, ಮ್ಯಾನರಿಸಂ ಎಲ್ಲರ ಗಮನ ಸೆಳೆದಿತ್ತು. ತೆಲಂಗಾಣ ಭಾಷೆ ಸ್ಟೈಲ್ ಡೈಲಾಗ್ಸ್ ಸೂಪರ್ ಹಿಟ್ ಆಗಿತ್ತು. ಮಾಮೂಲಿ ಕಮರ್ಷಿಯಲ್ ಚಿತ್ರವನ್ನು ಬಹಳ ವಿಭಿನ್ನವಾಗಿ ಕಟ್ಟಿಕೊಟ್ಟು ಸುಕುಮಾರ್ ಸಕ್ಸಸ್ ಕಂಡಿದ್ದರು. ಅದರಲ್ಲೂ ಸ್ಟೈಲಿಶ್ ಸ್ಟಾರ್ ತಗ್ಗೊದೇ ಇಲ್ಲ ಎಂದು ಹೇಳುವ ಸ್ಟೈಲ್ ಹಿಟ್ ಆಗಿತ್ತು. ಇದೇ ಲುಕ್ನಲ್ಲಿ ಕಾಣಿಸಿಕೊಂಡಿರುವ ಗಣೇಶ ಮೂರ್ತಿ ಈಗ ಗಮನ ಸೆಳೆಯುತ್ತಿದೆ.

ರಾಮ್-ಭೀಮ್ ಅವತಾರಗಳಲ್ಲಿ ಗಣೇಶ
ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕಾಲ್ಪನಿಕ ಕಥೆಯನ್ನು 'RRR' ಚಿತ್ರದಲ್ಲಿ ಹೇಳಿ ರಾಜಮೌಳಿ ಗೆದ್ದಿದ್ದಾರೆ. ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್ಚರಣ್, ಕೊಮುರಂ ಭೀಮ್ ಪಾತ್ರದಲ್ಲಿ ತಾರಕ್ ಭೇಷ್ ಎನಿಸಿಕೊಂಡರು. ಆ ಚಿತ್ರದ ಕೆಲ ಸನ್ನಿವೇಶಗಳಲ್ಲಿ ಇವರಿಬ್ಬರ ಲುಕ್ಸ್ ಸಖತ್ ಕಿಕ್ ಕೊಟ್ಟಿತ್ತು. ರಾಮನ ವೇಷದಲ್ಲಿ ಚರಣ್ ಕ್ಲೈಮ್ಯಾಕ್ಸ್ ಫೈಟ್, ಇಂಟರ್ವಲ್ ಸೀನ್ನಲ್ಲಿ ಎನ್ಟಿಆರ್ ಎಂಟ್ರಿ ಎಲ್ಲರ ಹುಬ್ಬೇರಿಸಿತ್ತು. ಇದೇ ಲುಕ್ಗಳಲ್ಲಿ ಇರುವ ಗಣೇಶ ಮೂರ್ತಿಗಳು ಈಗ ಆಂಧ್ರ, ತೆಲಂಗಾಣದಲ್ಲಿ ರಾರಾಜಿಸುತ್ತಿದೆ.

ರಾಜ್ಯದಲ್ಲಿ ಅಪ್ಪು ಗಣೇಶ ಹವಾ
ಪುನೀತ್ ರಾಜ್ಕುಮಾರ್ನ ಅಗಲಿಕೆಯ ನೋವಿನಲ್ಲಿರುವ ಅಭಿಮಾನಿಗಳು ಈ ಬಾರಿ ಗಣೇಶನ ಜೊತೆಗೆ ಅಪ್ಪುನ ಪೂಜಿಸಲು ಮನಸ್ಸು ಮಾಡಿದ್ದಾರೆ. ಗಣೇಶನ ಜೊತೆಗಿರುವ ಅಪ್ಪು ಮೂರ್ತಿಗಳಿಗೆ ಭಾರೀ ಬೇಡಿಕೆ ಇದೆ. ವಿನಾಯಕ ಯುವಕರ ಬಳಗಗಳಿಂದಲೂ ಅಪ್ಪು ಗಣೇಶ ಪೂಜೆ ನಡೀತಿದೆ. ಈಗಾಗಲೇ ಅಪ್ಪುಗೆ ಹೃದಯದಲ್ಲಿ ದೇವರ ಸ್ಥಾನ ನೀಡಿರುವ ಅಭಿಮಾನಿಗಳು ದೇವರ ಜೊತೆಗೆ ಅಪ್ಪುನ ಆರಾಧಿಸುತ್ತಿದ್ದಾರೆ.

'ಕೆಜಿಎಫ್' ಹಾಗೂ 'ಕ್ರಾಂತಿ' ಗಣೇಶ
ಆಂಧ್ರ, ತೆಲಂಗಾಣ ಮಾತ್ರವಲ್ಲ ಕರ್ನಾಟಕದಲ್ಲೂ ಸಿನಿಮಾಗಳ ಥೀಮ್ ಗಣೇಶ ಮೂರ್ತಿಗಳು ಕಂಗೊಳಿಸುತ್ತಿವೆ. 'ಕೆಜಿಎಫ್' ರಾಕಿ ಭಾಯ್ ಗಣೇಶನನ್ನು ಹೊತ್ತು ಬರುತ್ತಿರುವ ಮೂರ್ತಿ ಅದರಲ್ಲಿ ಒಂದು. ಇನ್ನು ನಟ ದರ್ಶನ್ ಅಭಿಮಾನಿಗಳು ಬಹಳ ದೊಡ್ಡದಲ್ಲಿ 'ಕ್ರಾಂತಿ' ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಗಣೇಶನ ಕೈಗೂ 'ಕ್ರಾಂತಿ' ಪೋಸ್ಟರ್ ಕೊಟ್ಟು ಖುಷಿಪಟ್ಟಿದ್ದಾರೆ. ಜೊತೆಗೆ ದರ್ಶನ್ ಮೂರ್ತಿ ಮಾಡಿ 'ಕ್ರಾಂತಿ' ಗಣೇಶನನ್ನು ಪೂಜಿಸಲು ಮುಂದಾಗಿದ್ದಾರೆ.


Click it and Unblock the Notifications











