ಕಲೆಕ್ಷನ್ ಮುಖ್ಯವಲ್ಲ, ಕಂಟೆಂಟ್ ಮುಖ್ಯ; ಆರ್ಆರ್ಆರ್ ಆಸ್ಕರ್ಗೆ ಆಯ್ಕೆಯಾಗದಿರಲು ಕಾರಣ ಬಿಚ್ಚಿಟ್ಟ ನಾಗಾಭರಣ!
ಮುಂದಿನ ವರ್ಷದ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಯಾವ ಚಿತ್ರ ಆಯ್ಕೆಯಾಗಲಿದೆ ಎಂಬ ಚರ್ಚೆ ಕಳೆದ ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇತ್ತು. ಈ ಪೈಕಿ ಅತಿಹೆಚ್ಚಾಗಿ ಆರ್ ಆರ್ ಆರ್ ಹಾಗೂ ಕಾಶ್ಮೀರ್ ಫೈಲ್ಸ್ ಸಿನಿಮಾಗಳು ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿ ಪ್ರವೇಶ ಪಡೆದುಕೊಳ್ಳುವುದು ಖಚಿತ ಎಂದು ಊಹಿಸಲಾಗಿತ್ತು.
ಅದರಲ್ಲಿಯೂ ಆರ್ ಆರ್ ಆರ್ ಚಿತ್ರವನ್ನು ವೀಕ್ಷಿಸಿದ ಹಾಲಿವುಡ್ ಸಿನಿಮಾ ಮಂದಿ ಸಾಮಾಜಿಕ ಜಾಲತಾಣದಲ್ಲಿ ಆರ್ ಆರ್ ಚಿತ್ರವನ್ನು ಹಾಗೂ ಚಿತ್ರ ನಿರ್ದೇಶಕ ರಾಜಮೌಳಿ, ನಟರುಗಳಾದ ಎನ್ಟಿಆರ್ ಮತ್ತು ರಾಮ್ ಚರಣ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ಆಸ್ಕರ್ ಕುರಿತ ಚರ್ಚೆಗಳು ಆರಂಭವಾಗುವ ಮುನ್ನವೇ ಆರ್ ಆರ್ ಆರ್ ಚಿತ್ರಕ್ಕೆ ಆಸ್ಕರ್ ಬರುವುದು ಖಚಿತ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಹೀಗೆ ಆರ್ ಆರ್ ಆರ್ ಚಿತ್ರದ ಕುರಿತು ದೊಡ್ಡ ನಿರೀಕ್ಷೆ ಹುಟ್ಟಿತ್ತಾದರೂ ಭಾರತ ಫಿಲ್ಮ್ ಫೆಡರೇಷನ್ ( ಐಎಫ್ಎಫ್) ಆರ್ ಆರ್ ಆರ್ ಹಾಗೂ ಕಾಶ್ಮೀರ್ ಫಿಲ್ಮ್ಸ್ ಎರಡನ್ನೂ ಕಡೆಗಣಿಸಿ ಗುಜರಾತಿನ ಚೆಲ್ಲಾ ಶೋ ಎಂಬ ಸಿನಿಮಾವನ್ನು ಆಸ್ಕರ್ಗೆ ಕಳುಹಿಸಿದೆ. ಈ ನಿರ್ಧಾರ ಸಿನಿ ಪ್ರೇಕ್ಷಕರಲ್ಲಿ ಭಾರೀ ನಿರಾಸೆ ಹಾಗೂ ಆಕ್ರೋಶವನ್ನು ಮೂಡಿಸಿದೆ. ಅಷ್ಟು ಜನಪ್ರಿಯತೆ ಹೊಂದಿದ್ದ ಆರ್ ಆರ್ ಆರ್ ಚಿತ್ರವನ್ನು ಆಸ್ಕರ್ಗೆ ಏಕೆ ಕಳುಹಿಸಲಿಲ್ಲ ಎಂಬ ಪ್ರಶ್ನೆ ಕೂಡ ಪ್ರೇಕ್ಷಕರಲ್ಲಿ ಎದ್ದಿತ್ತು. ಈ ಕುರಿತಾಗಿ ಇದೀಗ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಕೆಲಸ ನಿರ್ವಹಿಸಿದ್ದ ಕನ್ನಡದ ನಿರ್ದೇಶಕ ಟಿ ಎಸ್ ನಾಗಭಾರಣ ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಆರ್ಆರ್ಆರ್ ಮಾತ್ರವಲ್ಲ ಆಯ್ಕೆ ಆಗದೇ ಉಳಿದದ್ದು 13 ಚಿತ್ರ
"ಭಾರತದಿಂದ ಆರ್ಆರ್ಆರ್ ಅಧಿಕೃತ ಆಯ್ಕೆಯಾಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು, ಇದು ಕೂಡ ಉತ್ತಮ ಚಿತ್ರ, ಅದನ್ನು ಅಲ್ಲಗಳೆಯುವಂತಿಲ್ಲ. ವಾಸ್ತವವಾಗಿ ಆಸ್ಕರ್ ಆಯ್ಕೆಗೆ ಸ್ಪರ್ಧಿಸಿದ್ದ ಎಲ್ಲಾ 13 ಚಿತ್ರಗಳು ಚೆನ್ನಾಗಿವೆ ಆದರೆ ನಾವು ಒಂದನ್ನು ಆಯ್ಕೆ ಮಾಡಬೇಕಾಗಿತ್ತು, ಆದ್ದರಿಂದ ಉಳಿದ ಚಿತ್ರತಂಡಗಳಿಗೆ ನಿರಾಸೆಯಾಗುವುದು ಸಹಜ" ಎಂದು ಟಿಎಸ್ ನಾಗಾಭರಣ ತಿಳಿಸಿದ್ದಾರೆ.

ಚೆಲ್ಲೋ ಶೋ ಆಯ್ಕೆಯಾಗಲು ಕಾರಣವಿದು
ಇನ್ನೂ ಮುಂದುವರೆದು ಮಾತನಾಡಿದ ನಾಗಾಭರಣ" ಭಾರತವನ್ನು ವಿಭಿನ್ನ ರೀತಿಯಲ್ಲಿ ಪ್ರತಿನಿಧಿಸುವ ಚಿತ್ರವನ್ನು ಆಯ್ಕೆ ಮಾಡಬೇಕು ಎಂಬ ಆಲೋಚನೆ ಇತ್ತು. ಚೆಲ್ಲೋ ಶೋ ಸಾಮಾನ್ಯ ಭಾರತೀಯ ವಾಸ್ತವದ ನಿರೂಪಣೆಯನ್ನು ಮೀರಿಸುತ್ತದೆ ಮತ್ತು ಭಾವನಾತ್ಮಕ ದೃಶ್ಯಗಳನ್ನು ವಿಶಾಲ ಅರ್ಥದಲ್ಲಿ ತೋರಿಸುತ್ತದೆ. ಆ ಚಲನಚಿತ್ರವನ್ನು ಜಗತ್ತಿನಲ್ಲಿ ಎಲ್ಲಿ ಪ್ರದರ್ಶಿಸಿದರೂ ಸಹ ಮಕ್ಕಳಿಗೆ ಕನೆಕ್ಟ್ ಆಗುತ್ತದೆ" ಎಂದಿದ್ದಾರೆ.

ಆಸ್ಕರ್ಗೆ ಆಯ್ಕೆಯಾಗಲು ಕಲೆಕ್ಷನ್ ಮುಖ್ಯವಲ್ಲ
"ಆಸ್ಕರ್ನಲ್ಲಿ ಚಿತ್ರವೊಂದು ಗುರುತಿಸಿಕೊಳ್ಳಲು ಮಾರ್ಕೆಟಿಂಗ್, ಮನರಂಜನಾ ಮೌಲ್ಯ, ಮಾಸ್ ರೀಚ್ ಅಥವಾ ಕಲೆಕ್ಷನ್ ಅಂಕಿಅಂಶಗಳು ಮಾತ್ರ ಮಾನದಂಡವಲ್ಲ. ಚಿತ್ತದ ಕಲೆಕ್ಷನ್ ಅಥವಾ ಜನಪ್ರಿಯತೆ ಮುಖ್ಯವಲ್ಲ, ಚಿತ್ರ ಮನ ಮುಟ್ಟಿದರೆ ಸಾಕು" ಎಂದು ಟಿ ಎಸ್ ನಾಗಾಭರಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











