ಸ್ವಂತ ಪಕ್ಷದಿಂದಲೇ ಜೂ ಎನ್ಟಿಆರ್ ಮೇಲೆ ವಾಗ್ದಾಳಿ: ಭವಿಷ್ಯವೇನು?
ನಟ ಜೂ ಎನ್ಟಿಆರ್ ಸಿನಿಮಾಗಳ ಮೇಲೆ ತಮ್ಮ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದಾರೆ. ಆದರೆ ರಾಜಕೀಯದಿಂದ ಪೂರ್ಣ ಹೊರಗೇನೂ ಉಳಿದಿಲ್ಲ.
ತಮ್ಮ ತಾತ ಹಿರಿಯ ಎನ್ಟಿಆರ್ ಸ್ಥಾಪಿಸಿರುವ ಟಿಡಿಪಿ ಪಕ್ಷದ ಸಕ್ರಿಯ ಸದಸ್ಯರಾಗಿರುವ ಜೂ ಎನ್ಟಿಆರ್, ಪಕ್ಷ ಸಮಸ್ಯೆಯಲ್ಲಿದೆ ಎಂದಾಗ, ಚುನಾವಣೆ ಬಂದಾಗ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುತ್ತಾರೆ. ಇನ್ನುಳಿದಂತೆ ಸಿನಿಮಾಗಳ ಮಾತ್ರವೇ ಗಮನ ವಹಿಸಿರುತ್ತಾರೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಹಾಗೂ ಅವರ ಪತ್ನಿ ಭುವನೇಶ್ವರಿ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಅವಾಚ್ಯವಾಗಿ ಮಾತನಾಡಿದ ಸಂಘಟನೆ ನಡೆದ ಬಳಿಕ ವಿಡಿಯೋ ಒಂದನ್ನು ಪ್ರಕಟಿಸಿದ್ದ ನಟ ಜೂ ಎನ್ಟಿಆರ್, ಇದು ಪ್ರಜಾಪ್ರಭುತ್ವದ ಲಕ್ಷಣವಲ್ಲ, ಮಹಿಳೆಯರಿಗೆ ಅಪಮಾನಿಸುವುದು ತೆಲುಗು ಸಂಪ್ರದಾಯವಲ್ಲ ಎಂದಿದ್ದರು. ಆದರೆ ಜೂ ಎನ್ಟಿಆರ್ ವಿಡಿಯೋ ಬಗ್ಗೆ ಈಗ ಟಿಡಿಪಿ ಮುಖಂಡರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರ್ಲ ರಾಮಯ್ಯ ಅಸಮಾಧಾನ
ತಮ್ಮ ಕುಟುಂಬ ಸದಸ್ಯನಿಗೆ ವಿಧಾನಸಭೆಯಲ್ಲಿ ಅಪಮಾನ ನಡೆದಾಗ ಜೂ ಎನ್ಟಿಆರ್ ಹೀಗೆ ಶಾಂತವಾಗಿ ಪ್ರತಿಕ್ರಿಯಿಸಿರುವುದು ಸರಿಯಲ್ಲ. ಜೂ ಎನ್ಟಿಆರ್, 'ಸಿಹಾಂದ್ರಿ' ರೀತಿಯಲ್ಲಿ ಉರಿದು ಬೀಳುತ್ತಾರೆ ಎಂದುಕೊಂಡಿದ್ದೆವು. ಆದರೆ, ಅವರು ಪುಕ್ಕಲು ರೀತಿಯಲ್ಲಿ, ಹೆದರಿದ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಸರಿಯಲ್ಲವೆಂದು ಟಿಡಿಪಿ ಹಿರಿಯ ಮುಖಂಡ ವರ್ಲ ರಾಮಯ್ಯ ಹೇಳಿದ್ದಾರೆ. ವರ್ಲ ರಾಮಯ್ಯ ಹೇಳಿಕೆಗೆ ಇನ್ನೂ ಕೆಲವು ಟಿಡಿಪಿ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಜೂ ಎನ್ಟಿಆರ್ v/s ಟಿಡಿಪಿ
ಟಿಡಿಪಿ ಸಾಮಾಜಿಕ ಜಾಲತಾಣ ವಿಭಾಗವೂ ಸಹ ಜೂ ಎನ್ಟಿಆರ್ ವಿಡಿಯೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಟಿಡಿಪಿಯ ಕೆಲವು ಸದಸ್ಯರು ಜೂ ಎನ್ಟಿಆರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ದಾರೆ. ಜೂ ಎನ್ಟಿಆರ್ ಹೇಡಿ ಎಂದು, ಪುಕ್ಕಲು ಎಂದು ಹೀಗಳೆದಿದ್ದಾರೆ. ಆದರೆ ಜೂ ಎನ್ಟಿಆರ್ ಅಭಿಮಾನಿಗಳು ಟಿಡಿಪಿ ಪಕ್ಷದ ಸದಸ್ಯರ ಟ್ರೋಲ್ಗಳಿಗೆ ಎದುರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಬಹಿರಂಗ ವಿರೋಧ ವ್ಯಕ್ತಪಡಿಸಿದ್ದ ಬಾಲಕೃಷ್ಣ
ಜೂ ಎನ್ಟಿಆರ್ ಬಗ್ಗೆ ಟಿಡಿಪಿ ಪಕ್ಷದಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ತೀವ್ರ ಹಿನ್ನಡೆ ಕಂಡಾಗ ಜೂ ಎನ್ಟಿಆರ್ಗೆ ಪಕ್ಷದ ನಾಯಕತ್ವ ನೀಡಬೇಕೆಂಬ ಚರ್ಚೆ ಆಯಿತು. ಆದರೆ ಆಗ ಚಂದ್ರಬಾಬು ನಾಯ್ಡು, ಬಾಲಕೃಷ್ಣ ಸೇರಿದಂತೆ ಹಲವು ಪ್ರಮುಖರು ವಿರೋಧಿಸಿದರು. ಬಾಲಕೃಷ್ಣ ಅಂತೂ ಬಹಿರಂಗವಾಗಿಯೇ ಜೂ ಎನ್ಟಿಆರ್ಗೆ ನಾಯಕತ್ವ ನೀಡುವುದನ್ನು ಖಂಡಿಸಿದರು. ಚಂದ್ರಬಾಬು ನಾಯ್ಡು ಸಹ. ಅದಕ್ಕೆ ತಕ್ಕಂತೆ ಜೂ ಎನ್ಟಿಆರ್ ಸಹ ರಾಜಕೀಯದಿಂದ, ಟಿಡಿಪಿ ಪಕ್ಷದಲ್ಲಿ ನಡೆವ ಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

ವಿಧಾನಸಭೆಯಲ್ಲಿ ನಡೆದಿದ್ದು ತಲೆ ತಗ್ಗಿಸುವ ವಿಷಯ: ಜೂ ಎನ್ಟಿಆರ್
ಚಂದ್ರಬಾಬು ನಾಯ್ಡು, ತಮ್ಮ ಪತ್ನಿಯನ್ನು ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಮಂದಿ ಹೀಗಳೆದರೆಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಬಳಿಕ ವಿಡಿಯೋ ಪ್ರಕಟಿಸಿದ್ದ ಜೂ.ಎನ್ಟಿಆರ್, ''ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆ ನನ್ನ ಮನಸ್ಸಿಗೆ ತೀವ್ರ ದುಃಖ ಉಂಟು ಮಾಡಿದೆ. ಪ್ರಜೆಗಳ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ವ್ಯಕ್ತಿಗತ ದೋಷಾರೋಪಣೆಗೆ ಇಳಿದುಬಿಟ್ಟಿದ್ದಾರೆ. ಅದರಲ್ಲೂ ಮಹಿಳೆಯರ ಬಗ್ಗೆ ಪುರುಷ ಅಹಂಕಾರದಿಂದ ಮಾತನಾಡುತ್ತಿದ್ದಾರೋ ಅದು ಅರಾಜಕ ಆಡಳಿತ ವ್ಯವಸ್ಥೆ ಆರಂಭವಾಗುತ್ತಿರುವುದರ ಸೂಚನೆ. ಅದು ಸರಿಯಲ್ಲ. ಸ್ತೀಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ, ನಮ್ಮ ಬದುಕಿನಲ್ಲಿ, ಹೃದಯ, ರಕ್ತಗಳಲ್ಲಿ ಸೇರಿಹೋಗಿರುವ ಸಂಪ್ರದಾಯವದು'' ಎಂದಿದ್ದರು.

ಕುಟುಂಬ ಸದಸ್ಯನಾಗಿ ಈ ಮಾತು ಹೇಳುತ್ತಿಲ್ಲ: ಜೂ ಎನ್ಟಿಆರ್
''ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಜಾಗೃತೆಯಾಗಿ ಹಸ್ತಾಂತರಿಸಬೇಕೇ ವಿನಃ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಹೀಗೆ ಕಲುಷಿತಗೊಳಿಸಿ, ಸುಟ್ಟು ಹಾಕಲಾಗುತ್ತಿದೆ. ಮುಂದಿನ ತಲೆಮಾರಿಗೆ ನಾವು ಬಂಗಾರದಂಥಹಾ ಸಮಾಜ ಬಿಟ್ಟು ಹೋಗುತ್ತಿದ್ದೇವೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ವ್ಯಕ್ತಿಗತ ದೂಷಣೆಗೆ ಗುರಿಯಾಗಿರುವ ವ್ಯಕ್ತಿಯ (ಚಂದ್ರಬಾಬು ನಾಯ್ಡು) ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿ ನಾನು ಈ ಮಾತುಗಳನ್ನು ಮಾತನಾಡುತ್ತಿಲ್ಲ. ಬದಲಿಗೆ ನಾನು ಒಬ್ಬ ಮಗನಾಗಿ, ಪತಿಯಾಗಿ, ತಂದೆಯಾಗಿ, ಈ ದೇಶದ ಪ್ರಜೆಯಾಗಿ ಹಾಗೂ ತೆಲುಗು ಭಾಷಿಕನಾಗಿ ಮಾತನಾಡುತ್ತಿದ್ದೇನೆ'' ಎಂದಿದ್ದರು ಜೂ ಎನ್ಟಿಆರ್. ಬಾಲಕೃಷ್ಣ ಅವರ ಕಿರಿಯ ಅಳಿಯ, ಜೂ ಎನ್ಟಿಆರ್ ಸರಿಯಾಗಿ ಮಾತನಾಡಿದ್ದಾರೆಂದು ಸ್ವಾಗತಿಸಿದ್ದರು.


Click it and Unblock the Notifications











