ಪವಿತ್ರ ಲೋಕೇಶ್ 'ಫ್ರೆಂಡ್' ನರೇಶ್ ಬಗ್ಗೆ ಹಿರಿಯ ನಟಿ ಪೂಜಿತಾ ಮಾತು
ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹಾಗೂ ರಮ್ಯಾ ರಘುಪತಿ ವಿವಾದ ಶೀಘ್ರದಲ್ಲಿ ಮುಗಿವಂತೆ ಕಾಣುತ್ತಿಲ್ಲ. ಒಬ್ಬರಾದ ಮೇಲೊಬ್ಬರು ಈ ವಿವಾದದ ಬಗ್ಗೆ ಮಾತನಾಡುತ್ತಲೇ ಇದ್ದಾರೆ, ಹೊಸ-ಹೊಸ ಆಸಕ್ತಿಕರ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿರುವ ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್ ಒಂದರಲ್ಲಿ ಇದ್ದಾಗ ಅಲ್ಲಿಗೆ ಹೋಗಿ ರಂಪಾಟ ಮಾಡಿದರು.
ಅಷ್ಟೆ ಅಲ್ಲದೆ, ನರೇಶ್ ಒಬ್ಬ ಹೆಣ್ಣು ಬಾಕ ಮನಸ್ಥಿತಿಯವನು, ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದರು. ಈ ಬಗ್ಗೆ ತೆಲುಗಿನ ವಿವಾದಾತ್ಮಕ ನಟಿ ಶ್ರೀರೆಡ್ಡಿ ಈಗಾಗಲೇ ಮಾತನಾಡಿದ್ದಾರೆ. ಇದೀಗ ನಟಿ ಪೂಜಿತಾ ಸಹ ತಮ್ಮ ಮಾತನಾಡಿದ್ದು, ನರೇಶ್ ವ್ಯಕ್ತಿತ್ವದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನರೇಶ್ ನನಗೆ 22 ವರ್ಷಗಳ ಪರಿಚಯ: ಪೂಜಿತಾ
''ನಾನು ಹಾಗೂ ನರೇಶ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ನರೇಶ್ ನಾಯಕ ನಟರಾಗಿದ್ದಾಗ ನಾನು ಅವರಿಗೆ ನಾಯಕಿಯಾಗಿ ಸಹ ನಟಿಸಿದ್ದೇನೆ. ನರೇಶ್ ಬಹಳ ಒಳ್ಳೆಯ ವ್ಯಕ್ತಿ, ಹಲವಾರು ಮಂದಿಗೆ ನರೇಶ್ ಸಹಾಯ ಮಾಡಿದ್ದಾರೆ. ನರೇಶ್ ಅನ್ನು ವುಮೆನೈಜರ್ ಎಂದು ರಮ್ಯಾ ಕರೆದಿದ್ದಾರೆ, ಆದರೆ ನಾನೂ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. 22 ವರ್ಷಗಳಿಂದ ಅವರ ಗೆಳತಿಯಾಗಿದ್ದೇನೆ ಎಂದೂ ಸಹ ನರೇಶ್ ಹದ್ದು ಮೀರಿ ವರ್ತಿಸಿಲ್ಲ'' ಎಂದಿದ್ದಾರೆ.

ಹಲವಾರು ಕಲಾವಿದರಿಗೆ ನರೇಶ್ ಸಹಾಯ ಮಾಡಿದ್ದಾರೆ: ಪೂಜಿತಾ
''ನರೇಶ್ ನನಗೆ ಹಲವು ಬಾರಿ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದಾರೆ. ನಾನು ಒಬ್ಬ ನಾಯಕಿಯಾಗಿ ಕೆಲಸ ಮಾಡಿದ್ದೇನೆ ಸುಮಾರು 140 ಸಿನಿಮಾಗಳಲ್ಲಿ ನಟಿಸಿದ್ದೇನೆ, ನನಗೆ ಬೇರೆಯವರನ್ನು ಹೊಗಳಿ ಹೀರೋ ಮಾಡುವ ಅವಶ್ಯಕತೆ ಇಲ್ಲ, ಆದರೂ ಹೇಳುತ್ತಿದ್ದೇನೆ, ನರೇಶ್ ನನ್ನ ಜೀವ ಕಾಪಾಡಿದ್ದಾರೆ. ಬಹಳ ಸಂಕಷ್ಟದ ಸಮಯದಲ್ಲಿ ನರೇಶ್ ನನಗೆ ಸಹಾಯ ಮಾಡಿದರು, ಆದರೆ ಮಾಡಿದ ಸಹಾಯವನ್ನು ಹೊರಗೆ ಹೇಳಿಕೊಳ್ಳುವ ವ್ಯಕ್ತಿ ನರೇಶ್ ಅಲ್ಲ, ಈಗ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವಾಗ ನೋಡಿಕೊಂಡು ನಾನು ಸುಮ್ಮನೆ ಇರಲಾರೆ'' ಎಂದಿದ್ದಾರೆ ಪೂಜಿತಾ.

ನರೇಶ್ ಮನೆಯಲ್ಲಿ ರಮ್ಯಾ ರಘುಪತಿ ಇರಲಿಲ್ಲ: ಪೂಜಿತಾ
''ನಾನು ಹಾಗೂ ನರೇಶ್ ಬಹಳ ಹಳೆಯ ಗೆಳೆಯರು. ಅವರ ಮನೆಯಲ್ಲಿ ಏನೇ ಸಣ್ಣ ಕಾರ್ಯಕ್ರಮ ಆದರೂ ನನ್ನನ್ನು ಆಹ್ವಾನಿಸುತ್ತಾರೆ. ನಾನೂ ಹಲವು ಬಾರಿ ಅವರ ಮನೆಗೆ ಹೋಗಿದ್ದೇನೆ, ಅಲ್ಲಿ ಅವರ ಸಿಬ್ಬಂದಿ ಇರುತ್ತಿದ್ದರು, ತಾಯಿ ಇರುತ್ತಿದ್ದರೇ ವಿನಃ ಇನ್ಯಾರೂ ಇರುತ್ತಿರಲಿಲ್ಲ. ಮನೆಯಲ್ಲಿ ಲಕ್ಷ್ಮಿ ಇಲ್ಲದೆ ನರೇಶ್ ಜೀವನ ಮಾಡುತ್ತಿದ್ದರು. ನಾನು ರಮ್ಯಾ ಅನ್ನು ನೋಡಿದ್ದು ಒಂದೇ ಬಾರಿ ಅದೂ ನರೇಶ್ ತಾಯಿ ನಿಧನ ಹೊಂದಿದಾಗ ಅಷ್ಟೆ'' ಎಂದಿದ್ದಾರೆ ನರೇಶ್.

ಆತನೇ ತಂದುಕೊಂಡಿರುವ ಶನಿಯಿಂದ ಸಮಸ್ಯೆ: ಪೂಜಿತಾ
ಆರು ತಿಂಗಳ ಹಿಂದೆ ನೀಡಿದ್ದ ಸಂದರ್ಶನದಲ್ಲೂ ನರೇಶ್ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದ ಪೂಜಿತಾ, ''ಕಷ್ಟದಲ್ಲಿದ್ದಾಗ ನರೇಶ್ ನನಗೆ ಮತ್ತು ನನ್ನ ಮಗನಿಗೆ ಹಣ ನೀಡಿ ಇಟ್ಟುಕೊ ಎಂದಿದ್ದರು. ಈಗ ಅವರ ಬಗ್ಗೆ ಏನೇನೋ ನೆಗೆಟಿವ್ ಮಾತುಗಳು, ಪ್ರಚಾರಗಳು ಮಾಡಲಾಗುತ್ತಿದೆ. ಆದರೆ ನಿಜಕ್ಕೂ ಆತ ನೂರಾರು ಕಲಾವಿದರಿಗೆ ಸಹಾಯ ಮಾಡಿದ್ದಾರೆ. ಆದರೆ ಈಗ ಆತನೇ ತಂದುಕೊಂಡಿರುವ ಶನಿಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ'' ಎಂದಿದ್ದರು. ಪೂಜಿತಾ, ಕಲ್ಯಾಣಿಯ ಹೆಸರಲ್ಲಿ ಕೆಲವು ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.


Click it and Unblock the Notifications











