ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳು ಪರಭಾಷೆಯ ಚಿತ್ರಗಳಿಗೆ ಪೈಪೋಟಿ ಕೊಡುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಉತ್ತಮ, ಗಟ್ಟಿತನದ ಕಥೆ, ಅದ್ಧೂರಿ ಮೇಕಿಂಗ್ ಜೊತೆಗೆ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ದೇಶ ವಿದೇಶಗಳಲ್ಲಿಯೂ ಮೆಚ್ಚುಗೆ ಪಡೆಯುತ್ತಿವೆ.ಹೀಗಾಗಿ ಕನ್ನಡ ಸಿನಿಮಾಗಳ ಮೇಲೆ ನಿರೀಕ್ಷೆಗಳು ಹೆಚ್ಚುತ್ತಿವೆ. ಕನ್ನಡದಲ್ಲಿ ಮುಂಬರುವ 11 ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.
ಯಜಮಾನ ಚಿತ್ರದ ನಂತರ ಬಿ ಸುರೇಶ್ ಮತ್ತು ಶೈಲಜಾ ನಾಗ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಿರ್ಮಾಣ ಮಾಡುತ್ತಿರುವ ಚಿತ್ರ ಕ್ರಾಂತಿ. ದರ್ಶನ್ ಅವರ ಈ 55ನೇ ಚಿತ್ರವನ್ನು ವಿ ಹರಿಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಚಿತ್ರ ವೇದ. ಈ ಸಿನಿಮಾವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಶಿವಣ್ಣನಿಗೆ ನಾಲ್ಕನೇ ಬಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಶಿವರಾಜ್ ಕುಮಾರ್ ಅವರು ತಮ್ಮ ಹೋಮ್ ಬ್ಯಾನರ್ ಗೀತಾ ಸ್ಟುಡಿಯೋಸ್ ಅಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. 1960 ಕಾಲಘಟ್ಟದ ಕಥೆಯುಳ್ ವೇದ ಸಿನಿಮಾದ ಮೇಲೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ಅರುಣ್ ಸಾಗರ್ ಪುತ್ರಿ ಅದಿತಿ ಶಿವಣ್ಣನ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕುರಿ ಪ್ರತಾಪ್, ಜಗ್ಗಪ್ಪ ಮತ್ತು ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ.. ಹೇಮಂತ್ ರಾವ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಬೀರಬಲ್ ಚಿತ್ರದ ಖ್ಯಾತಿಯಾ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. 777 ಚಾರ್ಲಿ ಬಳಿಕ ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಿವೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 12ನೇ ಸಿನಿಮಾ ರಾಘವೇಂದ್ರ ಸ್ಟೋರ್ಸ್. ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕನಾಗಿ ನಟಿಸುತ್ತಿದ್ದಾರೆ. ರಾಜಕುಮಾರ, ಯುವರತ್ನ ಸಿನಿಮಾಗಳ ಖ್ಯಾತಿಯ ಸಂತೋಷ್ ಆನಂದ್ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಸಂದೇಶವಿರುವ ಹಾಸ್ಯ ರಾಜಕೀಯಗಳನ್ನು ಒಳಗೊಂಡ ಹೊಸತನದ ಸಿನಿಮಾ ಇದಾಗಿದೆ.
ನಿಹಾರಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಶ್ರೀಹರಿ ನಿರ್ಮಾಣ ಮಾಡಿರುವ ಮತ್ತು ಕುಶಾಲ್ ಗೌಡ ನಿರ್ದೇಶಿಸಿರುವ ' ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಮತ್ತು ಆದಿತಿ ಪ್ರಭುದೇವ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯಶ್ ಶೆಟ್ಟಿ, ಭಾವನಾ ರಾಮಣ್ಣ, ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಮತ್ತು ಅರ್ಜುನ ಜನ್ಯ ಸಂಗೀತವಿದೆ.
ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರೋಮ್ಯಾಂಟಿಕ್ ಡ್ರಾಮಾ `ಬಾನ ದಾರಿಯಲ್ಲಿ' ಚಿತ್ರದಲ್ಲಿ ಗೋಲ್ಡನ್ ಗಣೇಶ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಮತ್ತು ದೀಪು ಎಸ್ ಕುಮಾರ್ ಸಂಕಲನವಿದೆ. ಚಿತ್ರಕ್ಕೆ ನಾಯಕಿಯರಾಗಿ `ರುಕ್ಮಿಣಿ ವಸಂತ್' ಮತ್ತು `ರೀಷ್ಮಾ ನಾಣಯ್ಯ' ನಟಿಸುತ್ತಿದ್ದಾರೆ.
ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರಲಿರುವ ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಲಿದ್ದಾರೆ. ಚಿತ್ರವನ್ನು ಕನ್ನಡ ಮಾತ್ರವಲ್ಲದೇ ತೆಲಗು, ತಮಿಳು, ಮಲಯಾಳಂ, ಮರಾಠಿ, ಬಂಗಾಲಿ ಮತ್ತು ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಚಿತ್ರದಲ್ಲಿ ಉಪೇಂದ್ರ ಲಾಂಗ್ ಹಿಡಿದು ಮತ್ತೊಂದು ಭೂಗತ ಲೋಕದ ಕಥೆಯನ್ನು ಅನಾವರಣ ಮಾಡುವ ನಿರೀಕ್ಷೆಯಿದೆ. ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಶಿವಾಜಿ ಸುರತ್ಕಲ್ ಭಾಗ ಎರಡರಲ್ಲಿ ರಮೇಶ್ ಅರವಿಂದ್ ಮತ್ತು ರಾಧಿಕಾ ಚೇತನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆಕಾಶ್ ಶ್ರೀವತ್ಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ.
ಅದ್ಧೂರಿ ಚಿತ್ರದ ಎಂಟು ವರ್ಷಗಳ ನಂತರ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಒಂದಾಗುತ್ತಿದ್ದಾರೆ. 'ಮಾರ್ಟಿನ್' ಧ್ರುವ ಸರ್ಜಾರ ಆರನೇ ಚಿತ್ರವಾಗಿದೆ. ಈ ಚಿತ್ರಕ್ಕೆ ಉದಯ್ ಕೆ ಮೆಹತಾ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ನಟಿಸಿದ್ದಾರೆ. ಚಿತ್ರಕ್ಕೆ ಕೆ.ಎಂ.ಸುಧೀರ್ ಬಂಡವಾಳ ಹೂಡಿದ್ದು, ಚರಣರಾಜ್ ಸಂಗೀತ ನೀಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ಮತ್ತು ಶೇಖರ್ ಎಸ್ ಛಾಯಾಗ್ರಹಣವಿದೆ.
ವಿನಯ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಏಳನೇ ಚಿತ್ರ ಪೆಪೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಉದಯ ಶಂಕರ್ ಎಸ್ ಮತ್ತು ನಿಜಗುಣ ಗುರುಸ್ವಾಮಿ ಬಂಡವಾಳ ಹೂಡುತ್ತಿದ್ದಾರೆ. 970 ರಿಂದ 2020 ರವರೆಗಿನ ಟೈಮ್ಲೈನ್ ಕಥೆ ಇದಾಗಿದ್ದು, ಚಿತ್ರದಲ್ಲಿ ವಿನಯ್ ಅವರಲ್ಲದೆ, ಅರುಣಾ ಬಾಲರಾಜ್ ಮತ್ತು ಅನೇಕ ಹೊಸಬರು ನಟಿಸಿದ್ದಾರೆ. ಅವರಲ್ಲಿ ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ, ಕೆಳಮನೆ ಮತ್ತು ಕಾಜಲ್ ಕುಂದರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.