ನಮ್ಮಮ್ಮ ಶಾರದೆಗೊಂದು ಗಂಡು ಮಗು ಬೇಕಂತೆ!
'ನಮ್ಮಮ್ಮ ಶಾರದೆ' ಎಂಬ ಅತ್ಯಾಕರ್ಷಕ ಶೀರ್ಷಿಕೆಯ ದೈನಿಕ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಆಗಸ್ಟ್ 17ರಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಗಂಡು ಮಗುವಿಗಾಗಿ ಹಂಬಲಿಸುವ, ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಚಲಿತ ಸಮಸ್ಯೆಗಳೇ ಈ ಮೆಗಾ ಧಾರಾವಾಹಿ ಹೂರಣ.
ಜೀ ಕನ್ನಡ ಆಮಂತ್ರಣ ಪತ್ರದಲ್ಲಿ'ನಮ್ಮಮ್ಮ ಶಾರದೆಗೊಂದು ಗಂಡು ಮಗು ಬೇಕಾಗಿದೆ' ಎಂಬ ಒಕ್ಕಣೆ ನೋಡಿ ಹಲವು ಪತ್ರಕರ್ತರು ಹೌರಾರಿದ್ದರು. ಅಯ್ಯೋ ಇದು ನನ್ನ ಕೈಯಲ್ಲಿ ಸಾಧ್ಯವಿಲ್ಲಪ್ಪ ಎಂಬ ಹಾಸ್ಯ ಚಟಾಕಿಯೂ ಪತ್ರಕರ್ತರ ಗುಂಪಿನಿಂದ ಸಿಡಿದಿತ್ತು!
ಭ್ರೂಣ ಹತೆಯಂತಹ ಸಮಸ್ಯೆಗಳು ಸಾಮಾಜಿಕ ಅಸ್ವಸ್ಥತೆಗೆ ಹೇಗೆ ಕಾರಣವಾಗುತ್ತದೆ ಎಂಬುದರ ಸುತ್ತ ಕತೆ ಸುತ್ತುತ್ತದೆ. ಧಾರಾವಾಹಿಯಲ್ಲಿ ಇಬ್ಬರು ಶಾರದೆಯರಿದ್ದಾರೆ. ಒಬ್ಬ ಶಾರದೆ ಗ್ರಾಮೀಣ ಹಿನ್ನೆಲೆಯವರಾದರೆ ಮತ್ತ್ತೊಬ್ಬರು ನಗರ ಪ್ರದೇಶದವರು ಎಂದು ಜೀ ಕನ್ನಡ ಕಾರ್ಯಕ್ರಮ ಮುಖ್ಯಸ್ಥರಾಗಿ ಬದಲಾಗಿರುವ ಪತ್ರಕರ್ತ ಪರಮೇಶ್ ಗುಂಡಕಲ್ ವಿವರ ನೀಡಿದರು.
ಗೀತಾ ಅವರ 'Disappointing Daughters' ಕೃತಿಯೇ 'ನಮ್ಮಮ್ಮ ಶಾರದೆ' ಧಾರಾವಾಹಿಗೆ ಸ್ಫೂರ್ತಿಯಂತೆ. ಇದರ ಆಧಾರಾವಾಗಿ ಪರಮೇಶ್ ಗುಂಡಕಲ್ ಅವರು ಕತೆ,ಚಿತ್ರಕತೆ ಸಿದ್ಧಪಡಿಸಿದ್ದಾಗಿ ತಿಳಿಸಿದರು. ನಮ್ಮಮ್ಮ ಶಾರದೆಯ ನಿರ್ದೇಶನದ ಜವಾಬ್ದಾರಿಯನ್ನು ರಮೇಶ್ ಇಂದಿರಾ ಅವರು ಹೊತ್ತಿದ್ದಾರೆ.
ಗಂಡು ಮಗು ಬೇಕು ಎಂಬುದು ಅನಾದಿ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಕಾಡುತ್ತಿರುವ ಸಮಸ್ಯೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ಹೆಣ್ಣು ಭ್ರೂಣವನ್ನು ಪತ್ತೆ ಹಚ್ಚುವ,ಸ್ಕ್ಯಾನಿಂಗ್ ನಂತಹ ಅತ್ಯಾಧುನಿಕ ವೈದ್ಯಕೀಯ ಪರಿಕರಗಳು ಇಂದು ಲಭ್ಯ. ಭ್ರೂಣ ಹತ್ಯೆ ಮಹಾಪಾಪ. ಇದು ಶಿಕ್ಷಾರ್ಹ ಅಪರಾಧ ಎಂಬಂತಹ ಸಂದೇಶ, ಎಚ್ಚರಿಕೆ, ಮನರಂಜನೆಯಂತಹ ಅಂಶಗಳನ್ನು ಧಾರಾವಾಹಿ ಒಳಗೊಂಡಿದೆ. ವೈದೇಹಿ ಸೇತುರಾಮ್ ನಿರ್ಮಾಪಕರು, ಛಾಯಾಗ್ರಹಣ ನಾಗರಾಜ್ ಸಿ.
ಹಳ್ಳಿಯ ಶಾರದೆಯಾಗಿ ಹೇಮಾ ಬೆಳ್ಳೂರು ಹಾಗೂ ನಗರದ ಶಾರದೆಯಾಗಿ ಶ್ರುತಿ ನಾಯ್ಡು ಅಭಿನಯಿಸಿದ್ದಾರೆ. ಪದ್ಮಾ ಕುಮಟಾ, ಹರೀಶ್, ರಾಜೇಶ್ ಬಗ್ನ, ಅರುಣಾ ಬಾಲರಾಜ್, ಅನಿಲ್ ಕುಮಾರ್, ಹರಿಕೃಷ್ಣ, ವೆಂಕಟ್ ರಾವ್, ಮಧು ಸಾಗರ್, ಸಾನಿಯಾ ಮುಂತಾದವರ ತಾರಾಗಣವಿದೆ. ಶೀರ್ಷಿಕೆ ಗೀತೆಯನ್ನು ಬಿ.ಆರ್.ಲಕ್ಷ್ಮಣರಾವ್ ಅವರು ರಚಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











