ಜ್ಯೋತಿಷಿ ನರೇಂದ್ರ ಶರ್ಮಾ ಹಠಾವೋ ಆಂದೋಲನ

ಜ್ಯೋತಿಷ್ಯ, ಭವಿಷ್ಯ, ಗ್ರಹಚಾರ ಫಲಗಳ ಬಗ್ಗೆ ಆಸಕ್ತಿ ಇಲ್ಲದವರೂ ತಮ್ಮ ರಾಶಿಯ ಬಗ್ಗೆ ಜ್ಯೋತಿಷಿಗಳು ಏನು ಹೇಳುತ್ತಾರೆ, ಒಳ್ಳೆಯದಾಗುತ್ತದೋ ಕೆಟ್ಟದಾಗುತ್ತದೋ ಎಂದು ಒಂದಿಲ್ಲೊಂದು ಬಾರಿ ಇಣುಕಿರುತ್ತಾರೆ.
ಇಂದಿನ ದಿನಗಳಲ್ಲಿ ಪ್ರತಿಯೊಂದು ಟಿವಿ ಚಾನಲ್ಲುಗಳು ಪೈಪೋಟಿಗೆ ಬಿದ್ದವರಂತೆ ಭವಿಷ್ಯವನ್ನು ಪ್ರಸಾರ ಮಾಡುತ್ತಿವೆ. ಹೊಸವರ್ಷ, ಹಬ್ಬಹರಿದಿನಗಳಂದು ಮಾತ್ರವಲ್ಲ ಯಾವುದೇ ಅವಘಡ ಸಂಭವಿಸಿದರೂ ಜ್ಯೋತಿಷಿಗಳ ಹಿಂಡನ್ನು ಟಿವಿ ಚಾನಲ್ಲಿಗೆ ಕರೆಸಿ ಚರ್ಚೆ, ವಾಗ್ವಾದಗಳನ್ನು ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಅಧಿಕಾರ ಗಟ್ಟಿಯಾಗಿದೆ ಇಲ್ಲವೆ, ಇಲ್ಲದಿದ್ದರೆ ಯಾವಾಗ ರಾಜೀನಾಮೆ ನೀಡುತ್ತಾರೆ, ನೀಡದಿದ್ದರೆ ಯಾವರ ಗ್ರಹಗಳು ಅವರ ಪರವಾಗಿರುತ್ತವೆ, ಯಾವ ಗ್ರಹ ದಿಕ್ಕು ತಪ್ಪಿರುತ್ತವೆ ಇತ್ಯಾದಿ ಇತ್ಯಾದಿ ಚರ್ಚೆಗಳಾಗಿ ಕೊನೆಗೆ ಯಾವುದೇ ತಾರ್ಕಿಕ ಅಂತ್ಯವಿಲ್ಲದೆ ಮುಕ್ತಾಯವಾಗಿರುತ್ತವೆ. ಇವರ ವಾದಗಳನ್ನು, ಹೇಳಿಕೆಗಳನ್ನು ನಂಬುವವರು ನಂಬುತ್ತಾರೆ, ಬಿಡುವವರು ಬಿಡುತ್ತಾರೆ.
ಈ ಜ್ಯೋತಿಷಿಗಳ ಮಾತುಗಳು ಕೇಳುವುದಕ್ಕೆ ತಮಾಷೆಯಾಗಿರುತ್ತವೆ, ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಭಯಂಕರವಾಗಿರುತ್ತವೆ. ಅವರ ಹೇಳುವ ಮಾತಿನಂತೆ ಘಟನೆ ಸಂಭವಿಸಿದರೆ ಅವರಿಗೆ ಲಾಟರಿ ಹೊಡೆದಂತೆ, ಇಲ್ಲದಿದ್ದರೆ ನರ್ತಿಸಲು ಬಾರದವನಿಗೆ ನೆಲ ಯಾವತ್ತಿದ್ದರೂ ಡೊಂಕೆ. ಆದರೆ, ಜೀ ಟಿವಿಯಲ್ಲಿ ಬರುವ ನರೇಂದ್ರ ಶರ್ಮ ಎಂಬ ಜ್ಯೋತಿಷಿ ಉಳಿದೆಲ್ಲ ಜ್ಯೋತಿಷಿಗಳಿಗಿಂತ ತುಸು ಭಿನ್ನ. ಜ್ಯೋತಿಷ್ಯ ಹೇಳುವ ಧಾಟಿ ಮಾತ್ರವಲ್ಲ, ಆಚಾರ-ವಿಚಾರ, ಆಕಾರ, ವೇಷಭೂಷಣ ಎಲ್ಲವೂ ವಿಭಿನ್ನ. ಕೇಳುಗರು ಮಾತ್ರವಲ್ಲ, ಗ್ರಹಗಳೂ ಇವರ ಮಾತನ್ನು ಕೇಳಿಯೇ ಚಲಿಸಬೇಕು!
ಇಂತಿರುವ ನರೇಂದ್ರ ಶರ್ಮಾ 2012ರಲ್ಲಿ ಪ್ರಪಂಚ ಮುಳುಗಿಯೇ ಹೋಗಿ ಬಿಡುತ್ತದೆ ಎಂದು ಹೇಳಿ ಅವರಲ್ಲಿ ನಂಬಿಕೆ ಇಟ್ಟವರನ್ನು ಬೆಚ್ಚಿಬೀಳಿಸಿದ್ದಾರೆ. ಪ್ರಳಯ ತಡೆಗಾಗಿ ಲಕ್ಷ ದೀಪೋತ್ಸವವನ್ನೂ ಮಾಡಿ ವಿಚಾರವಾದಿಗಳಿಂದ ಉಗಿಸಿಕೊಂಡಿದ್ದರು. ಮೂಢನಂಬಿಕೆಗಳನ್ನು ಕಣ್ಣುಮುಚ್ಚಿ ನಂಬುವ ನಮ್ಮ ಸಮಾಜದ ಮೇಲೆ ಇಂತಹ ಹೇಳಿಕೆಗಳು ಎಂತಹ ಪರಿಣಾಮ ಬೀರುತ್ತವೆ ಎಂದು ಬೇರೆಯಾಗಿ ಹೇಳಬೇಕಿಲ್ಲ. ಜಗತ್ ಪ್ರಳಯ, ಸುನಾಮಿ, ವಾಮಾಚಾರಗಳ ಬಗ್ಗೆ ಕೂಡ ಬಹುತೇಕ ಎಲ್ಲಾ ಚಾನಲ್ಲುಗಳಲ್ಲಿ ಚರ್ಚೆಗಳು ನಡೆದಿವೆ. ಅಮಾಯಕರ ದಿಕ್ಕು ತಪ್ಪಿಸುತ್ತಿವೆ, ಮೌಢ್ಯವನ್ನು ಯಾವುದೇ ಎಗ್ಗಿಲ್ಲದೆ ತುಂಬುತ್ತಿವೆ.
ಇಂತಹ ಕಪಟ ಜ್ಯೋತಿಷಿಗಳ ಕಾರ್ಯಕ್ರಮಗಳನ್ನು ನಿಷೇಧಿಸಬೇಕು ಮತ್ತು ಜನರು ದಾರಿ ತಪ್ಪುವುದನ್ನು ತಡೆಯಬೇಕೆಂಬ ಆಶಯದೊಂದಿಗೆ ಸಂಪಾದಕೀಯ ಕನ್ನಡ ಬ್ಲಾಗ್ ಒಂದು ಆಂದೋಲನವನ್ನು ಪ್ರಾರಂಭಿಸಿದೆ. ಜೀ ಕನ್ನಡ ಚಾನಲ್ಲಿಗೆ ದೂರು ನೀಡುವ ಹಂತದಿಂದ, ಚಾನಲ್ಲಿನ ಮುಂದೆ ಪ್ರತಿಭಟನೆ ನಡೆಸುವವರೆಗೆ ನಾನಾ ರೂಪುರೇಷೆಗಳನ್ನು ಬ್ಲಾಗ್ ಸಿದ್ಧಪಡಿಸಿಕೊಂಡಿದೆ. ಇದಕ್ಕಾಗಿ ಓದುಗರನ್ನು ಒಗ್ಗಟ್ಟಿಸುತ್ತಿದೆ. ನರೇಂದ್ರ ಸ್ವಾಮಿ ನಡೆಸುವ ಬೃಹತ್ ಬ್ರಹ್ಮಾಂಡದ ವಿರುದ್ಧ ಆಂದೋಲನದ ನೀಲನಕ್ಷೆ ತಯಾರಿಸಿದೆ. ಇತರ ವಿವರಗಳನ್ನು ಸಂಪಾದಕೀಯ ಬ್ಲಾಗ್ ನಲ್ಲಿಯೇ ನೋಡಿರಿ.


Click it and Unblock the Notifications











