ವಿನೂತನ ರಿಯಾಲಿಟಿ ಶೋ ಪರದೇಶದಲ್ಲಿ ಪರದಾಟ

ಕನ್ನಡದ ರಿಯಾಲಿಟಿ ಶೋಗಳಿಗೆ ಸಂಬಂಧಿಸಿದಂತೆ ಇಡೀ ಕಾರ್ಯಕ್ರಮವನ್ನು ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರಿಸಿದ ಹೆಗ್ಗಳಿಕೆಗೆ 'ಪರದೇಶದಲ್ಲಿ ಪರದಾಟ' ಕಾರ್ಯಕ್ರಮ ಪಾತ್ರವಾಗಿದೆ. ರಿಯಾಲಿಟಿ ಶೋಗಳಲ್ಲಿ ಪೂರ್ಣ ವಿಭಿನ್ನತೆ ಹುಟ್ಟುಹಾಕಿದ ಜೀ ಕನ್ನಡ ಮನರಂಜನೆಗೆ ಹೊಸ ಅರ್ಥ ನೀಡಿದೆ. ಇದೀಗ ಈ ಕಾರ್ಯಕ್ರಮದ ಮೂಲಕವೂ ಹೊಸ ಅಲೆಯೊಂದನ್ನು ಸೃಷ್ಠಿಸಲಿದೆ ಎಂದು ಜೀ ಸೌಥ್ ಹೆಡ್ ಡಾ. ಗೌತಮ್ ಮಾಚಯ್ಯ ಹೇಳಿದ್ದಾರೆ.
ಏನಿದು ಪರದಾಟ? : ಕನ್ನಡ ನಾಡಿನ ವಿಭಿನ್ನ ಯುವಕ ಯುವತಿಯರನ್ನು ತಾವೆಂದೂ ಕಂಡಿರದ ಬಲುದೂರದ ವಿದೇಶವೊಂದಕ್ಕೆ ಕರೆದೊಯ್ದು ಯಾವುದೇ ಸಹಾಯ ಸಲಹೆಯನ್ನು ನೀಡದೆ ಕೆಲವೊಂದು ಗುರಿಗಳನ್ನು ನೀಡಲಾಗುತ್ತದೆ. ನಿಯಮಿತ ಸೌಲಭ್ಯಗಳನ್ನು ಬಳಸಿಕೊಂಡಷ್ಟೇ ಅವರು ತಮಗೆ ನೀಡಿದ ಗುರಿಯನ್ನು ನಿಗದಿತ ಅವಧಿಯಲ್ಲಿ ಸಾಧಿಸಬೇಕು. ವಿದೇಶವೆಂದರೆ ಅಲ್ಲಿನ ಭಾಷೆ, ಸಂಸ್ಕೃತಿ, ಸಮಾಜ ಹಾಗೂ ಜೀವನ ಶೈಲಿ ಹೀಗೆ ಪ್ರತಿಯೊಂದೂ ಭಿನ್ನವಾಗಿರುತ್ತದೆ. ಈ ಎಲ್ಲಾ ವ್ಯವಸ್ಥೆಗಳಿಗೂ ಒಗ್ಗಿಕೊಂಡು ಯಾರು ತಮ್ಮ ಗುರಿ ಪೂರೈಸುತ್ತಾರೆಯೋ ಅವರನ್ನು ಈ ಶೋನಲ್ಲಿ ವಿಜೇತರೆಂದು ಘೋಷಿಸಲಾಗುವುದು.
ಥಾಯ್ಲ್ಯಾಂಡ್ ಆಯ್ಕೆ ಮಾಡಿಕೊಂಡಿದ್ದೇಕೆ?: ಈ ರಿಯಾಲಿಟಿ ಶೋ ಚಿತ್ರೀಕರಿಸಲು ಥಾಯ್ಲ್ಯಾಂಡ್ ಆಯ್ಕೆ ಮಾಡಿಕೊಳ್ಳಲಾಗಿದೆ. ನೆರೆಹೊರೆಯ ದೇಶಗಳು ಭಾರತೀಯ ಸಂಸ್ಕೃತಿಗೆ ಹತ್ತಿರವಾದವುಗಳು ಹಾಗೂ ಐರೋಪ್ಯ ಹಾಗೂ ಅಮೆರಿಕ ದೇಶದಲ್ಲಿ ಆಂಗ್ಲ ಭಾಷೆ ಪ್ರಧಾನವಾಗಿದ್ದು ಭಾಷಾ ವೈರುಧ್ಯವನ್ನು ಸಹ ಕಾಪಾಡುವ ದೃಷ್ಟಿಯಿಂದ ಥಾಯ್ಲ್ಯಾಂಡ್ನಂತಹ ದೇಶವನ್ನು ಈ ರಿಯಾಲಿಟಿ ಶೋಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಥಾಯ್ಲ್ಯಾಂಡ್ ಭಾಷೆ, ಸಂಸ್ಕೃತಿ, ಆಹಾರ ಹಾಗೂ ಜೀವನ ಶೈಲಿಗೆ ಸಂಬಂಧಿಸಿದಂತೆ ಭಾರತಕ್ಕಿಂತಲೂ ಪೂರ್ಣ ವಿಭಿನ್ನವಾಗಿರುವುದೇ ಆ ದೇಶದ ಆಯ್ಕೆಗೆ ಮಾನದಂಡವಾಗಿತ್ತು.
ಭಾಗವಹಿಸಿದ ಅಭ್ಯರ್ಥಿಗಳ ಬಗ್ಗೆ: ಈ ರಿಯಾಲಿಟಿ ಶೋಗೆ ರಾಜ್ಯದಾದ್ಯಂತ ಆಯ್ಕೆಪ್ರಕ್ರಿಯೆ ನಡೆಸಿ ಅಂತಿಮವಾಗಿ 14ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಹೀಗೆ ಆಯ್ಕೆಯಾದವರನ್ನು ಜೀ ಕನ್ನಡ ತನ್ನ ತಂಡದೊಂದಿಗೆ ಥಾಯ್ಲ್ಯಾಂಡ್ಗೆ ಕರೆದೊಯ್ದಿತ್ತು. ಅಭ್ಯರ್ಥಿಗಳಲ್ಲಿ ವೈವಿಧ್ಯತೆ ಕಾಪಾಡುವ ದೃಷ್ಟಿಯಿಂದ ಆಯ್ಕೆಯಾದ 14 ಜನರಲ್ಲಿ ಐಟಿ,ಬಿಟಿ ಯಿಂದ ಹಿಡಿದು ವಿದ್ಯಾರ್ಥಿ, ಹಾಗೂ ಪೋಟೊ ಕಾಫಿ (ಝೆರಾಕ್ಸ್ ಅಂಗಡಿ) ಮಾಡಿ ಬದುಕುತ್ತಿರುವ ಸಾಮಾನ್ಯರನ್ನು ಸಹ ಪರಿಗಣಿಸಲಾಗಿತ್ತು.
ಪರದಾಟ ಹೇಗಿತ್ತು: ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು ಥಾಯ್ಲ್ಯಾಂಡ್ಗೆ ಕರೆದೊಯ್ಯಲಾಯಿತು. ಅವರಿಗೆ ಅಲ್ಲಿ ವಾಸ್ತವ್ಯ ಕಲ್ಪಿಸಿ ನಿಗದಿತ ಗುರಿಗಳನ್ನು ನೀಡಲಾಯಿತು ಯಾರು ತಮ್ಮ ಗುರಿಗಳನ್ನು ದಿನನಿತ್ಯದ ಆಧಾರದಲ್ಲಿ ಪೂರೈಸುತ್ತಾರೋ ಅಂತವರು ಶೋನಲ್ಲಿಯೇ ಗಟ್ಟಿಯಾಗಿ ನಿಂತರು. ಇಲ್ಲಿಯೂ ಸಹ ಎಲ್ಲಾ ರಿಯಾಲಿಟಿ ಶೋಗಳಂತೆ ಎಲಿಮಿನೇಷನ್ ಸಹ ಇತ್ತು.
ಇದುವರೆಗೂ 20 ಸಂಚಿಕೆಗಳನ್ನು ಚಿತ್ರಿಸಲಾಗಿದೆ. ಈ ರಿಯಾಲಿಟಿಶೋವನ್ನು 33 ಸಂಚಿಕೆಗಳಿಗೆ ಯೋಜಿಸಲಾಗಿದ್ದು ನೀಡಿದ ಎಲ್ಲಾ ಗುರಿಗಳನ್ನು ಯಾರು ಸಮರ್ಪಕವಾಗಿ ಪೂರೈಸಲಿದ್ದಾರೆಯೋ ಅವರು ವಿಜೇತರಾಗಲಿದ್ದಾರೆ.
ಭಾಗವಹಿಸಿದ್ದವರ ಅನಿಸಿಕೆ: ಥಾಯ್ಲ್ಯಾಂಡ್ ಎಂದಾಕ್ಷಣ ನಮ್ಮ ಮನೆಯವರು ಅಲ್ಲಿಗೆ ಕಳುಹಿಸಲು ತೀವ್ರ ವಿರೋಧ ವ್ಯಕ್ತಪಡಿದ್ದರು ಆದರೂ ಅವರೆಲ್ಲರ ಮಾತು ಮೀರಿ ಅಲ್ಲಿಗೆ ಹೋದ ನನಗೆ ಅಪರೂಪದ ಅನುಭವ ಆಯ್ತು. ಈ ಶೋಗೆ ಆಯ್ಕೆ ಮಾಡಿಕೊಂಡಿದ್ದ ಸವಾಲುಗಳೂ ಸಹ ವಿಭಿನ್ನವಾಗಿದ್ದು ಜೀವನಾನುಭವದ ಧಾರೆಯನ್ನೇ ಹರಿಸಿತು ಎಂದು ಶೋನಲ್ಲಿ ಭಾಗವಹಿಸಿದ್ದ ಮಹ್ಮದ್ ರಫಿ ಹೇಳುತ್ತಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಂತಹವರನ್ನು ಕಿರುತೆರೆಗೆ ಕರೆತಂದ ಹೆಗ್ಗಳಿಕೆ ಗಳಿಸಿರುವ ಜೀ ಕನ್ನಡ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ರಿಯಾಲಿಟಿ ಶೋ ಒಂದನ್ನು ನಿರ್ಮಾಣ ಮಾಡುವ ಮೂಲಕ ಮತ್ತೊಂದು ಮಹತ್ವದ ಕಾರ್ಯಕ್ರಮವನ್ನು ಕನ್ನಡಿಗರಿಗೆ ಅರ್ಪಿಸುತ್ತಿದೆ ಎಂದು ಜೀ ಕನ್ನಡ ನಾನ್ ಫಿಕ್ಷನ್ ಹೆಡ್ ರಾಜೇಶ್ ಶೆಟ್ಟಿ ಹೇಳಿದ್ದಾರೆ.
ಈ ಸಂಚಿಕೆಗಳಲ್ಲಿ ನಡುನಡುವೆ ನಿಗದಿ ಮಾಡುತ್ತಿದ್ದ ಕೆಲವು ಗುರಿಗಳು ಕನ್ನಡದ ಕಂಪು ಹಾಗೂ ಸಂಸ್ಕೃತಿಯನ್ನು ಥಾಯ್ಲ್ಯಾಂಡ್ನಲ್ಲಿ ಬಿಂಬಿಸುವ ಪ್ರಯತ್ನ ಸಹ ಮಾಡಲಾಗಿದೆ. ಥಾಯ್ಲ್ಯಾಂಡ್ನಲ್ಲಿಯೂ ಒಬ್ಬ ಆಟೋ ಶಂಕರ್ನನ್ನು ಹುಡುಕುವ ಪ್ರಯತ್ನ ಮಾಡಲಾಯ್ತು. ಚನ್ನಪಟ್ಟಣದ ಬೊಂಬೆಗಳು ಥಾಯ್ಲ್ಯಾಂಡ್ನಲ್ಲಿ ಈ ಶೋ ಮೂಲಕ ವ್ಯಾಪಕ ಪ್ರಚಾರ ಪಡೆದುಕೊಂಡಿವೆ.
ವಿವಿಧ ಸಂಚಿಕೆಗಳೊಂದಿಗೆ ಸಿದ್ದಗೊಂಡಿರುವ ಪರದೇಶದಲ್ಲಿ ಪರದಾಟ ಇಂದಿನಿಂದ ( ಫೆಬ್ರವರಿ 16, 2011) ರಿಂದ ಪ್ರತಿ ಬುಧವಾರ ದಿಂದ ಶುಕ್ರವಾರದ ವರೆಗೂ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಮೂಡಿಬರಲಿದೆ. ಈ ವಿನೂತನ ಕಾರ್ಯಕ್ರಮವನ್ನು ನಿರಂಜನ್ ದೇಶಪಾಂಡೆ ನಿರೂಪಿಸಲಿದ್ದಾರೆ.


Click it and Unblock the Notifications











