twitter
    For Quick Alerts
    ALLOW NOTIFICATIONS  
    For Daily Alerts

    ಸ್ಪಂದನ : ಉಡುಪಿ ಜನತೆಗೊಂದು ಹೊಸ ಟಿವಿ

    By Shami
    |

    Spandana Cable TV Udupi
    ಕರಾವಳಿಯ ಕೇಬಲ್ ಟಿವಿ ಚಾನಲ್ಲುಗಳ ತೋಟಕ್ಕೆ ಹೊಸ ಸೇರ್ಪಡೆ 'ಸ್ಪಂದನ ಟಿವಿ'. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಈ ಚಾನಲ್ ಶುಕ್ರವಾರ (24 ಫೆ. 2012) ಆರಂಭವಾಗಲಿದೆ. ಉದ್ಘಾಟನೆ ಮತ್ತು ಪ್ರಸಾರ ಆರಂಭ ಬೆಳಗ್ಗೆ 9.30 ಯಿಂದ. ಬಗೆಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಪಳಗಿದ ಪತ್ರಕರ್ತರನ್ನು ಇಟ್ಟುಕೊಂಡು ಸುದ್ದಿ ಮಾರುಕಟ್ಟೆಗೆ ಧುಮುಕುತ್ತಿರುವ ಸ್ಪಂದನ ಇತರ ವಾಹಿನಿಗಳಿಗೆ ಸಡ್ಡುಹೊಡೆಯುವುದು ಖಂಡಿತ - ಸಂಪಾದಕ.

    ಕೇಬಲ್ ಚಾನೆಲ್‌ಗಳೆಂದರೆ ಅವು ಆಯಾ ಪ್ರದೇಶದ ಜನರ ಜೀವನಾಡಿಯಂತೆಯೇ ಇರುತ್ತವೆ. ಆದರೆ ಅದರ ಪ್ರಸಾರ ತೀರಾ ಸೀಮಿತ ಎಂಬುದೇ ಅದರ ಇತಿ ಮಿತಿ. ಆದರೂ ಬೆಳೆಯುತ್ತಿರುವ ತಂತ್ರಜ್ಞಾನ ಕೇಬಲ್ ಚಾನೆಲ್‌ಗಳ ವ್ಯಾಪ್ತಿಯನ್ನು ಹಿಗ್ಗಿಸತೊಡಗಿದೆ. ಕೇಬಲ್ಲುಗಳು ಸ್ಯಾಟಲೈಟ್ ಚಾನೆಲ್‌ಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ, ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಅದಕ್ಕೆ ಸಾಕ್ಷಿ ಕರಾವಳಿಯಲ್ಲಿ ಅಸ್ತಿತ್ವದಲ್ಲಿರುವ ಮತ್ತು ಅಸ್ತಿತ್ವಕ್ಕೆ ಬರುತ್ತಿರುವ ಚಾನೆಲ್‌ಗಳು.

    ಕರಾವಳಿಯಲ್ಲಿ ಈಗಾಗಲೇ ಏಳೆಂಟು ಚಾನೆಲ್‌ಗಳು ಇವೆ. ಅದರ ಸಾಲಿಗೆ ನಾಳೆಯಿಂದ "ಸ್ಪಂದನ" ಸೇರಿಕೊಳ್ಳುತ್ತಿದೆ. ವಿಶೇಷವೆಂದರೆ, ಇದು ಕರ್ನಾಟಕದ ಮೊದಲ ಹೈಡೆಫಿನಿಷನ್ ಚಾನೆಲ್. ಜೊತೆಗೆ ದೇಶದಲ್ಲೇ ಬೇರಾವ ಚಾನೆಲ್‌ಗಳು ಇನ್ನೂ ಉಪಯೋಗಿಸಿರದ ಅತ್ಯುತ್ತಮ ತಂತ್ರಜ್ಞಾನದ blackmagic ಸಾಫ್ಟ್ ವೇರ್ ಬಳಸಲಾಗುತ್ತಿದೆ. ಹಾಗಾಗಿ ಉಪಗ್ರಹ ಚಾನೆಲ್‌ಗಳಷ್ಟೇ ಸ್ಪಷ್ಟ ದೃಶ್ಯ ಕಾಣಲು ಸಾಧ್ಯ.

    ಸದ್ಯಕ್ಕೆ ಭಾಗಶಃ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಸಾರವಾಗಲಿದೆ. ದಿನದಲ್ಲಿ ಮೂರು ಬಾರಿ ಅರ್ಧ ಗಂಟೆ ಮತ್ತು ಪ್ರತೀ ಗಂಟೆಗೊಮ್ಮೆ 5 ನಿಮಿಷದ ವಾರ್ತೆ ಪ್ರಸಾರವಾಗಲಿದೆ. ಕರಾವಳಿಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕೂಡು ಕುಟುಂಬ, ಸಿರಿ ತುಪ್ಪೆ, ಯಕ್ಷರಂಗ, ಭಾಷಾ ವೈವಿಧ್ಯತೆಯನ್ನು ಬಿಂಬಿಸುವ ಹೀಂಗಿತ್ತ್ ಕಾಣಿ ಕುಂದಾಪ್ರ, ಮದಿಪು.. ಹೀಗೆ ಕಾರ್ಯಕ್ರಮಗಳಿವೆ.

    ಇನ್ನು, ನಿಗೂಢ ಭೇದಿಸುವ ಇದು ನಿಜಾನ, ಹಾಡುಗಾರರಿಗೆ ವೇದಿಕೆ ಒದಗಿಸುವ ಹಾಡು ಕೋಗಿಲೆ ಹಾಡು, ಪ್ರಚಲಿತ ವಿದ್ಯಮಾನಗಳ ಬಗ್ಗೆ ವಾಗ್ಯುದ್ಧ, ತಿರುಗು ಬಾಣ, ಕೃಷಿ ಮಾಹಿತಿ ಒದಗಿಸುವ ಕೃಷಿ ಸ್ಪಂದನ ಮಹಿಳೆಯರಿಗಾಗಿ ವಿಮೆನ್ಸ್ ಕ್ಲಬ್, ಆರ್ಟ್ ಆಫ್ ಬ್ಯೂಟಿ, ಮನಸ್ಸಿನ ಒತ್ತಡ ನಿವಾರಣೆಗೆ ಸಲಹೆ ನೀಡುವ ಮನಸ್ಸೇ ನೋ ಟೆನ್ಷನ್ ಪ್ಲೀಸ್ ಕಾರ್ಯಕ್ರಮಗಳು ಬಿತ್ತರಗೊಳ್ಳಲಿವೆ. ಭವಿಷ್ಯದಲ್ಲಿ ಲಭ್ಯ ಕೇಬಲ್ ನೆಟ್‌ವರ್ಕ್ ತಂತ್ರಜ್ಞಾನ ಬಳಸಿ ರಾಜ್ಯಾದ್ಯಂತ ಪ್ರಸಾರ ಮಾಡುವ ಯೋಜನೆ ಚಾನೆಲ್‌ನ ಸಂಚಾಲಕರದ್ದು.

    ಉಡುಪಿಯ ಚಾನೆಲ್ ನೆಟ್‌ವರ್ಕ್‌ನ ಗುರುರಾಜ್ ಎಸ್.ಅಮೀನ್, ಸುರೇಶ್‌ರಾವ್ ಕೊಕ್ಕಡ, ಕಿರಣ್ ಕುಮಾರ್, ಸೂರಜ್ ಅಂಚನ್ ಮತ್ತು ಹನುಮಾನ್ ಟ್ರಾನ್ಸ್ ಪೋರ್ಟ್ ಕಂಪನಿಯ ಎಂ.ಡಿ. ವಿಲಾಸ್ ನಾಯಕ್ ಈ ಚಾನೆಲ್‌ನ ಸಾರಥ್ಯ ವಹಿಸಿಕೊಂಡಿದ್ದಾರೆ.

    ದೃಶ್ಯ ಮಾಧ್ಯಮದಲ್ಲಿ ಸುದೀರ್ಘ ಅನುಭವ ಹೊಂದಿರುವ ರವಿರಾಜ್ ವಳಲಂಬೆ ಸುದ್ಧಿ ವಿಭಾಗದ ಉಸ್ತುವಾರಿ ವಹಿಸಿಕೊಂಡಿದ್ದರೆ, ಮೈಮ್ ರಾಮ್‌ದಾಸ್ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಒಟ್ಟಾರೆ ಕರಾವಳಿಯಲ್ಲಿ ಚಾನೆಲ್‌ಗಳ ನಡುವೆ ಮತ್ತೊಂದು ಸುತ್ತಿನ ಸ್ಪರ್ಧೆ ನಿರೀಕ್ಷಿತ. ಏನೇ ಆದರೂ ಕರಾವಳಿಗರಿಗಂತೂ ಭರಪೂರ ಮನರಂಜನೆ.

    English summary
    'Spandana' the first cable tv channel with high definition will start functioning in Udupi from 24th Feb 2012. The cable has commissioned blackmagic 18 em2 software.
    Thursday, February 23, 2012, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X