ಈಟಿವಿ ಕನ್ನಡ ವಾಹಿನಿಯಲ್ಲಿ ನಿತ್ಯ ಹಾರಲಿದೆ ಗಾಳಿಪಟ
ಈಗ ಎಲ್ಲೆಲ್ಲೂ ಗಾಳಿಪಟದ್ದೇ ಸುದ್ದಿ. ಒಟ್ಟಿನಲ್ಲಿ ಗಾಳಿಪಟಗಳಿಗೆ ಒಳ್ಳೆ ಮಾರುಕಟ್ಟೆ ಇರುವಂತಿದೆ. ಬಾಲಿವುಡ್ 'ಕೈಟ್ಸ್ ' ವಿವಾದದ ನಡುವೆ ಇದೀಗ ಮತ್ತೊಂದು ಗಾಳಿಪಟ ಸುದ್ದಿ ಮಾಡಿದೆ. ಈ ಗಾಳಿಪಟ ಗೋಲ್ಡನ್ ಸ್ಟಾರ್ ಗಣೇಶ್ ಹಾರಿಸಿದ ಗಾಳಿಪಟವಲ್ಲ. ಈಟಿವಿ ಕನ್ನಡದಲ್ಲಿ ಹಾರಲಿರುವ ಹೊಸ ಗಾಳಿಪಟವಿದು.
ಈಟಿವಿ ಕನ್ನಡ ವಾಹಿನಿ 'ಗಾಳಿಪಟ' ಎಂಬ ನೂತನ ದೈನಿಕ ಧಾರಾವಾಹಿಯನ್ನು ಮೇ.31ರಿಂದ ಪ್ರಸಾರ ಮಾಡಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2.30ಕ್ಕೆ ಈ ಧಾರಾವಾಹಿ ಬಿತ್ತರವಾಗಲಿದೆ. ಈ ಧಾರಾವಾಹಿಯ ನಿರ್ಮಾಪಕರು ತೆಲುಗಿನ ಖ್ಯಾತ ನಟ ಸತ್ಯನಾರಾಯಣರಾವ್ ಅವರ ಪುತ್ರ ಕೆ ವಿ ರಾಮಾರಾವ್.
ಕೆ ಎಸ್ ಎನ್ ಟೆಲಿ ಫಿಲಂಸ್ ಲಾಂಛನದಲ್ಲಿ ಈ ಧಾರಾವಾಹಿ ಮೂಡಿಬರಲಿದೆ. ಈ ಹಿಂದೆ ಛಾಯಾಗ್ರಾಹಕರಾಗಿದ್ದ ಕೆ.ಶಶಿಧರ್ ಈ ಧಾರಾವಾಹಿ ನಿರ್ದೇಶಕರು. ಇಳಗೂರು ಇಳವರಸನ್ ಚಿತ್ರಕತೆ, ರಾಜಶೇಖರ ನಿಲೋಗಲ್ ಮಠ್ ಅವರ ಸಂಭಾಷಣೆ ಹಾಗೂ ಪ್ರವೀಣ್ ಡಿ ರಾವ್ ಅವರ ಸಂಗೀತವಿದೆ. ತಾರಾಗಣದಲ್ಲಿ ಪಲ್ಲವಿ, ಹಿರೇ ಹಿರಣ್ಣಯ್ಯ, ಕೃಷ್ಣೇಗೌಡ್ರು, ಆಶಾಲತಾ, ಶ್ರೀಕಾಂತ್ ಹೆಬ್ಳೀಕರ್ ಇದ್ದಾರೆ. ನಿರ್ಮಾಣ, ಮೇಲ್ವಿಚಾರಣೆ ಎಂ ಪ್ರವೀಣ್ ಕುಮಾರ್ ಅವರದು.


Click it and Unblock the Notifications











