ಉದಯದಲ್ಲಿ ರಿಮೇಕ್ ಧಾರಾವಾಹಿ ಗೋಕುಲ ನಿವಾಸ
ಅವಿಭಕ್ತ ಕುಟುಂಬ, ಪಂಚ ಪಾಂಡವರು, ಅಣ್ಣ ತಮ್ಮಂದಿರ ಕಥೆ ಆಧರಿಸಿದ ಧಾರಾವಾಹಿ ನಿರ್ಮಿಸಬೇಕೇ? ಚಿಂತಿಸಬೇಡಿ. ತಮಿಳಿನಲ್ಲಿ ಸಾಕಷ್ಟು ಸೀರಿಯಲ್ ಗಳು ಬಂದಿವೆ. ಅದನ್ನೇ ತೆಗೆದುಕೊಂಡು ಬಂದು ಇಲ್ಲಿ ರಿಮೇಕ್ ಮಾಡಿದರಾಯ್ತು. ತಮಿಳು ಕಿರುತೆರೆ ಕಿಂಗ್ ಮಂಗೈ ಹರಿರಾಜನ್ ಅವರ ಜನಪ್ರಿಯ ಧಾರಾವಾಹಿಯನ್ನು ಕನ್ನಡಕ್ಕೆ ತರಲಾಗಿದೆ. ಗೋಕುಲ ವೀಡು ಹೆಸರಿನ ಧಾರಾವಾಹಿ ಗೋಕುಲ ನಿವಾಸ ಎಂಬ ಹೆಸರಿನಲ್ಲಿ ಉದಯ ಟಿವಿಯಲ್ಲಿ ಜ.31 ರಿಂದ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾನ್ಹ 1:30 ರಿಂದ 2:00 ರ ವರೆಗೆ ಪ್ರಸಾರವಾಗಲಿದೆ.
ಇಲ್ಲಿವರೆಗೂ ಸಿನಿಮಾ ಲೋಕಕ್ಕೆ ಅಂಟಿದ ರಿಮೇಕ್ ಮಾರಿ, ಕಿರುತೆರೆಗೂ ವ್ಯಾಪಿಸುತ್ತಿದೆ. ಈ ಮುಂಚೆ ಕೆಲವು ವಾಹಿನಿಗಳಲ್ಲಿ ರಿಮೇಕ್ ಸೀರಿಯಲ್, ಡಬ್ಬಿಂಗ್ ಸೀರಿಯಲ್ ಗಳು ಬಂದಾಗ ಕಿರುತೆರೆ ಕಲಾವಿದರ ಸಂಘ ರವಿಕಿರಣ್ ನೇತೃತ್ವದಲ್ಲಿ ಪ್ರತಿರೋಧ ಒಡ್ಡಿದ್ದರು. ಆದರೆ, ಮುಖ್ಯದ್ವಾರದಲ್ಲಿ ಪ್ರವೇಶವಿಲ್ಲದಿದ್ದರೆ ಏನಂತೆ ಮನೆಯೊಂದು ನಾನಾ ಬಾಗಿಲು ಎಂಬ ತತ್ತ್ವದಲ್ಲಿ ರಿಮೇಕ್ ಧಾರಾವಾಹಿಗಳು ಅಪ್ಪಳಿಸುತ್ತಿವೆ.
ಈ ಧಾರಾವಾಹಿಯಲ್ಲಿ ಪಂಚ ಪಾಂಡವರಂತಿರುವ ಐವರು ಅಣ್ಣ ತಮ್ಮಂದಿರ ನಡುವಿನ ಕತೆ ಇದೆ. ರವೀಂದ್ರನಾಥ್ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದು , ಚಿದಾನಂದ್, ರಜತ್ ಬಾಲರಾಜ್(ಹೊಸ ನಟನಲ್ಲ, ಅದೇ ಹಳೆ ಬಾಲರಾಜ್ ಹೊಸ ಹೆಸರು ಅಷ್ಟೇ), ಅಜಿತ್ ಕುಮಾರ್, ಮನೀಶ್ ಬಲ್ಲಾಳ್ ನಾಲ್ವರು ಅಣ್ಣ-ತಮ್ಮಂದಿರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತಾ, ಸುಷ್ಮಾ, ನಿಶಿತಾ ಗೌಡ, ಭೂಮಿಕಾ, ಸಹನಾ, ಬ್ಯಾಂಕ್ ಜನಾರ್ಧನ್, ದತ್ತಾತ್ರೆಯ, ಡಿಂಗ್ರಿ ನಾಗರಾಜ್, ಕವನ, ಭಾಗ್ಯಶ್ರೀ, ಸುಲೋಚನ ರಾಜ್ಗೋಪಾಲ್ ಮೊದಲಾದವರು ತಾರಾಗಣದಲ್ಲಿದ್ದಾರೆ.
ಈ ಧಾರವಾಹಿಯನ್ನು "ಫೋರ್ ಎಸ್ ಮೀಡಿಯಾ ಮತ್ತು ನಿಂಬೂಸ್ ಟೆಲಿವಿಷನ್" ಜಂಟಿಯಾಗಿ ನಿರ್ಮಿಸಿದೆ. ತಮಿಳು, ತೆಲುಗು ಆವೃತ್ತಿಯಲ್ಲಿ ಈ ಧಾರಾವಾಹಿ ಈಗಾಗಲೇ 400ಕ್ಕೂ ಹೆಚ್ಚು ಎಪಿಸೋಡುಗಳನ್ನು ಮುಗಿಸಿದೆ. ಕನ್ನಡ ಪ್ರೇಕ್ಷಕರಿಗೆ ತಕ್ಕಂತೆ ಧಾರಾವಾಹಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಜನ ಮೆಚ್ಚುವಂಥ ಕಥೆಯನ್ನು ಇದು ಹೊಂದಿದೆ ಎಂದು ನಿರ್ದೇಶಕ ಮಂಗೈ ಹರಿರಾಜ್ ಹೇಳುತ್ತಾರೆ. [ಕಿರುತೆರೆ]


Click it and Unblock the Notifications











