twitter
    For Quick Alerts
    ALLOW NOTIFICATIONS  
    For Daily Alerts

    ಸಮಯ ನ್ಯೂಸ್ 24x7 ಚಾನಲ್ಲಿಗೆ ಭಟ್ ಸೇರ್ಪಡೆ

    By Shami
    |

    ಸುವರ್ಣ ಟಿವಿ ಏಷಿಯಾ ನೆಟ್ ಒಡೆತನದಲ್ಲಿದ್ದಾಗ ಕನ್ನಡ ವಾಹಿನಿಯ ಸಂಪಾದಕರಾಗಿದ್ದ ಶಶಿಧರ ಭಟ್ ಈಗ ಸಮಯ ನ್ಯೂಸ್ 24x7 ಚಾನಲ್ಲಿಗೆ ಮುಖ್ಯಸ್ಥರಾಗಿ ಸೇರಿಕೊಂಡಿದ್ದಾರೆ. ನಸುಗಪ್ಪು, ಗಡ್ಡಧಾರಿ, ಕೆಂದುಟಿಯ ಭಟ್ ನಿನ್ನೆ ಸೋಮವಾರ ಸಮಯ ಟಿವಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಮೂಲತಃ ಮುದ್ರಣ ಮಾಧ್ಯಮದಲ್ಲಿ ಪಳಗಿದ್ದ ಭಟ್ ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಗಾರರಾಗಿದ್ದವರು. ಆನಂತರ ವಿದ್ಯುನ್ಮಾನ ಪತ್ರಿಕೋದ್ಯಮಕ್ಕೆ ವಲಸೆಹೋದವರು.

    ಕೆಲಕಾಲ ಸುವರ್ಣದಲ್ಲಿ ಕೆಲಸಮಾಡುತ್ತಿದ್ದ ಭಟ್ ಚಾನಲ್ಲಿನಿಂದ ಆಚೆ ಬರಬೇಕಾದ ಸಂದರ್ಭ ತಲೆದೋರಿತು. ಕನ್ನಡಪ್ರಭದ ಸಂಪಾದಕರಾಗಿದ್ದ ಎಚ್ ಆರ್ ರಂಗನಾಥ್ ಪತ್ರಿಕೆ ತೊರೆದು ಸುವರ್ಣ ವಾಹಿನಿಗೆ ಮುಖ್ಯಸ್ಥರಾಗಿ ಬಂದನಂತರ ಉಂಟಾದ ಬೆಳವಣಿಗೆಗಳಲ್ಲಿ ಭಟ್ ಅಲ್ಲಿಂದ ಜಾಗ ಖಾಲಿ ಮಾಡಬೇಕಾಗಿ ಬಂದದ್ದು ಒಂದು ಪ್ರಸಂಗ.

    ಸುಮಾರು ಒಂದು ವರ್ಷ ಕಾಲ ತೆರೆಯಮರೆಯಲ್ಲಿದ್ದ ಶಶಿಧರ್ ಭಟ್ ಸುದ್ದಿ ಹಬ್ಬ ಮಾಡುವ ವಾಹಿನಿಗಳ ಸಾಲಿಗೆ ಸೇರಿದ ನಂತರ 24 ಗಂಟೆ ಚಾನಲ್ಲುಗಳ ನಡುವಣ ಪೈಪೋಟಿಗೆ ಹೊಸ ರಂಗು ಬಂದಿದೆ. ಟಿವಿ9 24 x 7, ಸುವರ್ಣ ನ್ಯೂಸ್ 24 x 7 ಜತೆಗೆ ಸಮಯ ನ್ಯೂಸ್ 24 x 7 ಸೇರಿ ಒಟ್ಟು 72 x 7 ಸುದ್ದಿ ಪತಾಕೆಗಳು ಕನ್ನಡ ಟಿವಿ ಪತ್ರಿಕೋದ್ಯಮದಲ್ಲಿ ಹಾರಾಡಲು ವೇದಿಕೆ ಸಿದ್ದವಾದಂತಾಗಿದೆ.

    ಕನ್ನಡ ಚಿತ್ರಗಳು : ನಿಮ್ಮ ಅಮೂಲ್ಯ ಮತ ಯಾರಿಗೆ?

    ಟಿಆರ್ ಪಿ ಮಸಾಲಾ : ಎಲ್ಲ ಟಿವಿ ಸುದ್ದಿ ವಾಹಿನಿಗಳೂ ನಮಗೆ ನೀಡುವ ಸುದ್ದಿ ಸಾರಂಗಿಗಳು ಹೆಚ್ಚೂಕಡಿಮೆ ಒಂದೇ ತೆರನಾಗಿರುವವು. ಪ್ರಮುಖ ಸುದ್ದಿಗಳು ಒಂದು ನಿಮಿಷ ಆಚೆ ಈಚೆ ಯಾವುದಾದರೂ ವಾಹಿನಿಯಲ್ಲಿ ಬಂದೇ ಬರುತ್ತದೆ. ಆದರೆ, ಸುದ್ದಿ ಗ್ರಹಿಸುವ ಕಲೆ, ನಿರೂಪಣೆಯಲ್ಲಿ ವೈಶಿಷ್ಯ ಮತ್ತು ವಿದ್ಯಮಾನಗಳ ಒಳನೋಟಗಳನ್ನು ಅರೆಯುವ ಶೈಲಿಯಲ್ಲಿ ಮಾತ್ರ ಕೊಂಚ ಭಿನ್ನತೆಯನ್ನು ಕಾಣಬಹುದು.

    ಯಾವುದೇ ಚಾನಲ್ಲಾಗಿರಲಿ, ಮುಖ್ಯವಾಗಿ ಅದಕ್ಕೆ ಬೇಕಾಗಿರುವುದು ವಿಶ್ವಾಸಾರ್ಹತೆ, ಜನಪ್ರಿಯತೆ ತನ್ಮೂಲಕ ಜಾಹೀರಾತು. ಜಾಹೀರಾತಿನ ದರ ಮತ್ತು ಪ್ರಮಾಣ ಒಂದು ಚಾನಲ್ಲಿನ ಆದಾಯ ಮತ್ತು ನಷ್ಟಕ್ಕೆ ಕನ್ನಡಿಯಾಗುತ್ತದೆ. ಲಾಭ ಗಳಿಸಿದವರು ಮೂಲಭೂತ ಸೌಕರ್ಯ ಹೆಚ್ಚಳ, ಸಂಪನ್ಮೂಲವೃದ್ಧಿ, ಪ್ರತಿಭಾ ಸಂಚಯ ಮತ್ತು ಜಾಲ ವಿಸ್ತರಣೆಯಲ್ಲಿ ತೊಡಗಿಕೊಳ್ಳುತ್ತವೆ. ನಷ್ಟ ಗಳಿಸಿದವರು ಸಾಧ್ಯವಾದಷ್ಟೂ ಕಾಲ ಹೆಣಗುತ್ತಾರೆ. ಚಾನಲ್ ಬ್ಲಾಕ್ ಔಟ್ ಆಗುವುದನ್ನು ತಪ್ಪಿಸಲು ಇನ್ನೆಲ್ಲೋ ಸಂಪಾದಿಸಿದ ಲಾಭ ಅಥವಾ ಸಾಲ ತಂದು ತಮ್ಮ ಮಾಧ್ಯಮ ಉದ್ಯಮ ಸಾಯದಂತೆ ನೋಡಿಕೊಳ್ಳುತ್ತಾರೆ.

    ಟಿವಿ ಚಾನಲ್ಲುಗಳ ಜನಪ್ರಿಯತೆ ನಿರ್ಧರಿಸುವುದು ಅದರ ಟಿಆರ್ ಪಿ ( TRP- Tele Rating Points ). ಟಿಆರ್ ಪಿ ಎಷ್ಟಿದೆ ಎಂದು ನಿರ್ಧರಿಸುವದಕ್ಕೆ ಇರುವ ಮಾನದಂಡ TAM ( Target Audience Metrics) ಇದನ್ನು ಯಾರು ಚೆನ್ನಾಗಿ ಅರಿತು ಅದಕ್ಕೆ ತಕ್ಕಂತೆ ತಮ್ಮ ಚಾನಲ್ಲನ್ನು ಕುಣಿಸುತ್ತಾರೋ ಅವರು ಗೆಲ್ಲುವ ಕುದುರೆ ಎಂದು ಹೇಳಲಾಗುತ್ತದೆ. ಇಷ್ಟಾದರೂ TRP ಅಳೆಯುವ ತಕ್ಕಡಿ ಸರಿಯಿಲ್ಲ ಎಂದು ನಂಬುವವರೂ ಉಂಟು. ಕರಾರುವಾಕ್ಕು ಅಂಕೆ ಸಂಖ್ಯೆಗಳು ಹೇಗೂ ಇರಲಿ, ಜಾಹೀರಾತು ಕಂಪನಿಗಳು ನಂಬುವುದು ಸದ್ಯ ಲಭ್ಯವಿರುವ ರೇಟಿಂಗ್ ವರದಿಗಳನ್ನು ಮಾತ್ರ.

    ವಾಹಿನಿಗಳು ಟಿಆರ್ ಪಿ ವರದಿಗಳನ್ನು ಪ್ರತೀವಾರ ತರಿಸಿಕೊಂಡು ನೋಡುತ್ತವೆ. ಅಧ್ಯಯನ ಮಾಡುತ್ತವೆ. ಟಿಆರ್ ಪಿ ಕಮ್ಮಿ ಇರುವ ಕಾರ್ಯಕ್ರಮಗಳನ್ನು ಎತ್ತಿಹಾಕುವ ಸನ್ನಾಹಕ್ಕೆ ಸಂಪಾದಕರು ತೊಡಗುತ್ತಾರೆ. ಟಿಆರ್ ಪಿ ಚೆನ್ನಾಗಿ ಕಂಡರೆ ಅದೇ ಕುದುರೆಯನ್ನು ಹಿಡಿದು ಮತ್ತಷ್ಟು ಬಡಿಯುತ್ತಾರೆ. ಉದಾ. ಒಂದು ಟಿವಿ ಧಾರಾವಾಹಿಗೆ ಟಿಆರ್ ಪಿ ಚೆನ್ನಾಗಿದ್ದರೆ ಅದನ್ನು 300 ಅಲ್ಲ ಮೂರು ಸಾವಿರ ಕಂತಿನವರೆಗೂ ಎಲಾಸ್ಟಿಕ್ ಥರ ಹಿಗ್ಗಿಸಿಕೊಂಡು ಹೋಗುತ್ತಾರೆ.

    ವರ್ಷ ಮುಗಿಯುತ್ತಾ ಬಂದಿದೆ. ನಮ್ಮ ಟಿವಿ ವಾಹಿನಿಗಳ ಕೈಗೆ 51 ನೇ ವಾರದ ಟಿಆರ್ ಪಿ ರಿಪೋರ್ಟ್‌ಗಳು ಬಂದಿವೆ. ಅವು ಹೀಗಿವೆ. ಕಣ್ಣಾಡಿಸಿ.

    * ಟಿವಿ 9 250
    * ಸುವರ್ಣ ನ್ಯೂಸ್ 100
    * ಸಮಯ 50

    English summary
    Senior Journalist Shashidhara Bhat re-locates to Samaya News 24x7 Kannada channel as the editor. Congress ruling MLA Satish Jarakiholi owned channel Samaya jumps to TRP war wagon in Karnataka.
    Tuesday, December 28, 2010, 17:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X