ಸೀರಿಯಲ್ ದುನಿಯಾ ಒಳಗೊಂದು ಸುತ್ತು: ಖರ್ಚೆಷ್ಟು, ಶ್ರಮವೆಷ್ಟು, ಕಥೆಯೇನು
ಮನೆಯಲ್ಲಿ ಟಿ.ವಿ. ಮುಂದೆ ಕೂತಿರುವವರು ಅರ್ಧ ಗಂಟೆಯೋ ಒಂದು ಗಂಟೆಯೋ ಧಾರಾವಾಹಿಗಳು, ರಿಯಾಲಿಟಿ ಶೋ, ಗೇಮ್ ಶೋ ನೋಡಲಿ ಅಂತ ಎಂಟರ್ ಟೈನ್ ಮೆಂಟ್ ಚಾನೆಲ್ ಗಳು ಪಡುವ ಶ್ರಮ ಎಷ್ಟು ಗೊತ್ತಿದೆಯಾ, ಏನೆಲ್ಲ ಗಮನಿಸ್ತಾರೆ, ಧಾರಾವಾಹಿಯ ಒಂದು ಎಪಿಸೋಡಿಗೆ ಎಷ್ಟು ಹಣ ಕೊಡ್ತಾರೆ, ಇತ್ತೀಚೆಗೆ ಬದಲಾದ ಟ್ರೆಂಡ್ ಏನು ಗಮನಿಸಿದ್ದೀರಾ?
ಕಳೆದ ಒಂದೂವರೆ ವರ್ಷದಲ್ಲಿ ಹದಿನೈದಕ್ಕೂ ಹೆಚ್ಚು ಧಾರಾವಾಹಿಗಳು ಹೊಸದಾಗಿ ಶುರುವಾಗಿವೆ. ಅವುಗಳಲ್ಲಿ ಫ್ಯಾಂಟಸಿ ಸಬ್ಜೆಕ್ಟ್ ಗಳೇ ಹೆಚ್ಚು. ಸದ್ಯಕ್ಕಂತೂ ವೀಕ್ಷಕರ ಮನಸ್ಸು ಗೆಲ್ಲುವುದರಲ್ಲೂ ಅವೇ ಮುಂದು. ನಾಗಿಣಿ, ಗಂಗಾ, ಮಹಾದೇವಿ, ಹರಹರ ಮಹಾದೇವ ಈಗಾಗಲೇ ಹಿಟ್ ಆಗಿವೆ. ಇನ್ನು ಗಿರಿಜಾಕಲ್ಯಾಣ, ನಾನಿನ್ನ ಬಿಡಲಾರೆ, ದುರ್ಗಾ ಧಾರಾವಾಹಿಗಳಿಗೆ ವೀಕ್ಷಕರ ಕೊರತೆಯೇನೂ ಇಲ್ಲ.[ಗಣೇಶ ಚತುರ್ಥಿಗೆ "ದೇವರ ದೇವ ಮಹಾದೇವ ಚರಿತ್ರೆ"ಯ ರಸದೌತಣ]

ಒಂದು ಎಪಿಸೋಡಿಗೆ ಧಾರಾವಾಹಿಯ ನಿರ್ಮಾಪಕರಿಗೆ 90 ಸಾವಿರದಿಂದ ಎರಡು ಲಕ್ಷ ರುಪಾಯಿವರೆಗೆ ಹಣ ಕೊಡಲಾಗುತ್ತಿದೆ. ಮೂಲಗಳ ಪ್ರಕಾರ ಪುಟ್ಟಗೌರಿ ಮದುವೆ ಹಾಗೂ ಗಿರಿಜಾ ಕಲ್ಯಾಣ ಧಾರಾವಾಹಿಗಳಿಗೆ ಮೊತ್ತ ಸ್ವಲ್ಪ ಹೆಚ್ಚೇ ಕೊಡ್ತಾರೆ. ಆದರೆ ಇವೆರಡನ್ನೂ ಮೀರಿಸುವಷ್ಟು ಅಂದರೆ ಎಪಿಸೋಡಿಗೆ 5-6 ಲಕ್ಷ ರುಪಾಯಿಗೂ ಹೆಚ್ಚು ನೀಡಲಾಗುತ್ತಿದೆಯಂತೆ ಸ್ಟಾರ್ ಸುವರ್ಣದ ಹರಹರ ಮಹಾದೇವ ಧಾರಾವಾಹಿಗೆ ಎಂದು ಮೂಲಗಳು ತಿಳಿಸಿವೆ.
ಗ್ರಾಫಿಕ್ಸ್ ಕೆಲಸ, ರಿಚ್ ಪ್ರೊಡಕ್ಷನ್ ಇರುವ ಕಾರಣಕ್ಕೆ ಮಹಾದೇವದ ಬೆಲೆ ಈ ಪಾಟಿ ಇದೆ. ಇನ್ನು ಬೆಂಗಳೂರಿನ ಅರಮನೆಯಲ್ಲಿ ಶೂಟಿಂಗ್ ಆಗುವ ಕಾರಣಕ್ಕೆ ಪುಟ್ಟ ಗೌರಿ ಮದುವೆ, ಗ್ರಾಫಿಕ್ ಕೆಲಸ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಗಿರಿಜಾ ಕಲ್ಯಾಣ ಧಾರಾವಾಹಿಯ ಖರ್ಚು ಜಾಸ್ತಿ ಆಗ್ತಿದೆ.[ಮಹಾ ಸಂಚಿಕೆ: ಕುತೂಹಲಕಾರಿ ತಿರುವು ಪಡೆದ 'ಅಮೃತವರ್ಷಿಣಿ']
ಇನ್ನು ಧಾರಾವಾಹಿಗಳ ಕಥೆ ಆಯ್ಕೆ ಯಾವಾಗಲೂ ಟ್ರೆಂಡ್ ಗೆ ತಕ್ಕಂತೆಯೇ ಇರುತ್ತವೆ. ಸೆಂಟಿಮೆಂಟ್, ಕಣ್ಣೀರಿಗೆ ಟಿ.ವಿ ಒದ್ದೆಯಾಗುತ್ತಿದ್ದ ದಿನಗಳಿಂದ ನಿಧಾನವಾಗಿ ಫ್ಯಾಂಟಸಿ, ಮೈಥಾಲಜಿ, ಔಟ್ ಆಫ್ ದ ಬಾಕ್ಸ್ ಸಬ್ಜೆಕ್ಟ್ ಗಳಾಗಿ ಬದಲಾಗುತ್ತಿವೆ.
ಹತ್ತು ವರ್ಷಗಳ ಹಿಂದೆ ಅತ್ತೆ-ಸೊಸೆ ಕಥೆಯೇ ಎಲ್ಲ ಧಾರಾವಾಹಿಗಳ ಆತ್ಮದಂತಾಗಿದ್ದವು. ಆ ನಂತರ ಬಂದಿದ್ದೇ ಇಬ್ಬರು ಹುಡುಗೀರು, ಒಬ್ಬ ಹುಡುಗ ಇರುವ ಕಥೆ. ಯಾವುದೇ ಸೀರಿಯಲ್ ಮೂಲ ಕಥೆಯಲ್ಲಿ ಇದೇ ಫಾರ್ಮುಲಾ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು. ಸದ್ಯಕ್ಕೆ ಫ್ಯಾಂಟಸಿ ಕಥೆಗಳ ಪರ್ವ ಆರಂಭವಾಗಿದೆ ಎಂದು ಚಾನೆಲ್ ವೊಂದರಲ್ಲಿ ಮುಖ್ಯಸ್ಥರಾಗಿರುವವರು ಹೇಳುತ್ತಾರೆ.[ಇನ್ಮುಂದೆ ಪ್ರತಿ ದಿನ ನಿಮ್ಮ ಮನೆಗೆ ಜೆ.ಕೆ ಬರೋದು ಡೌಟೇ.!]

ಹೊಸ ಬೆಳವಣಿಗೆ ಏನೆಂದರೆ ರಾಕ್ ಲೈನ್ ವೆಂಕಟೇಶ್, ಪುನೀತ್ ರಾಜಕುಮಾರ್ ಅವರಂಥವರು ಸಹ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಸಿಂಪಲ್. ಎಪಿಸೋಡಿಗೆ 20ರಿಂದ 40 ಸಾವಿರ ರುಪಾಯಿ ಆದಾಯ ಬರುತ್ತೆ. ಜತೆಗೆ ಸಿನಿಮಾ ಥರ ಇಲ್ಲಿ ರಿಸ್ಕ್ ಇಲ್ಲ. ಧಾರಾವಾಹಿ ಕ್ಲಿಕ್ ಆಗಲಿಲ್ಲ ಅಂತ ಚಾನೆಲ್ ನವರೇನೂ ತಕ್ಷಣ ನಿಲ್ಲಿಸಿ ಬಿಡೋದಿಲ್ಲ. ಏಕೆಂದರೆ ಅದೇ ಸ್ಲಾಟ್ ಗೆ ಮತ್ತೊಂದು ಸೀರಿಯಲ್ ಶುರು ಮಾಡೋದು ಸಲೀಸಲ್ಲ.
ಒಮ್ಮೆ ಕಥೆ ಫೈನಲ್ ಆದ ಮೇಲೆ ಪಾತ್ರಗಳಿಗೆ ಬಳಸುವ ಬಟ್ಟೆಗಳು, ಮೇಕಪ್ ಬಹಳ ಮುಖ್ಯ ಆಗುತ್ತೆ. ಹಾಗೇ ಗಮನಿಸಿ ನೋಡಿ: ಆ ಮನೆ, ಫರ್ನೀಚರ್, ಪಾತ್ರಗಳ ಬಟ್ಟೆ, ಒಡವೆ, ಮೊಬೈಲ್ ಫೋನ್ ಎಲ್ಲವನ್ನೂ ಮೇಲ್ಮಧ್ಯಮ ವರ್ಗದವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಮಾಡಿರುತ್ತಾರೆ. ಅಂದಹಾಗೆ ಸೀರಿಯಲ್ ನ ಕಥೆ ಕೂಡ ಮಹಿಳೆಯರ ಸೆಂಟಿಮೆಂಟ್ ಹರ್ಟ್ ಆಗದಂತೆಯೇ ಇರುತ್ತದೆ.
ಬಿಗ್ ಬಾಸ್, ಕೋಟ್ಯಾಧಿಪತಿ, ಕಿಕ್ ನಂಥ ಶೋಗಳನ್ನ ಐ ಬಾಲ್ ಟರ್ನರ್ಸ್ ಅಂತಾರೆ. ಕೋಟಿಗಟ್ಟಲೆ ದುಡ್ಡು ಹಾಕುವ ಉದ್ದೇಶ ಏನೆಂದರೆ ಚಾನೆಲ್ ಹೆಸರು ವೀಕ್ಷಕರ ಬಾಯಲ್ಲಿ, ಮನಸ್ಸಲ್ಲಿ ಉಳಿದುಹೋಗಬೇಕು ಅಥವಾ ರೀ ಲಾಂಚ್ ಆಗಬೇಕು, ಮಾರ್ಕೆಟ್ ನಲ್ಲಿ ಸೌಂಡ್ ಮಾಡಬೇಕು ಅನ್ನೋದೇ ಕಾರಣ.[ಕಿರುತೆರೆಗೆ ಎಂಟ್ರಿ ಕೊಟ್ಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್]
ಇನ್ನೊಂದು ಗಮ್ಮತ್ತಿನ ವಿಷಯ ಗೊತ್ತಾ? ಬಹುತೇಕ ಚಾನೆಲ್ ಗಳಲ್ಲಿ ಈಗ ದಕ್ಷಿಣ ಕನ್ನಡ, ಮಂಗಳೂರು ಮೂಲದವರೇ ಆಯಕಟ್ಟಿನ ಜಾಗದಲ್ಲಿದ್ದಾರೆ. ಉದಯ ಟಿ.ವಿಯ ಶ್ರೀನಿಧಿ, ಸುಧೀಂದ್ರ ಭಾರದ್ವಾಜ್, ಕಲರ್ಸ್ ಕನ್ನಡದ ಪರಮೇಶ್ವರ್ ಗುಂತ್ಕಲ್, ಕಲರ್ಸ್ ಸೂಪರ್ ನ ಸುಧನ್ವ ಧೇರಾಜೆ, ಸುವರ್ಣದ ಕಾರ್ತೀಕ್ ಪರಾಡ್ಕರ್ ಹೀಗೆ ಪಟ್ಟಿ ಮುಂದುವರಿಯತ್ತೆ. ಹೋಟೆಲ್ ಉದ್ಯಮದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಗಳೂರು ಹಾಗೂ ದಕ್ಷಿಣ ಕನ್ನಡ ಮೂಲದವರು ಈಗ ಭರ್ಜರಿ ಮನರಂಜನೆಯನ್ನೂ ಉಣಬಡಿಸುತ್ತಿದ್ದಾರೆ.


Click it and Unblock the Notifications











