ಸತ್ಯಮೇವ ಜಯತೆಯಲ್ಲಿ ವಿಕಲಚೇತನರ ವಿಶೇಷ ಶೋ

ಅಂಗವಿಕಲರು ಸಾಕಷ್ಟು ಸಾಧನೆಗಳನ್ನು ಮಾಡಿ ತೋರಿಸಿದ್ದಾರೆ, ಮಾಡಲು ಸಮರ್ಥರೂ ಇದ್ದಾರೆ. ಆದರೆ ಅವರ ಸಾಧನೆ ಹಾಗೂ ಸಾಮರ್ಥ್ಯಗಳನ್ನು ಅಂಗವಿಕಲರಲ್ಲದವರ ಜೊತೆ ಹೋಲಿಕೆ ಮಾಡುವುದಾಗಲೀ, ಅವರನ್ನು ಕಡೆಗಣಿಸುವುದಾಗಲೀ ಎಷ್ಟು ಸರಿ ಎಂಬ ಪ್ರಶ್ನೆ ಕಾರ್ಯಕ್ರಮದಲ್ಲಿ ತೇಲಿ ಬಂತು. ಅದಕ್ಕೆ ಉತ್ತರವೂ ಹಲವು ರೀತಿಯಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮಕ್ಕೆ ಬಂದಿದ್ದ ಅದೆಷ್ಟೋ ವಿಕಲಚೇತನರು ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡರು. ಕೆಲವರಂತೂ ಅವರ ಅನುಭವ ಹೇಳಿಕೊಳ್ಳುತ್ತಿದ್ದರೆ ಅದು ಬರೀ ಗೋಳಿನ ಕಥೆಯನ್ನೇ ಕೇಳಿದಂತಿತ್ತು. ಆದರೆ ಅದು ಅವರ ತಪ್ಪಲ್ಲ, ಏಕೆಂದರೆ ಅವರ ಅನುಭವವೆಲ್ಲಾ ಬರೀ ಗೋಳೇ ಆಗಿತ್ತು. ಸಮಾಜ ಅವರನ್ನು ನೊಡುವ ರೀತಿಗೆ ಅವರ ಹೇಳಿದ ಕಥೆ ಕನ್ನಡಿಯಂತಿತ್ತು.
ಅಲ್ಲಿ ಬಂದಿದ್ದ ಒಬ್ಬೊಬ್ಬ ವಿಕಲಚೇತನರದ್ದೂ ಒಂದೊಂದು ವಿಭಿನ್ನ ಕಥೆ. ಆದರೆ ಅಲ್ಲಿ ಬಂದವರೆಲ್ಲಾ ವಿಕಚೇತನರಾಗಿದ್ದೂ ಏನೋ ವಿಶೇಷವಾದುದನ್ನು ಸಾಧಿಸಿದವರಾಗಿದ್ದರು. ವಿಕಲರಾಗಿದ್ದು ಏನನ್ನೂ ಸಾಧಿಸದವರು ಯಾರೂ ಅಲ್ಲಿ ಬಂದಿರಲಿಲ್ಲ. ಅದು ಸಹಜವೇ ಅಂದುಕೊಂಡರೂ ಈ ಕಾರ್ಯಕ್ರಮ ಇನ್ನೂ ಸಾಧಿಸದಿರುವವರಿಗೂ ಸ್ಪೂರ್ತಿಯಾಗಲಿರುವುದು ಖಂಡಿತ ಎನ್ನುವಂತಿತ್ತು.
ಅಮೀರ್ ನಡೆಸಿಕೊಡುತ್ತಿರುವ ಸತ್ಯಮೇವ ಜಯತೆಗೆ ಬಹಳಷ್ಟು ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವೊಂದು ಅಪಸ್ವರಗಳ ಮಧ್ಯೆಯೂ ಕಾರ್ಯಕ್ರಮ ನಿರಂತರವಾಗಿ, ನಿರಾತಂಕವಾಗಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಪ್ರಶಂಸೆಗಳ ಸುರಿಮಳೆಯೇ ಸುರಿಯುತ್ತಿದೆ.
ಇಲ್ಲಿಯವೆರೆಗೂ ಅಮೀರ್ ಖಾನ್ ತಮ್ಮ ಸತ್ಯಮೇವ ಜಯತೇ ಮೂಲಕ ಮೊದಲು ಹೇಳಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನೇ ರೂಪಿಸಿದ್ದಾರೆ. ಅಮೀರ್ ಸಾಮಾಜಿಕ ಸಮಸ್ಯೆಯನ್ನು ಎತ್ತಿಕೊಳ್ಳುವ ರೀತಿ, ಅದಕ್ಕೆ ಸಂಬಂಧಪಟ್ಟವರೊಂದಿಗೆ ಸ್ಪಂದಿಸುವ ರೀತಿ ಎಲ್ಲವೂ ತುಂಬಾ ವಿಶಿಷ್ಟ.
ಭಾನುವಾರ ಅಮೀರ್ ಖಾನ್ ಸತ್ಯಮೇವ ಜಯತೆ ನೋಡಿ ಎಲ್ಲಡೆಯಲ್ಲೂ ಚರ್ಚಿಸುವ ಸಂಪ್ರದಾಯ ಶುರುವಾಗಿದೆ. ಒಬ್ಬ ವ್ಯಕ್ತಿ ಜಗತ್ತಿನ ಗಮನ ಹೇಗೆ ಸೆಳೆಯಬಲ್ಲ, ಜಗತ್ತಿನಾದ್ಯಂತ ಇರುವ ಅದರಲ್ಲೂ ಪ್ರಮುಖವಾಗಿ ಭಾರತವು ಎದುರಿಸುತ್ತಿರುವ ಸಮಸ್ಯೆಗಳತ್ತ ಬೆಳಕು ಚೆಲ್ಲಿ ಪರಿಹಾರ ಸೂಚಿಸಬಲ್ಲ ಎಂಬುದಕ್ಕೆ ಅಮೀರ್ ಜ್ವಲಂತ ನದರ್ಶನ ಎನಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











