ಕಾಸರಗೋಡಿನಲ್ಲಿ ಮಲ್ಲೂ ನಟಿ ಮೇಲೆ ಚೀಟಿಂಗ್ ಕೇಸ್
ಆಶಾ ಶರತ್ ಮಲೆಯಾಳಿಗಳ ಅಚ್ಚುಮೆಚ್ಚಿನ ಚೇಚಿ. ಕುಂಕುಮಪೂವು ಸೀರಿಯಲ್ ಮೂಲಕ ಎಲ್ಲರ ಮನಗೆದ್ದಿರುವ ನಟಿ. ದುಬೈನಲ್ಲಿ ನೆಲೆಸಿರುವ ಆಶಾ ಶರತ್ ಕರ್ನಾಟಕ ಕೇರಳ ಗಡಿಭಾಗದ ಕಾಸರಗೋಡಿನ ಪೊಲೀಸ್ ಠಾಣೆಯಿಂದ ಬುಲಾವ್ ಬಂದಿದೆ. ಬಹು ಜನಪ್ರಿಯ ನಟಿ ಆಶಾ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.
ದುಬೈನಲ್ಲಿ ಕೈರಲಿ ಕಲಾಕೇಂದ್ರದಲ್ಲಿ ಹಾಡು, ನೃತ್ಯ, ಕಲೆ ಎಂದು ತಿಂಗಳು ಪೂರ್ತಿ ಕಾಲ ಕಳೆಯುವ ಆಶಾ, ಬಿಡುವು ಮಾಡಿಕೊಂಡು 8-10 ದಿನ ಕೇರಳಕ್ಕೆ ಬಂದು ಶೂಟಿಂಗ್ ಮುಗಿಸಿಕೊಟ್ಟು ಹೋಗುತ್ತಾರೆ. ನಟಿ, ನೃತ್ಯಗಾರ್ತಿ ಆಶಾ ಶರತ್ ವಂಚನೆ ಮಾಡಲು ಸಮಯ ಎಲ್ಲಿದೆ ಎಂದು ಅಭಿಮಾನಿಗಳು ಹುಬ್ಬೇರಿಸಿ ಪ್ರಶ್ನಿಸಿದ್ದಾರೆ.
ಹೌದು, ಪೆರಂಬವೂರ್ ನ ಆಶಾಗೆ ನಟನೆ, ನೃತ್ಯ ಬಿಟ್ಟು ಬೇರೆ ರಾಜಕೀಯ ವ್ಯವಹಾರ ಗೊತ್ತಿಲ್ಲ. ಆದರೆ, ವಿಧಿಯಾಟ ಏನು ಮಾಡಲು ಬರುವುದಿಲ್ಲ. ಇತ್ತೀಚೆಗೆ ಮಳಿಗೆಯೊಂದರ ಉದ್ಘಾಟನೆಗೆ ಆಶಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಆಶಾ ಅವರು ಗೈರು ಹಾಜರಾಗಿದ್ದರಂತೆ.
ಸೈಫುನೀಸಾ ಎಂಬುವವರು ನೀಡಿರುವ ದೂರಿನ ಪ್ರಕಾರ ಆಶಾ ಅವರು ನನ್ನ ಕಚೇರಿ ಉದ್ಘಾಟನೆಗೆ ಬರುತ್ತೇನೆ ಎಂದು ಆಶಾ ಭರವಸೆ ನೀಡಿದ್ದರು ಆದರೆ, ಕೈ ಕೊಟ್ಟರು. ಜತೆಗೆ ಆಭರಣ, ಮೊಬೈಲ್ ಫೋನ್ ಪಡೆದುಕೊಂಡಿದ್ದು ಯಾವುದನ್ನು ಹಿಂತಿರುಗಿಸಿಲ್ಲ ಎಂದಿದ್ದಾರೆ.

ಈ ಬಗ್ಗೆ ದೂರು ಸ್ವೀಕರಿಸಿರುವ ಕಾಸರಗೊಡು ಚಂದೇರಾ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಶಾ ಶರತ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ಮಯೋಧ, ಫ್ರೈಡೇ, ಗರ್ಭಿಣಿಕಳ್ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಆಶಾ ಅವರು ಮುಂಬರುವ ದೃಷ್ಯಂ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಭರತನಾಟ್ಯ, ಕುಚುಪುಡಿ, ಮೋಹಿನಿಯಾಟ್ಟಂ ಕಲಿತಿರುವ ಆಶಾ 1992ರಲ್ಲಿ ಬನಾರಾಸ್ ನಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆ ವಿಜೇತೆ. ಮದುವೆಯಾದ ಮೇಲೆ ದುಬೈನಲ್ಲಿ ನೆಲೆಸಿದ ಆಶಾ ಅಲ್ಲಿನ ಎಫ್ ಎಂ ವಾಹಿನಿಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಆಶಾ ಅವರ ಕಲಾ ಕೇಂದ್ರದಲ್ಲಿ ವಿವಿಧ ದೇಶಗಳ 3500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಪುತ್ರಿಯರ ಜತೆ ದುಬೈವಾಸಿಯಾಗಿರುವ ಆಶಾ, ಕುಂಕುಮಪೂವು ಜಯಂತಿ ಪಾತ್ರ ಕಂಡು ಅನೇಕ ಜನ ಪ್ರಭಾವಿತರಾಗಿದ್ದಾರೆ. ಆಶಾ ಮೇಲೆ ಕೇಸ್ ಜಡಿದಿರುವುದಕ್ಕೆ ಮಲೆಯಾಳಿ ಮಹಿಳಾ ಮಣಿಗಳು ಗರಂ ಆಗಿದ್ದಾರಂತೆ.


Click it and Unblock the Notifications











