Don't Miss!
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪಾಪಾ ಪಾಂಡು'ವಿನ ಮುದ್ದು ಹುಡುಗ ಶ್ರೀಹರಿ ಬಗ್ಗೆ ನಿಮಗೆಷ್ಟು ಗೊತ್ತು.?
'ಪಾಪಾ ಪಾಂಡು' ಎಂಬ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪಾಂಡುವಿನ ಮುಗ್ದತೆ, ಪಾಚು ಶ್ರೀಮತಿಯ ಸಿಟ್ಟು ಎಲ್ಲವೂ ತಿಳಿ ಹಾಸ್ಯದೊಂದಿಗೆ ಮಿಶ್ರಣಗೈದು ವಾರಾಂತ್ಯದವರೆಗೂ ನೋಡುಗರನ್ನು 20 ನಿಮಿಷ ನಗಿಸುವ ಕಾಯಕ ಶ್ಲಾಘನೀಯವೇ ಸರಿ.
ಸುಮಾರು 10 ವರ್ಷಗಳ ಕೆಳಗಿನ ಮಾತು... ಆಗಿನ ಟಾಪ್ ಮೋಸ್ಟ್ ಸೀರಿಯಲ್ ಗಳ ಸರತಿಯಲ್ಲಿ ಮೊದಲ ಸಾಲಿನಲ್ಲಿ ಹೆಸರು ಪಡೆದ ಧಾರಾವಾಹಿ 'ಪಾಪಾ ಪಾಂಡು' ಹಾಗೂ 'ಸಿಲ್ಲಿ ಲಲ್ಲಿ'. 'ಸಿಹಿಕಹಿ ಚಂದ್ರು'ರ ಸಾರಥ್ಯದಲ್ಲಿ ಸಿಹಿಕಹಿ ಪ್ರೊಡಕ್ಷನ್ಸ್ ನಲ್ಲಿ ಮೂಡಿಬಂದ ಈ ಧಾರಾವಾಹಿ ಜನಮನಸೂರೆಗೊಂಡಿತ್ತು. ಇದೇ ತಿಳಿ ಹಾಸ್ಯ ಮತ್ತೊಮ್ಮೆ ಕಲರ್ಸ್ ಸೂಪರ್ ನಲ್ಲಿ ಮರುಕಳಿಸುತ್ತಿದೆ.
ಇದೇ 'ಪಾಪಾ ಪಾಂಡು' ಧಾರಾವಾಹಿ ಹೊಸ ರೂಪದಲ್ಲಿ ಜನರಿಗೆ ಪರಿಚಯವಾಗಿದೆ. ಅದರಲ್ಲಿ ಹೊಸ ಪಾತ್ರಗಳನ್ನು ಸಹ ಸೇರಿಸಲಾಗಿದೆ. ಪಾಂಡು ಮೊದಲ ಮಗನಾಗಿ ಪುಂಡ, ಎರಡನೇ ಮಗನಾಗಿ ಶ್ರೀಹರಿ, ಪುಂಡನ ಹೆಂಡತಿಯಾಗಿ ಚಾರು, ಗೋಪಿಯ ಮಗಳಾಗಿ ನಿಮ್ಮಿ ಪಾತ್ರಗಳಿವೆ.
ಇವೆರಲ್ಲರೂ ಹೊಸಬರೇ. ಇಂತಹ ಹೊಸ ಪ್ರತಿಭೆಗಳಲ್ಲಿ ಹೆಚ್ಚು ಆಕರ್ಷಿತವಾಗುತ್ತಿರುವುದು ಶ್ರೀಹರಿಯ ಪಾತ್ರ. ಶ್ರೀಹರಿ ಅಲಿಯಾಸ್ ಸೌರಭ ಕುಲಕರ್ಣಿ. ವಯಸ್ಸು 21, ಬಿ.ಎ ಪದವೀಧರ. ತಮ್ಮ ಐದನೇ ವಯಸ್ಸಿನಲ್ಲಿಯೇ ಹರಿಕಥೆ ಕಾರ್ಯಕ್ರಮಗಳಿಂದ ವೇದಿಕೆ ಏರಿದ ಸೌರಭ್ ಇದುವರೆಗೂ ದೇಶ ವಿದೇಶಗಳಲ್ಲಿ 65ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮುಂದೆ ಓದಿರಿ...
ಸೌರಭ್ ಕುಲಕರ್ಣಿ ಫ್ಯಾಮಿಲಿ
ತಂದೆ ಸಂಜೀವ ಕುಲಕರ್ಣಿ ಮೂಲತಃ ನಿರೂಪಕರು, ತಾಯಿ ಭಾಗ್ಯ ಕುಲಕರ್ಣಿ ಸಹ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವವರು. ಇವರಿಬ್ಬರ ಗರಡಿಯಲ್ಲಿ ಬೆಳೆದ ಕೂಸು ಸೌರಭ ಕುಲಕರ್ಣಿ.
ವಿಡಿಯೋ : ಹೊಸ 'ಪಾಪಾ ಪಾಂಡು' ಧಾರಾವಾಹಿಯ ಪ್ರೋಮೋ ನೋಡಿ
ತಂದೆಯೇ ರೋಲ್ ಮಾಡೆಲ್
ತಮ್ಮ ತಂದೆ ಸಂಜೀವ್ ಕುಲಕರ್ಣಿಯವರನ್ನೇ ಅನುಕರಣೆ ಮಾಡುತ್ತ ಬೆಳೆದ ಸೌರಭ್ ಗೆ ಅವರೇ ರೋಲ್ ಮಾಡಲ್. ಅವರ ಅರಳು ಹುರಿದಂತೆ ಮಾತನಾಡುವ ಕನ್ನಡದ ಶೈಲಿಯನ್ನೇ ಕಲಿತ ಮಗನೂ ಕೂಡ ಅವರಂತಾಗಬೇಕು ಎಂದು ಶಪಥಗೈದ. ಅಲ್ಲದೇ ತಮ್ಮ ನಟನೆಗೆ ಮುಂದಡಿಯಿಡಲು ಶುರುಮಾಡಿದ.
ಅಪ್ಪನಂತೆ ಮಗ ಕೂಡ ಪಾಪ: ಅತ್ತೆ ಸೊಸೆ ಮಧ್ಯೆ ಪುಂಡು ಚೂರ್ ಚೆಂಡು.!
ರಂಗಭೂಮಿಯ ನಂಟು
ಸೌರಭ್ ಗೆ ಪ್ರಭಾತ್ ಕಲಾವಿದರಾದ ಹೇಮಾ, ಹರೀಶ್ ಪ್ರಭಾತ್ ರವರೇ ಮೊದಲ ರಂಗಭೂಮಿ ಗುರುಗಳು. ಗೋಪಿನಾಥ ದ್ಯಾಸ ವ್ಯಾಸ ಸಂಸ್ಥೆಯು ಸಹ ಸೌರಭ್ ಗೆ ಅವಕಾಶ ನೀಡಿದ್ದನ್ನು ಅವರು ಮರೆಯುವುದಿಲ್ಲ. ನಾಟಕಗಳಲ್ಲಿ ಮಾತ್ರವಲ್ಲ, ನೃತ್ಯ ರೂಪಕಗಳಲ್ಲಿಯೂ ಸೌರಭ್ ನಿಷ್ಣಾತರು. ಕರುನಾಡ ವೈಭವ, ಶ್ರೀರಾಮ ಪ್ರತೀಕ್ಷಾ, ಧರ್ಮ ಭೂಮಿ ಇತ್ಯಾದಿ ನೃತ್ಯರೂಪಕಗಳಲ್ಲಿ ತಮ್ಮ ಕಲಾ ನೈಪುಣ್ಯತೆಯನ್ನು ಪ್ರಚುರಪಡಿಸಿದ್ದನ್ನು ಸೌರಭ್ ನೆನಪಿಸಿಕೊಳ್ಳುತ್ತಾರೆ.
'ಪಾಪಾ ಪಾಂಡು' ಜೊತೆಗೆ 'ಸಿಲ್ಲಿ ಲಲ್ಲಿ' ಕೂಡ ಬರಲಿ: ಇದು ವೀಕ್ಷಕರ ಅಭಿಲಾಷೆ.!
ಬಾಲನಟನಾಗಿ ಸೌರಭ್
ಕುಮಾರನ್ಸ್ ಶಾಲೆಯಲ್ಲಿ 8ನೇ ತರಗತಿಗೆ ಓದುತ್ತಿದ್ದಾಗ ಈ ಹುಡುಗನ ನಟನೆಯನ್ನು ವೀಕ್ಷಿಸಿದ ನಿರ್ದೇಶಕ ಬ.ಲ.ಸುರೇಶ್ ರವರು ಕಿರುತೆರೆಯ ಪ್ರಖ್ಯಾತ ಧಾರಾವಾಹಿ ಶ್ರೀ ಗುರು ರಾಘವೇಂದ್ರ ವೈಭವದ ಬಾಲ ಗುರುರಾಯರ ಪಾತ್ರವನ್ನು ನೀಡಿ ಪ್ರೋತ್ಸಾಹಿಸಿದರು. ಸುಮಾರು 45ಕ್ಕೂ ಹೆಚ್ಚು ಎಪಿಸೋಡ್ ಗಳಲ್ಲಿ ಮಿಂಚಿ ತನ್ನ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಅನಾವರಣಗೊಳಿಸಿದರು.
ಬೆಳ್ಳಿತೆರೆಯಲ್ಲಿ ಬಾಲಕ ಸೌರಭ್
ಇದೇ ವೇಳೆಗೆ ಸೌರಭ್, ಆರ್.ಎನ್.ಜಯಗೋಪಾಲ್ ರ ಬಾಲ ರಾಮಾಯಣ ಧಾರಾವಾಹಿ ಮತ್ತು ಚೈತನ್ಯ, ಗುರುಕುಲ ಎಂಬ ಮಕ್ಕಳ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೇ ಗುರು ರಾಘವೇಂದ್ರ ವೈಭವದ ಪಾತ್ರ ಲೈಫ್ ಟರ್ನಿಂಗ್ ಪಾಯಿಂಟ್ ಎಂಬುದನ್ನು ಸೌರಭ್ ಇಂದಿಗೂ ಮರೆಯುವುದಿಲ್ಲ.
ಕಿರುಚಿತ್ರ ನಿರ್ದೇಶಿಸಿದ ಸೌರಭ್
ಇದಾದ ಬಳಿಕ ಮಾ.ಆನಂದ್ ರ ರೋಬೋ ಫ್ಯಾಮಿಲಿಯಲ್ಲಿ 4 - 5 ಸಂಚಿಕೆಗಳು, ಎಸ್.ನಾರಾಯಣ್ ನಿರ್ದೇಶನದ ಮನಸ್ಸು ಮಲ್ಲಿಗೆ ಚಿತ್ರದಲ್ಲಿ ಅಭಿನಯ. ನಂತರ ಸ್ನೇಹಿತರೊಂದಿಗೆ ಒಡಗೂಡಿ ನಮ್ಮನೆ ಪ್ರೊಡಕ್ಷನ್ ಎಂಬ ತಂಡ ಕಟ್ಟಿ 5 ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ ಹೀಗೆ ಮುಂದುವರೆಯುತ್ತಲೇ ಇದೆ ಸೌರಭ್ ಪಯಣ.
ನಟನೆ ಜೊತೆಗೆ ವಿದ್ಯೆ
ಮಂಡ್ಯ ರಮೇಶ್ ಹಾಗೂ ಬಿ ಜಯಶ್ರೀ, ಅಭಿಮನ್ಯು ಭೂಪತಿಯವರ ಗರಡಿಯಲ್ಲಿ ಕಾಲೇಜಿನಲ್ಲಿರುವಾಗಲೇ ಓದುತ್ತಾ ರಂಗತಂಡದ ಗರಡಿಯಲ್ಲಿ ಬೆಳೆದರು. ತಮ್ಮ ಕಾಲೇಜಿನ ಅವಧಿಯಲ್ಲಿ ಧಾರವಾಹಿ, ಚಿತ್ರಗಳಲ್ಲಿ ಪಾತ್ರ ಮಾಡಲು ಅವಕಾಶ ಸಿಕ್ಕರೂ ಓದಿನ ಕಡೆ ಮತ್ತು ರಂಗಭೂಮಿಯ ಕಲಿಕೆಯ ಕಡೆ ಗಮನ ಹರಿಸಿದ್ದು ಸೌರಭ್ ವಿಶೇಷತೆ.
ಬಿಎ ಪದವೀಧರ
''ರಂಗಭೂಮಿಯೊಂದಿಗೆ ವಿದ್ಯೆಯೆಂಬುದು ಕೂಡ ಒಂದು ನಾಣ್ಯದ ಎರಡು ಮುಖ. ನಾನು ಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವವನು. ಹಾಗಾಗಿ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನಲ್ಲಿಯೇ ಬಿಎ ಪದವಿ ಮುಗಿಸಿದೆ. ಇದೇ ವೇಳೆ ಹಲವು ನಾಟಕ, ಹರಿಕಥೆಗಳ ಕಾರ್ಯಕ್ರಮ ನೀಡಲು ದೇಶ - ವಿದೇಶ ಸುತ್ತಿದ್ದನ್ನು ಮರೆಯುವುದಿಲ್ಲ'' ಎಂದು ನಗುತ್ತಲೇ ಉತ್ತರಿಸುತ್ತಾರೆ ಸೌರಭ್.
ಮಧ್ಯಮ ವರ್ಗದ ಕುಟುಂಬ
''ಅಪ್ಪನ ಹಾಗೆಯೇ ನಿರೂಪಣೆಯಲ್ಲಿ ಪರಿಣಿತಿ ಹೊಂದಬೇಕು. ಅಮ್ಮನ ಹಾಗೇ ತಾಳ್ಮೆ ಕಲಿಯಬೇಕು. ನನಗೆ ಸಿಕ್ಕ ಸ್ನೇಹಿತರು ಸಹ ರಂಗಭೂಮಿಯ ಆಸಕ್ತಿ ಹೊಂದಿರುವವರು. ನಮ್ಮ ಪೋಷಕರು ಬೈಯುವುದು, ರೇಗುವುದನ್ನು ಮಾಡಿಲ್ಲ. ನಮ್ಮದು ಮಧ್ಯಮ ವರ್ಗದ ಕುಟುಂಬ. ಕಷ್ಟಪಟ್ಟು ಬದುಕುವ ದಾರಿಯನ್ನು ಅವರು ಹೇಳಿಕೊಟ್ಟಿದ್ದಾರೆ. ಅಲ್ಲದೇ ತಂದೆಯವರಿಗೆ ಒಳ್ಳೆ ಹೆಸರಿದ್ದರೂ, ಇದುವರೆಗೂ ನನ್ನ ಹೆಸರನ್ನು ಬಳಸಿಕೊಳ್ಳಬೇಡ. ನಿನ್ನ ಪ್ರತಿಭೆಯಿಂದ ಬೆಳೆಯಬೇಕು ಎಂಬ ಪಾಠ ಹೇಳಿಕೊಟ್ಟಿರುವುದೇ ನನಗೆ ಹೆಚ್ಚು ಸ್ಫೂರ್ತಿ ತಂದಿರುವುದು'' ಅಂತಾರೆ ಸೌರಭ್.
ಕನಸು ನನಸಾದ ಕ್ಷಣ
''ನನ್ನ ಕಾಲೇಜು ಮುಗಿಯುತ್ತಿದ್ದ ಹಾಗೆಯೇ ಒಂದು ದಿನ ನನಗೆ ವಾಟ್ಸ್ ಆಪ್ ಮೆಸೇಜ್ ಬಂದಿತ್ತು. ಸಿಹಿಕಹಿ ಪ್ರೊಡಕ್ಷನ್ ನಿಂದ ಬರುತ್ತಿರುವ ಹೊಸ ಧಾರಾವಾಹಿಗೆ ಆಡಿಷನ್ ನಡೆಸಲಾಗುತ್ತಿದೆ ಎಂದು. ಅದನ್ನು ಅರಸಿ ನಾನು ಕೂಡ ಆಡಿಷನ್ ಗೆ ಹೋದೆ. ಆಡಿಷನ್ ಕೊಟ್ಟೆ, ಆದರೆ ಸೆಲೆಕ್ಟ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಅಲ್ಲಿಯ ತನಕ ಅದು ಪಾಪಾ ಪಾಂಡು ಸೀರಿಯಲ್ ಎಂಬ ಕನಸು ಕೂಡ ಇರಲಿಲ್ಲ. ನನ್ನಂತಹ ಹೊಸ ಪ್ರತಿಭೆಯ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟ ಸಿಹಿ ಕಹಿ ಚಂದ್ರುರವರಿಗೆ ನಾನು ಆಭಾರಿ. ನನ್ನೊಂದಿಗೆ ಪ್ರತಿಭಾನ್ವಿತ ನಟರಾದ ಚಿದಾನಂದ್ ಸರ್, ಶಾಲಿನಿ ಮೇಡಂ ಅಭಿನಯಿಸುತ್ತಿದ್ದಾರೆ. ಅವರು ನಮ್ಮೊಂದಿಗೆ ಮಕ್ಕಳ ಹಾಗೆಯೇ ಆಟವಾಡುತ್ತಾರೆ. ನಗುತ್ತಾರೆ ಅದೇ ನಮಗೆ ಸಂತೋಷ. ನನ್ನೊಂದಿಗೆ ಸೆಟ್ ನಲಿ ಮಿಕ್ಕವರು ಸಹ ನಗುತ್ತಲೇ ಇರುತ್ತಾರೆ. ಹಾಗಾಗಿ ನಾನು ಅಂತಹ ದೊಡ್ಡ ಬ್ಯಾನರ್ ನಲ್ಲಿ ಕೆಲಸ ಮಾಡುವ ಹೆಮ್ಮೆ ಎಂದೆನಿಸುತ್ತದೆ. ನಾನು ಚಿಕ್ಕ ವಯಸ್ಸಿನಲ್ಲಿ ನೋಡುತ್ತಾ ಬೆಳೆದ ಸೀರಿಯಲ್ನಲ್ಲಿ ಮುಂದೊಂದು ದಿನ ನಾನು ನಟಿಸುತ್ತೇನೆ ಅಂತ ಅಂದುಕೊಂಡಿರಲಿಲ್ಲ'' ಎನ್ನುತ್ತಾರೆ ಸೌರಭ್.
ಇಷ್ಟದ ತಿನಿಸು ಯಾವುದು.?
''ಮಸಾಲೆ ದೋಸೆ ನನ್ನ ಫೇವರೆಟ್ ಫುಡ್. ನಾನೊಬ್ಬ ತಿಂಡಿ ಪೋತ. ಫಿಟ್ನೆಸ್ ಅಂತೇನೂ ಮಾಡುತ್ತಿಲ್ಲ. ಹೆಚ್ಚಾಗಿ ಯಾವುದನ್ನೂ ತಲೆಗೆ ಹಚ್ಚಿಕೊಳ್ಳುವುದಿಲ್ಲ. ಬಂದದ್ದನ್ನು ಕ್ರೇಜಿಯಾಗಿ ಎದುರಿಸುತ್ತೇನೆ. ತಂದೆ - ತಾಯಿ ನನ್ನ ಮೊದಲ ಗುರುಗಳು. ಮುಂದೊಂದು ದಿನ ನಾನು ಕೂಡ ದೊಡ್ಡ ನಿರೂಪಕನಾಗಿ, ಅದರಲ್ಲಿಯೂ ಕನ್ನಡ ಉಚ್ಚಾರಣೆ ಸ್ಪಷ್ಟವಾಗಿ ಮಾತನಾಡುವವನಾಗಿ ರೂಪುಗೊಳ್ಳಬೇಕೆಂಬ ಹಂಬಲವಿದೆ'' ಎಂಬ ಅಭಿಲಾಷೆ ಸೌರಭ್ ರದ್ದು. ಇವರ ಕನಸಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.