Exclusive: ಆರ್ಯವರ್ಧನ್ ಪಾತ್ರಕ್ಕೆ ನನ್ನನ್ನು ಕೇಳಿದ್ದು ನಿಜ: ಅನೂಪ್ ಭಂಡಾರಿ
'ಜೊತೆ ಜೊತೆಯಲಿ' ಧಾರಾವಾಹಿಯಿಂದ ನಟ ಅನಿರುದ್ಧ್ ಹೊರಬಂದಿದ್ದು ಹಳೇ ಸುದ್ದಿ. ಆರ್ಯವರ್ಧನ್ ಪಾತ್ರವನ್ನು ಮುಂದೆ ಯಾರು ಮಾಡ್ತಾರೆ ಅನ್ನುವ ಬಿಸಿಬಿಸಿ ಚರ್ಚೆ ಈಗ ಶುರುವಾಗಿದೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಲು ಆರೂರು ಜಗದೀಶ್ ಅಂಡ್ ಟೀಂ ಕಸರತ್ತು ಶುರು ಮಾಡಿದೆ. ಈಗಾಗಲೇ ಆರ್ಯವರ್ಧನ್ ಪಾತ್ರಕ್ಕೆ ಸಾಕಷ್ಟು ಹೆಸರುಗಳು ಕೇಳಿ ಬರ್ತಿದೆ. ಅದರಲ್ಲಿ ಅಚ್ಚರಿ ಅನ್ನಿಸಿದ್ದು ಮಾತ್ರ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಹೆಸರು.
ಅನೂಪ್ ಭಂಡಾರಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಆಗಿ ನಟಿಸ್ತಾರೆ ಅನ್ನುವ ಗುಸುಗುಸು ಇಂದು ಬೆಳಗ್ಗೆಯಿಂದ ಶುರುವಾಗಿದೆ. ಈ ವಿಚಾರ ಕೇಳಿ ಸಾಕಷ್ಟು ಜನರಿಗೆ ಅಚ್ಚರಿಯಾಗಿತ್ತು. ಜೊತೆಗೆ ಯಾಕೆ ಆಗಬಾರದು ಅನ್ನುವ ಲೆಕ್ಕಾಚಾರವೂ ನಡೀತಿತ್ತು. ಅನೂಪ್ ಭಂಡಾರಿ ಅದ್ಭುತ ಫಿಲ್ಮ್ ಮೇಕರ್. 'ರಂಗಿ ತರಂಗ' ಹಾಗೂ 'ವಿಕ್ರಾಂತ್ ರೋಣ' ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಒಳ್ಳೆ ನಿರ್ದೇಶಕ ಒಳ್ಳೆ ನಟನೂ ಆಗಿರುತ್ತಾನೆ. ಹಾಗಾಗಿ ಅನೂಪ್ ಭಂಡಾರಿ ಆರ್ಯವರ್ಧನ್ ಆಗಿ ನಟಿಸಿದರೂ ನಟಿಸಬಹುದು ಎನ್ನುವ ಚರ್ಚೆ ನಡೀತಿತ್ತು.
ಶ್ರೀಮಂತ ಉದ್ಯಮಿ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಬಿಟ್ಟರೆ ಜೆಕೆ, ಹರೀಶ್ ರಾಜ್, ದಿಲೀಪ್ ರಾಜ್ ಹೆಸರುಗಳು ಕೇಳಿ ಬಂದಿತ್ತು. ಇವರಲ್ಲೇ ಯಾರಾದರೂ ಒಬ್ಬರೂ ಆರ್ಯವರ್ಧನ್ ಆಗಿ ನಟಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ನಾಯಕನಿಲ್ಲದೇ ಬಹಳ ದಿನ ಕಥೆಯನ್ನು ಎಳೆಯಲು ಸಾಧ್ಯವಿಲ್ಲ. ಬಹಳ ದಿನ ಕಾಯುತ್ತಾ ಕೂರುವುದಕ್ಕೆ ಇದು ಸಿನಿಮಾ ಅಲ್ಲ. ಹಾಗಾಗಿ ತ್ವರಿತವಾಗಿ ಹೊಸ ಆರ್ಯವರ್ಧನ್ನ ಹುಡುಕುವ ಪ್ರಯತ್ನ ನಡೀತಿದೆ. ಇನ್ನು ಅನೂಪ್ ಭಂಡಾರಿ ಅವರನ್ನು 'ಜೊತೆ ಜೊತೆಯಲಿ' ತಂಡ ಅಪ್ರೋಚ್ ಮಾಡಿರುವುದು ನಿಜ. ಈ ಬಗ್ಗೆ ಸ್ವತ: ಅನೂಪ್ ಭಂಡಾರಿ ಎಕ್ಸ್ಕ್ಲೂಸಿವ್ ಆಗಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

'ಜೊತೆ ಜೊತೆಯಲಿ' ಟೀಂ ಕರೆ ಮಾಡಿತ್ತು
ಅನಿರುದ್ಧ್ ಅವರನ್ನು 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಕೈಬಿಟ್ಟಿರುವುದು ಗೊತ್ತೇಯಿದೆ. ಇನ್ನು ಆ ಪಾತ್ರಕ್ಕೆ ಅನೂಪ್ ಭಂಡಾರಿ ಅವರನ್ನು ತಂಡ ಅಪ್ರೋಚ್ ಮಾಡಿತ್ತಂತೆ. ಈ ಬಗ್ಗೆ ಅನೂಪ್ ಭಂಡಾರಿ "ಹೌದು ಅಪ್ರೋಚ್ ಮಾಡಿದ್ದರು. ಆದರೆ ನನಗೆ ಬೇರೆ ಕಮಿಟ್ಮೆಂಟ್ಗಳು ಇರುವುದರಿಂದ ನನ್ನ ಕೈಯಲ್ಲಿ ಪಾತ್ರ ಮಾಡಲು ಆಗುವುದಿಲ್ಲ ಎಂದು ಹೇಳಿದ್ದೇನೆ. ನಟಿಸುವುದಕ್ಕೆ ಒಂದಷ್ಟು ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿದೆ. ಆದರೆ ಸದ್ಯಕ್ಕೆ ಯಾವುದನ್ನು ಒಪ್ಪಿಕೊಳ್ಳುತ್ತಿಲ್ಲ. ಬಹಳ ವಿಭಿನ್ನ ಪಾತ್ರ ಸಿಕ್ಕರೆ ನೋಡೋಣ ಅಂದುಕೊಂಡಿದ್ದೇನೆ. ಆದರೆ 'ಜೊತೆ ಜೊತೆಯಲಿ' ಧಾರಾವಾಹಿ ಅವಕಾಶವನ್ನು ನಾನು ಯೋಚನೆ ಕೂಡ ಮಾಡಿರಲಿಲ್ಲ" ಎಂದಿದ್ದಾರೆ.

ನನ್ನ ಮೊದಲ ಆದ್ಯತೆ ನಿರ್ದೇಶನ
"ನನಗೂ ಈ ರೀತಿ ಸುದ್ದಿ ಹರಿದಾಡುತ್ತಿರುವುದು ಗೊತ್ತಾಯಿತು. ಧಾರಾವಾಹಿ ತಂಡದವರು ಕರೆ ಮಾಡಿ ನಟಿಸುವ ಬಗ್ಗೆ ಕೇಳಿದರು. ನಾನು ಈಗ ಕಮಿಟ್ಮೆಂಟ್ ಕೊಡುವುದಕ್ಕೆ ಆಗುವುದಿಲ್ಲ. ಧಾರಾವಾಹಿ ಅಂದರೆ ತಿಂಗಳಾನುಗಟ್ಟಲೆ ಹೊರಟು ಹೋಗುತ್ತದೆ. ಹಾಗಾಗಿ ಆಗುವುದಿಲ್ಲ ಎಂದು ಹೇಳಿದ್ದೇನೆ. ನನ್ನ ಮೊದಲ ಆದ್ಯತೆ ಯಾವಾಗಲೂ ನಿರ್ದೇಶನ. ಅದು ಬಿಟ್ಟು ಯಾವುದಾದರೂ ಒಳ್ಳೆ ಪಾತ್ರ ಸಿಕ್ಕರೆ ನಿರ್ದೇಶನದ ಜೊತೆಗೆ ಮಾಡಲು ಸಾಧ್ಯ ಎಂದಾದರೆ ಮಾಡುತ್ತೇನೆ. ನಿರ್ದೇಶನಕ್ಕೆ ತೊಂದರೆ ಆಗುವುದಾದರೆ ನಟನೆ ಮಾಡುವುದಿಲ್ಲ".

ನಾನು ಹೆಚ್ಚು ಕೇಳಲು ಹೋಗಲಿಲ್ಲ
"ನನ್ನನ್ನು ಯಾಕೆ ಅಪ್ರೋಚ್ ಮಾಡಿದರು ಎನ್ನುವುದು ಗೊತ್ತಿಲ್ಲ. ನಾನು ಕೂಡ ಕೇಳಲು ಹೋಗಲಿಲ್ಲ. ಯಾಕೆಂದರೆ ನಾನು ನಟಿಸುವ ಸಾಧ್ಯತೆ ಇದ್ದಿದ್ದರೆ ಕೇಳಬಹುದಿತ್ತು. ಯಾಕೆ, ಏನು ಎಂದು. ನಾನು ಮಾಡದೇ ಇರುವುದರಿಂದ ನಾನೇನು ಜಾಸ್ತಿ ಪ್ರಶ್ನೆಗಳನ್ನು ಕೇಳಲಿಲ್ಲ."

ನಟಿಸೋಕೆ ಕೇಳಿದಾಗ ನನಗೆ ಕನ್ಫ್ಯೂಸ್ ಆಯ್ತು
ಅಂದ ಹಾಗೆ ಅನೂಪ್ ಭಂಡಾರಿ ತಂದೆ ಸುಧಾಕರ್ ಭಂಡಾರಿ ದಶಕಗಳ ಹಿಂದೆ ಕಿರುತೆರೆ ಧಾರಾವಾಹಿ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದರು. ಕಿಚ್ಚ ಸುದೀಪ್ ಅವರನ್ನು 'ಪ್ರೇಮದ ಕಾದಂಬರಿ' ಮೂಲಕ ಸುಧಾಕರ್ ಭಂಡಾರಿ ಪರಿಚಯ ಮಾಡಿಸಿದ್ದರು. ಸದ್ಯ ಸಿನಿಮಾಗಳಲ್ಲಿ ಅನೂಪ್ ಭಂಡಾರಿ ಬ್ಯುಸಿಯಾಗಿದ್ದಾರೆ. "ನಾನು ಯಾವುದೇ ಧಾರಾವಾಹಿ ನೋಡುವುದಿಲ್ಲ. ನನಗೆ ಅಷ್ಟು ಸಮಯ ಸಿಗುವುದಿಲ್ಲ. ನನಗೆ ಸದ್ಯ ರಿಲೀಸ್ ಆಗುತ್ತಿರುವ ಸಿನಿಮಾಗಳನ್ನು ನೋಡಲು ಸಮಯ ಸಿಗುತ್ತಿಲ್ಲ. ಅನಿರುದ್ಧ್ ಅವರು ಈ ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿರೋದು ಗೊತ್ತು ಅಷ್ಟೇ. ಆದರೆ ಅವರು ಧಾರಾವಾಹಿಯಿಂದ ಹೊರಗೆ ಬಂದ ವಿಚಾರ ಗೊತ್ತಿರಲಿಲ್ಲ. ನನ್ನನ್ನು ನಟಿಸಲು ತಂಡದವರು ಕೇಳಿದಾಗಲೂ ಕನ್ಫ್ಯೂಸ್ ಆಗಿತ್ತು" ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications











