ನೀತೂ ಮರುಪ್ರವೇಶ; ಶುರುವಾಯ್ತು ಹಳವಂಡ
ಬಿಗ್ ಬಾಸ್ ಮನೆಯಲ್ಲಿ ಹೊಸ ಹಳವಂಡಗಳು ಶುರುವಾಗಿವೆ. ವರಮಹಾಲಕ್ಷ್ಮಿ ಹಬ್ಬದ ದಿನ ಬಿಗ್ ಬಾಸ್ ಮನೆಯಲ್ಲಿ ವಾಚಾಳಿ ಎನ್ನಿಸಿಕೊಂಡಿದ್ದ ನೀತೂ ಅವರನ್ನು ರಹಸ್ಯ ಕೋಣೆಯಿಂದ ಬಿಡುಗಡೆಗೊಳಿಸಿದ್ದಾರೆ. ಅವರು ಮನೆಗೆ ಪುನರ್ ಪ್ರವೇಶ ಪಡೆದಿದ್ದು ಮನೆಯಲ್ಲಿ ಬಿಗುವಿನ ವಾತಾವರಣ ನೆಲೆಗೊಂಡಿದೆ.
ಬೆಳಗ್ಗೆಯೇ ನೀತೂ ಅವರನ್ನು ಬಲ್ಬ್ ಹೊತ್ತಿಸಿ ಎಬ್ಬಿಸಿದ ಬಿಗ್ ಬಾಸ್, ಬಳಿಕ ರೆಡಿಯಾಗಿ ನೀವು ಬಿಗ್ ಬಾಸ್ ಮನೆಗೆ ಹೋಗುವ ಸಮಯ ಹತ್ತಿರವಾಗಿದೆ ಎಂದರು. ಅದರಂತೆ ನೀತೂ ಅವರೂ ತಾಜಾ ಗುಲಾಬಿಯಂತೆ ಸಿಂಗಾರಗೊಂಡರು.
ಅವರು ಮತ್ತೆ ಬಿಗ್ ಬಾಸ್ ಮನೆಗೆ ಅಡಿಯಿಡುತ್ತಿದ್ದಂತೆ ಎಲ್ಲರೂ ಅಪ್ಪಿ ಮುದ್ದಾಡಿದರು. ಸ್ಪೆಷಲ್ ಆಗಿ ಆದಿ ಅಪ್ಪಿಕೊಂಡು ಐ ಮಿಸ್ ಯೂ ಡಾರ್ಲಿಂಗ್ ಎಂದರು. ಇನ್ನೂ ಕೆಲವರು ಅಯ್ಯೋ ನೀತೂ ಮೂರು ಕೆಜಿ ತೂಕ ಜಾಸ್ತಿ ಆಗಿದ್ದಾರೆ ಎಂದು ತಮಾಷೆ ಮಾಡಿದರು. ಬನ್ನಿ ನೊಡೋಣ ನಲವತ್ತನೇ ದಿನ ಮನೆಯಲ್ಲಿ ಏನೆಲ್ಲಾ ನಡೆಯಿತು.

ಆದಿ ಲೋಕೇಶ್ ಗೆ ಏನಾಯ್ತು ಮಾರಾಯ್ರೆ
ಅದ್ಯಾಕೋ ಏನೋ ನೀತೂ ಮನೆಗೆ ಮರುಪ್ರವೇಶ ಪಡೆದಿದ್ದರೂ ಆದಿ ಲೋಕೇಶ್ ಮುನಿಸಿಕೊಂಡೇ ಓಡಾಡುತ್ತಿದ್ದರು. ಅವರ ಮರುಪ್ರವೇಶ ಅವರಿಗೆ ಇಷ್ಟವಿಲ್ಲವೋ ಅಥವಾ ಇನ್ನೇನು ಕಥೆಯೋ ಸದ್ಯಕ್ಕೆ ತಿಳಿಯವಲ್ಲದು ಮಾರಾಯ್ರೆ.

ಬಾಡಿದ ಬೆಂಡೆಕಾಯಿಯಂತಾದ ಆದಿ
ನೀತೂಗೆ ಆದಿ ಮುಖ ಕೊಟ್ಟು ಮಾತನಾಡಲೂ ಹಿಂಜರಿಯುತ್ತಿದ್ದಾರೆ. ಅವರು ಯಾಕೋ ಕರೆಂಟ್ ಶಾಕ್ ಗೆ ಗುರಿಯಾದಂತೆ ಕಾಣುತ್ತಿದ್ದಾರೆ. ಇದರ ಹಿಂದೆ ಇನ್ನೇನಾದರೂ ಷಡ್ಯಂತ್ರ ಇದೆಯಾ ಕಾದುನೋಡಬೇಕು. ಸದ್ಯಕ್ಕೆ ಆದಿ ಬಾಡಿದ ಬೆಂಡೆಕಾಯಿಯಂತಾಗಿದ್ದಾರೆ.

ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ
ಮನೆಯಲ್ಲಿ ಎಲ್ಲರೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸುವ ಅವಕಾಶವನ್ನು ಬಿಗ್ ಬಾಸ್ ಕೊಟ್ಟರು. ಕಳಶವನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿ ಅಲಂಕರಿಸಿ ಸಡಗರದಿಂದ ಆಚರಿಸಿಕೊಂಡು ಸಂಭ್ರಮಿಸಿದರು.

ತನ್ನನ್ನು ವಾಚಾಳಿ ಎಂದ ಬಗ್ಗೆ ನೀತೂ ಬೇಸರ
ತನ್ನನ್ನು ವಾಚಾಳಿ ಎಂದು ಮನೆಯ ಒಬ್ಬರು ಸದಸ್ಯರು ಹೇಳಿದ್ದಕ್ಕೆ ತುಂಬಾ ಬೇಸರ ವ್ಯಕ್ತಪಡಿಸಿದರು ನೀತೂ. ಅದು ಯಾರು ಎಂಬುದು ನಿಮಗೂ ಗೊತ್ತು. ಆದರೆ ಹುಡುಗ ಅಲ್ಲ. ಹುಡುಗಿ ಎಂದು ತಮ್ಮ ಅನಿಸಿಕೆಗಳನ್ನು ದೀಪಿಕಾ ಬಳಿ ನೀತೂ ಹೇಳಿಕೊಂಡರು.

ನನಗೆ ಇಲ್ಲಿ ಪಾಠ ಹೇಳಿಕೊಡುವ ಅಗತ್ಯವಿಲ್ಲ
ನನ್ನ ಕೆಲಸವನ್ನು ಪ್ರೀತಿಯಿಂದ, ಪ್ರೇಮದಿಂದ ಮಾಡ್ತೀನಿ, ಯಾರೂ ನನಗೆ ಇಲ್ಲಿ ಪಾಠ ಹೇಳಿಕೊಡುವ ಅಗತ್ಯವಿಲ್ಲ ಎಂದು ಆದಿ ಲೋಕೇಶ್ ಮೇಲೆ ಇದ್ದಕ್ಕಿದ್ದಂತೆ ಟ್ರಿಗರ್ ಆದರು ಗುರುಪ್ರಸಾದ್. ಬಹುಶಃ ಅವರಿಗೂ ಮನೆಯ ಟ್ರಿಕ್ ಈಗೀಗ ಗೊತ್ತಾದಂತಿದೆ.

ಗುರುಪ್ರಸಾದ್ ಅವರಿಗೆ ಮೂರು ಹಸಿವುಗಳಂತೆ
ಹೊಟ್ಟೆ, ಜ್ಞಾನ ಮತ್ತು ಎಂಟರ್ ಟೇನ್ ಮೆಂಟ್ ಈ ಮೂರು ಹಸಿವುಗಳು ನನಗಿವೆ. ಹೊಟ್ಟೆ ಹಸಿವನ್ನು ಹೇಗೋ ತಡೆದುಕೊಂಡಿದ್ದೇನೆ. ಉಳಿದೆರಡನ್ನು ನಾನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದರು ಗುರುಪ್ರಸಾದ್.

ನೀತೂ ಬೇಸರಕ್ಕೆ ಅನುಪಮಾ ಅನುಮಾನ
ನೀತೂ ಬೇಸರ ಮಾಡಿಕೊಂಡಿರುವುದು ತನ್ನ ಮೇಲೆಯೇ ಎಂದು ಅನುಪಮಾ ಹೇಳಿಕೊಂಡರು. ಅವರು ಶ್ವೇತಾ ಚೆಂಗಪ್ಪ ಜೊತೆ ಮಾತನಾಡುತ್ತಾ ತಮ್ಮ ಅನುಮಾನ ವ್ಯಕ್ತಪಡಿಸಿದರು. ನೀತೂ ಅಪ್ಪುಗೆಯಲ್ಲೂ ಏನೋ ಒಂಥರಾ ಭಾವ ಇತ್ತು. ನಾವೇನು ಮನೆಗೆ ಬಂದವರೆನ್ನೆಲ್ಲಾ ಅಪ್ಪಿಕೊಳ್ತೀನಿ ಎಂದು ಸಹಿ ಮಾಡಿಕೊಟ್ಟಿಲ್ಲ ಎಂದರು.

ಕ್ಯಾಮೆರಾ ಇಲ್ಲದಿದ್ದರೆ ನಾನು ಒಳ್ಳೆಯ ಕಲಾವಿದ
ಕ್ಯಾಮೆರಾ ಇಲ್ಲದಿದ್ದರೆ ನಾನು ಒಳ್ಳೆಯ ಕಲಾವಿದ. ಕ್ಯಾಮೆರಾ ಇದ್ದರೆ ಇನ್ನೂ ದೊಡ್ಡ ಕಲಾವಿದ ಎಂದು ಡೈಲಾಗ್ ಹೊಡೆದರು ಗುರುಪ್ರಸಾದ್. ಮನೆಯಲ್ಲಿ ಒಬ್ಬರು ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದಾರೆ ಎಂದು ತಮ್ಮ ನೋವನ್ನು ಎಲ್ಲರೊಂದಿಗೂ ಹಂಚಿಕೊಂಡು ಓಡಾಡಿದರು ನೀತೂ.

ಹರ್ಷಿಕಾ ಕಣ್ಣು ಮತ್ತೆ ಮಂಜಾಯಿತು
ಗುರು ಸಾರ್ ಅವರನ್ನು ನಾನು ಅಂಕಲ್ ಎಂದು ಕರೆಯಲು ಸಾಧ್ಯವಿಲ್ಲ. ಇಲ್ಲಿರುವ ಸದಸ್ಯರನ್ನು ನಾನು ಅಣ್ಣ, ಅಕ್ಕ ಎಂದು ಕರೆಯಲು ಆಗಲ್ಲ. ಎಲ್ಲರನ್ನೂ ಗೆಳೆಯರಂತೆ ಕಾಣುತ್ತಿದ್ದೇನೆ. ಅದು ನನ್ನ ತಪ್ಪಾ ಎಂದು ಹರ್ಷಿಕಾ ಒಂದೆರಡು ಹನಿ ಕಣ್ಣೀರು ಸುರಿಸುತ್ತಲೇ ರೋಹಿತ್ ಜೊತೆಗೆ ತಮ್ಮ ನೋವು ತೋಡಿಕೊಂಡರು.

ಇಲ್ಲಿ ಗುಲಾಮನಾಗಿ ಇರಲು ನನಗಿಷ್ಟವಿಲ್ಲ
ನಾನು ಮನೆಯಲ್ಲಿ ಗುಲಾಮನಾಗಿ ಇರಲು ಇಷ್ಟವಿಲ್ಲ. ನಾನು ರಾಜನಾಗಿಯೇ ಮನೆಯಿಂದ ಹೊರಹೋಗುತ್ತೇನೆ ಎಂದರು ಆದಿ ಗುಡಿಗಿದರು. ಎಲ್ಲಾ ಕೆಲಸಗಳನ್ನೂ ತಾನೇ ಮಾಡಿದ್ದೇನೆ. ಆದರೂ ತನ್ನ ಮಾತಿಗೆ ಇಲ್ಲಿ ಬೆಲೆ ಇಲ್ಲ ಎಂದು ಅವರು ಬೇಸರಿಕೊಂಡರು.

ಅಸಹನೆಯ ಕಟ್ಟೆಹೊಡೆದ ಹರ್ಷಿಕಾ ಕಣ್ಣೀರು
ಇನ್ನೊಂದು ಕಡೆ ಹರ್ಷಿಕಾ ಅವರು ನಾನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಅಡಿಯಿಟ್ಟ ಮೇಲೆ ಎಲ್ಲರೂ ಬದಲಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಖಂಡಿತ ತಾನು ಆ ರೀತಿ ಆಗಿಲ್ಲ. ಎಲ್ಲರನ್ನು ಸ್ನೇಹದ ಭಾವದಿಂದ ನೋಡುತ್ತಿದ್ದೇನೆ. ಸಲುಗೆಯಿಂದ ಮಾತನಾಡುತ್ತಿದ್ದೇನೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ತಮ್ಮ ಅಸಹನೆ ಜೊತೆಗೆ ಧಾರಾಳವಾಗಿ ಕಣ್ಣೀರನ್ನೂ ಸುರಿಸಿದರು.


Click it and Unblock the Notifications











