ಸಿದ್ದರಾಮಯ್ಯ ಅವರ ಬಾಲ್ಯದ ನೆನಪುಗಳನ್ನ ಬಿಚ್ಚಿಟ್ಟ ವೀಕೆಂಡ್ ಟೆಂಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಸ್ವಭಾವದವರು. ಮಾತಿನಲ್ಲೇ ಚತುರತೆಯನ್ನ ತೋರುವ ವ್ಯಕ್ತಿತ್ವ. ಆದ್ರೆ, ಸಿದ್ದರಾಮಯ್ಯ ಅವರು ಚಿಕ್ಕವಯಸ್ಸಿನಲ್ಲಿ ಹೇಗಿದ್ದರು ಎಂಬುದು ರಾಜ್ಯದ ಜನತೆಗೆ ಗೊತ್ತಿಲ್ಲ.
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬಾಲ್ಯದ ಹಲವು ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಅಂದ್ಹಾಗೆ, ಸಿದ್ದರಾಮಯ್ಯ ಅವರು ಒಂದನೇ ಕ್ಲಾಸ್, ಎರಡನೇ ಕ್ಲಾಸ್ ಓದಲೇ ಇಲ್ವಂತೆ. ನೇರವಾಗಿ 5ನೇ ಕ್ಲಾಸ್ ಗೆ ದಾಖಲಾಗಿದ್ದರಂತೆ. ಎಲ್.ಎಲ್.ಬಿ ಓದುವಾಗ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು ಎಂದು ನಂಬಿ ಮೋಸ ಹೋಗಿದ್ದರಂತೆ. ಇಂದಿರಾಗಾಂಧಿ ಅವರು ಕರ್ನಾಟಕ್ಕೆ ಬಂದಾಗ, ಅವರ ಎದುರು ಹೋರಾಟ ಮಾಡಲು ಮುಂದಾಗಿದ್ದರಂತೆ. ಈ ಎಲ್ಲಾ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಎಂದು ಮುಂದೆ ಓದಿ.....

ನೇರವಾಗಿ 5ನೇ ಕ್ಲಾಸ್ ಗೆ ದಾಖಲು
ಸಿದ್ದರಾಮಯ್ಯ ಅವರು ಬಾಲ್ಯದಲ್ಲಿ ಶಾಲೆಗೆ ಹೋಗಿಲ್ಲ. ಸಿದ್ದರಾಮಯ್ಯ ಅವರ ತಂದೆ, ಇವರನ್ನ ವೀರ ಮಕ್ಕಳು ಕುಣಿತ ಕಲಿಯಲು ಸೇರಿಸಿದ್ದರು. ಕುಣಿತ ಕಲಿಸುವ ನಂಜೇಗೌಡರು ಎಂಬ ಮೇಷ್ಟ್ರು, ಮಣ್ಣ ಮೇಲೆ ಅಕ್ಷರ ಅಭ್ಯಾಸ ಕಲಿಸಿದ್ದರು. 2 ವರ್ಷದ ನಂತರ ನಂಜೇಗೌಡರು ಕುಣಿತ ಕಲಿಸುವುದು ನಿಲ್ಲಿಸಿದರು. ಆಮೇಲೆ ಒಂದೆರೆಡು ವರ್ಷ ಹುಡುಗರ ಜೊತೆಯಲ್ಲಿ ಹೆಮ್ಮೆ ಮೇಯಿಸುವುದಕ್ಕೆ ಹೋಗಿದ್ದರು. ನಂತರ ರಾಜಪ್ಪ ಎಂಬ ಹೆಡ್ ಮಾಸ್ಟರ್ ಮೇಷ್ಟ್ರು ಸಿದ್ದರಾಮಯ್ಯ ಅವರನ್ನ ಶಾಲೆಗೆ ಸೇರಿಸಿದ್ದರಂತೆ. ಸಿದ್ದರಾಮಯ್ಯ ಅವರ ಅಕ್ಷರ ಜ್ಞಾನವನ್ನ ಗಮನಿಸಿದ ಮೇಷ್ಟ್ರು, ನೇರವಾಗಿ ಐದನೇ ಕ್ಲಾಸ್ ಗೆ ದಾಖಲಿಸಿದರಂತೆ.

ಹುಟ್ಟಿದ ದಿನಾಂಕ ಸರಿಯಾಗಿಲ್ಲ
ಆಗಸ್ಟ್ 12 ರಂದು ಸಿದ್ದರಾಮಯ್ಯ ಅವರ ಹುಟ್ಟಿದ ದಿನ. ಆದ್ರೆ, ಅದು ಸರಿಯಾದ ದಿನಾಂಕವಲ್ಲ. ಮೇಷ್ಟ್ರು ರಾಜಪ್ಪ ಅವರು, ಶಾಲೆಗೆ ಸೇರಿಸಬೇಕು ಎಂಬ ಕಾರಣದಿಂದ ಆ ದಿನಾಂಕವನ್ನ ಬರೆಯಿಸಿದ್ದರು. ನಂತರ ಅದೇ ಹುಟ್ಟಿದ ದಿನವಾಯಿತು.

ಓದುವುದರಲ್ಲೂ ಫಸ್ಟ್, ಆಟದಲ್ಲೂ ಬೆಸ್ಟ್
ಸಿದ್ದರಾಮಯ್ಯ ಅವರು ಓದುವುದರಲ್ಲಿ ಸದಾ ಮುಂದಿದ್ದರು. ಯಾವುದೇ ತರಗತಿಯನ್ನ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಇನ್ನು ಆಟದಲ್ಲೂ ಹೆಚ್ಚು ಆಸಕ್ತಿ ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸುತ್ತಿದ್ದರು. ಹಾಕಿ, ಕ್ರಿಕೆಟ್, ಕಬ್ಬಡಿ ಹೀಗೆ ಶಾಲಾ ದಿನಗಳಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದರಂತೆ.

ಎಲ್.ಎಲ್.ಬಿ ಸಮಯದಲ್ಲಿ ನಡೆದ ಹಾಸ್ಯ ಘಟನೆ
2ನೇ ವರ್ಷದ ಎಲ್.ಎಲ್.ಬಿ ಓದುವಾಗ ಪರೀಕ್ಷೆ ಸಮಯದಲ್ಲಿ ಒಂದು ಘಟನೆ ನಡೆದಿತ್ತು. ಕಾಡಯ್ಯ ಎಂಬ ಸ್ನೇಹಿತರೊಬ್ಬರು 2ನೇ ವರ್ಷದ ಎಲ್.ಎಲ್.ಬಿಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಹೇಳಿ ತೆಗೆದುಕೊಂಡು ಬಂದು, ಸಿದ್ದರಾಮಯ್ಯ ಮತ್ತು ಇನ್ನೊಬ್ಬ ಸ್ನೇಹಿತನಿಗೆ ಕೊಟ್ಟರು. ಮೂವರು ಕೂಡ ಇದೇ ಪ್ರಶ್ನೆ ಪತ್ರಿಕೆಯನ್ನ ಚೆನ್ನಾಗಿ ಓದಿಕೊಂಡು ಪರೀಕ್ಷೆ ಬರೆಯಲು ಹೋದರು. ಆದ್ರೆ, ಒಂದೇ ಒಂದು ಪ್ರಶ್ನೆಯೂ ತಾವು ಓದಿದ್ದ ಪ್ರಶ್ನೆ ಪತ್ರಿಕೆಯಿಂದ ಬಂದಿರಲಿಲ್ಲವಂತೆ. ಯಾಕಂದ್ರೆ, ಅದು ಬೇರೆ ವರ್ಷದ ಪ್ರಶ್ನೆ ಪತ್ರಿಕೆ ಆಗಿತ್ತು. ಕಾಡಯ್ಯ ಮತ್ತು ಮತ್ತೋರ್ವ ಸ್ನೇಹಿತ ಫೇಲ್ ಆದರು, ಆದ್ರೆ, ಸಿದ್ದರಾಮಯ್ಯ ಅವರು ಪಾಸ್ ಆದರಂತೆ.

ಇಂದಿರಾಗಾಂಧಿ ವಿರುದ್ಧ ಹೋರಾಟಕ್ಕೆ ಸಜ್ಜು
ಒಮ್ಮೆ ಅಂದಿನ ಪ್ರಧಾನಿ ಇಂದಿನ ಗಾಂಧಿ ಅವರು ಕರ್ನಾಟಕಕ್ಕೆ ಬಂದಾಗ, ಅವರಿಗೆ ಕಪ್ಪು ಬಾವುಟ ತೋರಿಸಬೇಕೆಂದು ಸ್ನೇಹತರೆಲ್ಲಾ ಸೇರಿ ನಿರ್ಧರಿಸಿ, ತಯಾರಿ ಮಾಡಿಕೊಂಡಿದ್ದರು. ಆದ್ರೆ, ಕೊನೆಯ ಸಮಯದಲ್ಲಿ ಸ್ನೇಹಿತರೆಲ್ಲಾ ಕೈಕೊಟ್ಟರಂತೆ. ಕಾಡಯ್ಯ ಮತ್ತು ಸಿದ್ದರಾಮಯ್ಯ ಇಬ್ಬರು ಮಾತ್ರ ಹೆದ್ದಾರಿ ಪ್ರತಿಭಟನೆ ಮಾಡಲು ಮುಂದಾದಾಗ ಪೊಲೀಸರು ಬಂಧಿಸಿ, ಚೆನ್ನಾಗಿ ಒಡೆದು ಕಳುಹಿಸಿದ್ದರಂತೆ. ಅಂದು ಇಂದಿರಾಗಾಂಧಿ ಅವರನ್ನ ವಿರೋಧಿಸಲು ಮುಂದಾಗಿದ್ದ ಸಿದ್ದರಾಮಯ್ಯ ಇಂದು ಅವರ ಪಕ್ಷದಿಂದಲೇ ಮುಖ್ಯಮಂತ್ರಿ ಆಗಿದ್ದಾರೆ.


Click it and Unblock the Notifications











