ಬರ್ತಾಯಿದೆ: ಜನರಲ್ ಎಂಟರ್ಟೈನ್ಮೆಂಟ್ ಚಾನೆಲ್ “ಐಸಿರಿ”
ಬೆಂಗಳೂರು, ಅ. 26 : ಸುದ್ದಿ ಚಾನೆಲ್ಗಳ ಭರಾಟೆ, ಕ್ಷಣ ಕ್ಷಣದ ಸುದ್ದಿ ನೀಡುವಲ್ಲಿನ ಸ್ಪರ್ಧೆಯಲ್ಲಿ ಕನ್ನಡದ ಜನ ಮನರಂಜನೆಯಿಂದ ವಂಚಿತರಾಗುತ್ತಿದ್ದಾರೆಯೇ? ಅಪ್ಪಟ ಕನ್ನಡಿಗರ ಚಾನೆಲ್ಗಳ ಬರವೂ ರಾಜ್ಯ ಎದುರಿಸುತ್ತಿದೆಯೇ? ಮಾಹಿತಿಗಳ ಜತೆಗೆ ಮನರಂಜನೆಗೂ ಒತ್ತು ನೀಡುವ ಕಾರ್ಯಕ್ರಮಗಳು ಕನ್ನಡಿಗರಿಂದ ದೂರ ಸರಿಯುತ್ತಿವೆಯೇ? ಇವೆಲ್ಲದಕ್ಕೂ ಉತ್ತರ ರೂಪದಲ್ಲಿ ಬರುತ್ತಿದೆ ಜನರಲ್ ಎಂಟರ್ಟೈನ್ಮೆಂಟ್ ಚಾನೆಲ್ (ಜಿಇಸಿ) ಕನ್ನಡದ "ಐಸಿರಿ".
ಸುದ್ದಿ, ಮನರಂಜನೆ ಮತ್ತು ಮಾರುಕಟ್ಟೆ ಮೂರೂ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿದ ವೃತ್ತಿಪರರಾದ ರವಿಶಂಕರ್, ಸತೀಶ್, ಹಾಗೂ ವೆಂಕಟ್ರಾಜ್ ಮೊದಲಾದವರು ಸೇರಿಕೊಂಡು ಆರಂಭಿಸುತ್ತಿರುವ ಸ್ಯಾಟಲೈಟ್ ಚಾನೆಲ್ "ಐಸಿರಿ"ಯನ್ನು ರೂಪಿಸುವ ಕಾರ್ಯ ಆರಂಭಗೊಂಡಿದೆ. ಕನ್ನಡದ ತಂತ್ರಜ್ಞರು, ಕ್ಯಾಮೆರಾಮೆನ್ಗಳು, ನಿರ್ಮಾಪಕರು ಕನ್ನಡದ ವೀಕ್ಷಕರಿಗೆ ಸಿಗುವುದು ದುರ್ಲಭ. ಅಂತಹ ಕೊರತೆಯನ್ನು ನೀಗಿಸುವ ಸಮರ್ಥ ಮನರಂಜನಾ ಚಾನೆಲ್ ರೂಪದಲ್ಲಿ "ಐಸಿರಿ" ಮೂಡಿಬರುತ್ತಿದೆ. [ಚಿತ್ತಾರದಿಂದ ಕನ್ನಡ ಸಂಗೀತಕ್ಕಾಗಿ ಸಿ ಮ್ಯೂಸಿಕ್ ಅರ್ಪಣೆ]

ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಪರಂಪರೆಯ ನೆಲೆಯಾಗಿರುವ ಬೆಂಗಳೂರಿನ ಬಸವನಗುಡಿಯ ನೆಲದಲ್ಲಿ ಸ್ಥಾಪನೆಗೊಂಡಿರುವ "ಐಸಿರಿ" ಚಾನೆಲ್ನ ಕಚೇರಿ ಐಸಿರಿ ಮೀಡಿಯಾ ಪ್ರೈ ಲಿಮಿಟೆಡ್ ಉದ್ಘಾಟನೆ ಆಯಿತು. ಮೊನ್ನೆ ವಿಜಯದಶಮಿ ದಿನ ಕಚೇರಿಯನ್ನು ಒನ್ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡ ಪೋರ್ಟಲ್ನ ಸಂಪಾದಕ ಎಸ್ಕೆ ಶಾಮಸುಂದರ ಅವರು ಉದ್ಘಾಟಿಸಿದರು.
ರಾಜ್ಯದಲ್ಲಿ ಸುದ್ದಿ ಚಾನೆಲ್ಗಳ ಸಾಕಷ್ಟಿವೆ. ಆದರೆ ಮನರಂಜನಾ ಚಾನೆಲ್ಗಳ ಕೊರತೆ ಇದೆ. ಅದರಲ್ಲೂ ಅಪ್ಪಟ ಕನ್ನಡ ಸೊಗಡಿನ ಚಾನೆಲ್ಗಳ ಕೊರತೆಯಂತೂ ಎದ್ದು ಕಾಣಿಸುತ್ತಿದೆ. ಈ ಕೊರತೆಯನ್ನು ನಿವಾರಿಸುವ ಸಲುವಾಗಿ ಮತ್ತು ಕನ್ನಡಿಗರಿಗೆ ಕನ್ನಡಿಗರದೇ ಆದ ಒಂದು ಮನರಂಜನಾ ಚಾನೆಲ್ ಒದಗಿಸಬೇಕು ಎಂಬ ಕಳಕಳಿಯೊಂದಿಗೆ ಈ "ಐಸಿರಿ" ಚಾನೆಲ್ ಆರಂಭಗೊಳ್ಳುತ್ತಿದೆ. ಹೊಸ ವರ್ಷಕ್ಕೆ ಹೊಸ ಹರ್ಷದೊಂದಿಗೆ ಈ ಚಾನೆಲ್ ಮನರಂಜನೆಯ ರಸದೌತಣವನ್ನು ನೀಡಲು ಅಣಿಯಾಗಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಂ.ರವಿಶಂಕರ್, ಸತೀಶ್ ಬಿ, ವೆಂಕಟರಾಜ ಭಟ್, ಕಾರ್ಯಕ್ರಮಗಳ ಮುಖಸ್ಥೆ ಶ್ರೀಮತಿ ಲಲಿತಾಚಲಂ, ಸಿಓಓ ಡಿ. ಶಾಮಪ್ರಸಾದ್, ಹಿರಿಯ ಪತ್ರಕರ್ತ ಸುಂದರ್ ಮತ್ತಿತರರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ [email protected] ಸಂಪರ್ಕಿಸಬಹುದು. ['ಅಚ್ಚ'ಕನ್ನಡ ಹಾಡುಗಳ ಕಾಲೆಳೆದ 'ನಮ್ದುಕೆ' ವಾಹಿನಿ]


Click it and Unblock the Notifications











