ಸದ್ಯದಲ್ಲೇ ಸೆಂಚುರಿ ಭಾರಿಸಲಿರುವ ಅರುಣರಾಗ

ಹೀಗಿರುವ ಹಲವು ಧಾರಾವಾಹಿಗಳ ಸಾಲಿನಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರು 'ಅರುಣರಾಗ'. ಇದು, ಬೆಂಗಳೂರು ದೂರದರ್ಶನದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 5.30 ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಈಗ ಬಹುತೇಕ ಎಲ್ಲರ ಮೆಚ್ಚುಗೆ ಗಳಿಸಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಸೀರಿಯಲ್ ಈಗ, ನೂರರ ಸಂಭ್ರಮದಲ್ಲಿದೆ.
ಡಿಡಿ ಚಂದನದಲ್ಲಿ ಸಾಕಷ್ಟು ಒಳ್ಳೆಯ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಆದರೆ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಭರಾಟೆಯಲ್ಲಿ ಇತ್ತೀಚಿಗೆ ದೂರದರ್ಶನ ವಾಹಿನಿ ಕಳೆದೇ ಹೋದಂತೆ ಭಾಸವಾಗುತ್ತಿದೆ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಆದರೂ ಅವೆಲ್ಲ ಟೀಕೆಗಳನ್ನೂ ಮೀರಿ ಬೆಳೆದು ಸಾಕಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ ಚಂದನವಾಹಿನಿ.
ಅಂದಹಾಗೆ, ಟೆಕ್ನೋ ಮಾರ್ಕ್ ಟೆಲಿವಿಷನ್ ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಎನ್ ಶಿವಾನಂದಂ ಅರುಣರಾಗ ಧಾರಾವಾಹಿಯ ನಿರ್ಮಾಪಕರು. ಇವರು ಈಗಾಗಲೇ ಕಲ್ಯಾಣಿ, ಕಲ್ಯಾಣ ಭಾರತಿ, ಭಗೀರಥ, ಶುಭಲಗ್ನ, ಸಾಧನ, ಆಚಾರ ವಿಚಾರ ಮತ್ತು ವಿಶ್ವರೂಪ ಎಂಬ ಜನಪ್ರಿಯ ಧಾರಾವಾಹಿಗಳನ್ನು ನೀಡಿದ್ದಾರೆ. ಸುಮಾರು 10,000 ಕ್ಕೂ ಹೆಚ್ಚು ಸಂಚಿಕೆಗಳು ಈ ಸಂಸ್ಥೆಯಡಿ ನಿರ್ಮಾಣಗೊಂಡು ಪ್ರಸಾರ ಕಂಡಿವೆ.
ಇದೇ ತಿಂಗಳು 12 ರಂದು (ಜುಲೈ 12, 2012) ಈ ಜನಪ್ರಿಯ ಧಾರಾವಾಹಿ ಅರುಣರಾಗದ 100 ನೇ ಸಂಚಿಕೆ ಪ್ರಸಾರವಾಗಲಿದೆ. ವೇಳೆ ಎಂದಿನಂತೆ ಸಂಜೆ 5.30. ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಸುತ್ತ ನಡೆಯೋ ಘಟನೆಗಳೇ ಈ ಧಾರಾವಾಹಿಯ ಕಥೆ ಎಂದಿದ್ದಾರೆ ನಿರ್ದೇಶಕ ಎಲ್ ಪಿ ಮೋಹನ್ ಕುದೂರು ಲಕ್ಕೇನಹಳ್ಳಿ. ನಿರ್ಮಾಪಕ ಶಿವಾನಂದ ಅವರದೂ ಇದೇ ಮಾತು.
ಎಲ್ ಪಿ ಮೋಹನ್ ಕುದೂರು ಲಕ್ಕೇನಹಳ್ಳಿ ನಿರ್ದೇಶನದ ಈ ಧಾರಾವಾಹಿಯಲ್ಲಿ ಲತಾ, ನಿರಂಜನಕುಮಾರ್ ಸೂರ್ಯೋದಯ, ಸ್ನೇಹಾ ಅಭಿಮಾನಿ, ಬಿ ಶಿವಾನಂದ್, ಗಾಯತ್ರಿ, ನಿಪುಣ್, ಆಶಾ, ಎಸ್ ಮಂಜುನಾಥ್, ಮತ್ತು ಬೇಬಿ ನಿಹಾರಿಕಾ ಸೇರಿದಂತೆ ಮತ್ತಿತರ ಕಲಾವಿದರು ನಟಿಸಿದ್ದಾರೆ.
ಸುಜಾತಾದತ್ ಸಂಗೀತ, ಡಾ ಮಹಮ್ಮದ್ ಭಾಷಗೂಳ್ಯಂ ಸಾಹಿತ್ಯ, ದಿವ್ಯಾ ರಾಘವನ್ ಗಾಯನ ಹಾಗೂ ಶುಭರಾಜ್ ಚಿತ್ರಕಥೆ ಮತ್ತು ಸಂಭಾಷಣೆ ಅರುಣರಾಗ ಧಾರಾವಾಹಿಗಿದೆ. ಪಿವಿಆರ್ ಸ್ವಾಮಿ ಗೂಗಾರದೊಡ್ಡಿ ಛಾಯಾಗ್ರಹಣದ ಜವಾಬ್ಧಾರಿ ಹೊತ್ತಿದ್ದಾರೆ. ಒಟ್ಟಿನಲ್ಲಿ, ಅರುಣರಾಗ ಸೀರಿಯಲ್ ಸಾಕಷ್ಟು ಜನಪ್ರಿಯತೆ ಪಡೆದು ಮುನ್ನುಗ್ಗುತ್ತಿದೆ. ಇದೀಗ ನೂರರ ಸಂಭ್ರಮಕ್ಕೆ ಕಾಲಿಟ್ಟಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











