ನಿರ್ದೇಶಕ, ಬರಹಗಾರ ಎಜಿ ಶೇಷಾದ್ರಿ ಸಂದರ್ಶನ

ಸಾಕಷ್ಟು ಸೀರಿಯಲ್ ಮೂಲಕ ಕಿರುತೆರೆ ಉದ್ಯಮದಲ್ಲಿ ಬಹಳಷ್ಟು ಸದ್ದು-ಸುದ್ದಿ ಮಾಡಿದವರು ಶೇಷಾದ್ರಿ. ಉದಯ ಟಿವಿಯಲ್ಲಿ ಮೂಡಿಬಂದ ಮಹಾ ಜನಪ್ರಿಯ ಧಾರಾವಾಹಿ 'ಪುಣ್ಯಕೋಟಿ' ಮೂಲಕ ಕಿರುತೆರೆಯಲ್ಲಿ ಭಾರಿ ಪ್ರಸಿದ್ಧಿ ಪಡೆದು 'ಪಕ್ಕಾ ಪುಣ್ಯಕೋಟಿ'ಯಂತೆ ಬಣ್ಣದ ಲೋಕದಲ್ಲಿ 'ಸಾರ್ಥಕ ಬದುಕು' ನಡೆಸುತ್ತಿರುವ ಶೇಷಾದ್ರಿಯವರು 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ನಡೆಸಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ಇಲ್ಲಿವೆ, ಓದಿ...
*ನಿಮ್ಮ ಊರು, ಹಿನ್ನಲೆ ಬಗ್ಗೆ ಹೇಳಿ...
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ನನ್ನೂರು. 6ನೇ ಕ್ಲಾಸಿನವರೆಗೆ ಹುಟ್ಟೂರಿನಲ್ಲೇ ವಿದ್ಯಾಭ್ಯಾಸ ಮಾಡಿದ ನಾನು ನಂತರ ತುಮಕೂರಿನಲ್ಲಿ ಓದಿ ಡಿಪ್ಲೊಮಾ ಮುಗಿಸಿದೆ. ನಂತರ ನಾನು ಹೊಟ್ಟೆಪಾಡಿಗೆ ಬಿಸಿನೆಸ್, ಹೊಟೇಲ್ ಎಂದು ಅದೂ ಇದು ಮಾಡಿಕೊಂಡು ಸ್ವಲ್ಪದಿನ ಕಾಲಕಳೆದೆ. ಆದರೆ ಚಿಕ್ಕಂದಿನಿಂದಲೂ ಇದ್ದ ನಟನೆ ಆಸಕ್ತಿ ನನ್ನನ್ನು 'ಅಭಿನಯ ತರಂಗ'ಕ್ಕೆ ಸೆಳೆಯಿತು. ಬೆಂಗಳೂರಿನಲ್ಲಿ ಎ ಎಸ್ ಮೂರ್ತಿಯವರು ನಡೆಸುತ್ತಿದ್ದ 'ಅಭಿನಯ ತರಂಗ'ದಲ್ಲಿ ಆಗ ನಡೆಯತ್ತಿದ್ದ 'ಸಂಡೇ ಸ್ಕೂಲ್ ಆಫ್ ಡ್ರಾಮಾ (ಆಗ ಕೇವಲ ಸಂಡೇ ಕ್ಲಾಸ್ ಮಾತ್ರ ಇತ್ತು) ಸೇರಿಕೊಂಡೆ.
ಕೋರ್ಸ್ ಮುಗಿಯುವ ಹಂತದಲ್ಲೇ (ದಿವಂಗತ) ಆರ್ ನಾಗೇಶ್ ಅವರೊಂದಿಗೆ 20-25 ದಿನಗಳ ಕಾಲ ಕೆಲಸ ಮಾಡಿದೆ. ನಂತರ ಅಭಿನಯ ತರಂಗದಲ್ಲಿ 'ಬೆಸ್ಟ್ ಡೈರೆಕ್ಟರ್', 'ಬೆಸ್ಟ್ ಆಕ್ಟರ್', 'ಬೆಸ್ಟ್ ಸಪೋರ್ಟಿಂಗ್ ಆರ್ಟಿಸ್ಟ್' ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡು ಕೋರ್ಸ್ ಮಗಿಸಿ ಅಲ್ಲಿಂದ ಹೊರಬಂದೆ. ಅಷ್ಟೂ ಕಾಲ ನಾನು ತುಮಕೂರಿನಿಂದ ಬೆಂಗಳೂರಿಗೆ 'ಅಪ್ ಅಂಡ್ ಡೌನ್' ಮಾಡಿಕೊಂಡಿದ್ದೆ. ನಂತರ ತಾಯಿಯವರನ್ನು ಕರೆದುಕೊಂಡು ಬೆಂಗಳೂರು ಸೇರಿದೆ.
*ನಿಮ್ಮ ಬಣ್ಣದ ಬದುಕಿನ ಪ್ರಯಾಣ ಪ್ರಾರಂಭವಾಗಿದ್ದು ಹೇಗೆ?
ಬೆಂಗಳೂರಿಗೆ ಬಂದವನೇ 'ಡಿಡಿ-9' ಗೆ ಸೀರಿಯಲ್ ಮಾಡಿ ಕೈಸುಟ್ಟುಕೊಂಡೆ. ಆದರೂ ಅದರಲ್ಲಿ ನಾನು ಮಾಡಿದ್ದ ಚಿತ್ರಕಥೆ ಹಾಗು ಸಂಭಾಷಣೆ ಹಲವರ ಗಮನ ಸೆಳೆದಿತ್ತು. ಹೀಗಾಗಿ ಕೈ ಸುಟ್ಟರೂ ಮೈ ಸುಡದ ಆ ಸೀರಿಯಲ್ ನನ್ನನ್ನು ಪರದಾಡುವಂತೆ ಮಾಡಿದ್ದರೂ ವರ್ಷಕ್ಕೆ ಒಂದೋ ಎರಡೋ ಅವಕಾಶ ನನ್ನದಾಗಿಸುವಲ್ಲಿ ನೆರವಾಯ್ತು. ಈಗಲೂ ನೆನಪಿದೆ, 1995 ರ ಕಾಲ ನನ್ನ ಜೀವನದ ಪಕ್ಕಾ ಪರದಾಟದ ಕಾಲ.
ನನ್ನ ಚಿತ್ರಕಥೆ ಹಾಗೂ ಸಂಭಾಷಣೆ ಶೈಲಿಗೆ ಮೆಚ್ಚಿದ್ದ ದಿವಂಗತ 'ಐಒಬಿ ಚಂದ್ರು' ಅವರು 1998 ರಲ್ಲಿ 'ಚಂದಮಾಮ ಚಕ್ಕುಲಿ ಮಾಮ' ಧಾರಾವಾಹಿಗೆ ನನ್ನನ್ನು ಆಮಂತ್ರಿಸಿದರು. ಅದರಲ್ಲಿ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಾನು ಬರೆದೆ. ಇಬ್ಬರೂ ಸೇರಿ ನಿರ್ದೇಶನ ಮಾಡಿದ್ದೆವು. ಆ ಕಾಲದಲ್ಲಿ 13 ಎಪಿಸೋಡ್ ಗಳಿಗೆ ಮುಕ್ತಾಯವಾಗುತ್ತಿದ್ದ ಧಾರಾವಾಹಿಗಳ ದಾಖಲೆಯನ್ನು ಮುರಿದು 33 ಎಪಿಸೋಡ್ ಗಳಿಗೆ ವಿಸ್ತರಿಸಿದ್ದು ಆ ಧಾರಾವಾಹಿಯ ಮಹಿಮೆ ಹಾಗೂ ಹಿರಿಮೆ.
ನಂತರ ಕೆಎಸ್ ಡಿ ಎಲ್ ಚಂದ್ರು ನಿರ್ದೇಶನದ 'ಚಿತ್ತಾರದ ಬದುಕು' ಧಾರಾವಾಹಿಗೆ ನಾನು ಚಿತ್ರಕಥೆ ಮತ್ತು ಸಂಭಾಷಣೆ ಬರೆದೆ. ಆ ಧಾರಾವಾಹಿಯಲ್ಲಿನ ನನ್ನ ಬರವಣಿಗೆ ಹಿರಿಯ ನಿರ್ದೇಶಕ ಎಂಎಸ್ ರಾಜಶೇಖರ್ ಅವರ ಗಮನಸೆಳೆಯಿತು.
*ನಿಮ್ಮ ಸಿನಿಮಾ ಜರ್ನಿ ಪ್ರಾರಂಭವಾಗಿದ್ದು ಹೇಗೆ?
'ಚಿತ್ತಾರದ ಬದುಕು' ಸೀರಿಯಲ್ ಸ್ಕ್ರಿಪ್ಟ್ ನಿಂದ ಪ್ರಭಾವಿತರಾದ ಹಿರಿಯ ನಿರ್ದೇಶಕ ಎಂಎಸ್ ರಾಜಶೇಖರ್ ಅವರು ತಮ್ಮ ನಿರ್ದೇಶನದ 'ಹೃದಯಾ ಹೃದಯಾ' ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಗೆ ನನಗೆ ಆಮಂತ್ರಣ ನೀಡಿದರು. ಹೀಗೆ '1999' ರಲ್ಲಿ ಬಿಡುಗಡೆಯಾದ ಶಿವಣ್ಣರ 'ಹೃದಯಾ ಹೃದಯಾ' ಚಿತ್ರದ ಮೂಲಕ ಡಾ ರಾಜ್ ಕುಮಾರ್ ಅವರ 'ವಜ್ರೇಶ್ವರಿ ಬ್ಯಾನರ್'ಗೆ ನಾನು ಪರಿಚಯವಾದೆ. ಹೀಗೆ 'ಕಿರುತೆರೆ'ಯಲ್ಲಿದ್ದ ನಾನು 'ಬೆಳ್ಳಿತೆರೆ' ಬದುಕಿಗೆ ಅಡಿಯಿಟ್ಟೆ. ಮುಂದಿನ ಪುಟ ನೋಡಿ...


Click it and Unblock the Notifications











