ಒಂದು ಕಾಲದಲ್ಲಿ ಗಣೇಶ್ ಜೊತೆ ಇದ್ದದ್ದು ಹಸಿವು - ನೋವು ಎರಡೇ.!
ಇವತ್ತು ಗೋಲ್ಡನ್ ಸ್ಟಾರ್ ಆಗಿರುವ ಗಣೇಶ್ ಗೆ ಒಂದು ಕಾಲದಲ್ಲಿ ಕೇವಲ ಐದು ರೂಪಾಯಿಗೂ ತಡಕಾಡುವ ಪರಿಸ್ಥಿತಿ ಇತ್ತು. ಹೊಟ್ಟೆ ಹಸಿವಾದರೆ ಊಟ ಮಾಡುವುದಕ್ಕೂ ಕೆಲವು ಸಲ ಗಣೇಶ್ ಬಳಿ ದುಡ್ಡು ಇರುತ್ತಿರಲಿಲ್ಲವಂತೆ.
ಇಂತಹ ಅನೇಕ ವಿಷಯಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗ ಆಯ್ತು. ಬಬ್ಬ ಸಾಮಾನ್ಯ ಹುಡುಗ ಗಣೇಶ್ ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ನಿಜಕ್ಕೂ ಮೆಚ್ಚಲೇ ಬೇಕಾದ ವಿಷಯ. ಒಬ್ಬ ದೊಡ್ಡ ಸಾಧಕನ ಹಿಂದೆ ನೂರು ನೋವುಗಳಿರುತ್ತದೆ. ಅದೇ ರೀತಿ ಗಣೇಶ್ ಈ ಸ್ಥಾನಕ್ಕೆ ಏರುವುದಕ್ಕೆ ಪಟ್ಟ ಕಷ್ಟದ ಅಷ್ಟಿಷ್ಟಲ್ಲ.
ಗಣೇಶ್ ಅವರ ಆ ಕಷ್ಟದ ದಿನಗಳನ್ನು ಕಣ್ಣಾರೆ ಕಂಡ ಅವರ ಸ್ನೇಹಿತರು ಈ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ....

ಎಲ್ಲ ಡೈರೆಕ್ಟರ್ ಹತ್ತಿರ ಹೋಗುತ್ತಿದ್ವಿ
''ನಾನು ನೀನು ನಮ್ಮ ಫೋಟೋ ಇಟ್ಟುಕೊಂಡು ಎಲ್ಲ ಡೈರೆಕ್ಟರ್ ಹತ್ತಿರ ಹೋಗುತ್ತಿದ್ವಿ. 'ನಾವು ಆಕ್ಟ್ ಮಾಡಬೇಕು' ಹೇಳಿ ಅಂತ ಎಲ್ಲರಿಗೂ ಫೋಟೋ ಕೊಟ್ಟು ಬರುತ್ತಿದ್ವಿ. ಮಿಥುನ್ ಚಕ್ರವರ್ತಿ, ಚಿರಂಜೀವಿ, ರಾಜ್ ಕುಮಾರ್, ನಿನ್ನ ಆರಾಧ್ಯ ದೈವ ವಿಷ್ಣು ಸರ್ ತರಹ ಸ್ಟೈಲ್ ನಲ್ಲಿ ಫೋಟೋಗಳು ಇತ್ತು'' - ರವಿಶಂಕರ್, ನಟ, ಗಣೇಶ್ ಸ್ನೇಹಿತ.

ಅವಕಾಶ ಕೊಡಲಿ ಕೊಡದೆ ಇರಲಿ
''ಫೋಟೋ ಗಳನ್ನು ತೆಗೆಸಿ ಆಲ್ಬಂ ನಲ್ಲಿ ಹಾಕಿ ಪ್ರತಿಯೊಬ್ಬರಿಗೂ ತೋರಿಸುತ್ತಿದ್ದೆ. ಪಾಪ ಅವರು ನಿನಗೆ ಅವಕಾಶ ಕೊಡಲಿ ಕೊಡದೆ ಇರಲಿ ಬೇರೆಯವರು ಆಕ್ಟ್ ಮಾಡುವುದನ್ನು ಮೂಲೆಯಲ್ಲಿ ಕೂತು ನೋಡುತ್ತಿದೆ. ಅದನ್ನು ನಾನು ಗಮನಿಸುತ್ತಿದ್ದೆ'' - ರವಿಶಂಕರ್, ನಟ, ಗಣೇಶ್ ಸ್ನೇಹಿತ.

ಗೆಳೆಯ ಹಸಿವು ಆಗುತ್ತಿದೆ..
''ಹಾಯ್ ಗೆಳೆಯ, ನಾವ್ ಇಬ್ಬರೂ ಒಂದು ರೂಮ್ ಮಾಡಿಕೊಂಡಿದ್ವಿ. ಆ ರೂಮ್ ರೋಡ್ ನಲ್ಲಿ ಮಕ್ಕಳು ನನಗೆ ಗಣೇಶನ ಫ್ರೆಂಡ್ ನಾಗಶೇಖರ್ ಅಂತ ಹೇಳುತ್ತಿದ್ರು. ಒಂದು ದಿನ 'ಗೆಳೆಯ ಹಸಿವು ಆಗುತ್ತಿದೆ..' ಅಂತ ನೀನು ಹೇಳಿದೆ. ಇಬ್ಬರ ಹತ್ತಿರನೂ ದುಡ್ಡಿಲ್ಲ ಆಮೇಲೆ ಎಲ್ಲ ಪ್ಯಾಂಟ್ ನಲ್ಲಿ ಹುಡುಕಿದ ಮೇಲೆ ನಮ್ಮ ಹತ್ತಿರ 12 ರೂಪಾಯಿ ಸಿಕ್ಕಿತ್ತು'' - ನಾಗಶೇಖರ್, ನಿರ್ದೇಶಕ, ಗಣೇಶ್ ಸ್ನೇಹಿತ.

ಅವತ್ತು ಕಂಡ ಕನಸು ಇವತ್ತು ನನಸಾಗಿದೆ
''12 ರೂಪಾಯಿ ತಗೊಂಡು ರೂಮ್ ನಿಂದ ಹೊರಗೆ ಹೋಗಬೇಕು ಅಂದರೆ ಜೋರು ಮಳೆ ಶುರುವಾಯ್ತು. ತಲೆ ಮೇಲೆ ಒಂದು ಟವೆಲ್ ಹಾಕಿಕೊಂಡು ಐದೈದು ರೂಪಾಯಿಗೆ ಎರಡು ಚಿತ್ರಾನ್ನ ತೆಗೆದುಕೊಂಡ್ವಿ. ಚಿತ್ರಾನ್ನ ತಿನ್ನುವಾಗ ನೋಡಿದ್ರೆ ನಿನಗೆ 5 ರೂಪಾಯಿ ಸಿಕ್ಕಿತ್ತು. ಅವತ್ತು ಇಬ್ಬರು ಒಂದು ಗಂಟೆವರೆಗೂ ಮಾತಾಡಿದ್ದೀವಿ. ಅವತ್ತು ಕಂಡ ಕನಸು ಇವತ್ತು ನನಸಾಗಿದೆ'' - ನಾಗಶೇಖರ್, ನಿರ್ದೇಶಕ, ಗಣೇಶ್ ಸ್ನೇಹಿತ.


Click it and Unblock the Notifications











