ಹಿರಿಯ ಕಲಾವಿದೆ ವಿದ್ಯಾಮೂರ್ತಿ ಅವರ ಬಣ್ಣದ ಲೋಕದ ಪಯಣ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಪಾತ್ರಧಾರಿಯ ತಾಯಿ ಪಾತ್ರದಲ್ಲಿ ವಿದ್ಯಾಮೂರ್ತಿ ಅವರು ನಟಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ವಿದ್ಯಾಮೂರ್ತಿ ಅವರು ಎಲ್ಲರಿಗೂ ಚಿರಪರಿಚಿತರು. ಆದರೆ, ಅವರ ವಯಕ್ತಿಕ ಜೀವನದ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ.
ಕಲಾಲೋಕದ ಮಹಾನ್ ಸಾಧಕಿ ವಿದ್ಯಾಮೂರ್ತಿ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಮೂರೂ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಎರಡು ದಶಕವನ್ನೂ ಮೀರಿ ಬಣ್ಣದ ಲೋಕದಲ್ಲಿರುವ ವಿದ್ಯಾಮೂರ್ತಿ ಅವರು ಮಗಳು, ತಾಯಿ, ಅಜ್ಜಿ ಹೀಗೆ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿದ್ದಾರೆ.
ಚಿಕ್ಕವರಿದ್ದಾಗಲೇ ತಮ್ಮ ಪ್ರತಿಭೆಯಿಂದಲೇ ಹೆಸರುವಾಸಿಯಾಗಿದ್ದರು. ಶಾಲಾ-ಕಾಲೇಜುಗಳಲ್ಲಿಯೂ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸದಾ ಮುಂದಿರುತ್ತಿದ್ದರು. ನಟಿಸುವ ಆಸೆಯ ಬಳ್ಳಿಯನ್ನು ಚಿಕ್ಕಂದಿನಿಂದಲೇ ಪೋಷಿಸಿ ಬೆಳೆಸಿದ ವಿದ್ಯಾಮೂರ್ತಿ ಅವರು ಇಂದು ಮಹಾನ್ ಸಾಧಕಿಯಾಗಿದ್ದಾರೆ.

ಕಲಾ ಸಾಧಕಿ ವಿದ್ಯಾಮೂರ್ತಿ
ವಿದ್ಯಾ ಮೂರ್ತಿ ಅವರು 1956ರ ಜುಲೈ 18ರಂದು ಜನಿಸಿದರು. ಮನೆಯಲ್ಲಿ ಸಾಂಸ್ಕೃತಿಕ ವಾತಾವರಣವಿದ ಕಾರಣ ಅದರತ್ತ ಇವರು ಮುಖ ಮಾಡಿದರು. ಶಾಲೆ-ಕಾಲೇಜುಗಳಲ್ಲಿ ಸಂಗೀತ, ನೃತ್ಯ, ನಾಟಕ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೋದ ಕಡೆಯಲೆಲ್ಲಾ ಬಹುಮಾನ ತರುತ್ತಿದ್ದರು. ವಿದ್ಯಾ ಅವರು ಪದವೀಧರೆಯಾದರೆಯಾದ ಮೇಲೆ ಮದುವೆಯಾಯಿತು. ಅಲ್ಲಿಗೆ ಅವರು ತಮ್ಮ ನಟನೆಯ ಕನಸಿಗೆ ತಣ್ಣೀರೆರಚಿದರು. ಗಂಡ, ಮಕ್ಕಳು ಎಂದು ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿ ಬಿಟ್ಟರು.

ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು
ತಾಯಿ ತೀರಿಕೊಂಡ ಮೇಲೆ, ವಿದ್ಯಾಮೂರ್ತಿ ಅವರು ಮಂಕಾಗಿದ್ದರು. ಇದನ್ನು ಕಂಡ ಅವರ ಪತಿ, ನಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಗೀತಾ ರಾಮಾನುಜಂ ಅವರನ್ನು ಭೇಟಿಯಾಗಿ ಜಿ.ವಿ.ಅಯ್ಯರ್ ನಿರ್ದೇಶನದ 'ಭಗವದ್ಗೀತೆ' ಚಿತ್ರದಲ್ಲಿ ಸಣ್ಣ ಪಾತ್ರವನ್ನು ಗಿಟ್ಟಿಸಿಕೊಂಡರು. ಬಳಿಕ ಗೀತಾ ರಾಮಾನುಜಂ ನಿರ್ದೇಶನದ 'ಯಶೋಧರಾ' ನಾಟಕದಲ್ಲಿ ಯಶೋಧರೆ ಪಾತ್ರ ಮಾಡಿದರು. ಅಲ್ಲಿಂದ ವಿದ್ಯಾಮೂರ್ತಿ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಂಸಾರ, ವೃತ್ತಿ ಎರಡನ್ನು ತೂಗಿಸಿಕೊಂಡು ಹೋಗುತ್ತಿದ್ದರು.

ಕಾಮಿಡಿಗೂ ಜೈ ಎನ್ನುತ್ತಿದ್ದ ವಿದ್ಯಾಮೂರ್ತಿ
ವಿದ್ಯಾಮೂರ್ತಿ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. 'ಮಾಯಾಮೃಗ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಟಿ.ಎನ್ . ಸೀತಾರಾಂ, ಫಣಿ ರಾಮಚಂದ್ರ, ಸೇತುರಾಂ, ಲಿಂಗದೇವರು, ವಿನು ಬಳಂಜ ಅವರಂತಹವರ ಜೊತೆಗೆ ಕೆಲಸ ಮಾಡಿದರು. ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿದರು. 'ಮಾಯಾಮೃಗ', 'ಮುಕ್ತ', 'ದೇವ್ರು', 'ದಂಡಪಿಂಡಗಳು', 'ಮೌನರಾಗ', 'ಪ್ರೀತಿ ಇಲ್ಲದ ಮೇಲೆ', 'ಮನ್ವಂತರ', 'ಪಾ.ಪ.ಪಾಂಡು', 'ಸಿಲ್ಲಿ ಲಲ್ಲಿ', 'ಅಡಚಣೆಗಾಗಿ ಕ್ಷಮಿಸಿ', 'ಜೋಗುಳ', 'ಜೊತೆಜೊತೆಯಲಿ', 'ನಿಗೂಢ ರಾತ್ರಿ', 'ಶಾಂತಂ ಪಾಪಂ', 'ಮನೆಯೊಂದು ಮೂರು ಬಾಗಿಲು', 'ಸ್ತ್ರೀ', 'ಮುಕ್ತ ಮುಕ್ತ', 'ಮಗಳು ಜಾನಕಿ' ಹೀಗೆ ಸುಮಾರು 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಜ್ಜಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಸಿನಿಮಾಗಳಲ್ಲೂ ಮಿಂಚಿದ ತಾರೆ
ಕಿರುತೆರೆ ಹಾಗೂ ರಂಗಭೂಮಿಗಷ್ಟೇ ಸೀಮಿತವಾಗಿ ಇರದೇ ವಿದ್ಯಾಮೂರ್ತಿ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಊರ್ವಶಿ', 'ಸ್ಪರ್ಶ', 'ಮತದಾನ', 'ವಂಶಿ', 'ಪೃಥ್ವಿ', 'ಕಿಚ್ಚ ಹುಚ್ಚ', 'ಚಂದು', 'ಬೇರು', 'ಮಾಲ್ಗುಡಿ ಡೇಸ್', 'ಶಿವಾಜಿ ಸೂರತ್ಕಲ್', 'ಅಣ್ಣಾಬಾಂಡ್', ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ 500ಕ್ಕೂ ಅಧಿಕ ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು, ಓದುವುದು, ಲೇಖನ ಬರೆಯುವುದನ್ನೂ ರೂಢಿಸಿಕೊಂಡಿದ್ದಾರೆ.


Click it and Unblock the Notifications











