ನಿರೂಪಕಿಯಾಗಿ ಮತ್ತೆ ಕಿರುತೆರೆಗೆ ಮರಳಿದ ಜಾನ್ವಿ ರಾಯಲ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2"ರ ನಿರೂಪಕರು ಬದಲಾಗಿದ್ದಾರೆ. ಹೌದು, ಈ ಹೊಸ ಸೀಸನ್ ನ ಸಾರಥ್ಯವನ್ನು ನಿರಂಜನ್ ದೇಶಪಾಂಡೆ ಹಾಗೂ ವಂಶಿಕ ಅಂಜಲಿ ಕಶ್ಯಪ ಅವರು ನಡೆಸಿಕೊಂಡು ಬರುತ್ತಿದ್ದರು. ಆದರೆ ನಿರಂಜನ್ ದೇಶಪಾಂಡೆ ಅವರು ಅದೇ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಶೋ " "ಗಿಚ್ಚಿ ಗಿಲಿಗಿಲಿ ಸೀಸನ್ 2"ರ ನಿರೂಪಕರಾಗಿ ಕಾಣಿಸಿಕೊಳ್ಳುವ ಸಲುವಾಗಿ "ನನ್ನಮ್ಮ ಸೂಪರ್ ಸ್ಟಾರ್" ಶೋಗೆ ವಿದಾಯ ಹೇಳಿದ್ದಾರೆ.
ನಿರಂಜನ್ ದೇಶಪಾಂಡೆ ಅವರ ಜಾಗಕ್ಕೆ ಹೊಸ ನಿರೂಪಕಿ ಎಂಟ್ರಿ ಆಗಿದೆ. ಅದು ಬೇರಾರೂ ಅಲ್ಲ ಜಾನ್ವಿ ರಾಯಲ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಂದು ಸಿನಿಮಾ ಕಥೆ' ಶೋನ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಜಾನ್ವಿ ರಾಯಲ ಕಿರುತೆರೆಗೆ ಕಾಲಿಟ್ಟರು . ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಪಲ್ ರಿಯಾಲಿಟಿ ಶೋ 'ರಾಜ ರಾಣಿ ಸೀಸನ್- 2'ರ ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದ ಈಕೆ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆದರು. ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಜಾನ್ವಿ ರಾಯಲ ವೃತ್ತಿಯಲ್ಲಿ ದಂತವೈದ್ಯೆ. ಪದವಿ ವಿದ್ಯಾಭ್ಯಾಸದ ಬಳಿಕ ಬಣ್ಣದ ಜಗತ್ತಿನತ್ತ ಮುಖ ಮಾಡಿದ ಈಕೆ 'ಊರ್ವಿ' ಸಿನಿಮಾದಲ್ಲಿ ಮೊದಲು ನಟಿಸಿದ್ದರು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು.
'ಸಾಗುತಾ ದೂರ ದೂರ', 'ವಿಷ್ಣು ಸರ್ಕಲ್', 'ಕಾನೂರಾಯಣ', 'ಅವನಲ್ಲಿ ಇವಳಿಲ್ಲಿ ಸೇರಿದಂತೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ಬೆಡಗಿ. ಇದರ ಜೊತೆಗೆ 'ಕೈವ' ಮತ್ತು 'ಮಹಾನ್ ಕಲಾವಿದ' ಸಿನಿಮಾಗಳಲ್ಲಿಯೂ ಈಕೆ ಅಭಿನಯಿಸಿದ್ದಾರೆ.

ನನ್ನ ಮೇಲೆ ತುಂಬಾ ಜವಾಬ್ದಾರಿಯಿದೆ
"ನನ್ನಮ್ಮ ಸೂಪರ್ಸ್ಟಾರ್ ಸೀಸನ್ 2" ನಿರೂಪಣೆ ಮಾಡಲು ಸಿಕ್ಕಿರುವುದು ನನ್ನ ಪಾಲಿಗೆ ಭಾಗ್ಯವೇ ಸರಿ. ಜೊತೆಗೆ ಇದೊಂದು ಬಹುದೊಡ್ಡ ಜವಾಬ್ದಾರಿ ಹೌದು. ಯಾಕೆಂದರೆ ಸೀಸನ್ ಶುರುವಾದಾಗಿನಿಂದಲೂ ನಿರಂಜನ್ ದೇಶಪಾಂಡೆ ಅವರು ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು. ಇದೀಗ ಅವರ ಜಾಗಕ್ಕೆ ನಾನು ಬಂದಿದ್ದೇನೆ. ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವೂ ನನಗಿದೆ. ಜೊತೆಗೆ ನಿರಂಜನ್ ದೇಶಪಾಂಡೆ ಅವರು ಅಷ್ಟೇ, ತುಂಬಾ ಸಲಹೆ ನೀಡಿದ್ದಾರೆ"ಎನ್ನುತ್ತಾರೆ ಜಾನ್ವಿ ರಾಯಲ.

ಈಗಾಗಲೇ ಚಿತ್ರೀಕರಣದಲ್ಲೂ ಭಾಗಿ
ಈ ಶೋನಲ್ಲಿ ನನಗೆ ತುಂಬಾ ಖುಷಿಯಾದಂತಹ ವಿಚಾರ ಎಂದರೆ ಮಕ್ಕಳೊಂದಿಗೆ ಬೆರೆಯುವುದು. ಮಕ್ಕಳೊಂದಿಗೆ ಸಮಯ ಕಳೆಯುವುದು ಹಾಗೂ ಅವರೊಂದಿಗೆ ಶೂಟಿಂಗ್ ನಲ್ಲಿ ಭಾಗವಹಿಸುವುದು ನಿಜವಾಗಿಯೂ ನನಗೆ ತುಂಬಾ ಖುಷಿಯಾಗುತ್ತದೆ. ಈಗಾಗಲೇ ನಾನು ಚಿತ್ರೀಕರಣದಲ್ಲಿ ಭಾಗಿಯೂ ಆಗಿದ್ದೇನೆ" ಎಂದು ಜಾನ್ವಿ ರಾಯಲ ಸಂತಸ ವ್ಯಕ್ತಪಡಿಸುತ್ತಾರೆ .

ಬಾಲ್ಯದಿಂದಲೂ ನಟಿಯಾಗುವ ಕನಸು
ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು ಎಂಬ ಕನಸು ಕಂಡಿದ್ದ ಜಾನ್ವಿಗೆ ಮೊದಲಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಒಲವು. ಶಾಲಾ ಕಾಲೇಜಿನಲ್ಲಿದ್ದಾಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭರತನಾಟ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸೀನಿಯರ್ ಮುಗಿಸಿರುವ ಈಕೆ ಕರ್ನಾಟಕ ಸಂಗೀತದಲ್ಲಿ ಜ್ಯೂನಿಯರ್ ಮುಗಿಸಿದ್ದಾರೆ.

ಧ್ವನಿಯೇ ಪ್ಲಸ್ ಪಾಯಿಂಟ್
ನಟಿ ಜಾನ್ವಿ 15ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಕೆಲವರು ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ. ನಿರೂಪಕಿಯಾಗಿ ಯಾಕೆ ಪ್ರಯತ್ನಿಸಬಾರದು ಎಂದು ಸಲಹೆ ಕೊಟ್ಟಿದ್ದರಂತೆ. 'ರಾಜ ರಾಣಿ' ಮೊದಲ ಸೀಸನ್ ಅನುಪಮಾ ಗೌಡ ನಡೆಸಿಕೊಟ್ಟಿದ್ದರು. 2ನೇ ಸೀಸನ್ ಜವಾಬ್ದಾರಿ ಜಾನ್ವಿ ಹೆಗಲೇರಿತ್ತು. ಅದನ್ನು ಅಷ್ಟೇ ಸೊಗಸಾಗಿ ನಿಭಾಯಿಸಿ ಗೆದ್ದರು.


Click it and Unblock the Notifications











