ನನ್ನ ಕಷ್ಟ ಯಾರು ಕೇಳ್ತಾರೆ, ಸಾಲ ಕೊಟ್ಟಿರೋರು ಸುಮ್ಮನೆ ಬಿಡ್ತಾರಾ: 'ಕಮಲಿ' ನಿರ್ಮಾಪಕನ ಅಳಲು.!
Recommended Video
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕಮಲಿ' ಸೀರಿಯಲ್ ಇದೀಗ ವಿವಾದಕ್ಕೀಡಾಗಿದೆ. ''ಕಮಲಿ' ಧಾರಾವಾಹಿಗೆ ಬಂಡವಾಳ ಹಾಕಿದ್ದರೂ, ಟೈಟಲ್ ಕಾರ್ಡ್ ನಲ್ಲಿ ನನ್ನ ಹೆಸರು ತೆಗೆಯಲಾಗಿದೆ. ನನ್ನ ಪಾಲಿನ ಲಾಭಾಂಶ ಸಿಕ್ಕಿಲ್ಲ'' ಎಂದು ಆರೋಪಿಸಿ 'ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ, ನವೀನ್ ಸಾಗರ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ನಿರ್ಮಾಪಕ ರೋಹಿತ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
''ಸಾಲ ಮಾಡಿ 73 ಲಕ್ಷ ರೂಪಾಯಿಗಳನ್ನು 'ಕಮಲಿ' ಧಾರಾವಾಹಿಗಾಗಿ ನೀಡಿದ್ದೇನೆ. ಈಗ ಹೆಸರೂ ಇಲ್ಲ, ಲಾಭವೂ ಇಲ್ಲ. ನನ್ನ ಕಷ್ಟ ಯಾರು ಕೇಳ್ತಾರೆ.? ಸಾಲ ಕೊಟ್ಟಿರೋರು ಸುಮ್ಮನೆ ಬಿಡ್ತಾರಾ.?'' ಎಂದು ನಿರ್ಮಾಪಕ ರೋಹಿತ್ 'ಫಿಲ್ಮಿಬೀಟ್ ಕನ್ನಡ'ದ ಪ್ರತಿನಿಧಿ ಜೊತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಸಂಬಂಧ ನಿರ್ಮಾಪಕ ರೋಹಿತ್ ರನ್ನ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಪ್ರತಿನಿಧಿ ಸಂಪರ್ಕಿಸಿದಾಗ, ರೋಹಿತ್ ಹೇಳಿದಿಷ್ಟು -

ನಿರ್ಮಾಪಕ ಅಂತಲೇ ಪರಿಚಯ.!
''2017 ನಲ್ಲಿ ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರನ್ನ ಅರವಿಂದ್ ಕೌಶಿಕ್ ಭೇಟಿ ಮಾಡಿಸಿದರು. ಮುಂಬೈನಿಂದ ಜೀ ಚಾನೆಲ್ ಹೆಡ್ ಪುನೀತ್ ಎಂಬುವರು ಕೂಡ ಬಂದಿದ್ದರು. ನನ್ನನ್ನ ಪ್ರೊಡ್ಯೂಸರ್ ಅಂತಲೇ ಅರವಿಂದ್ ಕೌಶಿಕ್ ಪರಿಚಯ ಮಾಡಿಕೊಟ್ಟರು. 'ಕಮಲಿ' ಸೀರಿಯಲ್ ಗೆ ನಾನು ಬಂಡವಾಳ ಹಾಕಿದ್ದೇನೆ'' - ರೋಹಿತ್, ನಿರ್ಮಾಪಕ.

ಬಳಿಕ ನಡೆದಿದ್ದು ಬೇರೆ.!
''2018 ಮೇ ತಿಂಗಳಿನಿಂದ 'ಕಮಲಿ' ಸೀರಿಯಲ್ ಶುರು ಆಯ್ತು. ಆಗಲೂ ನಿರ್ಮಾಪಕ ಅಂತಲೇ ಹೆಸರು ಕೊಟ್ಟಿದ್ದರು. ಆಮೇಲೆ ಚಾನೆಲ್ ಜೊತೆಗೆ ಅರವಿಂದ್ ಕೌಶಿಕ್ ಅಗ್ರೀಮೆಂಟ್ ಮಾಡಿಕೊಂಡರು. ಆ ಅಗ್ರೀಮೆಂಟ್ ನಲ್ಲಿ ನನ್ನ ಹೆಸರು ಇರಲಿಲ್ಲ. ಅದನ್ನ ಪ್ರಶ್ನೆ ಮಾಡಿದಾಗ, ನನ್ನೊಂದಿಗೆ ಮತ್ತೊಂದು ಅಗ್ರೀಮೆಂಟ್ ಮಾಡಿಕೊಂಡರು'' - ರೋಹಿತ್, ನಿರ್ಮಾಪಕ.

ನನಗೆ ಮೋಸ ಆಗಿದೆ
''ಸೀರಿಯಲ್ ಗಾಗಿ ನಾನು ಲೊಕೇಶನ್ ಹಂಟ್ ಮಾಡಿದ್ದೇನೆ. ಸೀರಿಯಲ್ ಗಾಗಿ ನಾನು ದುಡಿದಿದ್ದೇನೆ. ಅರವಿಂದ್ ಕೌಶಿಕ್ ನನಗೆ ಹಳೇ ಪರಿಚಯ. ಹೀಗಿದ್ದರೂ, ಚಾನೆಲ್ ನವರು ಮತ್ತು ಅರವಿಂದ್ ಕೌಶಿಕ್ ನನಗೆ ಮೋಸ ಮಾಡಿದ್ದಾರೆ. 287 ಸಂಚಿಕೆಗಳು ಮುಗಿದ ಬಳಿಕ ನನ್ನ ಹೆಸರನ್ನು ತೆಗೆದು ಹಾಕಿದ್ದಾರೆ'' - ರೋಹಿತ್, ನಿರ್ಮಾಪಕ.

ಉಡಾಫೆ ಉತ್ತರ
''ನನ್ನನ್ನ ಫೈನಾನ್ಶಿಯರ್ ಅಂತ ಟ್ರೀಟ್ ಮಾಡಲು ಶುರು ಮಾಡಿದ್ದಾರೆ. ರಾಘವೇಂದ್ರ ಹುಣಸೂರು ಜೊತೆಗೆ ಮಾತನಾಡಿದಾಗ, ಉಡಾಫೆ ಉತ್ತರ ಕೊಟ್ಟರು. ಸರಿಯಾಗಿ ಪ್ರತಿಕ್ರಿಯೆ ಕೊಟ್ಟಿಲ್ಲ. ತುಂಬಾ ಕೇರ್ ಲೆಸ್ ಆಗಿ ಮಾತನಾಡುತ್ತಾರೆ'' - ರೋಹಿತ್, ನಿರ್ಮಾಪಕ.

ನನ್ನ ಕಷ್ಟ ಯಾರು ಕೇಳ್ತಾರೆ.?
''ಈಗ 'ಕಮಲಿ' ಧಾರಾವಾಹಿಯನ್ನ ಬೇರೆ ನಿರ್ಮಾಪಕನಿಗೆ ವರ್ಗಾವಣೆ ಮಾಡಲು ನೋಡುತ್ತಿದ್ದಾರೆ. ಯಾರಿಗಾದರೂ ವರ್ಗಾವಣೆ ಮಾಡಲಿ. ಆದ್ರೆ, ನನ್ನ ದುಡ್ಡನ್ನು ನನಗೆ ಮೊದಲು ಕ್ಲಿಯರ್ ಮಾಡಲಿ. 'ಕಮಲಿ' ಸೀರಿಯಲ್ ಗಾಗಿ ನಾನು ತುಂಬಾ ಕಷ್ಟ ಪಟ್ಟಿದ್ದೇನೆ. ನನ್ನ ಕಷ್ಟ ಯಾರು ಕೇಳುತ್ತಾರೆ.? ಕೋರ್ಟ್ ಗೆ ಹೋಗಿ ಅಂತಾರೆ. ನನಗೆ ಸಾಲ ಕೊಟ್ಟಿರುವವರು ಸುಮ್ಮನೆ ಬಿಡ್ತಾರಾ.? ಹೀಗಾಗಿ ದೂರು ಕೊಟ್ಟಿದ್ದೇನೆ. ನನಗೆ ಆಗಿರುವ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು'' - ರೋಹಿತ್, ನಿರ್ಮಾಪಕ.


Click it and Unblock the Notifications











