'ಸರಿಗಮಪ' ಗೂಡು ಬಿಟ್ಟು ಮನೆಗೆ ಮರಳಿದ ಮರಿ ಕೋಗಿಲೆಗಳಿವರು
Recommended Video

ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಫೈನಲ್ ಸಂಚಿಕೆ ಇದೇ ಶನಿವಾರ ಪ್ರಸಾರ ಆಗುತ್ತಿದೆ. ಐದು ತಿಂಗಳ ಪ್ರಯಾಣ ಇದೀಗ ಕೊನೆ ಹಂತಕ್ಕೆ ಬಂದಿದೆ. ಒಂದು ಕಡೆ ಫೈನಲ್ ಬಂತು ಎಂಬ ಖುಷಿ ಇದ್ದರೆ, ಇನ್ನೊಂದು ಕಡೆ ಎಲ್ಲರಿಗೂ ಕಾರ್ಯಕ್ರಮ ಮುಗಿಯುತ್ತಿರುವ ನೋವು ಸಹ ಮೂಡಿದೆ.
ಸರಿಗಮಪ ಕಾರ್ಯಕ್ರಮದ ವಿಶೇಷ ಏನೆಂದರೆ ಇಲ್ಲಿ ಪ್ರತಿ ವಾರ ಎಲಿಮಿನೇಷನ್ ಇರುವುದಿಲ್ಲ. ಡೇಂಜರ್ ಜೋನ್ ಭಯ ಕಾಡುವುದಿಲ್ಲ. ಇದೊಂದು ಸ್ಪರ್ಧೆ ಎನ್ನುವುದಕ್ಕಿಂತ ಸಂಗೀತ ಶಾಲೆ ಎಂದು ಹೇಳಬಹುದು. ಅದೇ ರೀತಿ ಇಷ್ಟು ದಿನ ಎಲ್ಲ ಮಕ್ಕಳು ಒಟ್ಟಿಗೆ ಹಾಡು ಹೇಳುತ್ತಿದ್ದರು. ಆದರೆ ಕಾರ್ಯಕ್ರಮದ ಸೆಮಿ ಫೈನಲ್ ಹಂತದಲ್ಲಿ ಎಲಿಮಿನೇಷನ್ ಮಾಡಲೇ ಬೇಕಾದ ಅನಿವಾರ್ಯ ಬಂದಿತ್ತು.
ಅಂದಹಾಗೆ, 'ಸರಿಗಮಪ ಸೀಸನ್ 14' ಕಾರ್ಯಕ್ರಮದ ಸೆಮಿ ಫೈನಲ್ ಹಂತದಲ್ಲಿ ಎಲಿಮಿನೇಟ್ ಆದ ಮಕ್ಕಳ ಪಟ್ಟಿ ಮುಂದಿದೆ ಓದಿ...

ಆರು ಮಕ್ಕಳು ಎಲಿಮಿನೇಟ್
ಸರಿಗಮಪ ಕಾರ್ಯಕ್ರಮದಲ್ಲಿ ಒಟ್ಟು 12 ಮಕ್ಕಳು ಇದ್ದರು. ಈ ಪೈಕಿ ಐದು ಮಕ್ಕಳು ಫೈನಲ್ ಹಂತಕ್ಕೆ ಆಯ್ಕೆ ಆಗಿದ್ದಾರೆ. ನೇಹಾ ಕಾರ್ಯಕ್ರಮ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಆಗಿದ್ದು, ಆಕೆಗೆ ಫೈನಲ್ ನಲ್ಲಿ ಹಾಡುವ ಅವಕಾಶ ನೀಡಲಾಗಿದೆ. ಉಳಿದ ಆರು ಮಕ್ಕಳು ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ.

ಲಕ್ಷ್ಮಿ
ಬಹಳ ನಿರೀಕ್ಷೆ ಹುಟ್ಟಿಸಿದ್ದ ಲಕ್ಷ್ಮಿ ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಡಿಗೇರಿಯವರಾದ ಲಕ್ಷ್ಮಿ ಕಾರ್ಯಕ್ರಮದ ಪ್ರಾರಂಭದಲ್ಲಿ ತನ್ನ ಹಾಡುಗಾರಿಕೆ ಮೂಲಕ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದರು. ಲಕ್ಷ್ಮಿ 9ನೇ ತರಗತಿ ಓದುತ್ತಿದ್ದು, ಅವರ ಅಪ್ಪ ಮತ್ತು ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಅಂದ್ಹಾಗೆ, ಹಿಂದೆ ಯಾವುದೇ ಸಂಗೀತ ಅಭ್ಯಾಸ ಮಾಡದಿದ್ದರೂ ಲಕ್ಷ್ಮಿ ಕಾರ್ಯಕ್ರಮದ ಸೆಮಿ ಫೈನಲ್ ಹಂತದವರೆಗೆ ಬಂದಿದ್ದರು.

ಸೃಜನ್ ಪಟೇಲ್
ಮಂಡ್ಯದ ಗಂಡು ಸೃಜನ್ ಪಟೇಲ್ ಕಾರ್ಯಕ್ರಮದಿಂದ ಆಚೆ ಬಂದ ಎರಡನೇ ಸ್ಪರ್ಧಿ. ಸೃಜನ್ ಕೂಡ ಸಂಗೀತವನ್ನು ಕಲಿಯದೆ ತನ್ನ ಪ್ರತಿಭೆ ಮೂಲಕ ಕಾರ್ಯಕ್ರಮದಲ್ಲಿ ಆಯ್ಕೆ ಆಗಿದ್ದ. ಹೆಚ್ಚು ಮಾಸ್ ಹಾಡುಗಳನ್ನೇ ಹಾಡುತ್ತಿದ್ದ ಸೃಜನ್ ಒಳ್ಳೆಯ ಮನರಂಜನೆ ನೀಡುತ್ತಿದ್ದರು. ಇನ್ನು ಈ ಹುಡುಗ ಕಾರ್ಯಕ್ರಮದಲ್ಲಿ ಹಾಡುವುದಕ್ಕಾಗಿ ತಾನು ಸಾಕಿದ ಕರುವನ್ನೇ ಮಾಡಿದ್ದ.

ರುಚಿತಾ ರಾಜೇಶ್
ರುಚಿತಾ ರಾಜೇಶ್ ಕಾರ್ಯಕ್ರಮದಿಂದ ಎಲಿಮಿನೇಟ್ ಆದ ಮೂರನೇ ಸ್ಪರ್ಧಿ ಆಗಿದ್ದಾರೆ. ರುಚಿತಾ ಮೂಲತಃ ಮೈಸೂರಿನ ಹುಡುಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಎಲ್ಲ ರೀತಿಯ ಹಾಡುಗಳನ್ನು ಹಾಡಿ ಮೂರು ತೀರ್ಪುಗಾರರಿಂದ ಬೇಶ್ ಎನಿಸಿಕೊಂಡಿದ್ದರು. ಇನ್ನು ಸೆಮಿ ಫೈನಲ್ ನಲ್ಲಿ ರುಚಿತಾ ಹಂಸಲೇಖ ಅವರ 'ಹಾಡೆಂದರೆ ಮಗುವಮ್ಮ..' ಹಾಡಿಗೆ ಧ್ವನಿ ನೀಡಿದ್ದರು.

ದತ್ತ ಪ್ರಸಾದ್
ದತ್ತ ಪ್ರಸಾದ್ ಸಹ ಸರಿಗಮಪ ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ. ಬೆಂಗಳೂರಿನ ಹುಡುಗ ದತ್ತ ಪ್ರಸಾದ್ ಶಾಸ್ತ್ರಿಯ ಸಂಗೀತವನ್ನು ತುಂಬ ಚೆನ್ನಾಗಿ ಹಾಡುತ್ತಿದ್ದರು. ಇನ್ನು ಸೆಮಿ ಫೈನಲ್ ನಲ್ಲಿ ಮಾತನಾಡಿದ ದತ್ತ ಪ್ರಸಾದ್ ಅವರ ತಾಯಿ ''ಅವನು ಚಾಲೆಂಜ್ ತೆಗೆದುಕೊಂಡು ಕಾರ್ಯಕ್ರಮಕ್ಕೆ ಬಂದ. ಇಲ್ಲಿವರೆಗೆ ಅವನು ಬಂದಿರುವುದು ಖುಷಿ ಇದೆ'' ಎಂದರು.

ಕ್ಷಿತಿ ಕೆ ರೈ
ಧರ್ಮಸ್ಥಳದ ಹುಡುಗಿ ಕ್ಷಿತಿ ಕೆ ರೈ ಮುದ್ದಾದ ಹಾಡುಗಳ ಮೂಲಕ ಎಲ್ಲರಿಗೆ ಇಷ್ಟ ಆಗಿದ್ದರು. ಆದರೆ ಫೈನಲ್ ಹಂತಕ್ಕೆ ಕ್ಷಿತಿ ಆಯ್ಕೆ ಆಗಲು ಸಾಧ್ಯ ಆಗಲಿಲ್ಲ. ಇನ್ನು ಭಕ್ತಿ ಗೀತೆಗಳನ್ನು ಹೇಳುವುದರಲ್ಲಿ ಕ್ಷಿತಿ ಎತ್ತಿದ ಕೈ ಆಗಿದ್ದರು.

ತನುಶ್ರೀ
ಮೈಸೂರಿನಿಂದ ಬಂದ ತನುಶ್ರೀ ಎಲ್ಲ ಬಗೆಯ ಹಾಡುಗಳನ್ನು ಕಾರ್ಯಕ್ರಮದಲ್ಲಿ ಹಾಡುತ್ತಿದ್ದರು. ಭಕ್ತಿಗೀತೆಯಿಂದ ಮಾಸ್ ಹಾಡುಗಳ ವರೆಗೆ ಎಲ್ಲ ರೀತಿಯ ವೆರೈಟಿ ಹಾಡುಗಳಿಗೆ ಅವರು ಧ್ವನಿಯಾಗಿದ್ದರು. ಆದರೆ ಕೊನೆಯ ಹಂತದಲ್ಲಿ ಅವರ ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ.

ಫೈನಲ್ ಗೆ ಆಯ್ಕೆ ಆದ ಮಕ್ಕಳು
ಕೀರ್ತನಾ, ವಿಶ್ವಪ್ರಸಾದ್, ಜ್ಞಾನೇಶ್, ಅಭಿಜಾತ್ ಭಟ್, ತೇಜಸ್ ಶಾಸ್ತ್ರಿ ಫೈನಲ್ ಗೆ ಆಯ್ಕೆ ಆದ ಐದು ಮಕ್ಕಳಾಗಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮ ನೋಡುವ ವೀಕ್ಷಕರು ತಮ್ಮ ಮೆಚ್ಚಿನ ಸ್ಪರ್ಧಿಗಳಿಗಾಗಿ ಓಟ್ ಮಾಡಬಹುದಾಗಿದೆ. ಮೇ 26ರವರೆಗೆ ಓಟಿಂಗ್ ಲೈನ್ ತೆರೆದಿರುತ್ತದೆ.

ಇದೇ ಶನಿವಾರ ಫೈನಲ್
ಇನ್ನು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಸರಿಗಮಪ ಸೀಸನ್ 14 ಕಾರ್ಯಕ್ರಮದ ಫೈನಲ್ ಸಂಚಿಕೆ ಇದೇ ಶನಿವಾರ ಪ್ರಸಾರ ಆಗಲಿದೆ. ವಿಶೇಷ ಅಂದರೆ ಕಳೆದ ಬಾರಿಯಂತೆ ಈ ಬಾರಿಯೂ ಲೈವ್ ಆಗಿ ಕಾರ್ಯಕ್ರಮ ಪ್ರಸಾರ ಆಗುತ್ತಿದೆ.


Click it and Unblock the Notifications











