ಶಿವಾನಿ-ತ್ರಿಶೂಲ್ ಮದುವೆ: ಸ್ಪಷ್ಟನೆ ನೀಡಿದ ನಟ-ನಟಿ
'ನಾಗಿಣಿ 2' ಧಾರಾವಾಹಿಯ ಪಾತ್ರಗಳಾದ ತ್ರಿಶೂಲ್-ಶಿವಾನಿ ಅವರ ಮದುವೆ ಆರತಕ್ಷತೆಯ ಚಿತ್ರಗಳು, ವಿಡಿಯೋಗಳು ಹರಿದಾಡುತ್ತಿವೆ. ಹಲವರು ಈ ಇಬ್ಬರಿಗೆ ಕರೆ ಮಾಡಿ, ಸಂದೇಶ ಕಳುಹಿಸಿ ಮದುವೆಯ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ನಿಜವೆಂದರೆ, ಇಬ್ಬರಿಗೂ ಮದುವೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಧಾರಾವಾಹಿಗಾಗಿ ಆದ ಫೇಕ್ ಮದುವೆ ಮತ್ತು ಆರತಕ್ಷತೆ. ಆದರೆ ಈ ಆರತಕ್ಷತೆ ಕಾರ್ಯಕ್ರಮವನ್ನು ಭಿನ್ನವಾಗಿ ಮಾಡಿದ ಕಾರಣ ಮದುವೆಯಾಗಿದ್ದಾರೆಂದು ಸುಳ್ಳು ಸುದ್ದಿ ಹರಡಿದೆ.
ತ್ರಿಶೂಲ್ ಪಾತ್ರ ನಿರ್ವಹಿಸಿರುವ ನಿನಾದ್ ಹರಿತ್ಸ, ಶಿವಾನಿ ಪಾತ್ರದಲ್ಲಿ ನಟಿಸಿರುವ ನಮ್ರತಾ ಗೌಡ ಅವರುಗಳು ಒಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ, ಧಾರಾವಾಹಿಗಾಗಿ ನಾವು ಮದುವೆ ಆಗಿದ್ದೇವೆ, ನಿಜ ಜೀವನದಲ್ಲಿ ಅಲ್ಲ, ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಆಗಿದ್ದಿಷ್ಟು, 'ನಾಗಿಣಿ 2' ಧಾರಾವಾಹಿ ಕತೆಯಂತೆ ತ್ರಿಶೂಲ್-ಶಿವಾನಿ ಆರತಕ್ಷತೆ ಕಾರ್ಯಕ್ರಮ ಆಗಬೇಕಿತ್ತು. ಹಾಗಾಗಿ ಮಂಡ್ಯದಲ್ಲಿ ಶಿವಾನಿ-ತ್ರಿಶೂಲ್ ಅವರ ಆರತಕ್ಷತೆಯನ್ನು ಕಲ್ಯಾಣ ಮಂಟಪವೊಂದರಲ್ಲಿ ಆಯೋಜಿಸಲಾಗಿತ್ತು. ಧಾರಾವಾಹಿಯ ವೀಕ್ಷಕರನ್ನೇ ಆರತಕ್ಷತೆಗೆ ಅತಿಥಿಗಳನ್ನಾಗಿ ಆಹ್ವಾನಿಸಲಾಯಿತು. ಮಿಸ್ ಕಾಲ್ ಕೊಡುವ ಮೂಲಕ ಈ ಆಯ್ಕೆ ಮಾಡಲಾಯಿತು. ಹೀಗೆ ಆರತಕ್ಷತೆಗೆ ಬಂದ ಪ್ರೇಕ್ಷಕರಿಗೆ ಧಾರಾವಾಹಿ ನಟ-ತಂತ್ರಜ್ಞರೊಂದಿಗೆ ಸಂವಾದ ಸಹ ಏರ್ಪಡಿಸಲಾಗಿತ್ತು. ಧಾರಾವಾಹಿ ತಂಡದೊಂದಿಗೆ ಕೂತು ಊಟ ಮಾಡುವ ಅವಕಾಶವೂ ನೀಡಲಾಗಿತ್ತು. ಕಲ್ಯಾಣ ಮಂಟಪದಲ್ಲಿ ಭಾರಿ ಸಂಖ್ಯೆಯ ಅತಿಥಿಗಳ ಮುಂದೆ ಆರತಕ್ಷತೆ ನಡೆದ ಕಾರಣ ಇದು ನಿಜವಿರಬಹುದೆಂದು ಭಾವಿಸಿ ತ್ರಿಶೂಲ್-ಶಿವಾನಿ ಪಾತ್ರಧಾರಿಗಳಾದ ನಿನಾದ್ ಹರಿತ್ಸ, ನಮ್ರತಾ ಗೌಡ ಅವರುಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಆರತಕ್ಷತೆ ಕಾರ್ಯಕ್ರಮದಲ್ಲಿ ಇಡೀಯ 'ನಾಗಿಣಿ 2' ತಂಡ ಭಾಗವಹಿಸಿತ್ತು, ಮಾಮೂಲಿ ಧಾರಾವಾಹಿ ಚಿತ್ರೀಕರಣಕ್ಕಿಂತಲೂ ಭಿನ್ನವಾಗಿ, ರಿಯಲಿಸ್ಟಿಕ್ ಆಗಿ ಈ ಸಂಚಿಕೆಯ ಚಿತ್ರೀಕರಣ ಮಾಡಲಾಗಿದ್ದರಿಂದ ವಿಡಿಯೋ, ಚಿತ್ರಗಳನ್ನು ನೋಡಿದವರಿಗೆ ನಿಜವಾಗಿಯೂ ಇವರ ಮದುವೆ ಆಗಿದೆ ಎನಿಸಿತ್ತು. ಆದರೆ ಅದು ಸುಳ್ಳೆಂದು ಸ್ವತಃ ನಟ-ನಟಿಯರೇ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











