ವೀಕೆಂಡಲ್ಲಿ ಅಮೆರಿಕನ್ನಡಿಗ ಮೆಚ್ಚಿದ 'ಪ್ರಣಯರಾಜ' ಶ್ರೀನಾಥ್ ಕಥೆ
ವೀಕೆಂಡ್ ಬಂತೆಂದರೆ ಸಾಕು.... ಅಬ್ಬಾ ಆಫೀಸ್ ಕೆಲಸದ ಜಂಜಾಟವಿಲ್ಲದೆ.. ಸಂಜೆ ಎಲ್ಲಾದರೂ ಹೊರಗಡೆ ಅಡ್ಡಾಡಿಕೊಂಡು, ಯಾವುದಾದ್ರು ಹೋಟೆಲ್ನಲ್ಲೆ ಡಿನ್ನರ್ ತಿಂದುಕೊಂಡು ಬರೋಣಾ... ಅನ್ನೋದು ಮರ್ತೇ ಹೋಗಿದೆ ಇತ್ತೀಚಿಗೆ.. ಯಾಕೆ ಅಂತಿರಾ?
ಯಾಕೆಂದರೆ... ನನ್ನ ಅಚ್ಚು ಮೆಚ್ಚಿನ ಜನಪ್ರಿಯ ಕಾರ್ಯಕ್ರಮ "ವೀಕೆಂಡ್ ವಿಥ್ ರಮೇಶ್" ಜೀ-ಕನ್ನಡ ಚಾನೆಲ್ ನಲ್ಲಿ ಬರೋ ಸಮಯ.. ಅದರಲ್ಲೂ ಕಳೆದ ವಾರ ನಮ್ಮ 'ಪ್ರಣಯರಾಜ' ಶ್ರೀನಾಥ್ ಅವರು ಸಾಧಕರ ಕುರ್ಚಿ ಮೇಲೆ ಕೂತಿರೋದು! ಗಲಾಟೆ ಮಾಡ್ತಿದ್ದ ಮಗನಿಗೆ ಪಕ್ಕದ ರೂಮ್ನಲ್ಲಿ ವಿಡಿಯೋ ಗೇಮ್ಸ್ ಆಡಲಿಕ್ಕೆ ಹೇಳಿ... ಸೆಲ್ಫೋನ್, ಫೇಸ್ಬುಕ್, whatsapp ಎಲ್ಲಾ ಆಫ್ ಮಾಡಿಕೊಂಡು ನೋಡಿದೆ.
"ಕಂದ, ಓ ನನ್ನ ಕಂದ... ಕಂದಾ, ಆನಂದ ಕಂದಾ... ಓಡಿ ಓಡಿ ಓಡಿ ಓಡಿಬಾ ಕೃಷ್ಣಾ ಮುಕುಂದ, ತೋರೋ ನಿನ್ನ ಅಂದದ ಮುಖದಾರವಿಂದ" ಅಂತಾ ತನ್ನ ಕಂದನನ್ನು ಹುಡುಕುತ್ತಾ ನೋಡುಗರ ಕಣ್ಣಲ್ಲಿ ಕಣ್ಣೀರ ಹನಿ ಬರುವಂತೆ ಮಾಡಿ... [ಮಂಜುಳ ಸಾವಿನ ಕಡೆ ಕ್ಷಣಗಳನ್ನ ತೆರೆದಿಟ್ಟ ನಟ ಶ್ರೀನಾಥ್]

"ಈ ಸಂಭಾಷಣೆ - ನಮ್ಮ ಈ ಪ್ರೇಮ ಸಂಭಾಷಣೆ... ಅತಿ ನವ್ಯ, ರಸ ಕಾವ್ಯ ...ಮಧುರಾ ಮಧುರಾ ಮಧುರಾ" ಅಂತ ಪುಟ್ಟಣ್ಣ ಕಣಗಾಲ್ ಅವರ "ಧರ್ಮಸೆರೆ" ಚಲನಚಿತ್ರದಲ್ಲಿ ಯುಗಳ ಪ್ರೇಮ ಗೀತೆ ಹಾಡಿ...
"ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ, ಕಂಡು ನಿಂತೇ, ನಿಂತು ಸೋತೆ... ಸೋತು ಕವಿಯಾಗಿ ಕವಿತೆ ಹಾಡಿದೆ...." ಪ್ರೇಮಾನುಬಂಧದಲ್ಲಿ ಅಮರ ಪ್ರೇಮಿಯಾಗಿ ಹಾಡಿ...
"ವೇದಾಂತಿ ಹೇಳಿದನು ಹೊನ್ನೆಲ್ಲಾ ಮಣ್ಣು ಮಣ್ಣು - ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು...!" ಅಂತ ಪುಟ್ಟಣ್ಣ ಕಣಗಾಲ್ ಅವರ 'ಮಾನಸ ಸರೋವರ' ಚಿತ್ರದಲ್ಲಿ ವೇದಾಂತಿಯಾಗಿ ಹಾಡಿ... [ಗುಟ್ಟಾಗಿದ್ದ 'ಪ್ರಣಯರಾಜ' ಶ್ರೀನಾಥ್ ಪ್ರೇಮಪುರಾಣ ಬಯಲು]
"ನೀನೆ ಸಾಕಿದಾ ಗಿಣಿ, ನಿನ್ನ ಮುದ್ದಿನಾ ಗಿಣಿ.. ನಿನ್ನಾ ಹದ್ದಾಗಿ ಕುಕ್ಕಿತಲ್ಲೋ ನಿನ್ನ ಹದ್ದಾಗಿ ಕುಕ್ಕಿತಲ್ಲೋ?" ಅಂತ ಅದೇ "ಮಾನಸ ಸರೋವರದಲ್ಲಿ" ಹೃದಯ ಬಿರಿದ ಭಗ್ನ ಪ್ರೇಮಿಯಾಗಿ ಹಾಡಿ ಕಣ್ಣೀರ ಕೋಡಿ ಹರಿಸಿದ...
"ಹೂವೊಂದು ಬಳಿಬಂದು ತಾಕಿತು ಎನ್ನೆದೆಯ... ಏನೆಂದು ಕೇಳಲು ಹೇಳಿತು ಜೇನಂತ ಸಿಹಿನುಡಿಯ" ಶುಭಮಂಗಳದಲ್ಲಿ ಸಿಹಿಯಾಗಿ ಹಾಡಿ...
"ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ... ಪಯಣಿಗ ನಾನಮ್ಮ.... ಪ್ರೀತಿಯ ತೀರವ ಸೇರುವದೊಂದೇ ಬಾಳಿನ ಗುರಿಯಮ್ಮ" ಸುಂದರ ಹಾಡಿಗೆ ತಕ್ಕ ಹಾಗೆ.. "ಜಗದಲ್ಲಿ ಎಲ್ಲಕ್ಕಿಂತ ಪ್ರೀತಿಯೊಂದೆ ಶಾಶ್ವತ" ಅಂತಾ ಇಂದಿಗೂ ಸಹಾ ಎಲ್ಲರೊಂದಿಗೂ ಪ್ರೀತಿ-ಅಕ್ಕರೆಯಿಂದ ಒಡನಾಡುತ್ತಾ...
ಅಷ್ಟೊಂದು ನಾಯಕಿಯರ ಜೊತೆ ನಟಿಸಿದರೂ ಯಾವುದೇ ಗಾಸ್ಸಿಪ್ಗೆ ಎಡೆಕೊಡದೆ ಚಿತ್ರರಂಗದಲ್ಲಿ ಅಜಾತಶತ್ರುವಾಗಿ.... ಇಂದಿಗೂ ಹಿರಿತೆರೆ-ಕಿರಿತೆರೆಯಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳುತ್ತಿರುವ... ಚಿಕ್ಕವರನ್ನು ಕಂದಾ ಕಂದಾ ಅಂತಾ ಕರೆಯುವ ನಮ್ಮ ಪ್ರೀತಿಯ ಪ್ರಣಯರಾಜ ಶ್ರೀನಾಥ್ ಸರ್ ಅವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ, ಸುಖ-ಸಂತೋಷ ಕೊಡಲಿ ಎಂದು ದೇವರಲಿ ಬೇಡುವೆ ನಾ ಅನುಕ್ಷಣ...!
ಸಾಧನೆ ಮಾಡಿದ ಸಾಧಕರ ಜೀವನದ ಪುಟಗಳನ್ನು ಜನರ ಮುಂದೆ ತೆರೆದಿಡುವ ರಮೇಶ್ ಮತ್ತು ಜೀ - ಕನ್ನಡ ಚಾನೆಲ್ನ ಈ ಕಾರ್ಯಕ್ರಮ ಸಾಧಕರು ನಡೆದುಬಂದ ಜೀವನದ ಹಾದಿ, ಕಷ್ಟ-ಸುಖ, ಪರಿಶ್ರಮ ನೋಡುಗರಲ್ಲಿ ಸ್ಫೂರ್ತಿ ತರುವುದರ ಜೊತೆ ನಾವೂ ಸಾಧಿಸುವುದು ಇನ್ನೂ ಇದೆ ಎಂಬುದನ್ನು ಮನದಟ್ಟು ಮಾಡುತ್ತಿದೆ. ರಮೇಶ್ ಅರವಿಂದ್ ಮತ್ತು ತಂಡದವರಿಗೆ ಧನ್ಯವಾದಗಳು!
ಏನೋ ಸಂತೋಷ, ಏನೋ ಉಲ್ಲಾಸ, ಏನೋ ವಿಶೇಷ ಈ ದಿನ... ಶ್ರೀನಾಥ್ ಸರ್ ಅವರು ನಟಿಸಿದ ಚಿತ್ರದ ಈ ಸುಂದರ ಹಾಡುಗಳ ಕೇಳುತ್ತಿದ್ದರೆ ಮನದಲ್ಲಿ ಏನೋ ಒಂತರ ಭಾವ ಬಂಧನ!
ಶ್ರೀನಾಥ್ ಸರ್ ಅವರ "ಚಿತ್ರಗಳು, ಹಾಡುಗಳು ಹಳೆಯದಾದರೇನು, ಭಾವ ನವ ನವೀನ"... ಅಲ್ಲವೇ, ಅಂದಿಗೂ ಇಂದಿಗೂ ಎಂದೆಂದಿಗೂ? [ಶ್ರೀನಾಥ್ ರನ್ನ 'ಸ್ಟಾರ್' ಮಾಡಿದ್ದೇ ಕೆ.ಎಸ್.ಎಲ್.ಸ್ವಾಮಿ!]


Click it and Unblock the Notifications











