ನಟಿ ರಾಜ್ ಶ್ರೀ ಪೊನ್ನಪ್ಪ ಧೈರ್ಯಕ್ಕೆ ಮೆಚ್ಚಲೇಬೇಕು.!
ರಸ್ತೆಯಲ್ಲಿ ಓಡಾಡುವಾಗ... ಯಾರಾದರೂ ಹುಡುಗರು ಚುಡಾಯಿಸಿದರೆ, ನಮಗ್ಯಾಕೆ ಬೇಕು ಅಂತ ತಲೆ ಬಗ್ಗಿಸಿಕೊಂಡು ಹೋಗುವ ಹೆಣ್ಮಕ್ಕಳೇ ಹೆಚ್ಚು. ಬಸ್ ಗಳಲ್ಲಿ ತಳ್ಳಾಟ-ನೂಕಾಟ ಇರುವ ಸಂದರ್ಭದಲ್ಲಿ ಹುಡುಗರು ಅಸಭ್ಯವಾಗಿ ವರ್ತಿಸಿದರೆ, ದನಿ ಎತ್ತುವ ಹುಡುಗಿಯರು ಕೂಡ ತೀರಾ ಬೆರಳೆಣಿಕೆಯಷ್ಟು. ಹೀಗಿರುವಾಗ, ನಟಿ ರಾಜ್ ಶ್ರೀ ಧೈರ್ಯ ಮೆಚ್ಚಲೇಬೇಕು.
ಕೊಡಗಿನ ಕುವರಿ ರಾಜ್ ಶ್ರೀ ಪೊನ್ನಪ್ಪ ಕಾಲೇಜಿಗೆ ಹೋಗುತ್ತಿದ್ದಾಗ, ಯಾರೋ ಒಬ್ಬ ಆಕೆಯ ಸೊಂಟವನ್ನ ಗಿಲ್ಲಿ ಓಡಿ ಹೋದನಂತೆ. ತಕ್ಷಣ ಆತನನ್ನ ಹಿಂಬಾಲಿಸಿದ ರಾಜ್ ಶ್ರೀ, ಕಿಡಿಗೇಡಿಯನ್ನ ಪೊಲೀಸರಿಗೆ ಒಪ್ಪಿಸಿ ದೂರು ನೀಡಿ ಬಂದಿದ್ದರಂತೆ.

ಈ ಸಂಗತಿಯನ್ನ ನಟಿ ರಾಜ್ ಶ್ರೀ ಪೊನ್ನಪ್ಪ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು.
ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ನಟಿ ರಾಜ್ ಶ್ರೀ ಪೊನ್ನಪ್ಪ, ''ಕಾಲೇಜಿಗೆ ಹೋಗುತ್ತಿರುವಾಗ, ಒಬ್ಬ ನನ್ನ ಸೊಂಟ ಗಿಲ್ಲಿ ಓಡಿದ. ನಾನು ಫಾಲೋ ಮಾಡಿಕೊಂಡು ಹೋಗಿ, ಅವನ ಬೈಕ್ ಗೆ ಅಡ್ಡ ಹಾಕಿ, ಕೀ ಕಿತ್ತುಕೊಂಡು, ಪೊಲೀಸ್ ಸ್ಟೇಷನ್ ಗೆ ಕರ್ಕೊಂಡು ಹೋಗಿ, ಕಂಪ್ಲೇಂಟ್ ಕೊಟ್ಟು ಬಂದೆ'' ಎಂದರು.
''ಹೆಣ್ಮಕ್ಕಳಿಗೆ ತೊಂದರೆ ಆದರೆ ದನಿ ಎತ್ತಬೇಕು. ನಮ್ಮ ಕೈಯಲ್ಲಿ ಆಗಲಿಲ್ಲ ಅಂದ್ರೆ, ಯಾರಿಂದ ಸಾಧ್ಯವೋ ಅವರಿಂದ ತಪ್ಪು ಮಾಡಿದವರಿಗೆ ಸರಿಯಾದ ಪಾಠ ಕಲಿಸಬೇಕು'' ಎಂದು ಅದೇ ಶೋ ಮೂಲಕ ಎಲ್ಲ ಹೆಣ್ಮಕ್ಕಳಿಗೆ ರಾಜ್ ಶ್ರೀ ಪೊನ್ನಪ್ಪ ಸಂದೇಶ ನೀಡಿದರು.


Click it and Unblock the Notifications











