ಕನ್ನಡ ಕಿರುತೆರೆ ಪ್ರೇಕ್ಷಕರನ್ನ ಕ್ಷಮೆ ಕೇಳಿದ ನಟ ರವಿಶಂಕರ್ ಗೌಡ
Recommended Video
ಕನ್ನಡದ ಜನಪ್ರಿಯ ಧಾರಾವಾಹಿ 'ಸಿಲ್ಲಿ ಲಲ್ಲಿ' ಮತ್ತೆ ಬರ್ತಿದೆ. ಕಿರುತೆರೆ ಪ್ರೇಕ್ಷಕರನ್ನ ನಕ್ಕು ನಗಿಸಿದ್ದ ಸೂಪರ್ ಹಿಟ್ ಧಾರಾವಾಹಿ ಈಗ ಹೊಸ ರೂಪದಲ್ಲಿ ಬರುತ್ತಿದೆ. ಸಿಲ್ಲಿ ಲಲ್ಲಿಯ ಮುಖ್ಯಪಾತ್ರಧಾರಿಯಾಗಿದ್ದ ನಟ ರವಿಶಂಕರ್ ಗೌಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಜೊತೆಗೂ ಕ್ಷಮೆಯೂ ಕೇಳಿದ್ದಾರೆ.
ರವಿಶಂಕರ್ ಗೌಡಗೆ 'ಸಿಲ್ಲಿ ಲಲ್ಲಿ' ದೊಡ್ಡ ಟರ್ನಿಂಗ್ ಪಾಯಿಂಟ್. ಈ ಧಾರಾವಾಹಿ ಬಳಿಕ ರವಿಶಂಕರ್ ಗೆ ಹೆಚ್ಚಿನ ಅವಕಾಶಗಳು ಬಂದವು. ಇಂತಹ ಧಾರಾವಾಹಿ ಮತ್ತೆ ಬರ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ನಟ, ಬೇಸರದ ಸಂಗತಿಯೊಂದನ್ನ ಕೂಡ ನೀಡಿದ್ದಾರೆ.

ಆತ್ಮೀಯ ಗೆಳೆಯ/ಗೆಳೆತಿಯರೇ
ತುಂಬಾ ವರ್ಷಗಳಿಂದ ''ಸಿಲ್ಲಿ ಲಲ್ಲಿ'' ಮತ್ತೆ ಯಾವಾಗ ಪ್ರಾರಂಭ ಎಂದು ಕೇಳುತ್ತಿದ್ದಿರಿ. ಇದೋ ಮತ್ತೊಮ್ಮೆ ಸಿಲ್ಲಿ ಲಲ್ಲಿ ನಿಮ್ಮ ಮುಂದೆ....ಆದರೆ!!!!
ಡಾ. ವಿಠ್ಠಲ್ ಪಾತ್ರದಲ್ಲಿ ನಿಮ್ಮ ಮನಸ್ಸು ಗೆದ್ದಿದ್ದ ನಾನು ಇಲ್ಲಿಲ್ಲ. ಕ್ಷಮೆ ಇರಲಿ.....
ಈ ಧಾರಾವಾಹಿಯನ್ನು ಪ್ರಾರಂಭ ಮಾಡಿದಾಗ ನಾವೂ ಕೂಡ ಹೊಸಬರೆ ಆದರೂ ಸಿಹಿ ಕಹಿ ಚಂದ್ರು ಅವರು ನಮ್ಮ ಮೇಲೆ ನಂಬಿಕೆಯಿಟ್ಟಿದ್ದರು. ಆವತ್ತಿನ ದಿನ ನನಗೆ ಈ ಪಾತ್ರವನ್ನ ಮಾಅಡಲು ತುಂಬಾ ಕಷ್ಟವಾಗುತಿತ್ತು ! ಎಷ್ಟೋ ಬಾರಿ ಅವಮಾನವಾಗಿ ಕಣ್ಣೀರು ಹಾಕಿದ್ದು ಉಂಟು!!!
ಆದರೆ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ಚಂದ್ರಣ್ಣನ ಪ್ರೋತ್ಸಾಹ ಸರಾಗವಾಗಿ ಅಭಿನಯಿಸುವಂತೆ ಹಾಗೂ ನಿಮ್ಮ ಅಭಿಮಾನ ಗಳಿಸುವಂತೆ ಮಾಡಿತ್ತು....ಇರಲಿ...ಹೊಸ ತಂಡವನ್ನು ಕಟ್ಟಿಕೊಂಡು ಚಂದ್ರಣ್ಣ ಮತ್ತೊಮ್ಮೆ ''ಸಿಲ್ಲಿ ಲಲ್ಲಿ''ಯನ್ನು ಕಿರುತೆರೆಗೆ ಅರ್ಪಣೆ ಮಾಡುತ್ತಿದ್ದಾರೆ. ಆ ತಂಡಕ್ಕೆ ನಿಮ್ಮ ಪ್ರೋತ್ಸಾಹ ಅಗತ್ಯ. ನಾನು ಕೂಡಾ ನನ್ನ ಪಾತ್ರವನ್ನು ಹಾಗೂ ನನ್ನ ಸಹವರ್ತಿಗಳ ಪಾತ್ರಗಳನ್ನು ಮತ್ತೊಬ್ಬರು ನಿರ್ವಹಿಸುವುದನ್ನು ನೋಡಬೇಕೆಂದು ಕುತೂಹಲದಿಂದ ಕಾಯುತ್ತಿದ್ದೇನೆ.
ಹೊಸ ಸಿಲ್ಲಿ ಲಲ್ಲಿ ಯಶಸ್ವಿಯಾಗಲಿ....
ಸದಾ ನಿಮ್ಮ ಮನಸ್ಸಿನಲ್ಲಿ. ಡಾ.ವಿಠ್ಠಲ್ ರಾವ್ ರವಿಶಂಕರ್ ಗೌಡ...
ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಸಿಲ್ಲಿ ಲಲ್ಲಿ ಪ್ರಸಾರವಾಗಲಿದೆ ಎಂಬ ಪ್ರೋಮೋ ಬರ್ತಿದೆ. ಆದ್ರೆ, ಯಾವಾಗ ಆರಂಭ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಹಳೇ ಸಿಲ್ಲಿ ಲಲ್ಲಿ ಧಾರಾವಾಹಿಯನ್ನ ವಿಜಯ ಪ್ರಸಾದ್ ನಿರ್ದೇಶನ ಮಾಡಿದ್ದರು. ಸಿಹಿ ಕಹಿ ಚಂದ್ರ ನಿರ್ಮಿಸಿದ್ದರು. ಜೊತೆಗೆ ನರಸಿಂಹ ಮೂರ್ತಿ ಅವರ ಸಂಭಾಷಣೆ ಈ ಧಾರಾವಾಹಿಗೆ ಯಶಸ್ಸು ತಂದುಕೊಟ್ಟಿತ್ತು.


Click it and Unblock the Notifications











