ಗೌರಿ ಗಣೇಶ ಹಬ್ಬಕ್ಕೆ ಸರಳ ಜೀವನದಲ್ಲಿ 'ಹಳ್ಳಿಮನೆ ಅಡುಗೆ'
ಸರಳ ಜೀವನ, ಕನ್ನಡದ ಕಿರುತೆರೆ ಲೋಕದ ಪ್ರಪ್ರಥಮ ಇನ್ಫೋಟೈನ್ಮೆಂಟ್ ವಾಹಿನಿ; ಇತಿಹಾಸ, ಪುರಾಣ, ಪ್ರವಾಸ ಹಾಗೂ ಭಾರತೀಯ ಸಂಸ್ಕೃತಿ-ಪರಂಪರೆ ಆಧರಿಸಿದ ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮಗಳಿಂದ ಜನಪ್ರಿಯತೆ ಗಳಿಸಿರುವ ವಾಹಿನಿ. ಕನ್ನಡದ ನ್ಯೂಸ್ ಚಾನೆಲ್ ಗಳು ಹಾಗೂ ಮನರಂಜನಾ ವಾಹಿನಿಗಳಿಗಿಂತ ಭಿನ್ನವಾದ ಕಾರ್ಯಕ್ರಮಗಳು ಹಾಗೂ ಸುದ್ದಿ ಪ್ರಸಾರದ ಮೂಲಕ ತನ್ನದೇ ಬಹುದೊಡ್ಡ ವೀಕ್ಷಕ ಬಳಗವನ್ನು ಸೃಷ್ಟಿಸಿಕೊಂಡಿರುವ ವಾಹಿನಿ ಸರಳ ಜೀವನ.
ಇದೀಗ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ಕಿರುತೆರೆಯ ವೀಕ್ಷಕ ಲೋಕಕ್ಕೆ ಹಬ್ಬದೂಟದ ಸವಿಯುಣಿಸಲು ಸರಳ ಜೀವನ ವಾಹಿನಿಯು ಸಜ್ಜಾಗಿದೆ.
2018ರ ಸೆಪ್ಟೆಂಬರ್ 3ರಿಂದ ವಾಹಿನಿಯಲ್ಲಿ ಹೊಸ ಕಾರ್ಯಕ್ರಮಗಳು ಆರಂಭವಾಗಲಿವೆ. ಅವುಗಳ ಪೈಕಿ ಹಳ್ಳಿಮನೆ ಅಡುಗೆ ಗ್ರಾಮೀಣ ಆಹಾರ ಪದ್ಧತಿ ಕುರಿತ ಕಾರ್ಯಕ್ರಮವಾದ್ರೆ, ಬೆಳ್ಳಿಪರದೆ ಕನ್ನಡ ಚಿತ್ರರಂಗದ ಹಾಸ್ಯನಟರ ಬದುಕಿನ ಚಿತ್ರಣವಾಗಿದೆ.
ಹಳ್ಳಿಮನೆ ಅಡುಗೆ: (ಪ್ರತಿದಿನ ಮಧ್ಯಾಹ್ನ 12:30ಕ್ಕೆ ಮತ್ತು ಸಂಜೆ 5.30ಕ್ಕೆ): ವೀಕ್ಷಕರ ರುಚಿ ಸಂವೇದನೆಯನ್ನು ಬಡಿದೆಬ್ಬಿಸುವ ಹಾಗೂ ಅಭಿರುಚಿಯನ್ನು ರೂಪಿಸುವ ಕಾರ್ಯಕ್ರಮ ಹಳ್ಳಿಮನೆ ಅಡುಗೆ. ಮರಗಿಡ ಹೊಲ ಗದ್ದೆ ಹಿತ್ತಿಲುಗಳಿಂದ ಆವೃತವಾದ ಹಳ್ಳಿಯ ಸುಂದರ ಪರಿಸರದಲ್ಲಿ ಹಳ್ಳಿಯ ಹೆಣ್ಣುಮಕ್ಕಳಿಂದಲೇ ವಿಧವಿಧವಾದ ಹಳ್ಳಿಗಾಡಿನ ತಿಂಡಿ ತಿನಿಸುಗಳನ್ನು ಮಾಡಿಸುವ ಕಾರ್ಯಕ್ರಮ ಇದು. ಕಟ್ಟಿಗೆ ಒಲೆಯನ್ನು ಬಳಸಿ ಮಣ್ಣಿನ ಮಡಕೆಗಳಲ್ಲಿ ಅಡುಗೆ ಮಾಡುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷ.
ನಮ್ಮ ಹಿರೀಕರ ಕಾಲದ ಅಡುಗೆ ಶೈಲಿಯನ್ನು ಮರುಶೋಧಿಸುವುದು ಹಾಗೂ ವೀಕ್ಷಕರ ಮುಂದಿಡುವುದು ನಮ್ಮ ಉದ್ದೇಶ. ಅದರ ಜೊತೆಜೊತೆಗೆ ಗ್ರಾಮೀಣ ಕರ್ನಾಟಕದ ಸೌಂದರ್ಯ ಹಾಗೂ ಸಮೃದ್ಧಿಯನ್ನು ವೀಕ್ಷಕರಿಗೆ ತೋರಿಸಲಾಗುವುದು.

ಬೆಳ್ಳಿಪರದೆ (ಹಾಸ್ಯನಟರ ಸರಣಿ - ಸೋಮ-ಶುಕ್ರ ರಾತ್ರಿ 8:30ಕ್ಕೆ)
ಬೆಳ್ಳಿಪರದೆಯ ಹೊಸ ಸರಣಿಯಲ್ಲಿ ಹಾಸ್ಯನಟರ ಬದುಕನ್ನು ತೋರಿಸಲಾಗುವುದು. ವೀಕ್ಷಕರನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗಕ್ಕೆ ಕರೆದೊಯ್ಯುವಂಥ ಕಾರ್ಯಕ್ರಮ ಇದು. ಎಪ್ಪತ್ತು, ಎಂಭತ್ತರ ದಶಕಗಳಿಂದ ಹಿಡಿದು ಇತ್ತೀಚಿನ ಕಾಲದವರೆಗೆ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ ಹಾಸ್ಯನಟರ ಬದುಕಿನ ಕಥೆಯೇ ಬೆಳ್ಳಿಪರದೆ.
ಜನರನ್ನು ನಗಿಸುತ್ತಿದ್ದವರ ಬದುಕಿನಲ್ಲಿ ನಗುವೇ ಇರಲಿಲ್ಲ ಅನ್ನುವ ಮಾತು ಕನ್ನಡ ಹಾಸ್ಯನಟರ ಮಟ್ಟಿಗೆ ಹೇಗೆ ನಿಜವಾಗಿದೆ ಎನ್ನುವುದನ್ನು ಈ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತದೆ. ಹಾಗೆಯೇ ಅವರ ಚಿತ್ರಬದುಕಿನ ಪ್ರಮುಖ ಘಟ್ಟಗಳನ್ನು ತೋರಿಸಿ ಪ್ರೇಕ್ಷಕರಿಗೆ ರಂಜನೆಯ ಲೋಕದ ಹೊಸ ಮಜಲನ್ನು ಪರಿಚಯಿಸಲಾಗುವುದು.

ಮನುಕುಲದ ಒಳಿತಿಗಾಗಿ ಎನ್ನುವುದು ವಾಹಿನಿಯ ಆಶಯ
ಮನುಕುಲದ ಒಳಿತಿಗಾಗಿ ಎನ್ನುವುದು ಸರಳ ಜೀವನ ವಾಹಿನಿಯ ಮುಖ್ಯ ಆಶಯ ಹಾಗೂ ಧ್ಯೇಯವಾಕ್ಯ. ಇದಕ್ಕೆ ತಕ್ಕಂತೆ ನಾವು ಇತ್ತೀಚೆಗೆ ಆರಂಭಿಸಿದ ಒಳಿತು ಮಾಡು ಮನುಷ್ಯ ಕಾರ್ಯಕ್ರಮವು ವೀಕ್ಷಕರಲ್ಲಿ ಹಂಚಿ ಉಣ್ಣುವ, ಕೊಡುವ ಮನೋಭಾವವನ್ನು ಪ್ರೇರೇಪಿಸುತ್ತಿದೆ. ಇನ್ನು ಹಳ್ಳಿಮನೆ ಅಡುಗೆ ಕಾರ್ಯಕ್ರಮವು ವೀಕ್ಷಕರನ್ನು ನಮ್ಮ ಹಳ್ಳಿಗಳಿಗೆ ಕರೆದೊಯ್ಯುತ್ತದೆ' ಎನ್ನುವುದು ಸಿ ಜಿ ಪರಿವಾರ್ ಗುಂಪಿನ ಅಧ್ಯಕ್ಷರಾದ ಡಾ.ಚಂದ್ರಶೇಖರ ಗುರೂಜಿಯವರ ಅಭಿಮತ.

ಭಾರತದ ನಿಜವಾದ ಗ್ರಾಮೀಣ ಶೈಲಿ
ಸರಳ ಜೀವನ ವಾಹಿನಿಯ ಮೂಲ ದ್ರವ್ಯವು ಭಾರತ ಹಾಗೂ ಭಾರತದ ವೈಭವಯುತವಾದ ಗತಕಾಲವನ್ನು ಕುರಿತದ್ದು. ನಾವು ಸದಾಕಾಲ ಹೊಸ ಬೆಳಕಿನಲ್ಲಿ ತೋರಿಸಲು ಬಯಸುವ ಕ್ಷೇತ್ರವೇ ಅಡುಗೆ ಕ್ಷೇತ್ರ. ಹಳ್ಳಿಮನೆ ಅಡುಗೆ ಕಾರ್ಯಕ್ರಮವು ಕೇವಲ ಮಡಿಕೆಗಳಲ್ಲಿ ಅಡುಗೆ ಮಾಡುವ ಆರೋಗ್ಯವಂತ ಪದ್ಧತಿಯನ್ನಷ್ಟೇ ತೋರಿಸುವುದಕ್ಕೆ ಸೀಮಿತವಾಗಿಲ್ಲ;
ಭಾರತದ ನಿಜವಾದ ಗ್ರಾಮೀಣ ಶೈಲಿಯನ್ನೂ ಇದು ತೋರುತ್ತದೆ. ಕನ್ನಡ ವೀಕ್ಷಕರು ನವೀನ ರೀತಿಯ ಈ ಅಡುಗೆ ಕಾರ್ಯಕ್ರಮವನ್ನು ಇಷ್ಟ ಪಡುತ್ತಾರೆ ಎನ್ನುವ ವಿಶ್ವಾಸ ನಮ್ಮದು' ಎನ್ನುತ್ತಾರೆ ಸರಳ ಜೀವನ ವಾಹಿನಿಯ ಬ್ಯುಸಿನೆಸ್ ಹೆಡ್ ರಘುನಾಥ ರೆಡ್ಡಿ.

ಮಾಹಿತಿ ಹಾಗೂ ಮನರಂಜನಾಯುಕ್ತ ಚಾನೆಲ್
ಸರಳ ಜೀವನ ವಾಹಿನಿಯು ಕನ್ನಡ ಪ್ರಥಮ ಮಾಹಿತಿ ಹಾಗೂ ಮನರಂಜನಾಯುಕ್ತ ಚಾನೆಲ್ ಆಗಿದ್ದು, ಪುರಾಣ, ಇತಿಹಾಸ, ಪ್ರವಾಸ ಹಾಗೂ ಭಾರತೀಯ ಸಂಸ್ಕೃತಿಯನ್ನು ಆಧರಿಸಿದ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತಿದೆ. ಸ್ಫೂರ್ತಿಯುತವಾದ, ಜೀವನೋತ್ಸಾಹ ತುಂಬುವಂಥ, ಧನಾತ್ಮಕವಾದ ಮಾಹಿತಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುವುದು ವಾಹಿನಿಯ ತತ್ವವಾಗಿದೆ.

ಪೂರ್ಣ ಪ್ರಮಾಣದ ಸ್ಯಾಟಲೈಟ್ ಚಾನೆಲ್
ಪೂರ್ಣ ಪ್ರಮಾಣದ ಸ್ಯಾಟಲೈಟ್ ಚಾನೆಲ್ ಆಗಿದ್ದು, ಕರ್ನಾಟಕದ ಎಲ್ಲ ಎಂಎಸ್ಓಗಳಲ್ಲಿ ಹಾಗೂ ಡಿಟಿಎಚ್ಗಳಲ್ಲಿ (ಏರ್ಟೆಲ್: 967, ವಿಡಿಯೋಕಾನ್: 686, ಮತ್ತು ರಿಲಯೆನ್ಸ್ ಬಿಗ್ ಟಿವಿ: 836) ಲಭ್ಯ. ಸರಳ ಜೀವನ ವಾಹಿನಿಯು ಸರಳ ವಾಸ್ತುವಿನ ಆವಿಷ್ಕಾರಕರಾದ ಡಾ. ಚಂದ್ರಶೇಖರ ಗುರೂಜಿ ಸ್ಥಾಪಿಸಿದ ಸಿ ಜಿ ಪರಿವಾರ ಗುಂಪಿನ ಒಂದು ಭಾಗವಾಗಿದೆ.


Click it and Unblock the Notifications











