ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಸರಸ್ವತಿ
ಸರಸ್ವತಿ...ಸೌಮ್ಯ ಸ್ವಭಾವದ ಶಾಂತ ಸ್ವರೂಪವನ್ನು ಬಿಂಬಿಸುವ ಹೆಸರು. ದೇವಲೋಕದ ಸರಸ್ವತಿ ಸೈಲೆಂಟ್ ಆದರೆ ಈ ಭೂಲೋಕದ ಸರಸ್ವತಿ ಸದಾ ವೈಲೆಂಟ್. ತನ್ನ ಹೆಸರು ಸರಸ್ವತಿಯೇ ಆದರೂ ತಾನು ಪ್ರೀತಿಸುವುದು ಮಾತ್ರ ಲಕ್ಷ್ಮಿಯನ್ನು ಎಂಬುಂದು ಈಕೆಯ ನೀತಿ. ಅತ್ತೆ ಸರಸ್ವತಿಗೆ ಐಶ್ವರ್ಯ ಲಕ್ಷ್ಮಿ ಬೇಕು. ಆದರೆ ಸೊಸೆ ಹೆಸರಿಗೆ ಮಾತ್ರ ಲಕ್ಷ್ಮಿ.
ಸ್ಟಾರ್ ನೆಟ್ ವರ್ಕ್ಸ್ ನ ಸುವರ್ಣ ವಾಹಿನಿಯು ವಿನೂತನ ಧಾರಾವಾಹಿ 'ಸರಸ್ವತಿ'ಯನ್ನು ಪ್ರಾರಂಭಿಸುತ್ತಿದೆ. ಅತ್ತೆ ಸೊಸೆಯಂದಿರ ಮಧ್ಯೆ ನಡೆಯುವ ಸಿರಿತನ ಬಡತನಗಳ, ಬಾಂಧ್ಯವ ಮತ್ತು ಭಾವನೆಗಳ ಸುತ್ತ ಹೆಣೆದಿರುವ ಕಥೆ ಇದು. ಈ ಧಾರವಾಹಿ ಏಪ್ರಿಲ್ 29 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರ ಸಂಜೆ 6.30 ಪ್ರಸಾರವಾಗಲಿದೆ.

ಇಲ್ಲಿ ಅತ್ತೆ ಸರಸ್ವತಿ ಶ್ರೀಮಂತಿಕೆಯ ಸಾಗರದಲ್ಲಿ ಮುಳುಗಿದವಳು. ಬಡತನ, ಬಡವರನ್ನು ದ್ವೇಷಿಸುವುದು. ತಮ್ಮಂತಹ ಸಿರಿವಂತರಿಗೆ ದಾರಿದ್ರ್ಯದ ಸೋಂಕು ತಗುಲಬಾರದೆಂದು ಅವಳ ಮೂರು ಜನ ಗಂಡು ಮಕ್ಕಳಾದ ವಿಕ್ರಮ್, ವಿಶಾಲ್ ಮತ್ತು ವಿನೋದ್ ರವರಿಗೆ ಶ್ರೀಮಂತ ಮನೆತನದ ಹೆಣ್ಣುಮಕ್ಕಳನ್ನೇ ಹುಡುಕಿ ತಂದು ಸೊಸೆಯಂದಿರನ್ನಾಗಿ ಮಾಡಿಕೊಳ್ಳಬೇಕು ಎಂಬ ಭಾವನೆಯವಳು.
ಆದರೆ ಬಡತನದ ಸಿರಿದೇವಿಯಾದ ಗುಣವಂತೆ ಮನೆಗೆ ಸೊಸೆಯಾಗಿ ಬಂದಾಗ, ಅವಳು ಅತ್ತೆ ಸರಸ್ವತಿಯಿಂದ ಅನುಭವಿಸುವ ವೇದನೆ, ಅತ್ತೆಯ ಚಿತ್ರಹಿಂಸೆ ಜೊತೆಗೆ ಗಂಡನ ಅಸಾಹಕ ಸ್ಥಿತಿಯನ್ನು ಅರ್ಥಮಾಡಿಕೊಂಡು ಸಹನೆಯಿಂದ ಸಮಸ್ಯೆಗಳನ್ನು ಎದುರಿಸಿ ಮುಂದೊಂದು ದಿನ ತನಗೂ ಉತ್ತಮ ದಿನಗಳು ಬರಬಹುದು ಎಂಬ ನಿರೀಕ್ಷೆಯಲ್ಲಿ ಸಾಗುವ ಸೊಸೆಯ ಜೀವನವನ್ನು ಬಿಂಬಿಸುತ್ತ ಕಥೆ ಮುಂದುವರೆಯುತ್ತದೆ.
ಗುಣಕ್ಕಿಂತ ಹಣವೇ ಮುಖ್ಯ ಎನ್ನುವ ಅತ್ತೆಯ ಸಂಕುಚಿತ ಮನೋಭಾವನೆಯನ್ನು ಇಲ್ಲಿ ಸೊಸೆ ಲಕ್ಷ್ಮೀ ಗೆಲ್ಲಬಲ್ಲಳೇ? ಬಡತನವನ್ನೇ ಸಹಿಸದ ಅತ್ತೆ ಸರಸ್ವತಿ ಬಡತನದ ಮನೆಯ ಹೆಣ್ಣು ಸೊಸೆ ಲಕ್ಷ್ಮೀಯನ್ನೇ ಅವಲಂಬಿಸುವ ಕಾಲವೂ ಬರಬಹುದೇ?
ಸದಾ ಭರವಸೆಯ ಹಾದಿಯನ್ನೇ ಕಾಯುವ ಲಕ್ಷ್ಮೀಗೆ ಒಳ್ಳೆಯ ಕಾಲ ಬರುತ್ತದೆಯೆ? ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ವೀಕ್ಷಕರೆದುರಿಗೆ ನಿಲ್ಲುವ ಹೊಚ್ಚ ಹೊಸ ಧಾರವಾಹಿ ಸರಸ್ವತಿ. ಹಣವೇ ಜೀವನವೆಂಬ ಸರಸ್ವತಿಯನ್ನು ಗುಣವೇ ಜೀವವೆಂಬ ಲಕ್ಷ್ಮೀ ಗೆದ್ದದ್ದು ಹೇಗೆ ಎಂಬುದೇ ಕಥೆಯ ತಿರುವು.
ಕಲಾವಿದ ಬಳಗ: ಶಿವಾನಂದ್,ಸೂರಿ ಸರಗ, ಯೋಗೆಶ್, ಅಶ್ವಿನ್, ತನುಜಾ ಹೆಚ್.ಪಿ, ಹೆಚ್.ಎಂ.ಟಿ ಕೃಷ್ಣಮೂರ್ತಿ, ಅಮೃತ ( ಲಕ್ಷ್ಮೀ), ಸುಕೃತಿನಾಗ್, ಸವಿತ ಶೆಟ್ಟಿ, ಚಂದನ, ಭಾಸ್ಕರ್, ಪ್ರಿಯಾ ತನುಜಾ ಮೊದಲಾದವರು..
ತಾಂತ್ರಿಕ ವರ್ಗ: ನಿರ್ದೇಶನ- ಎಸ್ ಗೋವಿಂದ್, ನಿರ್ಮಾಪಕಿ - ಶಶಿಕಲಾ, ಛಾಯಾಗ್ರಹಣ - ಪ್ರಶಾಂತ್ ಪಾಟೀಲ್, ಸಂಕಲನ - ಮನು, ನಿರ್ಮಾಣ ವಿನ್ಯಾಸ- ರವಿ ಸ್ನೇಹಿತ್, ಸಂಗೀತ ಗಿರಿಧರ್ ದಿವಾನ್, ಪ್ರಸಾದನ - ಸ್ವಾಮಿ ಎಸ್.ಎರ್ ಮೊದಲಾದವರನ್ನೊಳಗೊಂಡಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











