ಇಂಗ್ಲೆಂಡ್ ನಲ್ಲಿ ಚಿತ್ರೀಕರಣಗೊಂಡಿದೆ ಉದಯ ವಾಹಿನಿಯ 'ಅವಳು'
ಸೋಮವಾರ ದಿಂದ ಶುಕ್ರವಾರ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ವಿಭಿನ್ನ ಕಥಾಹಂದರವನ್ನು ಹೊಂದಿರುವ 'ಅವಳು' ಧಾರಾವಾಹಿ ಈಗಾಗಲೇ ಸಾಕಷ್ಟು ಜನರ ಮೆಚ್ಚುಗೆ ಪಡೆದಿದೆ. ಈಗ ಮತ್ತೊಂದು ವಿಭಿನ್ನ ಪ್ರಯತ್ನದ ಮೂಲಕ 'ಅವಳು' ಧಾರಾವಾಹಿ ಸದ್ದು ಮಾಡಿದೆ.
ಅದೇನಪ್ಪಾ ಅಂದ್ರೆ, ಕಥೆಯ ಭಾಗವಾಗಿ 'ಅವಳು' ತಂಡ ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಇಂಗ್ಲೆಂಡ್ ನಲ್ಲಿ ಚಿತ್ರೀಕರಣ ಮುಗಿಸಿ ಬಂದಿದೆ.

ತಂಗಿಯ ಹಿತಕ್ಕಾಗಿ ತನಗಿಂತ ವಯಸ್ಸಿನಲ್ಲಿ ಹೆಚ್ಚು ಅಂತರವಿರುವ ಮಧುಸೂದನನನ್ನು ನಾಯಕಿ ಮಾನಸ ಮದುವೆಯಾಗುತ್ತಾಳೆ. ಆದರೆ ವಿಧಿಲಿಖಿತ ಬೇರೆ ಎನ್ನುವ ಹಾಗೆ ಮಾನಸ ತಂಗಿಯ ಗಂಡನೇ ತನ್ನ ಕಳೆದುಹೋಗಿರೋ ಮಗ ಸಿದ್ಧಾರ್ಥ ನೆಂದು ಮಧುಸೂದನನಿಗೆ ಗೊತ್ತಾಗುತ್ತದೆ. ಸಂಬಂಧಗಳ ಗೋಜಲುಗಳ ಮಧ್ಯೆ ಸಿಲುಕಿರುವ ಮಧು ಇವನ್ನೆಲ್ಲಾ ಯಾರಿಗೂ ಹೇಳದೇ ಪರೋಕ್ಷವಾಗಿ ಸಿದ್ದಾರ್ಥ ಮತ್ತು ಶ್ವೇತಾಳನ್ನ ತನ್ನ ಮನೆಗೆ ಕರೆದುಕೊಂಡು ಬರುತ್ತಾನೆ. ಹೀಗೆ ಗೊತ್ತಿಲ್ಲದೇ ಅಕ್ಕ ತಂಗಿ ಒಂದೇ ಮನೆಗೆ ಅತ್ತೆ ಸೊಸೆಯಾಗಿ ಬಂದಿರುತ್ತಾರೆ. ಆದರೆ ಕಂಪೆನಿಯ ಒತ್ತಡದಲ್ಲಿ ಮಧು ಇಂಗ್ಲೆಂಡ್ ಗೆ ಹೋಗಬೇಕಾಗಿ ಬರುತ್ತದೆ. ಇವನಿಲ್ಲದ ಸಮಯದಲ್ಲಿ ಅಕ್ಕ ತಂಗಿಯ ನಡುವೆ ಒಡಕು ಮೂಡುವಂತೆ ಮಯೂರಿ ಸನ್ನಿವೇಶ ಸೃಷ್ಟಿ ಮಾಡುತ್ತಾಳೆ.
ಕಥೆಯ ಬೇಡಿಕೆಗೆ ತಕ್ಕಂತೆ ಇಂಗ್ಲೆಂಡಿನಲ್ಲಿ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮನಗೆಲ್ಲುವುದು ಖಚಿತವೆಂಬ ಆತ್ಮವಿಶ್ವಾಸದಲ್ಲಿದ್ದಾರೆ ಛಾಯಾಗ್ರಾಹಕ/ನಿರ್ದೇಶಕ ನಾಗರಾಜ ಉಪ್ಪುಂದ ಮತ್ತು ನಿರ್ಮಾಪಕ ಗುರುರಾಜ್ ಕುಲಕರ್ಣಿ.

ಇಂಗ್ಲೆಂಡಿನ ಜನರ ಜೀವನ ಶೈಲಿಯ ಅನುಸಾರವಾಗಿ ತೊಟ್ಟ ಉಡುಗೆಗಳು ಮತ್ತು ಈ ಹೊಸ ಅನುಭವದ ಬಗ್ಗೆ ಮೆಲುಕು ಹಾಕುತ್ತಾ 'ಅವಳು' ತಂಡಕ್ಕೆ ಧನ್ಯವಾದ ತಿಳಿಸಲು ಮರೆಯಲ್ಲ ಅಂತಾರೆ ನಟ/ಸಂಗೀತ ನಿರ್ದೇಶಕ ಪ್ರವೀಣ್ ಡಿ.ರಾವ್.
ಈ ಹೊಸ ಪ್ರಯತ್ನದ ಹೊಸ ಸ್ವಾದ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











