ಸಿದ್ಧರಾಮಯ್ಯ ಜೊತೆಗೆ ಉಪೇಂದ್ರ ಏನ್ ಮಾತಾಡ್ತಾರೆ ?
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದ ಉಪೇಂದ್ರ ಮತ್ತು ಗುರುಕಿರಣ್ ಇಬ್ಬರು ಶಿವಣ್ಣನ ಜೊತೆಗೆ ಸೇರಿ ಸಾಕಷ್ಟು ವಿಷಯಗಳನ್ನು ಖುಷಿ ಖುಷಿಯಾಗಿ ಮಾತನಾಡಿರು. ಸಿನಿಮಾ, ಪ್ರಜಾಕೀಯ, ವೈಯಕ್ತಿಕ ವಿಷಯಗಳನ್ನು ಶಿವಣ್ಣನೊಂದಿಗೆ ಉಪ್ಪಿ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಕಾರ್ಯಕ್ರಮ ರಾಪಿಡ್ ಫೈರ್ ಸುತ್ತಿನಲ್ಲಿ ಶಿವಣ್ಣ ಕೇಳುವ ಪ್ರಶ್ನೆಗಳಿಗೆ ಉಪೇಂದ್ರ ಪಟಾಪಟ್ ಅಂತ ಉತ್ತರ ನೀಡಿದರು.
ಶಿವಣ್ಣ 'ನೀವು ಸಿದ್ಧರಾಮಯ್ಯ ಅವರ ಜೊತೆಗೆ ಒಂದು ರೂಮ್ ನಲ್ಲಿ ಇದ್ದರೆ ಏನ್ ಮಾತಾಡುತ್ತೀರ?' ಎಂದು ಉಪ್ಪಿಗೆ ಕೇಳಿದರು. ಆಗ ಉಪ್ಪಿ ''ನಾನು ನಮ್ಮ ರಾಜ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತೇನೆ. ನಿಮ್ಮ ಕಾಲದಲ್ಲಿ ಹೇಗಿತ್ತು. ನಾನು ಈಗ ಸಿಎಂ ಆಗಿದ್ದೇನೆ ಏನು ಮಾಡಬಹುದು ಎಂದು ಅವರಿಂದ ಸಲಹೆ ಕೇಳುತ್ತೇನೆ'' ಎಂದು ಉತ್ತರ ನೀಡಿದರು. ಮುಂದೆ ಸಿಎಂ ಆಗುತ್ತೇನೆ ಎಂದ ಉಪ್ಪಿಯ ಆತ್ಮವಿಶ್ವಾಸ ನೋಡಿ ಶಿವರಾಜ್ ಕುಮಾರ್ ಸಖತ್ ಖುಷಿ ಆದರು.
ಇದೇ ಕಾರ್ಯಕ್ರಮದಲ್ಲಿ ಗುರುಕಿರಣ್ ''ಉಪ್ಪಿ ರಾಜಕೀಯಕ್ಕೆ ಬರುವುದು ನನಗೆ ಇಷ್ಟ ಇರಲಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗ ಒಬ್ಬ ಒಳ್ಳೆಯ ನಿರ್ದೇಶಕನನ್ನು ಕಳೆದುಕೊಳ್ಳುತ್ತದೆಯಾ ಎನ್ನುವ ಬೇಸರ ಇದೆ. ಜೊತೆಗೆ ವೈಯಕ್ತಿಕವಾಗಿ ನಾನು ಕೂಡ ಅವರ ಜೊತೆಗೆ ಸಿನಿಮಾಗಳನ್ನು ಮಾಡಬೇಕು.'' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, ಸ್ಟಾರ್ ಸುವರ್ಣ ವಾಹಿನಿ ಮತ್ತು viu (ಮಿಯು) ಅಪ್ ನಲ್ಲಿ ಪ್ರಸಾರ ಆಗುತ್ತಿರುವ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಮೊದಲ ಸಂಚಿಕೆಯ ಅತಿಥಿಯಾಗಿ ಉಪೇಂದ್ರ ಮತ್ತು ಗುರುಕಿರಣ್ ಆಗಮಿಸಿದ್ದರು. ಇನ್ನು ಮುಂದೆ ಪ್ರತಿ ಭಾನುವಾರ ರಾತ್ರಿ 8 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.


Click it and Unblock the Notifications











