ಬಣ್ಣದ ಲೋಕಕ್ಕೆ ಡಾ.ಬಿ.ಸರೋಜಾದೇವಿ ಪರಿಚಯ ಆಗಿದ್ದು ಹೇಗೆ.?
ಚಿಲ್ಲರೆ ಕಾಸು ಸಿಕ್ಕರೆ, ಅದರಲ್ಲಿ ಬಟ್ಟೆ ತೆಗೆದುಕೊಂಡು ಅನಾಥ ಮಕ್ಕಳಿಗೆ ದಾನ ಮಾಡುತ್ತಿದ್ದ ಪುಟಾಣಿ ಸರೋಜಾದೇವಿಗೆ 'ಸಿನಿಮಾ' ಅಂದ್ರೆ ಅಷ್ಟಕಷ್ಟೆ.
ಓದಿನಲ್ಲಿ ಸದಾ ಮುಂದಿರುತ್ತಿದ್ದ ಸರೋಜದೇವಿಗೆ ಟೀಚರ್ ಆಗ್ಬೇಕು ಅನ್ನೋದೇ ಹೆಬ್ಬಯಕೆ. ಗಾಯನ ಹಾಗೂ ನೃತ್ಯದಲ್ಲಿ ಪ್ರತಿಭಾನ್ವಿತೆಯಾಗಿದ್ದ ಸರೋಜಾದೇವಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೇ ಒಂದು ಆಕಸ್ಮಿಕ.[ನಟಿ ಬಿ.ಸರೋಜಾದೇವಿ ಬದುಕಿನಲ್ಲಿ 'ವಿಧಿ ಬರಹ ಎಂಥ ಘೋರ'.!]
ಆ ಆಕಸ್ಮಿಕ ಘಟನೆಯನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಸರೋಜಾದೇವಿ ಮೆಲುಕು ಹಾಕಿದ್ದಾರೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ.....

ಸತ್ಯನಾರಾಯಣ ಪ್ರಸಾದ!
''ನನ್ನ ತಾಯಿಗೆ ಮೂರು ಜನ ಹೆಣ್ಮಕ್ಳಿದ್ದರು. ನಾಲ್ಕನೇ ಬಾರಿ ಅವರು ಗರ್ಭಿಣಿ ಆಗಿದ್ದಾಗ, ಪಕ್ಕದ ಮನೆಯಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತಂತೆ. ಆಗ ಅವರ ಮನೆಯಿಂದ ನನ್ನ ತಾಯಿಗೆ ಸಜ್ಜಿಗೆ ತಂದುಕೊಟ್ಟಿದ್ದರಂತೆ. ಅದು ತಿಂದ ತಕ್ಷಣ ನಾನು ಹುಟ್ಟಿದ್ನಂತೆ'' - ಡಾ.ಬಿ.ಸರೋಜಾದೇವಿ [ಶೂನ್ಯದಿಂದ ಬಾನೆತ್ತರದ ಸಾಧನೆ ಮಾಡಿದ ಡಾ.ಬಿ.ಸರೋಜಾದೇವಿ.!]

ಬೇರೆಯವರಿಗೆ ಕೊಟ್ಬಿಡು!
''ನಾನೂ ಹೆಣ್ಣಾಗಿದ್ರಿಂದ, ಬೇರೆ ಯಾರಿಗಾದರೂ ಕೊಟ್ಬಿಡು ಅಂತ ನನ್ನ ತಾಯಿಗೆ ಹೇಳಿದ್ರಂತೆ. ಆದ್ರೆ, ಕೊಡಲ್ಲ ಅಂತ ನಮ್ಮ ತಾಯಿ ಹಠ ಹಿಡಿದಿದ್ರು. ನನ್ನನ್ನ ಪ್ರತಿ ವಾರ ಆಂಜಿನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗ್ತಿದ್ರು'' - ಡಾ.ಬಿ.ಸರೋಜಾದೇವಿ

ಟೀಚರ್ ಆಗ್ಬೇಕು!
''ಸೇಂಟ್ ತೆರೆಸಾ ಸ್ಕೂಲ್ ನಲ್ಲಿ ಓದಿದ್ದು. ಟೀಚರ್ ಗೆ ಎಲ್ಲರೂ ಮರ್ಯಾದೆ ಕೊಡ್ತಾರೆ ಅಲ್ವಾ, ಅದಕ್ಕೆ, ನನಗೆ ಟೀಚರ್ ಆಗ್ಬೇಕು ಅಂತ ಆಸೆ ಇತ್ತು'' - ಡಾ.ಬಿ.ಸರೋಜಾದೇವಿ

ಹಾಡುವಾಗ.....
''ಹಾಡುವುದು, ಡ್ಯಾನ್ಸ್ ಮಾಡುವುದು ಅಂದ್ರೆ ತುಂಬಾ ಇಷ್ಟ. ಒಂದಿನ Mayo ಹಾಲ್ ನಲ್ಲಿ ಪ್ರೋಗ್ರಾಂ ಇತ್ತು. ಅಲ್ಲಿ ನಾನು 'ಯೇ ಝಿಂದಗಿ..' ಹಾಡನ್ನ ಹಾಡಿದೆ. ಅವತ್ತು ಅಲ್ಲಿ ಹೊನ್ನಪ್ಪ ಭಾಗವತರ್ ಬಂದಿದ್ದರು. ನಾನು ಚೆನ್ನಾಗಿ ಹಾಡುವುದನ್ನ ನೋಡಿ ನನ್ನನ್ನ ಗಾಯಕಿ ಮಾಡುವ ಬಗ್ಗೆ ಅವರು ಯೋಚಿಸಿದ್ದರು'' - ಡಾ.ಬಿ.ಸರೋಜಾದೇವಿ

ನಾಯಕಿ ಆಗಿದ್ದು....
''ಆಮೇಲೆ ನನ್ನನ್ನ ನೋಡಿ, ನಾಯಕಿ ಮಾಡಬಹುದು ಅಂತ ಅಂದುಕೊಂಡರು. ಅವರು ಆಗ 'ಮಹಾಕವಿ ಕಾಳಿದಾಸ' ಅಂತ ಸಿನಿಮಾ ಮಾಡ್ತಿದ್ರು. ಅದಕ್ಕೆ ನನ್ನನ್ನ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಿದರು'' - ಡಾ.ಬಿ.ಸರೋಜಾದೇವಿ

ಇಷ್ಟ ಇರ್ಲಿಲ್ಲ!
''ನನಗೆ ಇಷ್ಟ ಇರ್ಲಿಲ್ಲ. ನನ್ನ ತಾಯಿಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ. 'ಒಂದು ಸಿನಿಮಾ ಮಾಡು, ಆಮೇಲೆ ನೋಡೋಣ' ಅಂತ ಹೇಳಿದ್ರು. ಅದಕ್ಕೆ ಒಪ್ಪಿಕೊಂಡೆ'' - ಡಾ.ಬಿ.ಸರೋಜಾದೇವಿ

ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು!
''ಒಂದೇ ಸಿನಿಮಾ ಸಾಕು. ಓದಬೇಕು' ಅಂತ ಅಂದುಕೊಂಡಿದ್ದೆ. ಆದ್ರೆ, 'ಮಹಾಕವಿ ಕಾಳಿದಾಸ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದು ಬಿಡ್ತು. ಅಲ್ಲಿಂದ ಜಾಸ್ತಿ ಅವಕಾಶಗಳು ಬಂದ್ವು'' - ಡಾ.ಬಿ.ಸರೋಜಾದೇವಿ

ತಮಿಳಿಗೆ ಅವಕಾಶ ಸಿಕ್ಕಿದ್ದು...
''ಸ್ಟುಡಿಯೋದಲ್ಲಿ ಕೂತಿದ್ದಾಗ ಎಂ.ಜಿ.ಆರ್ ರವರು ನನ್ನನ್ನ ನೋಡಿ, ಕನ್ನಡದಲ್ಲಿ ಮಾತನಾಡಿಸಿದರು. ಅಲ್ಲಿಂದ ತಮಿಳಿನಲ್ಲೂ ಅವಕಾಶ ಸಿಕ್ತು'' - ಡಾ.ಬಿ.ಸರೋಜಾದೇವಿ

ಒಂದೊಂದೇ ಸಿನಿಮಾ!
''ಇನ್ನೊಂದು ಸಿನಿಮಾ, ಆಮೇಲೆ ಓದೋಣ ಅಂದುಕೊಂಡು ಅಷ್ಟೊಂದು ಸಿನಿಮಾ ಆಯ್ತು'' - ಡಾ.ಬಿ.ಸರೋಜಾದೇವಿ


Click it and Unblock the Notifications











