ಸಾವಿರ ಸಿನಿಮಾ ಮಾಡಿರುವ ಹೊನ್ನವಳ್ಳಿ ಕೃಷ್ಣಗೆ 'ವೀಕೆಂಡ್ ವಿತ್ ರಮೇಶ್'ನಲ್ಲಿ ಜಾಗ ಇಲ್ಲವೇ?
'ವೀಕೆಂಡ್ ವಿತ್ ರಮೇಶ್' ಸಾಧಕರ ಕಥೆ ಮೂಲಕ ಸಾವಿರಾರೂ ಜನರಿಗೆ ಸ್ಫೂರ್ತಿ ನೀಡುತ್ತಿರುವ ಕಾರ್ಯಕ್ರಮ. ಈ ಕಾರ್ಯಕ್ರಮ ಮೂರು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಸದ್ಯ ನಾಲ್ಕನೇ ಸೀಸನ್ ಪ್ರಸಾರ ಆಗುತ್ತಿದೆ.
ನಾಲ್ಕನೇ ಸೀಸನ್ ಗೆ ಕಾಲಿಟ್ಟಿರುವ ಕಾರ್ಯಕ್ರಮದಲ್ಲಿ ಅನೇಕ ಸಾಧಕರು ಬಂದು ಹೋಗಿದ್ದಾರೆ. ಕಲಾವಿದರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಸಾಹಿತಿಗಳು ಹೀಗೆ ಚಿತ್ರರಂಗದ ಅನೇಕರು ಕಾರ್ಯಕ್ರಮದ ಅತಿಥಿ ಆಗಿದ್ದಾರೆ. ಹೀಗಿದ್ದರೂ, ಕೆಲವು ಸಾಧಕರು ಕಾರ್ಯಕ್ರಮಕ್ಕೆ ಈವರೆಗೆ ಬಂದಿಲ್ಲ. ಅದರಲ್ಲಿ ಪ್ರಮುಖರು ನಟ ಹೊನ್ನವಳ್ಳಿ ಕೃಷ್ಣ.
ಚಿತ್ರರಂಗದಲ್ಲಿ ಸಾಕಷ್ಟು ದಶಕಗಳಿಂದ ದುಡಿಯುತ್ತಿರುವ ಹೊನ್ನವಳ್ಳಿ ಕೃಷ್ಣ ಕಾರ್ಯಕ್ರಮದಿಂದ ಮಿಸ್ ಆಗಿದ್ದಾರೆ. ಜೀ ವಾಹಿನಿಯ ಕಣ್ಣಿಗೆ ಅವರು ಇನ್ನೂ ಬಿದ್ದಿಲ್ಲವೋ ಅಥವಾ ಯಾವ ಕಾರಣವೋ ಗೊತ್ತಿಲ್ಲ. ಆದರೆ, ಸಾಧಕರ ಸೀಟ್ ಮೇಲೆ ಕುಳಿತುಕೊಳ್ಳಲು ನಿಜವಾದ ಅರ್ಹತೆ ಇರುವ ಹೊನ್ನವಳ್ಳಿ ಕೃಷ್ಣ ಸಂಚಿಕೆ ಮಾತ್ರ ಈವರೆಗೆ ಬಂದಿಲ್ಲ. ಮುಂದೆ ಓದಿ...

ಸಾವಿರ ಸಿನಿಮಾಗಳ ಸರದಾರ
ಕನ್ನಡದ ಚಿತ್ರರಂಗ ಕಂಡ ಅದ್ಬುತ ಹಾಸ್ಯ ನಟರಲ್ಲಿ ಹೊನ್ನವಳ್ಳಿ ಕೃಷ್ಣ ಪ್ರಮುಖರು. ನೂರು, ಇನ್ನೂರು ಸಿನಿಮಾ ಮಾಡುವುದೇ ಕಷ್ಟ. ಹೀಗಿರುವಾಗ, ಸಾವಿರ ಸಿನಿಮಾಗಳಲ್ಲಿ ನಟಿಸುವುದು ಎಂದರೆ ತಮಾಷೆ ಮಾತಲ್ಲ. 'ವೀಕೆಂಡ್ ವಿತ್ ರಮೇಶ್'ಗೆ ಬರಲು ಇದಕ್ಕಿಂತ ದೊಡ್ಡ ಸಾಧನೆ ಬೇಕೆ.?.

ಪುನೀತ್ ಸಂಚಿಕೆಯಲ್ಲಿ ಮಾತನಾಡಿದ್ದರು
ನಟ ಪುನೀತ್ ರಾಜ್ ಕುಮಾರ್ ಸಂಚಿಕೆಯ ಮೂಲಕವೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರು ಆಗಿತ್ತು. ಈ ಸಂಚಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಬಗ್ಗೆ ಹೊನ್ನವಳ್ಳಿ ಕೃಷ್ಣ ಮಾತನಾಡಿದ್ದರು. ಪುನೀತ್ ಬಗ್ಗೆ ಮಾತನಾಡಿಸಲು ನೆನಪಾದ ಹೊನ್ನವಳ್ಳಿ ಕೃಷ್ಣ ಸಾಧಕರಾಗಿ ನೆನಪಾಗಲಿಲ್ಲವೇ.

20 ರೂಪಾಯಿ ಸಂಭಾವನೆಯಿಂದ ಶುರು
'ನ್ಯಾಯವೇ ದೇವರು' ಹೊನ್ನವಳ್ಳಿ ಕೃಷ್ಣ ಅವರ ಮೊದಲ ಸಿನಿಮಾ. ಡಾ.ರಾಜ್ ಕುಮಾರ್ ಮತ್ತು ಆರತಿ ಈ ಚಿತ್ರದಲ್ಲಿದ್ದರು. ಸಿದ್ಧಲಿಂಗಯ್ಯ ಚಿತ್ರದ ನಿರ್ದೇಶಕರಾಗಿದ್ದರು. ಹೊನ್ನವಳ್ಳಿ ಕೃಷ್ಣ ಮೊದಲು 20 ರೂಪಾಯಿ ಸಂಭಾವನೆಯಿಂದ ತಮ್ಮ ಚಿತ್ರ ಜೀವನ ಶುರು ಮಾಡಿದ್ದರು. ಅಲ್ಲಿಂದ ಪ್ರಾರಂಭವಾಗಿ 'ಭೂತಯ್ಯನ ಮೊಮ್ಮಗ ಅಯ್ಯು' ಚಿತ್ರದ ಮೂಲಕ ಸಾವಿರ ಚಿತ್ರಗಳನ್ನು ಪೂರೈಸಿದರು.

ಇಂದಿಗೂ ಮುಂದಿವರೆದಿದೆ ಕೃಷ್ಣ ಕಲಾ ಸೇವೆ
ರಾಜ್ ಕುಮಾರ್ ಚಿತ್ರದ ಫೋಟೋವನ್ನು ಪೇಪರ್ ನಲ್ಲಿ ನೋಡಿ ನಾನು ಸಿನಿಮಾದಲ್ಲಿ ನಟಿಸಬೇಕು ಎಂದು ಊರು ಬಿಟ್ಟು ಬಂದ ಹೊನ್ನವಳ್ಳಿ ಕೃಷ್ಣ, ತುಂಬ ಕಷ್ಟದಲ್ಲಿ ಬೆಳೆದರು. 1971 ರಲ್ಲಿ ಶುರುವಾದ ಇವರ ಸಿನಿಮಾ ಪಯಣ ಇಂದಿಗೂ ಮುಂದುವರೆಯುತ್ತಲೇ ಇದೆ. ಇಂದಿಗೂ ಅವಕಾಶ ಸಿಕ್ಕಾಗೆಲ್ಲ ಅವರು ನಟಿಸುತ್ತಿದ್ದಾರೆ.

ಹಾಸ್ಯ ನಟರು ಬಂದಿದ್ದು ತೀರ ಕಡಿಮೆ
'ವೀಕೆಂಡ್ ವಿತ್ ರಮೇಶ್'ಗೆ ಮೊದಲ ಸೀಸನ್ ನಿಂದ ಇಲ್ಲಿಯವರೆಗೆ ಹಾಸ್ಯ ನಟರು ಬಂದಿದ್ದು, ತೀರಾ ಕಡಿಮೆ. ರಂಗಾಯಣ ರಘು, ಮುಖ್ಯಮಂತ್ರಿ ಚಂದ್ರು, ಸಾಧು ಕೋಕಿಲ ಈವರೆಗೆ ಕಾರ್ಯಕ್ರಮಕ್ಕೆ ಬಂದ ಕಾಮಿಡಿ ನಟರು. ಹಾಗೆ ನೋಡಿದರೆ, ಹೊನ್ನವಳ್ಳಿ ಕೃಷ್ಣ ಈ ಎಲ್ಲ ನಟರಿಗಿಂತ ಹೆಚ್ಚು ಸಿನಿಮಾ ಮಾಡಿದ್ದಾರೆ.

ಇನ್ನು ಅನೇಕ ನಟರು ಇದ್ದಾರೆ
ಬಿರಾದರ್, ಬ್ಯಾಂಕ್ ಜನಾರ್ಧನ್, ಮಂಡ್ಯ ರಮೇಶ್, ಟೆನ್ನಿಸ್ ಕೃಷ್ಣ, ಡಿಂಗ್ರಿ ನಾಗರಾಜ್, ದತ್ತಣ್ಣ, ಉಮೇಶ್ ಹೀಗೆ ಸಾಕಷ್ಟು ಕನ್ನಡ ಕಲಾವಿದರು 'ವೀಕೆಂಡ್ ವಿತ್ ರಮೇಶ್'ಗೆ ಬರುವ ಅರ್ಹತೆ ಹೊಂದಿದ್ದಾರೆ. ಜನರು ಕೂಡ ಈ ರೀತಿಯ ಕಲಾವಿದರ ಕಥೆ ಕೇಳಲು ಇಷ್ಟ ಪಡುತ್ತಾರೆ. ಅವರು ಬಂದರೆ, ಸಾಧಕರ ಸೀಟ್ ಘನತೆ ಕೂಡ ಹೆಚ್ಚಾಗುತ್ತದೆ.

ನಿಮ್ಮ ಅಭಿಪ್ರಾಯವನ್ನು ತಿಳಿಸಿ
ಜೀ ಕನ್ನಡದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ನಟ ಹೊನ್ನವಳಿ ಕೃಷ್ಣ ಬರುವ ಬಗ್ಗೆ ನಿಮ್ಮ ಅನಿಸಿಕೆ ಏನು?, ನೀವು ಯಾವ ಸಾಧಕರನ್ನು 'ವೀಕೆಂಡ್ ವಿತ್ ರಮೇಶ್'ಶೋ ನಲ್ಲಿ ನೋಡಲು ಬಯಸುತ್ತೀರಿ ಎಂದು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.


Click it and Unblock the Notifications











