ವರ್ಮಾ ಕನ್ನಡಕ್ಕೆ ,ಕಿಚ್ಚನ ಕೀರ್ತಿ ಆಗಸಕ್ಕೆ
ಮೊದಲು ಬಾಲಿವುಡ್ ನ ನಟ ನಟಿಯರ ಆಮದು, ನಂತರ ಅಲ್ಲಿನ ಗಾನ ಕೋಗಿಲೆಗಳು ಕನ್ನಡ ಚಿತ್ರರಂಗದಲ್ಲಿ ಕು ಹೂ ಕುಹೂಗುಟ್ಟಿದ್ದಾಯ್ತು.ಈಗ ನಿರ್ದೇಶಕನ ಸರದಿ. ಬಾಲಿವುಡ್ ನ ದೊಡ್ಡ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕನ್ನಡ ಚಿತ್ರವೊಂದನ್ನು ನಿರ್ದೇಶಿಸುವುದು ಖಚಿತವಾಗಿದೆ. ತಮ್ಮ ನೆಚ್ಚಿನ ನಟ ಸುದೀಪ್ ಅವರ ಕೋರಿಕೆ ಮೇರೆಗೆ ಕನ್ನಡ ಸೇರಿದಂತೆ ದ್ವಿಭಾಷಾ ಚಿತ್ರವನ್ನು ನಿರ್ದೇಶಿಸಲು ವರ್ಮಾ ಒಪ್ಪಿಗೆ ಸೂಚಿಸಿದ್ದಾರೆ.
ನಿರ್ಣಯ್ ಎಂದು ಹೆಸರಿಡಲಾಗಿರುವ ಚಿತ್ರದಲ್ಲಿ ಸ್ಥಳೀಯ ಕಲಾವಿದರನ್ನು ಹೆಚ್ಚಾಗಿ ಬಳಸಿಕೊಳ್ಳುವ ಸೂಚನೆಯನ್ನು ವರ್ಮಾ ನೀಡಿದ್ದಾರೆ. ರಣ್ ಚಿತ್ರದ ಪ್ರತಿಕ್ರಿಯೆ ಏನೇ ಆದರೂ ಉತ್ತಮ ಚಿತ್ರ ನಿರ್ಮಿಸಿದ ತೃಪ್ತಿ ಇದೆ. ಅಮಿತಾಬ್ ಗೆ ಸರಿಸಾಟಿಯಾಗಿ ಸುದೀಪ್ ನಟಿಸಿದ್ದಾರೆ. ಅವರ ಕಣ್ಣಲ್ಲಿ ಆ ಮಿಂಚಿದೆ ಎಂದು ಕಿಚ್ಚನನ್ನು ಹೊಗಳಿದ್ದರು. ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿರುವ ವರ್ಮಾ, ಚಿತ್ರದ ಹಿನ್ನೆಲೆ ಸಂಗೀತ ಆಲಿಸಿ,ರಘು ದೀಕ್ಷಿತ್ ಗೆ ಶಭಾಶ್ ಗಿರಿ ಕೂಡ ನೀಡಿದರು. ನನಗೆ ಸಕತ್ ಖುಷಿ ಕೊಟ್ಟಿದೆ ಎಂದು ಸ್ವತಃ ರಘು ಟ್ವೀಟ್ ಮಾಡಿದ್ದಾರೆ.
ಆರ್ ಜಿವಿ ಫ್ಯಾಕ್ಟರಿಯಿಂದ ತಯಾರಾದ ಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಗೆ ಗ್ರಾಸವಾಗುತ್ತಲೇ ಇರುತ್ತವೆ. ಫೂಂಕ್ ಚಿತ್ರ ಅತಿ ಭಯಾನಕ ಎಂದು ಬಿಂಬಿಸಿ ಪ್ರೇಕ್ಷಕರ ಕುತೂಹಲ ಕೆರಳಿಸಿದಂತೆ, ಅನೇಕಾನಕ ರೀತಿಯಲ್ಲಿ ಚಿತ್ರದ ಪ್ರಚಾರಕ್ಕೆ ಅಗತ್ಯವಾದ ಗಿಮಿಕ್ ಮಾಡುವುದರಲ್ಲಿ ವರ್ಮಾ ಸಿದ್ಧಹಸ್ತರು. ವರ್ಮಾ ಚಿತ್ರದಲ್ಲಿ ನಟಿಸುವ ಹೊಸ ಹೀರೊಗಳಿಗೆ ಬೆಲೆ ಇರುವುದಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ರಣದೀಪ್ ಹೂಡ, ಮೋಹಿತ್, ನಿತಿನ್ ಮುಂತಾದವರ ಉದಾಹರಣೆ ಕಣ್ಮುಂದೆ ಇದೆ. ಆದರೆ ಕಿಚ್ಚ ಸುದೀಪ್ ಮಾತ್ರ ಫೂಂಕ್ ಚಿತ್ರದ ಎರಡು ಭಾಗ , ರಣ್ ,ರಕ್ತ ತಿಲಕ್ ಸೇರಿದಂತೆ ಒಂದರ ಮೇಲೊಂದು ಚಿತ್ರಗಳನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎನ್ನಬಹುದು. ಅಂತೂ ಬಾಲಿವುಡ್ ನ ಬಹುಬೇಡಿಕೆ ನಿರ್ದೇಶಕನನ್ನು ಕನ್ನಡಕ್ಕೆ ಕರೆ ತಂದ ಕೀರ್ತಿ ಸುದೀಪ್ ಗೆ ಸಲ್ಲುತ್ತದೆ.


Click it and Unblock the Notifications











