ರಾಜ್ ನೀತಿ: ಕೈಫ್, ಬಾಜಪೇಯಿಗೆ ಜೈ ಹೋ
ಖ್ಯಾತ ನಿರ್ದೇಶಕ ಪ್ರಕಾಶ್ ಝಾ ಅವರ ಅಧುನಿಕ ಮಹಾರಾಭಾರತ ಕಥೆ ರಾಜನೀತಿ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ನಿರ್ವಹಿಸಿದ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಹೋಲುವ ಪಾತ್ರ ಎಂದು ಚಿತ್ರದ ವಿರುದ್ಧ ಮೊಕದ್ದಮೆ ಕೂಡ ಹೂಡಲಾಗಿತ್ತು. ಸೆನ್ಸಾರ್ ಮಂಡಳಿ ಕೂಡಾ ಎರೆಡೆರಡು ಬಾರಿ ಈ ಪಾತ್ರವನ್ನು ಪರಿಶೀಲಿಸಿ ತಡವಾಗಿ ಸರ್ಟಿಫಿಕೇಟ್ ನೀಡಿದ್ದರು.
ಆದರೆ, ಈಗ ಚಿತ್ರ ವಿಮರ್ಶಕರು, ಬಾಲಿವುಡ್ ನಟ ನಟಿಯರ ಜೊತೆಗೆ ಮುಖ್ಯವಾಗಿ ಜನಮೆಚ್ಚುಗೆಯನ್ನು ಪಡೆದಿದೆ. ಕತ್ರೀನಾ ಈ ಮುಂಚೆ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ಈ ಚಿತ್ರದ ಇಂದು ಪಾತ್ರದಷ್ಟು ಪ್ರಭಾವ ಬೀರುವಂತಿರಲಿಲ್ಲ. ಲವಲವಿಕೆಯ ಪಾತ್ರಗಳ ನಂತರ, ಪ್ರಬುದ್ಧ ಪಾತ್ರಗಳತ್ತ ಗಮನ ಹರಿಸಿರುವ ಕತ್ರೀನಾಗೆ ರಾಜ್ ನೀತಿ ಚಿತ್ರದ ತಮ್ಮ ಪಾತ್ರ ಹಾಗೂ ಅಭಿನಯಕ್ಕಿಂತ ಮನೋಜ್ ಬಾಜಪೇಯಿ ಪಾತ್ರವೇ ಅದ್ಭುತ ಎನ್ನುತ್ತಾರೆ.
ಇತ್ತೀಚೆಗೆ ಚಿತ್ರದ ವಿಶೇಷ ಪ್ರದರ್ಶನ ಸಮಾರಂಭದಲ್ಲಿ ಕತ್ರೀನಾ ಅವರು ಬಾಜಪೇಯಿ ಕಂಡೊಡನೆ ಅವರ ಕಾಲಿಗೆರೆಗಿದರು. ನೀವು ಅದ್ಭುತ ಕಲಾವಿದ ಎಂದು ಹಾಡಿ ಹೊಗಳಿದರು. ಇದನ್ನು ನೋಡುತ್ತಿದ್ದ ಅರ್ಜುನ್ ರಾಂ ಪಾಲ್ ಹಾಗೂ ರಣಬೀರ್ ಕಪೂರ್ ಮನೋಜ್ ರನ್ನು ತಮ್ಮ ಭುಜ ಮೇಲೆ ಕೂರಿಸಿಕೊಂಡು ಮೆರೆದರು.
ಒಟ್ಟಾರೆ ಈ ಪ್ರಸಂಗದಿಂದ ಮುಜುಗರಗೊಳ್ಳಗಾದ ಬಾಜಪೇಯಿ, ತಮ್ಮ ಸಹ ಕಲಾವಿದರ ಮೆಚ್ಚುಗೆಗೆ, ಅಭಿಮಾನಕ್ಕೆ ತಲೆಬಾಗಿದರು. ಕತ್ರೀನಾರನ್ನು ಆತ್ಮೀಯವಾಗಿ ಅಪ್ಪಿ, ಕೈಫ್ ಕೂಡಾ ಉತ್ತಮ ನಟಿ ಎಂದು ಶುಭ ಹಾರೈಸಿದರು. ಹಿಂದೊಮ್ಮೆ ಇದೇ ರೀತಿ ಘಟನೆ ನಡೆದಿದ್ದನ್ನು ಸ್ಮರಿಸಿಕೊಂಡರು.
ರಾಮ್ ಗೋಪಾಲ್ ವರ್ಮಾ ಅವರ ಗರಡಿಯಿಂದ ಮನೋಜ್ ಆಗಷ್ಟೇ ಚಿತ್ರರಂಗ ಪ್ರವೇಶಿಸಿದ್ದ ಕಾಲ. ಸತ್ಯ ಚಿತ್ರ ಎಲ್ಲರ ಮನಸೂರೆ ಮಾಡಿತ್ತು. ನಂತರ ಸಂಭ್ರಮಾಚರಣೆಯ ಸಮಾರಂಭದಲ್ಲಿ ಪ್ರಬುದ್ಧ ನಟಿ ತಬು ಕೂಡಾ ಮನೋಜ್ ಅವರ ಕಾಲಿಗೆರಗಿ ಆತನೊಳಗಿನ ಪ್ರತಿಭೆಗೆ ಗೌರವ ನೀಡಿದ್ದರು.


Click it and Unblock the Notifications











